

ಹಾನಗಲ್ಲ ಅತ್ಯಾಚಾರ ಪ್ರಕರಣ: ಸಿಪಿಐ ಶ್ರೀಧರ, ಪಿಸಿ ಇಲಿಯಾಸ್ ಅಮಾನತು
ಹಾವೇರಿ: ಜಿಲ್ಲೆಯ ಹಾನಗಲ್ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಕರ್ತವ್ಯ ನಿರ್ವಹಣೆಯಲದಲಿ ನಿರ್ಲಕ್ಷ ತೋರಿದ ಹಿನ್ನಲೆಯಲ್ಲಿ ಹಾನಗಲ್ ಪೊಲೀಸ್ ಠಾಣೆ ಸಿಪಿಐ ಆರ್. ಶ್ರೀಧರ ಹಾಗೂ ಪೊಲೀಸ್ ಕಾನಸ್ಟೇಬಲ್ ಇಲಿಯಾಸ ಅವರನ್ನು ಅಮಾನತುಗೊಳಿಸಿ ಜ.೧೬ರಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಅಂಶುಕುಮಾರ ಆದೇಶ ಹೊರಡಿಸಿದ್ದಾರೆ.
ಹಾನಗಲ್ಲಬಳಿಯ ತಾಲ್ಲೂಕಿನ ನಾಲ್ಕರ ಕ್ರಾಸ್ ಸಮೀಪದ ಈಡಿಗಾಸ್ ಲಾಡ್ಜ್ನಲ್ಲಿ ಜ.೮ರಂದು ಕೊಠಡಿಯಲ್ಲಿದ್ದ ಶಿರಸಿ ಮೂಲದ ಪುರುಷ ಮತ್ತು ಮಹಿಳೆ ಮೇಲೆ ಒಂದು ಕೋಮಿನ ಯುವಕರ ಗುಂಪು ಹಲ್ಲೆ ನಡೆಸಿತ್ತು. ಹಲ್ಲೆ ನಡೆಸಿದ ನಂತರ ಯುವತಿಯನ್ನು ಹೊರಗಡೆ ಎಳೆದೊಯ್ದ ಆರೋಪಿಗಳು, ಆಕೆಗೆ ಕಟ್ಟಿಗೆಯಿಂದ ಹೊಡೆದು ಹಲ್ಲೆ ನಡೆಸಿದ್ದರು. ಆ ನಂತರ . ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ಜ.೧೦ರಂದು ರೂಂ ಬಾಯ್ ನೀಡಿದ ದೂರಿನ ಮೇರೆಗೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ಅನೈತಿಕ ಪೊಲೀಸ್ಗಿರಿ ಎಂದು ಪ್ರಕರಣ ದಾಖಲಾಗಿತ್ತು. ಜ.೧೧ರಂದು ಸಂತ್ರಸ್ತೆಯು ನ್ಯಾಯಾಧೀಶರ ಮುಂದೆ ಕಲಂ `೧೬೪’ ಸಿಆರ್ಪಿಸಿ ಅಡಿಯಲ್ಲಿ ಹೇಳಿಕೆಯನ್ನು ದಾಖಲಿಸಿ, ೭ ಜನರಿಂದ ಸಾಮೂಹಿಕ ಅತ್ಯಾಚಾರವಾಗಿದೆ ಎಂದು ತಿಳಿಸಿದ್ದರು. ಅನಂತರ ಎಫ್ಐಆರ್ನಲ್ಲಿ ‘೩೭೬ ಡಿ’ ಸೆಕ್ಷನ್ ಅನ್ನು ಪೊಲೀಸರು ಸೇರಿಸಿದ್ದರು.
ಈ ಪ್ರಕರಣದಲ್ಲಿ ಮಾಹಿತಿ ಸಂಗ್ರಹಿಸುವಲ್ಲಿ ವೈಫಲ್ಯ, ಎಫ್ಐಆರ್ ದಾಖಲಿಸುವಲ್ಲಿ ನಿರ್ಲಕ್ಷ್ಯ ಮತ್ತು ಆರೋಪಿಗಳನ್ನು ಶೀಘ್ರ ಬಂಧಿಸುವಲ್ಲಿ ವಿಳಂಬ ಧೋರಣೆ ಆರೋಪದ ಮೇರೆಗೆಸಿಪಿಐ ಆರ್. ಶ್ರೀಧರ ಹಾಗೂ ಪೊಲೀಸ್ ಕಾನಸ್ಟೇಬಲ್ ಇಲಿಯಾಸ ಅವರನ್ನು ಹಾವೇರಿ ಜಿಲ್ಲೆಗೆ ಸಿಎಂ ಸಿದ್ದರಾಮಯ್ಯನವರು ಬಂದು ಹೋದ ಬೆನ್ನಲ್ಲಿಯೇ ಅಮಾನತು ಗೊಳಿಸಲಾಗಿದೆ.

