ಹಾವೇರಿಯ ಬಳಿ ಲಾರಿಗೆ ಡಿಕ್ಕಿ ಹೊಡೆದ ಭೀಕರ ರಸ್ತೆ ಅಪಘಾತದಲ್ಲಿ ೧೩ ಜನರ ದುರ್ಮರಣ, ನಾಲ್ವರಿಗೆ ತೀವೃಗಾಯ
ಅಪಘಾತದಲ್ಲಿ ಮರಣ ಹೊಂದಿದವರ ಹಾಗೂ ಗಾಯಾಳುಗಳ ವಿವರಗಳನ್ನು ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಪಟ್ಟಿ.
ಹಾವೇರಿ: ಇಲ್ಲಿಗೆ ಸಮೀಪದ ಗುಂಡೇನಹಳ್ಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ೪ ರಲ್ಲಿ ಶುಕ್ರವಾರ ಬೆಳಗಿನ ಜಾವ ೩-೪೫ರ ಸುಮಾರಿಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ೧೩ ಜನರು ಸಾವನ್ನಪ್ಪಿದ್ದಾರೆ. ನಾಲ್ವರು ತೀವೃವಾಗಿ ಗಾಯಗೊಂಡಿದ್ದು, ಇವರನ್ನು ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಂಡೇನಹಳ್ಳಿ ಕ್ರಾಸ್ ಬಳಿ ನಿಲ್ಲಿಸಿದ್ದ ಸಕ್ಕರೆ ಲೋಡ್ನ ಭಾರತ ಬೆಂಚ ಲಾರಿ (ಸಂ: ಕೆ.ಎ-೫೧/ಡಿ-೩೫೩೦)ಗೆ ಹಿಂದಿನಿಂದ ಟಿ.ಟಿ. ವಾಹನ (ಸಂ: ಕೆಎ-೦೧ ಎಬಿ-೪೭೬೦) ಅತೀ ವೇಗದಿಂದ ಬಂದು ಅಪಘಾತವುಂಟು ಮಾಡಿದ್ದರಿಂದ ಈ ಭೀಕರ ಅಪಘಾತ ನಡೆದಿದೆ.
ನತದೃಷ್ಟ ಟಿ.ಟಿ ವಾಹನದಲ್ಲಿ ಒಟ್ಟು ೧೭ ಜನ ಪ್ರಯಾಣಿಕರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದ ವಾಸಿಗಳಾಗಿದ್ದರು. ಇವರುಗಳು ದಿನಾಂಕ: ೨೪.೦೬.೨೦೨೪ ರಂದು ತಮ್ಮ ಗ್ರಾಮದಿಂದ ಪ್ರವಾಸಕ್ಕಾಗಿ ಮಹಾರಾಷ್ಟ್ರದ ತುಳಜಾಪುರ ಹಾಗೂ ಉತ್ತರ ಕರ್ನಾಟಕದ ದಿಂಚಲಿ ಮಾಯಮ್ಮ, ಹಾಗೂ ಸವದತ್ತಿ ಎಲ್ಲಮ್ಮ ದೇವಸ್ಥಾನ ಸೇರಿದಂತೆ ಹಲವಾರು ದೇವಾಲಯಗಳ ದರ್ಶನ ಪಡೆದುಕೊಂಡು ವಾಪಸ್ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಅಪಘಾತಕ್ಕಿಡಾದ ಟಿ.ಟಿ. ವಾಹನದಲ್ಲಿ ಪ್ರಯಾಣಿಸುತ್ತಿದ್ದ ಒಟ್ಟು ೧೭ ಜನರ ಪೈಕಿ ೧೩ ಜನ ಪ್ರಯಾಣಿಕರು ಮೃತಪಟ್ಟಿದ್ದು, ನಾಲ್ಕು ಜನ ತೀವ್ರ ಘಾಯಗೊಂಡು ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಫಘಾತ ನಡೆದ ಸುದ್ದಿ ತಿಳಿಯುತ್ತಲೇ ಹಾವೇರಿಯ ೧೦೮ಆಂಬುಲೆನ್ಸ್ ಚಾಲಕ ತೌಫಿಕ್ ಪಠಾಣ್. ಸ್ಟಾಫ್ ನರ್ಸ್ ಶಂಕರ್ ಲಮಾಣಿ ಸ್ಥಳಕ್ಕೆ ದೌಡಾಯಿಸಿ
ನಾಲ್ವರು ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠ ಅಂಶುಕುಮಾರ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.