*ಶೈಕ್ಷಣಿಕ ಸಾಧನೆ:-* ಶಾಲೆಯ ತರಗತಿ ನಿರ್ವಹಣೆಯ ಸಂದರ್ಭದಲ್ಲಿ ಕಲಿಕೆಯನ್ನು ಸಾಧಿಸಲು ಸಾಮರ್ಥ್ಯ ಮತ್ತು ಕಲಿಕಾಂಶಗಳಿಗೆ ಪೂರಕವಾದ ಸರಳ ಕಲಿಕೋಪಕರಣಗಳನ್ನು ಬಳಸಿ ಗಣಿತವನ್ನು ಸುಲಭವಾಗಿ ಕಲಿಸಬಹುದು ಜೊತೆಗೆ ಸ್ಥಳೀಯವಾಗಿ ದೊರೆಯುವ ಸುಲಭ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಅತ್ಯಂತ ಉತ್ಸಾಹ ಮತ್ತು ಆಸಕ್ತಿಯಿಂದ ಮಕ್ಕಳು ಕಲಿಕೆಯನ್ನು ಸಾಧಿಸಲು ಸಾಧ್ಯ ಎಂಬುದನ್ನು ಅರಿತು ವಿಜ್ಞಾನದ ಚಿಕ್ಕ ಚಿಕ್ಕ ಮಾದರಿಗಳನ್ನು ಹಾಗೂ ಪ್ರಯೋಗಗಳನ್ನು ಮಾಡಿಸುವುದರ ಜೊತೆಗೆ ಮಕ್ಕಳಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆಗಳನ್ನು ಬೆಳೆಸುವುದು ಇವರ ಮುಖ್ಯ ಉದ್ದೇಶ.
ಇಲಾಖೆಯ ಮಹತ್ವಾಕಾಂಕ್ಷಿ ಶೈಕ್ಷಣಿಕ ಯೋಜನೆಗಳಲ್ಲೊಂದಾದ Inspire Award ಇದು ಮಕ್ಕಳ ಬೌದ್ಧಿಕ ಸಾಮರ್ಥ್ಯವನ್ನು ಉದ್ದೀಪನಗೊಳಿಸುವ ವಿಶಿಷ್ಟ ಕೌಶಲ. ಇಂತಹ ಕಾರ್ಯ ಚಟುವಟಿಕೆಯಲ್ಲಿ ತಮ್ಮ ತರಗತಿಯ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ಮಾಡಿ ವಿಜ್ಞಾನದ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸುವ ಮೂಲಕ ರಾಜ್ಯ ಮಟ್ಟದಲ್ಲಿ 3 ಬಾರಿ (ಮಂಗಳೂರು,ವಿಜಯಪುರ ಮತ್ತು ದಾವಣಗೆರೆ) ಹಾಗೂ 2021-22 ನೇ ಸಾಲಿನ Inspire Award ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಗ್ರಾಮೀಣ ಪ್ರದೇಶದ ಮಕ್ಕಳು ಕೂಡ ರಾಷ್ಟ್ರ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದು ಇವರ ಸಾಧನೆಯ ಹೆಜ್ಜೆ ಗುರುತು ಎಂದೇ ಹೇಳಬಹುದು. ಶಿಕ್ಷಕರ ವೃತ್ತಿ ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರತ ಶಿಕ್ಷಕರಿಗಾಗಿ ನಡೆದ ಅನೇಕ ಪುನಶ್ಚೇತನ ತರಬೇತಿಗಳಲ್ಲಿ ಸಂಪನ್ಮೂಲ ಶಿಕ್ಷಕರಾಗಿ ಕಾರ್ಯ ನಿರ್ವಹಿಸುವ ಮೂಲಕ ಶಿಕ್ಷಕರಿಗೆ ಮಾರ್ಗದರ್ಶನ ಮಾಡಿದ ಹೆಗ್ಗಳಿಕೆ ಇವರದು.
ಸಾಹಿತ್ಯ:- ಶಿಕ್ಷಕರಾದ ಜಮೀರ ರಿತ್ತಿ ಶಿಕ್ಷಕ ವೃತ್ತಿಯ ಜೊತೆಗೆ ಸದಭಿರುಚಿಯ ಸಾಹಿತ್ಯ ಕೃಷಿ ಯನ್ನು ತಮ್ಮ ಪ್ರವೃತ್ತಿಯನ್ನಾಗಿ ಮಾಡಿಕೊಂಡು ಸೃಜನಶೀಲ ಬರವಣಿಗೆಯಲ್ಲಿ ತಮ್ಮನ್ನರ್ಪಿಸಿಕೊಂಡಿದ್ದಾರೆ.
‘ಕತ್ತಲಕಿಚ್ಚು’ (ಕವನ ಸಂಕಲನ), ‘ಖಾಲಿಬಾಟ್ಲಿ’ (ಚುಟುಕು ಸಂಕಲನ), ‘ಮಾಯೆಯೊಳಗಿನ ಮಾಯೆ’ (ನಾಟಕ), ಸಂಶೋಧನಾ ಗ್ರಂಥ ಕಬಡ್ಡಿ “ಮಿಂಚಿ ಮರೆಯಾದವರು”. ಇವುಗಳೆಲ್ಲಾ ಇತ್ತೀಚೆಗೆ ಪ್ರಕಟಗೊಂಡ ಇವರ ಕೃತಿಗಳು.
ಕಿರುತೆರೆಯಲ್ಲಿ ನಟನೆ:- ಮೂಡಲಮನೆ, ಆ ಊರು ಈ ಊರು, ಮಹಾನವಮಿ, ಇದ್ದರು ಇರಬೇಕು ನಿನ್ನಾಂಗ, ಮಹದೇವ ಮೈಲಾರ, ಸಂಗೊಳ್ಳಿ ರಾಯಣ್ಣ, ಸೀತೆ.
ಚಲನಚಿತ್ರದಲ್ಲಿ ನಟನೆ:-ಕೀರ್ತಿಗೊಬ್ಬ, ಚಾಣಾಕ್ಷ, ಸಂದಿಗ್ಧ, ಚಿಣ್ಣಾರಿ ಚಿಣ್ಣರು, ಕರಾಸ್ತ್ರ,ಹೀಗೆ ಕಿರುತೆರೆ ಮತ್ತು ಚಲನ ಚಿತ್ರಗಳಲ್ಲಿ ಅಭಿನಯಿಸುವ ಹವ್ಯಾಸವನ್ನು ರೂಢಿಸಿಕೊಂಡು ಆಕಸ್ಮಿಕವಾಗಿ ಒದಗಿ ಬಂದ ಅವಕಾಶವನ್ನು ರಜಾ ಅವಧಿಗಳಲ್ಲಿ ಸದ್ಭಳಕೆ ಮಾಡಿಕೊಳ್ಳುವ ಮೂಲಕ ತಾವೊಬ್ಬ ಬಹುಮುಖ ಪ್ರತಿಭೆಯುಳ್ಳ ಪ್ರತಿಭಾನ್ವಿತ ಶಿಕ್ಷಕ ಎಂಬುದನ್ನು ಸಾಬೀತು ಪಡಿಸಿದ್ದಾರೆ.ಕ್ರೀ
ಡಾ ಕ್ಷೇತ್ರಕ್ಕೆ ಇವರ ಕೊಡುಗೆ:-ಬಾಲ್ಯದಿಂದಲೇ ಇವರೊಬ್ಬ ಉತ್ತಮ ಕಬಡ್ಡಿ ಮತ್ತು ವಾಲ್ಹೀಬಾಲ್ ಕ್ರೀಡಾ ಪಟುವಾಗಿದ್ದು ತಮ್ಮ ಸಹದ್ಯೋಗಿ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರ ಸಹಕಾರದಿಂದ ಅತ್ತಿಕಟ್ಟಿ ಶಾಲೆಯ ವಿದ್ಯಾರ್ಥಿನಿಯರಿಗೆ ಕಬಡ್ಡಿಯ ಕ್ರೀಡೆಯ ಕೌಶಲಗಳನ್ನು ಕರಗತಗೊಳಿಸಿ ಇಲಾಖಾ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ ತೋರುವಂತೆ ಮಾಡಿದ್ದಾರೆ. ಇದರ ಕುರುಹಾಗಿ ಎರಡು ಬಾರಿ ಬೆಳಗಾವಿ ವಿಭಾಗ ಮಟ್ಟದ ಇಲಾಖಾ ಕ್ರೀಡಾಕೂಟದ ಕಬಡ್ಡಿ ಪಂದ್ಯದಲ್ಲಿ ಭಾಗವಹಿಸಿರುವುದು ಹಾಗೂ ಬೆಳಗಾವಿ ವಿಭಾಗವನ್ನು ಪ್ರತಿನಿಧಿಸಿ ಒಂದು ಬಾರಿ ರಾಜ್ಯ ಮಟ್ಟದ ಇಲಾಖಾ ಕ್ರೀಡಾಕೂಟದ ಕಬಡ್ಡಿ ಪಂದ್ಯದಲ್ಲಿ ಭಾಗವಹಿಸಿ ತಮ್ಮ ಶಾಲೆಯ ಬಾಲಕಿಯರು ತೃತೀಯ ಸ್ಥಾನ ಪಡೆದುಕೊಳ್ಳುವಲ್ಲಿ ಪ್ರಮುಖ ಸ್ಥಾನ ವಹಿಸಿರುವುದು ಇವರ ಕ್ರಿಯಾಶೀಲತೆಗೆ ಹಿಡಿದ ಕನ್ನಡಿಯಾಗಿದೆ
ದೊರೆತ ಪ್ರಶಸ್ತಿಗಳು:-
1) ಹಾವೇರಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ
2) ಕರ್ನಾಟಕ ಕಲಾ ಜ್ಯೋತಿ ಪ್ರಶಸ್ತಿ
3) ರಂಗಶಂಕರ ಪ್ರಶಸ್ತಿ
4) ವಿಶ್ವರಂಗ ಗೌರವ ಪ್ರಶಸ್ತಿ
5) ಕಲಾವಿದ ಪ್ರಶಸ್ತಿ
6) ಕರ್ನಾಟಕ ಕಲಾರತ್ನ ಪ್ರಶಸ್ತಿ
7) ಭಾರತ ಸ್ಕೌಟ್ಸ್ ವಿಭಾಗದಲ್ಲಿ ರಾಷ್ಟ್ರಪತಿ ಪ್ರಶಸ್ತಿ
“ಶಿಕ್ಷಕ ಸಮಾಜದ ಅತ್ಯಂತ ದೊಡ್ಡ ಆಸ್ತಿ. ಏಕೆಂದರೆ ಆತನ ವೃತ್ತಿಪರ ಪ್ರಯತ್ನಗಳು ಭೂಮಿಯ ಭವಿಷ್ಯದ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತವೆ.”
ಎಂಬ ಮಾತಿನಂತೆ ತಮ್ಮ ಜ್ಞಾನದ ವಿನಿಮಯ ಹಾಗೂ ವಿಸ್ತರಣೆಯಲ್ಲಿ ಕ್ರಿಯಾತ್ಮಕವಾಗಿ ತೊಡಗಿಕೊಂಡು ಉತ್ತಮ ಸೇವೆಗೈಯುತ್ತಿರುವ ಕಾರಣದಿಂದಾಗಿ ಶಿಕ್ಷಣ ಇಲಾಖೆ ಇವರನ್ನು ಗುರುತಿಸಿ ರಾಜ್ಯ ಮಟ್ಟದ “ಅತ್ಯುತ್ತಮ ಶಿಕ್ಷಕ” ಪ್ರಶಸ್ತಿಗೆ ಪರಿಗಣಿಸಿ ಆಯ್ಕೆ ಮಾಡಿರುವುದು ಅತ್ಯಂತ ಸ್ತುತ್ಯಾರ್ಹ.