ಚಳಿ…. ಚಳಿ…. ತಾಳೆನು ಈ ಚಳಿಯ………..
ಅಂದು ಮಳೆಯ ಕಾಟ…ಇಂದು ಚಳಿಯ ಕಾಟ, ಮಕ್ಕಳು, ವಯೋವೃದ್ಧರಿಗೆ ಕೈಕೊಟ್ಟ ಆರೋಗ್ಯ!
ಚಿತ್ರ/ಬರಹ: ಮಾಲತೇಶ ಅಂಗೂರ
ಹಾವೇರಿ: ಮಲೆನಾಡಿನ ಸೆರಗು ಎನ್ನುವ ಖ್ಯಾತಿಯ ಹಾವೇರಿಗೂ ಎಲ್ಲ ವೃತುಮಾನಗಳಿಗೂ ಅವಿನಾಭಾವ ಸಂಬಂಧವಿದೆ. “ಮಳೆಗಾಲದಲ್ಲಿ ಹಾವೇರಿಯಲ್ಲಿ ಮಳೆಜಾಸ್ತಿ, ಚಳಿಗಾಲದಲ್ಲಿ ಚಳಿಜಾಸ್ತಿ, ಬೇಸಿಗೆಯ ಕಾಲದಲ್ಲಿ ಬಿಸಿಲು ತುಸುಜಾಸ್ತಿಯಾಗಿರುತ್ತದೆ. ಹವಾಮಾನ ಗುಣಮಟ್ಟದಲ್ಲಿ ದೇಶದಲ್ಲಿಯೇ ಹಾವೇರಿಯ ಹವಾಮಾನ ಉತ್ತಮ ಎನಿಸಿಕೊಂಡಿದೆ. ಇದೀಗ ಚಳಿಗಾಲದ ಅಂತ್ಯಭಾಗದಲ್ಲಿ ಹಾವೇರಿಗರನ್ನು ಚಳಿ ಎಷ್ಟೊಂದು ಬಾಧಿಸುತ್ತಿದೆ ಎಂದರೆ, ಹಗಲುಹೊತ್ತಿನಲ್ಲಿಯು ಸಹ ಚಳಿ ಬಾಧೆ ಹೆಚ್ಚಾಗಿದ್ದು, ಸೂರ್ಯನ ಪ್ರಕರತೆಯ ನಡುವೆಯು ಚಳಿಗೆ ಹೆದರಿ ಹಾವೇರಿಗರು ಚಳಿ, ಚಳಿ ತಳೆನು ಈ ಚಳಿಯ ಎನ್ನುತ್ತಾ ಬೆಚ್ಚನೆಯ ಬಟ್ಟೆಗಳನ್ನು ಧರಿಸಿ ಕೆಲಸ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ”.
ಸಂಜೆಯಾಗುತ್ತಿದ್ದಂತಯೇ ವಾತಾವರಣದಲ್ಲಿ ಕುಸಿತಕಂಡು ಚಳಿಯ ವರತೆ ಹೆಚ್ಚುತ್ತದೆ. ಮಕ್ಕಳು, ಮಹಿಳೆಯರು, ವಯೋವೃದ್ಧರು ಚಳಿಯಿಂದಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಕೆಮ್ಮು, ನೆಗಡಿ, ಜ್ವರ ಸೇರಿದಂತೆ ಶೀತಬಾಧೆಯಿಂದ ಬಳಲುತ್ತಿದ್ದಾರೆ. ನಗರದ ಬಹತೇಕ ಆಸ್ಪತ್ರೆಗಳು ರೋಗಿಗಳಿಂದ ತುಂಬಿತುಳುಕುತ್ತಿವೆ. ಬೆಚ್ಚನೆಯ ಸ್ವೇಟರ್, ಜರ್ಕಿನ್ ಧರಿಸಿ ಯುವಕರು ಓಡಾಡುತ್ತಿದ್ದಾರೆ. ಇತ್ತ ವಯಸ್ಸಾದವರು, ವಯಸ್ಸಾಗುತ್ತಿರುವವರು ಪದೇ ಪದೆ ಬೆಚ್ಚನೆಯ ಕಾಫೀ, ಚಾಹಾ ಹೀರುತ್ತಾ “ಏನು ಚಳಿಯೋ ಮಾರಾಯಾ, ಮೂರುದಿವಸಾತು ವಾಕಿಂಗ್ ಹೋಗಿಲ್ಲ, ನೀರು ಮಟ್ಟಿದ್ರ ಐಸ್ ಮುಟ್ಟಿದಂಗ ಆಕೈತಿ” ಎನ್ನುತ್ತ ಚಳಿಯ ವರ್ಣನೆಯಲ್ಲಿ ತೊಡಗಿದ್ದಾರೆ.
“ಮನೆಯಲ್ಲಿ ಮಹಿಳೆಯರು ಮಕ್ಕಳಿಗೆ ಸ್ವೇಟರ್ಗಳನ್ನು ಹಾಕಿ, ತಲೆಗೆ ಉಣ್ಣಿಯ, ಉಲನ್ ಕ್ಯಾಪ್ಗಳನ್ನು ಹಾಕಿ ತಾವು ಹಾಕಿಕೊಂಡು ಚಳಿಯಿಂದ ಆಗಬಹುದಾದ ಸಂಭವಿನೀಯ ಅಪಾಯಗಳನ್ನು ತಡೆಯಲು ಮುಂದಾಗಿದ್ದಾರೆ”. “ಇನ್ನು ಚಳಿಯು ಹೆಚ್ಚಾದ ಕಾರಣಕ್ಕೆ ಶಾಲೆಗೆ ಹೋಗುವ ಪುಟ್ಟ ಮಕ್ಕಳ ಸಂಖ್ಯೆ ಕುಸಿದಿದೆ”. “ನಗರದ ಬಹುತೇಕ ಹೋಟೆಲ್ಗಳಲ್ಲಿ ಚಹಾ-ಕಾಫಿಗೆ ಬೇಡಿಕೆ ಹೆಚ್ಚಿದೆ. ನಗರದ ಪಿ.ಬಿ.ರಸ್ತೆಗೆ ಹೊಂದಿಕೊಂಡಿರುವ ಬೆಲ್ಲದ ಚಾಹಾ ಮಾರುವ ಅಂಗಡಿಗಳಲ್ಲಿ ಇದೀಗ ಭರ್ಜರಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಜನರು ಸರತಿ ಸಾಲಿನಲ್ಲಿ ನಿಂತು ಬೆಲ್ಲದ ಚಾಹಾ ಹೀರುವ ದೃಶ್ಯಗಳು ಸಾಮಾನ್ನವಾಗಿವೆ”. “ಹಾವೇರಿಯ ಉಷ್ಣಾಂಶ ಹಗಲು ಹೊತ್ತಿನಲ್ಲಿ ೩೦ಡಿಗ್ರಿ ಇಂದ ೩೨ರವರೆಗೆ ದಾಖಲಾಗುತ್ತಿದ್ದು, ರಾತ್ರಿಯ ವೇಳೆ ಉಷ್ಣಾಂಶದಲ್ಲಿ ದಿಢೀರ ಕುಸಿತ ಕಂಡು ೧೩ ಡಿಗ್ರಿ ಇಂದ ೧೪-೧೫-೧೬ವರೆಗೆ ದಾಖಲಾಗುತ್ತಿದೆ”.
“ವಾಯುಭಾರ ಕುಸಿತದಿಂದಾಗಿ ಕಳೆದ ಎರಡು ತಿಂಗಳುಗಳಿಂದ ಚಳಿಯ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿತ್ತು, ಆದರೆ ಕಳೆದ ಒಂದು ವಾರದಿಂದ ಚಳಿ ಜಾಸ್ತಿಯಾಗಿ ಜನತೆ ತತ್ತರಿಸಿಹೋಗಿದ್ದಾರೆ”. ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದಾರೆ. ಹಾಗೂ ಉದ್ಯೋಗಿಗಳು ಕೆಲಕ್ಕೆ ಹೋಗಲು ಪರದಾಡುವಂತಾಗಿದೆ. “ಚಳಿಯಿಂದ ಜನರು ಅನಾರೋಗ್ಯಕ್ಕೆ ಒಳಗಾಗೋದು ಸಾಮಾನ್ಯ, ಅದಕ್ಕಾಗಿ ಮುಂಜಾಗ್ರತ ಕ್ರಮವಾಗಿ ಹಲವು ಕ್ರಮಗಳನ್ನು ರೂಡಿಸಿಕೊಳ್ಳುವಂತೆ ವೈದ್ಯರು ತಿಳಿಸಿರುತ್ತಾರೆ. “ಆರೋಗ್ಯದನ್ನು ಕಾಪಾಡಿಕೊಳ್ಳಲು ಬಿಸಿನೀರನ್ನು ಕುಡಿಯಿರಿ”. “ಆದಷ್ಟು ಬಿಸಿ ಇರುವಾಗಲೇ ಆಹಾರವನ್ನು ಸೇವಿಸಿ”. “ಬೆಚ್ಚಗಿನ ಬಟ್ಟೆ ಧರಿಸಿಕೊಳ್ಳುವಂತೆ ಸೂಚಿಸಿದ್ದಾರೆ”. ಹಾವೇರಿಜಿಲ್ಲೆಯಲ್ಲಿ ಚಳಿಯು ಅಧಿಕವಾಗಿದ್ದು ಜನ ಮನೆ ಬಿಟ್ಟು ಹೊರ ಬರಲು ಭಯಪಡುತಿದ್ದಾರೆ.
ಆಯಾ ವೃತುಮಾನಗಳಿಗೆ ತಕ್ಕಂತೆ ವಾತಾವರಣದಲ್ಲಿ ಏರಿಳಿತ ಸಹಜ!, “ಆಯಾ ಕಾಲದ ಮಳೆ, ಚಳಿ, ಬಿಸಿಲು ಅನುಭವಿಸಬೇಕು. ಇದು ಒಂದು ತರಹ ಹಿತಕರ ಅನುಭವ ನೀಡುತ್ತದೆ. ಕೆಲವರು ಚಳಿಯ ರಕ್ಷಣೆಯ ನೆಪಮಾಡಿಕೊಂಡು ನಾನಾ ನಮೂನಿ ಅಭ್ಯಾಸಗಳನ್ನು ರೂಢಿಸಿಕೊಂಡು ಬಾಟಲಿಗಳಲ್ಲಿನ ಕಲರ್ ಕಲರ್ ಪಾನೀಯದ ಮೊರೆ ಹೊಗುತ್ತಾರೆ”. “ಇನ್ನು ಕೆಲವರು ಉಷ್ಣೋದಕದ ಮೊರೆಹೋಗುತ್ತಾರೆ”. ಇನ್ನು “ಕೆಲವು ರಸಿಕರು ಚಳಿ…. ಚಳಿ….. ತಾಳೆನು ಈ ಚಳಿಯ ಎನ್ನುತ್ತಾ ಬೆಚ್ಚನೆಯ ರಗ್ ಹೊದ್ದು ಬೆಡ್ ರೂಂ ಮೊರೆಹೋಗುತ್ತಾರೆ”. ಕಾಲಾಯ ತಸ್ಮೈನಮಃ ಎನ್ನುವಂತೆ ಕಾಲಕ್ಕೆ ತಕ್ಕಂತೆ ವೇಷಗಳನ್ನು ಬದಲಿಸುತ್ತಾ ಬಣ್ಣಬದಲಿಸುತ್ತಾ ಹೋಗುತ್ತಾರೆ. ಇದೇ ಅಲ್ಲವೇ ಕಾಲದ ಮಹಿಮೆ!. ಯಾವುದಕ್ಕೂ ಚಳಿಗೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ, ಮಕ್ಕಳು, ಬಾಣಂತೀಯರು, ವಯೋವೃದ್ಧರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರಿ.