
“ಪ್ರಜಾಪ್ರಭುತ್ವ ದ ಅಡಿಪಾಯ ಅನುಭವ ಮಂಟಪ”-ಡಿ. ಸಿ. ವಿಜಯಮಹಾಂತೇಶ್ ದಾನಮ್ಮನವರ
ಹಾವೇರಿ: ಸಮಾಜ ಸುಧಾರಕ, ಕ್ರಾಂತಿಕಾರಿ, ಭಕ್ತಿಭಂಡಾರಿ, ವಚನಕಾರ, ಮಹಾನ್ ಮಾನವತಾವಾದಿ ಅಪರೂಪದ ವ್ಯಕ್ತಿತ್ವದ ಸಂಗಮ ಬಸವಣ್ಣ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಬಣ್ಣಿಸಿದರು. ನಗರದ ಶ್ರೀ ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹುಕ್ಕೇರಿಮಠದ ಸಹಯೋಗದಲ್ಲಿ ಜರುಗಿದ ಮಹಾನ್ ಮಾನವತಾವಾದಿ, ಸಮಾಜ ಸುಧಾರಕ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಶ್ರೀ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಅವರು ಮಾತನಾಡಿದರು.
ಬಸವಣ್ಣನವರು ಜಾತಿ ಪದ್ಧತಿ ವಿರುದ್ಧ ಹೋರಾಡಿದರು ಹಾಗೂ ಜಾತ್ಯಾತೀತ ಸಮಾಜ ಕಟ್ಟಲು ಶ್ರಮಿಸಿದರು. ಬಾಲ್ಯದಲ್ಲೆ ಗಂಡು ಮತ್ತು ಹೆಣ್ಣು ಎಂಬ ತಾರತಮ್ಯ ವಿರೋಧಿಸಿದರು, ಎಲ್ಲರಿಗೂ ಕಾಯಕ ಹಾಗೂ ದಾಸೋಹದ ಮಹತ್ವ ತಿಳಿಸಿದರು ಎಂದು ಹೇಳಿದರು.
ಬಸವಣ್ಣ ಭಾರತ ಕಂಡ ಶ್ರೇಷ್ಠ ಸಂತ. ಒಂಭತ್ತು ಶತಮಾನ ಕಳೆದರು ಬಸಣ್ಣನವರ ಸಾಧನೆ ಹಾಗೂ ಸಂದೇಶಗಳು ಈಗಲೂ ಪ್ರಸ್ತುತ ವಾಗಿವೆ. ಪ್ರಜಾಪ್ರಭುತ್ವ ದ ಅಡಿಪಾಯ ಅನುಭವ ಮಂಟಪವಾಗಿದೆ. ಅನುಭವ ಮಂಟಪದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಿದ್ದರು. ಅವರ ಆಚಾರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಂಡಾಗ ಜಯಂತಿ ಆಚರಣೆ ಅರ್ಥ ಪೂರ್ಣ ವಾಗುತ್ತದೆ ಹಾಗೂ ಸಮಾಜ ಸುಧಾರಿಸಬಲ್ಲದು ಎಂದು ಹೇಳಿದರು.
ಉಪನ್ಯಾಸಕರಾಗಿ ಭಾಗವಹಿಸಿದ ಬೈಲಹೊಂಗಲ ಸಾಹಿತಿ ಹಾಗೂ ವಿಮರ್ಶಕ ಡಾ.ಫಕೀರನಾಯ್ಕ ದುಂಡಪ್ಪ ಗಡ್ಡಿಗೌಡರ ಮಾತನಾಡಿ, ಬಸವಣ್ಣನವರ ಬಗ್ಗೆ ಮಾತನಾಡುವುದು ಎಂದರೆ ಸೂರ್ಯ ಮತ್ತು ಚಂದ್ರ ಲೋಕಕ್ಕೆ ಪ್ರಯಾಣಿಸಿದಂತೆ. ಬಸಣ್ಣನವರ ವ್ಯಕ್ತಿತ್ವ ಅಷ್ಟು ಎತ್ತರದಲ್ಲಿದೆ. ಪ್ರೀತಿ ಮತ್ತು ಸ್ನೇಹ ದಿಂದ ಸಮಾಜ ಕಟ್ಟಿದರು. ಜನರಲ್ಲಿ ವೈಚಾರಿಕ ವಿಚಾರಗಳನ್ನು ಬಿತ್ತಿದ್ದರು. ಇಡಿ ವಿಶ್ವಕ್ಕೆ ಸಂಸತ್ತಿನ ಪರಿಕಲ್ಪನೆ ಮೂಡಿಸಿದ ಶ್ರೇಯಸ್ಸು ಬಸವಣ್ಣನಿಗೆ ಸಲ್ಲುತ್ತದೆ. ಮಹಿಳಾ ಸಮಾನತೆಗೆ ಹೋರಾಟ ಮಾಡಿದ ಸ್ತ್ರೀ ಸ್ವಾತಂತ್ರ್ಯ ಸುಧಾರಕ, ದಯೆ, ಅನುಕಂಪ, ಪ್ರೀತಿ ಹಾಗೂ ಮಾನವೀಯತೆ ಧರ್ಮ ಎಂದು ತೋರಿ ಸಿಕೊಟ್ಟವರು. ಇದನ್ನು ಅರ್ಥ ಮಾಡಿಕೊಳ್ಳಬೇಕು, ಜಯಂತಿ ಆಚರಣೆ ಅರಿವಿನ ಜಾತ್ರೆ ಯಾಗಬೇಕು. ಬಸವಣ್ಣನವರ ಸಂದೇಶ ಎಲ್ಲೆಡೆ ಮುಟ್ಟಿಸುವ ಕೆಲಸ ವಾಗಬೇಕು ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಹುಕ್ಕೇರಿಮಠದ ಸದಾಶಿವ ಸ್ವಾಮಿಜಿ ಹಾಗೂ ಹೊಸಮಠದ ಬಸವಶಾಂತಲಿAಗ ಸ್ವಾಮಿಜಿಗಳು ಆಶೀರ್ವಚನ ನೀಡಿದರು.
ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ ಹಾಗೂ ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ್ ಎಲ್, ಹಾವೇರಿ ಬಸವಬಳಗದ ಅಧ್ಯಕ್ಷ ವಿ.ಜಿ.ಎಳಗೇರಿ ಹಾಗೂ ಹುಕ್ಕೇರಿಮಠದ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಅಶೋಕ ಮಾಗನೂರ, ತಹಸೀಲ್ದಾರ ಶರಣಮ್ಮ, ನಗರಸಭೆ ಆಯುಕ್ತ ಗಂಗಾಧರ ಬೆಲ್ಲದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್ ವಿ ಚಿನ್ನಿಕಟ್ಟಿ, ಎಂ.ಎA.ಮೈದೂರ, ಪಿ. ಡಿ. ಶಿರೂರ ಹಾಗೂ ಇತರರು ಉಪಸ್ಥಿತರಿದ್ದರು.
ಸುನಿಲ್ ಸ್ವಾಗತಿಸಿದರು. ಅನಿತಾ ಹರಣಗಿರಿ ನಿರೂಪಿಸಿದರು.
ಮಾಲಾರ್ಪಣೆ: ಕಾರ್ಯಕ್ರಮಕ್ಕ್ಕೂ ಮೊದಲು ಬೆಳಿಗ್ಗೆ ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿರುವ ಶ್ರೀ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಕಾರ್ಯಕ್ರಮ ಜರುಗಿತು.
ಸಂಜೆ ಅಲಂಕರಿಸಿದ ರಥದಲ್ಲಿ ಬಸವಣ್ಣನವರ ಭಾವ ಚಿತ್ರದ ಮೆರವಣಿಗೆ ನಗರದಲ್ಲಿ ನಡೆಯಿತು.

