ಶಿಗ್ಗಾಂವಿ ಜನಸ್ಪಂದನದಲ್ಲಿ ಇಬ್ಬರು ಅಧಿಕಾರಿಗಳ ತಲೆದಂಡ
ಜನರ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳಿಗೆ ಸಚಿವ ಶಿವಾನಂದ ಪಾಟೀಲ ನಿರ್ದೇಶನ
ಹಾವೇರಿ: ಕರ್ತವ್ಯಲೋಪ ಆರೋಪದ ಮೇಲೆ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ನಿರ್ದೇಶನ ನೀಡಿದ್ದಾರೆ. ಸಾರ್ವಜನಿಕರಿಂದ ಅತಿ ಹೆಚ್ಚು ದೂರುಗಳ ಬಂದ ಹಿನ್ನೆಲೆಯಲ್ಲಿ ಬಂಕಾಪುರ ಪುರಸಭೆ ಮುಖ್ಯಾಧಿಕಾರಿ ಮೇಲಿನ ಆರೋಪಗಳ ಬಗ್ಗೆ ವರದಿ ಕೊಡಿ ಎಂದು ಸೂಚನೆ ನೀಡಿದ್ದಾರೆ.
ಶಿಗ್ಗಾವಿಯಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ಅವರು ತಾಲೂಕು ಅಬಕಾರಿ ಇನ್ಸ್ಪೆಕ್ಟರ್ ಪ್ರಕಾಶ್ ಮಾಕಣ್ಣವರ್, ಗುಡ್ಡದ ಚನ್ನಾಪುರ ಗ್ರಾಪಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇಮ್ತಿಯಾಜ್ ಅಹ್ಮದ್ ಅವರನ್ನು ಅಮಾನತು ಮಾಡಲು ಆದೇಶ ಮಾಡಿದರು. ಬಂಕಾಪುರ ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಅವರ ಮೇಲಿನ ಆರೋಪಗಳ ಬಗ್ಗೆ ವರದಿ ಕೊಡಿ ಎಂದು ಯೋಜನಾ ನಿರ್ದೇಶಕಿ ಮಮತಾ ಅವರಿಗೆ ಸೂಚಿಸಿದರು.
ಕೆಲ ಅಧಿಕಾರಿಗಳ ಮೇಲೆ ಹೆಚ್ಚಿನ ದೂರುಗಳ ಕೇಳಿಬಂದ ಹಿನ್ನೆಲೆಯಲ್ಲಿ ಅವರ ಬಗ್ಗೆ ವರದಿ ಕೊಡಿ ಎಂದು ಮೇಲಧಿಕಾರಿಗಳಿಗೆ ಸೂಚನೆ ನೀಡಿದರು. ವರದಿ ನೈಜವಾಗಿಲ್ಲ ಎಂಬುದು ಕಂಡು ಬಂದರೆ ಹಿರಿಯ ಅಧಿಕಾರಿಗಳಿಂದ ಮತ್ತೆ ವರದಿ ಪಡೆಯಲಿದ್ದು, ನೈಜ ವರದಿ ನೀಡದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಇದನ್ನು ಗಮನದಲ್ಲಿಟ್ಟುಕೊಂಡು ವರದಿ ಕೊಡಿ ಎಂದು ಸೂಚನೆ ನೀಡಿದರು.
ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ, ಕೆಎಸ್ಆರ್ಟಿಸಿ ಬಸ್ ಸೌಕರ್ಯ ಸೇರಿದಂತೆ ಹಲವು ದೂರುಗಳಿಗೆ ಸ್ಥಳದಲ್ಲೇ ಆದೇಶ ಮಾಡಿದರು. ಅರ್ಹ ಅಂಗವಿಕಲರಿಗೆ ತಕ್ಷಣ ತ್ರಿಚಕ್ರ ವಾಹನ ವಿತರಿಸಿ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಿ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.
ಜಲಜೀವನ್ ಮಿಷನ್ ಯೋಜನೆ ಅನುಷ್ಠಾನದಲ್ಲಿ ಗುತ್ತಿಗೆದಾರರ ಲೋಪ ಕಂಡು ಬಂದರೆ ಕಪ್ಪುಪಟ್ಟಿಗೆ ಸೇರಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರು. ೩೫೦ ಕೋಟಿ ರೂ. ವೆಚ್ಚದ ಶಿಗ್ಗಾವಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಬಂದಿದ್ದರೂ ಉದ್ದೇಶ ಸಫಲವಾಗಿಲ್ಲ. ಬಹುತೇಕ ಕೆರೆಗಳಿಗೆ ನೀರು ಬಂದಿಲ್ಲ ಎಂದು ರೈತ ಸಂಘದ ಮುಖಂಡರು ಸಚಿವರ ಗಮನ ಸೆಳೆದರು. ಯಾವ ಯಾವ ಕೆರೆಗಳಿಗೆ ನೀರು ಹರಿದಿಲ್ಲ ಎಂಬ ಬಗ್ಗೆ ವರದಿ ಕೊಡಿ ಎಂದು ಜಲಸಂಪನ್ಮೂಲ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಬಿಯಂತರ ರವಿ ಅರಸೀಕರೆ ಅವರಿಗೆ ಸೂಚಿಸಿದರು.
ಜಿಲ್ಲೆಯಲ್ಲಿರುವ ಎರಡು ಸಕ್ಕರೆ ಕಾರ್ಖಾನೆಗಳಲ್ಲಿ ಸಕ್ಕರೆ ಇಳುವರಿ ಪ್ರಮಾಣ ಕಡಿಮೆ ತೋರಿಸುತ್ತಿದ್ದು, ರೈತರು ಪೂರೈಕೆ ಮಾಡಿದ ಕಬ್ಬಿಗೆ ಕಡಿಮೆ ಎಫ್ಆರ್ಪಿ ದರ ಕೊಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಲೆ ಸಿಗುತ್ತಿದೆ. ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಅನ್ಯಾಯವಾಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ಮುಖಂಡರು ಮನವಿ ಮಾಡಿದರು. ಈ ಬಗ್ಗೆ ಪರಿಶೀಲನೆ ನಡೆಸಲು ವಿಶೇಷ ತಂಡ ರಚನೆ ಮಾಡಲಿದ್ದು, ತಂಡದ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ತಾಲೂಕಿನ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಅಬಕಾರಿ ಅಧಿಕಾರಿಗಳು ದಾಳಿ ಮಾಡುತ್ತಿಲ್ಲ. ಇದರಿಂದ ಹಳ್ಳಿಗಳ ಸ್ವಾಸ್ಥ್ಯ ನಾಶವಾಗುತ್ತಿದೆ. ಅಬಕಾರಿ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ಧಾರೆ ಎಂದು ಗ್ರಾಮಸ್ಥರು ದೂರಿದರು. ಅಬಕಾರಿ ಇಲಾಖೆ ಜಿಲ್ಲಾಧಿಕಾರಿಯನ್ನು ಕರೆಸಿ ಈ ಬಗ್ಗೆ ಪ್ರಶ್ನೆ ಮಾಡಿದರು. ಎಷ್ಟು ಬಾರಿ ದಾಳಿ ಮಾಡಿದ್ದೀರಿ? ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು. ಕರ್ತವ್ಯಲೋಪ ಎಸಗಿದ ಅಧಿಕಾರಿಯನ್ನು ಅಮಾನತು ಮಾಡಿ ಎಂದು ಸೂಚಿಸಿದರು.
ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಬಸವರಾಜ ಶಿವಣ್ಣನವರ್, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಶಾಸಕರಾದ ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ್, ಜಿಪಂ ಸಿಇಒ ಅಕ್ಷಯ್ ಶ್ರೀಧರ್, ಎಎಸ್ಪಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸಾಗವಾನಿ ಕಟ್ಟಿಗೆ ನಾಪತ್ತೆ
ಶಿಗ್ಗಾಂವಿಯ ಹೊಸ ತಹಸೀಲ್ದಾರ್ ಕಚೇರಿ ನಿರ್ಮಾಣಕ್ಕೆ ಹಳೆಯ ಕಚೇರಿಯನ್ನು ನೆಲಸಮ ಮಾಡಲಾಗಿದ್ದು, ಈ ಕಟ್ಟಡಕ್ಕೆ ಬಳಸಿದ್ದ ಸಾಗುವಾನಿ ಕಟ್ಟಿಗೆಗಳ ಏನಾದವು ಎಂಬುದೇ ಗೊತ್ತಿಲ್ಲ. ಬೆಳೆ ಬಾಳುವ ಸಾಗವಾನಿ ಕಟ್ಟಿಗೆ ಎಲ್ಲಿ ಹೋಗಿವೆ ಎಂಬುದೇ ಗೊತ್ತಿಲ್ಲ. ಈ ಸಾಗವಾನಿ ಕಟ್ಟಿಗೆ ಪತ್ತೆ ಮಾಡಿ ಹರಾಜು ಹಾಕಿ ಎಂದು ಮಹಿಳೆಯೊಬ್ಬರು ಸಚಿವ ಶಿವಾನಂದ ಪಾಟೀಲ ಅವರಿಗೆ ಮನವಿ ಮಾಡಿದರು.
ಬಸ್ ವ್ಯವಸ್ಥೆ ಮಾಡಿ
ಶಾಲಾ ಕಾಲೇಜು ವಿದ್ಯಾರ್ಥಿಗಳೀಗೆ ಸಮಸ್ಯೆಯಾಗದಂತೆ ಹಳ್ಳಿಗಳಿಂದ ಪಟ್ಟಣಕ್ಕೆ ಬಸ್ ವ್ಯವಸ್ಥೆ ಮಾಡಿ ಎಂದು ಸಚಿವ ಶಿವಾನಂದ ಪಾಟೀಲ ಅವರು ಕೆಎಸ್ಆರ್ಟಿಸಿ ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೂಚಿಸಿದರು.
ಹಾನಗಲ್ ಮತ್ತು ಹುಬ್ಬಳ್ಳಿಯಿಂದ ಬರುವ ಬಸ್ಗಳ ಕೆಲವೆಡೆ ನಿಲುಗಡೆ ಕೊಡದ ಕಾರಣ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಸರ್ಕಾರ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಬಸ್ ವ್ಯವಸ್ಥೆ ಮಾಡಿ ವರದಿ ಕೊಡಿ ಎಂದು ಸೂಚಿಸಿದರು.
ಮಗುವಿಗೆ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ ಕಾರಣ ಬೇರೆ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು ಎಂಬ ದೂರು ಕೇಳಿ ಬೇಸರ ವ್ಯಕ್ತಪಡಿಸಿದ ಸಚಿವರು, ತಾಲೂಕು ವೈದ್ಯಾಧಿಕಾರಿಯನ್ನು ಕರೆಸಿ ವರದಿ ಕೇಳಿದರು. ತಕ್ಷಣ ಮಗುವಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಎಂದು ಹೇಳಿದರು.
ಅಚ್ಚುಕಟ್ಟಾದ ವ್ಯವಸ್ಥೆ
ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ಇಲಾಖಾವಾರು ಕೌಂಟರ್ ತೆರೆದು ಅರ್ಜೀ ಸ್ವೀಕಾರದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಸಚಿವರು, ಸ್ವತಃ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ವಿವರಣೆ ಕೇಳಿದ್ದು ವಿಶೇಷವಾಗಿತ್ತು.