
ಹಾವೇರಿ:ಕೃಷಿ ಹೊಂಡ ಅನ್ನದಾತರ ಜೀವನಾಡಿ: ಡಾ.ಕೆ.ಮಲ್ಲಿಕಾರ್ಜುನ
ಹಾವೇರಿ: ಮನುಷ್ಯ ಜೀವಂತವಾಗಿ ಬದುಕುಳಿಯಲು ಉಸಿರಾಟ ಎಷ್ಟು ಮುಖ್ಯವೊ, ಹಾಗೆ ಕೃಷಿ ಯಶಸ್ವಿಯಾಗಲು ಕೃಷಿ ಹೊಂಡ ಅಷ್ಟೆ ಮುಖ್ಯವಾಗಿದ್ದು, ಅನ್ನದಾತರಿಗೆ ಅದು ಜೀವನಾಡಿ ಇದ್ದಂತೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಕೆ.ಮಲ್ಲಿಕಾರ್ಜುನ ಹೇಳಿದರು.
ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲಿ ಹೋಬಳಿಯ ಚಿಕ್ಕಳ್ಳಿ ಗ್ರಾಮದ ಪ್ರಗತಿಪರ ಕೃಷಿಕ ಇಮುಸಾಬ ಸೋಡಂಬಿ ಅವರ ಹೊಲದಲ್ಲಿ ಶುಕ್ರವಾರ ಬ್ಯಾಡಗಿ ಕೃಷಿ ಇಲಾಖೆ ಆಯೋಜಿಸಿದ್ದ ಕೃಷಿ ಹೊಂಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬ ರೈತರು ಪ್ರತಿಯೊಂದು ಬೋರವೆಲ್ಗೆ ಕೃಷಿ ಹೊಂಡ ಮಾಡಿಕೊಂಡು ಉತ್ತಮ ಇಳುವರಿ ಪಡೆಯಬೇಕು ಎಂದರು.
ಬ್ಯಾಡಗಿ ತಾಲೂಕಿನ ಕೃಷಿ ಸಹಾಯಕ ನಿರ್ದೇಶಕ ಗಣೇಶ ಕಮ್ಮಾರ ಮಾತನಾಡಿ ಕೃಷಿಗೆ ನೀರು ಅತ್ಯ -ಅಮೂಲ್ಯ. ನೀರಿದ್ದರೆ ನೂರು ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದು, ನೀರಿಲ್ಲದಿದ್ದರೆ ಒಂದು ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ ಅದಕ್ಕಾಗಿ ರೈತರು ಕೃಷಿ ಹೊಂಡದ ಸದುಪಯೋಗ ಪಡೆದುಕೊಂಡು ಉತ್ತಮ ಕೃಷಿ ಮಾಡಲು ಮುಂದಾಗಬೇಕು ಎಂದರು.
ಹಿರಿಯ ಅನುಭವಿ ಕೃಷಿ -ಸಹಾಯಕ ಅಧಿಕಾರಿ ಗರಾಜ ಅರಳಿಕಟ್ಟಿ ಮಾತನಾಡಿ ನೀರು ಕೃಷಿಗೆ ಮಾತ್ರವಲ್ಲ ಮನುಷ್ಯನಿಗೂ ಬೇಕು. ಮನುಷ್ಯ ಅಮೃತ ಕುಡಿದರೂ ನಂತರ ನೀರು ಕುಡಿಯಲೇಬೇಕು. ಅದು ಶುದ್ಧವಾದ ನೀರು. ಬೆಳೆಗೆ ಶುದ್ಧವಾದ ನೀರು ಪೂರೈಸುವಲ್ಲಿ ಕೃಷಿ ಹೊಂಡದ ಪಾತ್ರ ಅಪಾರ. ಮಳೆಗಾಲದಲ್ಲಿ ಸಂಪೂರ್ಣ ನೀರು ಸಂಗ್ರಹಣೆಯಾದರೆ ೨-೩ ತಿಂಗಳ ಬೇಸಿಗೆ ಕಾಲದ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು. ಅದಕ್ಕಾಗಿ ರೈತರು ನಿರ್ಲಕ್ಷ್ಯ ಮಾಡದೆ ಎಲ್ಲರೂ ಕೃಷಿ ಹೊಂಡ ಮಾಡಿಕೊಳ್ಳಬೇಕು. ಸರ್ಕಾರದ ಅನುದಾನ ಕಡಿಮೆಯಾದರೂ ಚಿಂತಿಸದೆ ಕೃಷಿ ಹೊಂಡ ನಿರ್ಮಿಸಿಕೊಂಡು ಗುಣಮಟ್ಟದ ಆದಾಯ ಪಡೆಯಬೇಕು ಎಂದ ಅವರು ಕೃಷಿ ಹೊಂದವಿದ್ದರೆ ರೈತರು ಸ್ವತಂತ್ರವಾಗಿ ಹಗಲಿನಲ್ಲಿ ನೀರು ಪೂರೈಸಿ ರಾತ್ರಿ ಸಮಯದಲ್ಲಾಗುವ ಅನಾಹುತಗಳನ್ನು ತಡೆಯಬಹುದು ಎಂದರು.
ತಾಂತ್ರಿಕ ವಿಭಾಗದ ಮೃತ್ಯುಂಜಯ್ಯ ಕೋಳೂರ, ಪ್ರಗತಿಪರ ಕೃಷಿಕರಾದ ಮಲ್ಲಿಕಾರ್ಜುನ ಕಚವಿ, ರೈತ ಮುಖಂಡರಾದ ರುದ್ರಗೌಡ ಕಾಡನಗೌಡ್ರ, ಷಣ್ಮುಖಪ್ಪ ಮೂಳತಳ್ಳಿ, ಮಂಜುನಾಥ ಲಕ್ಕಮ್ಮನವರ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಡಾ. ಗಂಗಯ್ಯ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.
ಚಿಕ್ಕಬಾಸುರ, ಬೀರನಕೊಪ್ಪ, ಮತ್ತೂರ, ಸಿದ್ದಾಪುರ, ದಾಸನಕೊಪ್ಪ, ಸೋಡಂಬಿ, ಹಿರಳ್ಳಿ, ನೆಲ್ಲಿಕೊಪ್ಪ ಇತ್ಯಾದಿ ಹಳ್ಳಿಗಳಿಂದ ಆಗಮಿಸಿದ್ದ ರೈತರು ಕೃಷಿ ಹೊಂಡ ವೀಕ್ಷಿಸಿ ಸಂತಸಗೊಂಡರು. ನಂತರ ಗೋದಿ ಹುಗ್ಗಿ ಪಾಯಸ, ಚಿತ್ರ ನ್ನ ಸ್ವೀಕರಿಸಿ ಮತ್ತೆ ಒಂದು ಘಂಟೆ ಕಾಲ ಕೃಷಿ ಕ್ಷೇತ್ರದ ಮತ್ತು ಸರ್ಕಾರದ ಸೌಲಭ್ಯಗಳ ಚರ್ಚೆಯಲ್ಲಿ ಪಾಲ್ಗೊಂಡರು. ಮಾನ್ಯ ನಾಗರಾಜ ಸರ್ ಮತ್ತು ಗಣೇಶ ಸರ ಸಮಗ್ರ ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಮೃತ್ಯುಂಜಯ್ಯ ಕೋಳೂರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

