ಮೈಲಾರ ಜಾತ್ರೆಯ ಕಾರ್ಣಿಕ “ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್”
ಹಾವೇರಿ: ಕರ್ನಾಟಕದ ಜಾತ್ರೆಗಳಲ್ಲಿ ಶ್ರೀಮೈಲಾರಲಿಂಗೇಶ್ವರ ಜಾತ್ರೆಯು ಅತಿ ದೊಡ್ಡ ಜಾತ್ರೆಯಾಗಿದ್ದು, ಜಾತ್ರೆಯ ಪ್ರಮುಖ ಅಂಶವಾಗಿರುವ ಶ್ರೀ ಮೈಲಾರಲಿಂಗೇಶ್ವರನ ಕಾರ್ಣಿಕೋತ್ಸವ ಫೆ.೭ರಂದು ಮಂಗಳವಾರ ಸಂಜೆ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಜರುಗಿತು. ಕಾರ್ಣಿಕ ನುಡಿಯುವ ವಂಶ ಪಾರಂಪರ್ಯ ಕಾರ್ಣಿಕದ ಗೊರವಯ್ಯ ರಾಮಣ್ಣ ಸುಮಾರು ೧೭ ಅಡಿ ಎತ್ತರದ ಕಬ್ಬಿಣದ ಬಿಲ್ಲನ್ನೇರಿ “ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್” ಎನ್ನುವ ಭವಿಷ್ಯ ವಾಣಿ ನುಡಿದರು.
ಈ ಭವಿಷ್ಯವಾಣಿಯ ಕೌತುಕದ ಕ್ಷಣಕ್ಕೆ ಲಕ್ಷಾಂತರ ಜನರು ಕಾದುಕುಳಿತಿದ್ದರು. ನೋಡ ನೋಡುತ್ತಿದ್ದಂತೆ ಸರಸರನೇ ಬಿಲ್ಲನ್ನೇರಿ ತುತ್ತ ತುದಿಯಲ್ಲಿ ನಿಂತು ಆಕಾಶವನ್ನು ತದೇಕ ಚಿತ್ತದಿಂದ ವೀಕ್ಷಿಸಿ, ಸದ್ದಲೇಎಂದು ಅಧಿಕಾರದ ವಾಣಿ ಮೊಳಗಿಸಿದ ಗೊರವಯ್ಯ ಪರಾಕ್ ಎಂದು ಬಿಲ್ಲಿನಿಂದ ಕಳೆಕ್ಕೆ ಧುಮುಕಿದ. ಗೊರವಪ್ಪಂದಿರುವ ಕಂಬಳಿಯಲ್ಲಿ ಗೊರವಯ್ಯನನ್ನು ಸುರಕ್ಷಿತವಾಗಿ ಕೆಳಗಿಳಿಸಿದರು.
ಈ ಕಾರ್ಣಿಕದ ನುಡಿಯಿಂದ ದೇಶದ ಒಳಿತು -ಕೆಡಕುಗಳ ವಿಶ್ಲೇಷಣೆ ಮಾಡಲಾಗುತ್ತದೆ. ನಾಡಿನ ಗಣ್ಯರ ಜೀವನ, ರೈತಾಪಿ ವರ್ಗಕ್ಕೆ ಶುಭ-ಅಶುಭ, ಮಕ್ಕಳು, ಹಿರಿಯ ಜೀವನ, ನಾಡಿನ ಒಳಿತು ಕೆಡುಕುಗಳ ಮುನ್ನೆಚ್ಚರಿಕೆ ಕೈಗನ್ನಡಿ ಆಗಿರುತ್ತದೆ ಎಂದರೆ ತಪ್ಪಾಗಲಾರದು. ಹೀಗೆ ಎಲ್ಲಾ ರೀತಿಯಿಂದಲೂ ಶ್ರೀ ಮೈಲಾರ ಕಾರ್ಣಿಕೋತ್ಸವವನ್ನು ಭಕ್ತರು ತಮ್ಮದೇ ಲೆಕ್ಕಾಚಾರದಲ್ಲಿ ವಿಶ್ಲೇಷಿಸುತ್ತಾರೆ. ಕಾರ್ಣಿಕ ನುಡಿ ಭವಿಷ್ಯದ ಸತ್ಯವಾಣಿ ಎಂದು ನಂಬುತ್ತಾರೆ.
ಎಲ್ಲಡೆಮನೆಮಾಡಿದ ಸಂಭ್ರಮ: ಕೊರೋನಾ ಕಾರಣಕ್ಕೆ ಕಳೆದ ಎರಡು ವರ್ಷಗಳಲ್ಲಿ ಜಾತ್ರೆ ಅದ್ದೂರಿಯಾಗಿ ನಡೆದಿರಲಿಲ್ಲ. ಪ್ರಸಕ್ತ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಮೈಲಾರದಲ್ಲಿ ಎಲ್ಲಡೆ ಜಾತ್ರೆ ಸಂಭ್ರಮ ಮನೆಮಾಡಿತ್ತು.