ಶರಣರ ವಚನಗಳ ಸಾರವನ್ನು ವಿದ್ಯಾರ್ಥಿಗಳು, ಯುವಜನಾಂಗ ತಿಳಿಯಲಿ: ಮಾಲತೇಶ ಅಂಗೂರ
ಹಾವೇರಿ: ಹನ್ನೆರಡನೇ ಶತಮಾನದ ಶರಣರ ವಚನಗಳು ಶೋಷಣೆಗೆ ಒಳಗಾಗಿದ್ದವರನ್ನು ಅಸಮಾನತೆಯಿಂದ ಸಮಾನತೆಯತ್ತ ಕರೆದೊಯ್ದವು. ವಚನಗಳನ್ನು ವನೆ-ಮನಗಳಿಗೆ ಮುಟ್ಟಿಸುವ ವಚನ ಶ್ರಾವಣ ಮನೆಯಿಂದ ಮಹಾಮನೆ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿದ್ದು ಎಲ್ಲಾ ಸಮುದಾಯದ ಮನೆಗಳಲ್ಲೂ ವಚನಗಳನ್ನು ಪಠಿಸುವ ಈ ಭಿನ್ನ ಪ್ರಯತ್ನ ಸಮಾನತೆಯನ್ನು ಸಾರುವ ಹಾಗೂ ಪರಸ್ಪರ ಪ್ರೀತಿ ವಿಶ್ವಾಸಗಳನ್ನು ಬೆಸೆಯುವ ಕಾರ್ಯಕ್ರಮವಾಗಿದೆ ಎಂದು ಲೇಖಕ ಮಾಲತೇಶ ಅಂಗೂರ ಹೇಳಿದರು.
ಇಲ್ಲಿನ ಬಸವೇಶ್ವರನಗರದ ಶರಣ ಕೆ.ಎಮ್. ಬಿಜಾಪುರ ಅವರ ಮನೆಯಲ್ಲಿ ಶ್ರಾವಣ ಮಾಸದ ನಿಮಿತ್ತ ಹಾವೇರಿಯ ಬಸವ ಬಳಗ ವತಿಯಿಂದ ಶುಕ್ರವಾರ ಸಂಜೆ ಆಯೋಜಿಸಲಾಗಿದ್ದ ಮನೆಯಲ್ಲಿ ಮೊದಲ ದಿನದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಶರಣರು ತಮ್ಮ ವಚನಗಳಲ್ಲಿ ಮೂಢನಂಣಬಿಕೆ, ಕಂದಾಚಾರಗಳನ್ನು ಕಟುವಾದ ಶಬ್ದದಿಂದ ನಿರ್ಲಕ್ಷಿಸಿ ವೈಜ್ಞಾನಿಕ ತಳಹದಿಯಲ್ಲಿ ನಮ್ಮ ಬದುಕು ಹೇಗಿರಬೇಕೆನ್ನುವುದನ್ನು ತಿಳಿಸಿದ್ದಾರೆ. ಅಸಮಾನತೆಯಿಂದ ಸಮಾನತೆಯತ್ತ ಕರೆದೊಯ್ದು ಸಧೃಡ ಸಮಾಜ ನಿರ್ಮಾಣ ಮಾಡಿದ ಶರಣರು ರಚಿಸಿದ ವಚನಗಳನ್ನು ವಿದ್ಯಾರ್ಥಿಗಳಿಗೆ, ಯುವಜನಾಂಗಕ್ಕೆ ತಿಳಿಸುವ ಪ್ರಯತ್ನ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.
ರಾಣೇಬೆನ್ನೂರಿನ ಎಸ್ಜೆಎಂ ಕಾಲೇಜಿನ ಪ್ರಾಚಾರ್ಯ ರೇವಸಿದ್ದಪ್ಪವಿ ಹೆಗಡಾಳ ಉಪನ್ಯಾಸ ನೀಡಿ ವಿಶ್ವಗುರು ಬಸವಣ್ಣನವರು ಸಮಾಜದಲ್ಲಿನ ಅನಿಷ್ಠ ಪದ್ಧತಿಗಳನ್ನು ತೊಡೆದು ಹಾಕಿ ಸಾಮಾಜಿಕ, ಆರ್ಥಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸರ್ವರೂ ಸಮಾನರೆಂದು ಪ್ರತಿಯೊಬ್ಬರಿಗೂ ಧರ್ಮದೀಕ್ಷೆ ನೀಡಿದ ಮಹಾನ್ ಚೇತನ. ಅನುಭವ ಮಂಟಪದಲ್ಲಿದ್ದ ಶರಣರೆಲ್ಲರೂ ಬರೆದ ವಚನಗಳಲ್ಲಿ ಆತ್ಮಸ್ಥೈರ್ಯ, ಸಮಾನತೆಯ ಹಕ್ಕು, ಪ್ರಜಾಪ್ರಭುತ್ವದ ಆಶಯ ಅಡಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಹೊಸಮಠದ ಚರಮೂರ್ತಿಗಳಾದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ ಹಾವೇರಿಯಲ್ಲಿ ಮಹಾಮನೆ ಕಾರ್ಯಕ್ರಮ ಆರಂಭ ಆಗಿದ್ದು ಹೊಸಮಠದಿಂದ, ವಚನಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಹಾವೇರಿಯತ ಬಸವ ಬಳಗ ಉತ್ತಮ ಕಾರ್ಯವನ್ನು ಮಾಡುತ್ತಿದೆ. ಹನ್ನೆರಡನೆಯ ಶತಮಾನದ ಶರಣರ ವಚನಗಳು ಇಂದಿನ ಜನರ ಬದುಕಿನಲ್ಲಿ ಹಾಸುಹೊಕ್ಕಾಗಬೇಕು, ಅಂದಾಗ ಶರಣರ ಆಶಯಗಳು ಈಡೇರಲು ಸಾಧ್ಯ ಎಂದರು.
ಮುಖ್ಯಅತಿಥಿ ಡಾ.ಮಹಾದೇವಿ ಕಣವಿ ಮಾತನಾಡಿ ಶರಣರು ಸ್ತ್ರೀಸ್ವಾತಂತ್ರವನ್ನು ಪ್ರತಿಪಾದಿಸುವ ಮೂಲಕ ಬಸವಣ್ಣನವರು ಕಟ್ಟಿದ ಮಹಾಮನೆಯಲ್ಲಿ ಅನೇಕ ಶರಣೆಯರು ಅನೇಕ ವಚನಗಳನ್ನು ರಚಿಸುವ ಮೂಲಕ ಮಹಿಳಾ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದರು.
ಉಳಿವೆಪ್ಪ ಪಂಪಣ್ಣವರ ವಚನ ಪ್ರಾರ್ಥನೆ ಮಾಡಿದರು, ಕೆ.ಎಂ.ಬಿಜಾಪುರ ಸ್ವಾಗತಿಸಿದರು, ಶಿವಬಸಪ್ಪ ಮುದ್ದಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಲ್ಲಿಕಾರ್ಜುನ ಹಿಂಚಿಗೇರಿ ನಿರೂಪಿಸಿದರು. ಕಾಐಕ್ರಮದಲ್ಲಿ, ಶೋಭಾತಾಯಿ ಮಾಗಾವಿ, ಚೆನ್ನಬಸವಣ್ಣ ರೊಡ್ಡನವರ, ಶಿವಯೋಗಿ ಬೆನ್ನೂರ, ಮುರಿಗೆಪ್ಪ ಕಡೆಕೊಪ್ಪ, ಮಾಲತೇಶ ಜಗದೀಶ್ ಹತ್ತಿಕೋಟಿ, ಶಿವಯೋಗಿ ಮಾಮಲೆಪಟ್ಟಣಶೆಟ್ಟಿ, ಶಾಂತಕ್ಕ ಮಡಿವಾಳರ, ಲಕ್ಕಣ್ಣವರ ಸಹೋದರಿಯರು, ನಿಂಗಣ್ಣ ಪೂಜಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಕುಮಾರಿ ಬಿಜಾಪುರ ಶರಣು ಸಮರ್ಪಣೆ ಮಾಡಿದರು.