ರೋಗಗಳಿಂದ ಮುಕ್ತರಾಗಲು ಆರೋಗ್ಯಕರ ಜೀವನಶೈಲಿ ಅಗತ್ಯ: ಡಾ.ಅಂಚಟಗೇರಿ
ಹಾವೇರಿ: ಇತ್ತೀಚಿನ ದಿನಗಳಲ್ಲಿ ಆಧುನಿಕ ಜೀವನ ಶೈಲಿಯಿಂದಾಗಿ ಮನುಷ್ಯನಲ್ಲಿ ಹೃದಯ ಸಂಬಂಧಿ ರೋಗಗಳು ಹೆಚ್ಚಾಗುತ್ತಿದ್ದು, ಊಟ ಹಿತ-ಮಿತವಾಗಿರಬೇಕು. ನಾವು ಅಡುಗೆಗೆ ಬಳಸುವ ಅಡುಗೆ ಎಣ್ಣೆ ಪೆಟ್ರೋಲಿಯಂ ಉತ್ಪನ್ನಗಳಿಂದ ತಯಾರಿಸಲಾಗುತ್ತಿದ್ದು, ಈ ಎಣ್ಣಿ ಬಳಕೆಯಿಂದ ದೇಹದಲ್ಲಿ ಕೋಲೆಸ್ಟ್ರಾಲ್ ಸಂಗ್ರಹವಾಗಿ ಹೃದಯಖಾಯಿಲೆಗಳು ಹೆಚ್ಚುತ್ತಿದ್ದು, ನಮ್ಮ ನಿತ್ಯದ ಊಟ-ಉಪಹಾರದಲ್ಲಿ ನಮ್ಮ ಆರೋಗ್ಯ ಅಡಗಿದ್ದು, ಕೊಬ್ಬಿನ ಆಹಾರಗಳನ್ನು ತ್ಯಜೀಸಿ ಉತ್ತಮ ಆರೋಗ್ಯ ಜೀವನ ಶೈಲಿಯನ್ನು ಅಳವಡಿಸಿಕೊಂಡು ಹೃದಯಕ್ಕಾಗಿ ನಿತ್ಯ ಒಂದು ಗಂಟೆ ಸಮಯವನ್ನು ಮೀಸಲಿಡಬೇಕೆಂದು ಧಾರವಾಡದ ಎಸ್ಡಿಎಮ್ ನಾರಾಯಣ ಹಾರ್ಟ್ ಸೆಂಟರ್ನ ಹೃದಯತಜ್ಷ ಡಾ.ಡಿ.ಬಿ.ಅಂಚಟಗಿ ಹೇಳಿದರು.
ಶನಿವಾರ ಇಲ್ಲಿನ ಜಿಲ್ಲಾಗುರುಭವನದಲ್ಲಿ ಧಾರವಾಡದ ಎಸ್ಡಿಎಮ್ ನಾರಾಯಣ ಹಾರ್ಟ್ ಸೆಂಟರ್ ಹಾಗೂ ಜಯ ಕರ್ನಾಟಕ ಸಂಘಟನೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಹೃದಯ ರೋಗ ಉಚಿತ ತಪಾಸಣೆ ಶಿಬಿರ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವದಲ್ಲಿ ಭಾರತ ಸಿಹಿ ಮೂತ್ರರೋಗದಲ್ಲಿ ಎರಡನೆ ಸ್ಥಾನದಲ್ಲಿದೆ. ಮುಂಬರುವದಿನಗಳಲ್ಲಿ ಪ್ರತಿಯೊಬ್ಬ ಭಾರತೀಯನಲ್ಲೂ ಸಿಹಿ ಮೂತ್ರ ರೋಗಕ್ಕೆ ತುತ್ತಾಗಲಿದ್ದಾನೆ. ಹೃದಯಕ್ಕಾಗಿ ನಾವು ಸಮಯವನ್ನು ಮೀಸಲಿಡಬೇಕು. ಪ್ರತಿ ದಿನ ಒಂದು ಗಂಟೆ ವಾಕಿಂಗ್ ಮತ್ತು ಯೋಗಾಸನ ಮಾಡಬೇಕು. ಆಹಾರದಲ್ಲಿ ಉಪ್ಪು ಕಡಿಮೆ ಉಪಯೋಗಿಸಬೇಕು ಹಾಗೂ ತರಕಾರಿ, ಹಣ್ಣು ಹೆಚ್ಚು ಉಪಯೋಗಿಸಬೇಕು ಎಂದರು.
ಜಿಲ್ಲಾ ಆಸ್ಪತ್ರೆಯ ರಕ್ತಭಂಡಾರದ ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ ಮಾತನಾಡಿ ನಮ್ಮ ಇಂದಿನ ಆಹಾರ ಪದ್ದತಿ ಸರಿಯಿಲ್ಲ, ದೇಹಕ್ಕೆ ಅಗತ್ಯ ಇರುವ ಆಹಾರವನ್ನು ಕೈಬಿಟ್ಟು, ನಾಲಿಗೆಯ ರುಚಿಗೆ ಫಾಸ್ಟ್ ಪುಡ್, ಜಂಕ್ಪುಡ್ಗಳನ್ನು ತಿನ್ನುವುದರಿಂದ ಹಾಗೂ ನಿಯಮಿತಿ ವ್ಯಾಯಾಮ, ಯೋಗಾ ಮಾಡದೇ ಊಟ-ಉಪಹಾರವಾದ ತಕ್ಷಣ ಹಾಸಿಗೆಗೆ ಮೈಚೆಲ್ಲುವುದರಿಂದ ಪಚನ ಕ್ರಿಯೆ ಸರಿಯಾಗಿ ಆಗದೇ ದೇಹ ರೋಗಕ್ಕೆ ಭಾಜನವಾಗುತ್ತದೆ. ಇಂದು ಪ್ರತಿಯೊಬ್ಬರು ಒತ್ತಡದಲ್ಲಿದ್ದಾರೆ. ಇದು ಸಹ ರೋಗಕ್ಕೆ ಮೂಲವಾಗಿದೆ. ನಮ್ಮ ದೇಹ ಆರೋಗ್ಯವಾಗಿರಬೇಕಾದರೆ ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಕೊಳ್ಳುವುದು ಅನಿವಾರ್ಯ ಎಂದು ಅವರು ಹೇಳಿದರು.
ಹೆಚ್ಚುವರಿ ಜಿಲ್ಲಾಪೊಲೀಸ್ವರಿಷ್ಠಾಧಿಕಾರಿ ಡಾ. ಗೋಪಾಲ ಮಾತನಾಡಿ ನೌಕರರಿರಲಿ, ಸಾರ್ವಜನಿಕರಿರರಲಿ ಒತ್ತಡಮುಕ್ತರಾದಾಗ ರೋಗಗಳಿಂದ ದೂರ ಇರಲು ಸಾಧ್ಯವಾಗುತ್ತದೆ, ಇದಕ್ಕೆ ಪ್ರತಿಯೋಬ್ಬರೂ ಸಹ ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕಿದೆ ಎಂದರು. ಹೈಕೋರ್ಟ ನ್ಯಾಯವಾದಿ ಸಂದೀಪ ಪಾಟೀಲ ಮಾತನಾಡಿದರು.ಸಮಾರಂಭದ ಸಾನಿಧ್ಯವನ್ನು ಹುಕ್ಕೇರಿಮಠದ ಸದಾಶಿವಸ್ವಾಮಿಜಿ ವಹಿಸಿದ್ದರು.
ಪ್ರಾಸ್ಥಾವಿಕವಾಗಿ ಜಯಕರ್ನಾಟಕ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ ಆನವಟ್ಟಿ ಮಾತನಾಡಿ ಜಯಕರ್ನಾಟಕ ಸಂಘಟನೆಯಿಂದ ನಾಡು-ನುಡಿಗಾಗಿ ಹೋರಾಡುವುದರ ಜೊತೆಗೆ ಜನಪರಕಾರ್ಯಗಳನ್ನು ಸಹ ಮಾಡುತ್ತಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಜಯಕರ್ನಾಟಕ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸುಭಾಸ್ ಬೆಂಗಳೂರ ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯರೋಗ ಕಾಣಿಸುತ್ತಿರುವ ಹಿನ್ನಲೆಯಲ್ಲಿ ಹೃದಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.
ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಸಂಜಯಗಾಂಧಿ ಸಂಜೀವಣ್ಣನವರ ಸ್ವಾಗತಿಸಿದರು, ಜಿಲ್ಲಾ ಕಾರ್ಯದರ್ಶಿ ರಮೇಶ ಜಾಲಿಹಾಳ ನಿರೂಪಿಸಿದರು, ಸತೀಶ ಮಡಿವಾಳರ ವಂದಿಸಿದರು.
ಶಿಬಿರದಲ್ಲಿ ಸುಮಾರು ೧೫೦ ಜನರು ಹೃದಯ ತಪಾಸಣೆಗೆ ಒಳಗಾದರು. ೨೩ಕ್ಕೂ ಹೆಚ್ಚುಯುವಕರು ರಕ್ತದಾನ ಮಾಡಿದರು.