“ರಾಷ್ಟ್ರೀಯ ಸಮಗ್ರತೆ-ಐಕ್ಯತೆ ಬಲಪಡಿಸಿದಾಗ ಸ್ವಾತಂತ್ರ್ಯೋತ್ಸವ ಆಚರಣೆ ಸಾರ್ಥಕ”
;-ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ
ಹಾವೇರಿ: ಮಹಾತ್ಮಾ ಗಾಂಧೀಜಿ ಸೇರಿದಂತೆ, ನಮ್ಮ ಹಿರಿಯರು ಬದುಕಿದ ಆದರ್ಶಗಳನ್ನು ಇಂದು ನಾವು ಮೈಗೂಡಿಸಿಕೊಂಡು, ರಾಷ್ಟ್ರೀಯ ಸಮಗ್ರತೆ ಹಾಗೂ ಐಕ್ಯತೆಯನ್ನು ಬಲಪಡಿಸಬೇಕಾಗಿದೆ. ಅಂದಾಗ ಮಾತ್ರ ಇಂದಿನ ಸ್ವಾತಂತ್ರ್ಯೋತ್ಸವದ ಆಚರಣೆ ಸಾರ್ಥಕವಾಗುತ್ತದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಅವರು ಹೇಳಿದರು.
ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ೭೮ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ನಮ್ಮ ಹಕ್ಕು, ಅಭಿವೃದ್ಧಿ ನಮ್ಮ ಧ್ಯೇಯ, ಕೃಷಿ ನಮ್ಮ ಆತ್ಮ, ರೈತ ನಮ್ಮ ಬೆನ್ನೆಲುಬು, ದೇಶ ಕಾಯುವ ಯೋಧ, ದೇಶ ಕಟ್ಟುವ ಯುವ ಜನತೆ ಈ ದೇಶದ ಶಕ್ತಿ ರೂಪಗಳು. ಇವುಗಳ ಜೊತೆಗೆ ಇನ್ನೂ ಅನೇಕ ಸಂಗತಿಗಳು ಈ ನಾಡಿನ ಸಮಗ್ರ ವಿಕಾಸಕ್ಕೆ ಕಾರಣವಾಗಿರುವುದನ್ನು ನಾವು ಮರೆಯುವಂತಿಲ್ಲ. ರಾಜ-ಮಹಾರಾಜರು ಕಟ್ಟಿದ, ಸಾರ್ವಭೌಮರು ಆಳಿದ, ಶರಣರು-ಸಂತರು ಹರಸಿದ, ಕವಿ-ಕಲಾವಿದರು ಹಾಡಿದ, ವಿವೇಕಿ-ವಿಜ್ಞಾನಿ-ವಿದ್ವಾಂಸರುಗಳು ರೂಪಿಸಿದ ಈ ದೇಶದ ಆತ್ಮಶಕ್ತಿಯನ್ನು ನಾವು ಅರ್ಥಪೂರ್ಣವಾಗಿ ಮುಂದಿನ ಪೀಳಿಗೆಗೆ ತಲುಪಿಸಬೇಕಾಗಿದೆ ಎಂದರು.
ಆಗಸ್ಟ್ ೧೫, ೧೯೪೭ ಭಾರತೀಯರ ಪಾಲಿಗೆ ಕೇವಲ ಒಂದು ದಿನಾಂಕವೋ ಅಥವಾ ಒಂದು ಇಸ್ವಿಯೋ ಅಷ್ಟೇ ಅಲ್ಲ, ಅದು ೨೦೦ ವರ್ಷಗಳ ಕಾಲ ಈ ದೇಶವನ್ನು, ಈ ದೇಶದ ಜನರ ಬದುಕು-ಭಾವನೆಗಳನ್ನು ತಮ್ಮ ಬಿಗಿ ಮುಷ್ಠಿಯಲ್ಲಿ ಇಟ್ಟುಕೊಂಡು ಆಳಿದ ಬ್ರಿಟಿಷರನ್ನು ನಮ್ಮ ನೆಲದಿಂದ ಹೊರಹಾಕಿದ ಸಂಭ್ರಮದ ರೂಪಕವಾಗಿದೆ. ಈ ರೂಪಕ ಸಂಭ್ರಮಾಚರಣೆ ೭೭ ವರ್ಷಗಳನ್ನು ದಾಟಿ ೭೮ನೇ ವರ್ಷಕ್ಕೆ ಕಾಲಿಟ್ಟಿದೆ. ಇದನ್ನು ಇಡೀ ದೇಶದ ಆತ್ಮಗೌರವವನ್ನು, ಆತ್ಮಾಭಿಮಾನವನ್ನು, ಸ್ವಾತಂತ್ರ್ಯ, ಸಮಾನತೆ, ಸ್ವಾವಲಂಬನೆಯನ್ನು ಮತ್ತು ಹೋರಾಟ, ತ್ಯಾಗ, ಬಲಿದಾನಗಳನ್ನು ನೆನಪು ಮಾಡಿಕೊಳ್ಳುವ ಸಾರ್ಥಕ ಕ್ಷಣವೆಂದೇ ನಾನು ಭಾವಿಸುತ್ತೇನೆ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಈ ದೇಶದೊಂದಿಗೆ ಮತ್ತು ಈ ನಾಡಿನೊಂದಿಗೆ ಹಾವೇರಿ ಜಿಲ್ಲೆಯ ಈ ನೆಲ ಕೂಡ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ಅಖಂಡ ಧಾರವಾಡ ಜಿಲ್ಲೆಯ ಭಾಗವಾಗಿದ್ದ ಇಂದಿನ ಹಾವೇರಿ ಜಿಲ್ಲೆಯ ಅನೇಕ ಮಹನೀಯರು ಭಾರತ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಪ್ರಾದೇಶಿಕ ಶಕ್ತಿಯನ್ನು ಮೆರೆದಿದ್ದಾರೆ ಎಂದರು.
ಮೋಟೇಬೆನ್ನೂರಿನ ಮೈಲಾರ ಮಹದೇವಪ್ಪನವರು, ಸಂಗೂರ ಕರಿಯಪ್ಪ, ಮೆಣಸಿನಹಾಳ ತಿಮ್ಮನಗೌಡರು, ಶಿವಪ್ಪ ನೇಸ್ವಿ, ಹೊಸಮನಿ ಸಿದ್ದಪ್ಪ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಹೆಜ್ಜೆಗುರುತುಗಳು ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ಅಚ್ಚಳಿಯದೇ ಉಳಿದಿವೆ. ಹಾಗೆಯೇ ಇನ್ನೂ ಅನೇಕ ಮಹನೀಯರು ಇವರೊಂದಿಗೆ ಎಲೆಮರೆಯ ಕಾಯಿಯಂತೆ ಹಗಲಿರುಳು ದುಡಿದಿದ್ದಾರೆ. ಅವರೆಲ್ಲರಿಗೂ ಈ ಶುಭ ಸಂದರ್ಭದಲ್ಲಿ ನಮ್ಮೆಲರ ಕೃತಜ್ಞತೆಗಳು ಸಲ್ಲಲೇಬೇಕಿದೆ.
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಸರ್ಕಾರ ಜಾರಿಗೆ ತಂದ ಗ್ಯರಂಟಿ ಯೋಜನೆಗಳು ರಾಜ್ಯದ ಮತ್ತು ಜಿಲ್ಲೆಯ ಜನತೆಗೆ ಹೊಸ ಚೈತನ್ಯವನ್ನೇ ನೀಡಿವೆ. ನಮ್ಮ ಯೋಜನೆಗಳ ಯಶಸ್ಸಿನ ಪ್ರತಿಫಲವನ್ನು ಸಂತೃಪ್ತ ಜನತೆಯ ಮುಖದಲ್ಲಿ ಸ್ಪಷ್ಟವಾಗಿ ಕಾಣಬಹುದು ಎಂದರು. ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ನೆನೆಗುದಿಗೆ ಬಿದ್ದಿದ್ದ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ನಿರಂತರವಾಗಿ ಪರಿಶೀಲಿಸಿ, ಅಧಿಕಾರಿಗಳ ಸಭೆ ನಡೆಸಿ, ಅವುಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದರು.
ಹಾವೇರಿ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಮತ್ತು ನಗರಸಭೆಯ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರೊಂದಿಗೆ ಹಲವಾರು ಸಭೆಗಳನ್ನು ಮಾಡಲಾಗಿದ್ದು, ಇದೇ ವರ್ಷ ಸಮಸ್ಯೆಗೆ ಪರಿಹಾರ ಕೈಗೊಳ್ಳಲಾಗುವುದು. ಹಾವೇರಿ ನಗರದ ಕುಡಿಯುವ ನೀರು ಪೂರೈಕೆ ಯೋಜನೆಯ ಮೂಲಗಳಾದ ವರದಾ ನದಿ ಮತ್ತು ತುಂಗಭದ್ರಾ ನದಿ ಬೇಸಿಗೆ ದಿನಗಳಲ್ಲಿ ಬತ್ತುವುದರಿಂದ ಉಂಟಾಗುವ ನೀರಿನ ಸಮಸ್ಯೆ ಪರಿಹಾರಕ್ಕೆ ನಗರದ ಮುಲ್ಲಾನ ಕೆರೆ, ಅಕ್ಕಮಹಾದೇವಿ ಹೊಂಡ ಮತ್ತು ದುಂಡಿ ಬಸವೇಶ್ವರ ಕೆರೆಗೆ ನೀರು ಹರಿಸುವ ಯೋಜನೆ ರೂಪಿಸಲಾಗಿದೆ ಎಂದರು.
ಆರೋಗ್ಯ: ಜಿಲ್ಲೆಯಲ್ಲಿ ಡೆಂಗೀ ನಿಯಂತ್ರಣಕ್ಕೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಇಲಾಖೆಯಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಬ್ಯಾಡಗಿ, ಹಾವೇರಿ, ಹಾನಗಲ್ ಹಾಗೂ ಹಿರೇಕೆರೂರ ತಾಲೂಕಿನ ಆಯ್ದ ೮ ಗ್ರಾಮಗಳ ಆರೋಗ್ಯ ಮತ್ತು ಕ್ಷೇಮ ಮಂದಿರಗಳ ನೂತನ ಕಟ್ಟಡ ನಿರ್ಮಾಣಕ್ಕೆ ತಲಾ ರೂ.೬೫ ಲಕ್ಷದಂತೆ ರೂ.೫.೨೦ ಕೋಟಿ ಮಂಜೂರು ಮಾಡಲಾಗಿದೆ.
ವೈದ್ಯಕೀಯ ಕಾಲೇಜು: ಜಿಲ್ಲೆಯಲ್ಲಿ ರೂ.೩೬೫ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಹಾವೇರಿ ಸರ್ಕಾರಿ ವೈದ್ಯಕೀಯ ಕಾಲೇಜ್ ಕಟ್ಟಡ ಈಗಾಗಲೇ ಶೇ.೯೫ ರಷ್ಟು ಪ್ರಮಾಣದಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಮೊದಲ ಮತ್ತು ಎರಡನೇ ವರ್ಷದ ವೈದ್ಯಕೀಯ ತರಗತಿಗಳನ್ನು ಹೊಸ ಕಟ್ಟಡದಲ್ಲಿ ಆರಂಭಿಸಲಾಗಿದೆ ಹಾಗೂ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ.
ಕುಡಿಯುವ ನೀರಿನ ಯೋಜನೆ: ಆಣೂರ, ತಡಸ, ಹಂಸಭಾವಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಡಿ ೪೫೧ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ರೂ.೧,೩೬೫ ಕೋಟಿ ಮೊತ್ತದ ಯೋಜನೆಗಳು ಪ್ರಗತಿ ಹಂತದಲ್ಲಿವೆ. ತ್ವರಿತವಾಗಿ ಅನುಷ್ಠಾನಕ್ಕೆ ಕ್ರಮವಹಿಸಿ ಗ್ರಾಮೀಣ ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಚಿವ ಶಿವನಂದ ಪಾಟೀಲ ಹೇಳಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಚೆನ್ನಪ್ಪ, ಕೆ.ಸಿ.ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಆನಂದಸ್ವಾಮಿ ಗಡ್ಡದೇವರಮಠ ಇತರರು ಉಪಸ್ಥಿತರಿದ್ದರು.