
ಹಾವೇರಿವಿವಿ ಅಭಿವೃದ್ಧಿಗೆ ೧೦೦ ಕೋಟಿ ವಿಶೇಷ ಪ್ಯಾಕೇಜ್ ಒದಗಿಸಲು ರಾಜ್ಯ ಪಾಲರಿಗೆ ಹೋರಾಟ ಸಮಿತಿಯ ಮನವಿ
ಹಾವೇರಿ: ವಿಶ್ವವಿದ್ಯಾಲಯ ಉಳಿಸಿ – ವಿಶ್ವವಿದ್ಯಾಲಯದ ಅಭಿವೃದ್ಧಿಯನ್ನು ವಿಶೇಷ ಆದ್ಯತೆಯಾಗಿ ಪರಿಗಣಿಸಿ ೧೦೦ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಅನುದಾನ ಒದಗಿಸಲು ರಾಜ್ಯ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವುದು, ಇನ್ನು ಮುಂದೆ ವಿಶ್ವವಿದ್ಯಾಲಯದ ಘಟಿಕೋತ್ಸವವನ್ನು ವಿ. ವಿ ಯ ಕ್ಯಾಂಪಸ್ ನಲ್ಲಿಯೇ ಆಯೋಜಿಸುವಂತೆ ವಿ.ವಿ ಉಪಕುಲಪತಿಗಳಿಗೆ ಸೂಕ್ತ ನಿರ್ದೇಶನ ನೀಡುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಗೌರವಾನ್ವಿತ ರಾಜ್ಯಪಾಲರಿಗೆ ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯಿಂದ ಮನವಿ ನೀಡಲಾಯಿತು.
ಸೋಮವಾರ ನಗರದ ಪ್ರವಾಸಿ ಮಂದಿರದ ವಿವಿಐಪಿ ಸರ್ಕ್ಯೂಟ್ ಹೌಸ್ನಲ್ಲಿ ವಿ.ವಿ ಉಳಿಸಿ ಹೋರಾಟ ಸಮಿತಿಯು ಕರ್ನಾಟಕದ ರಾಜ್ಯಪಾಲರಾದ ಡಾ ಥಾವರಚಂದ ಗೆಹ್ಲೊಥ್ ಅವರನ್ನು ಭೇಟಿ ಮಾಡಿ ಸಲ್ಲಿಸಿದ ಮನವಿಯಲ್ಲಿ, ದಾಸವೇರಣ್ಯರು, ಶರಣರು, ಸಂತರು, ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ಕಲಾವಿದರು ಹಾಗೂ ಸೌಹಾರ್ದ-ಸಾಮರಸ್ಯದ ಬಹುತ್ವ ಪರಂಪರೆಯ ಹೆಮ್ಮೆಯ ನೆಲ, ಯಾಲಕ್ಕಿ ಕಂಪಿನ ನಗರ; ಹಾವೇರಿ ಜಿಲ್ಲೆಯ ಹೆಮ್ಮೆಯಾಗಿರುವ ಹಾವೇರಿ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಲು, ಹಾವೇರಿ ಜಿಲ್ಲೆಗೆ ಆಗಮಿಸುತ್ತಿರುವ ತಮಗೆ ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯು ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತದೆ.
ಹಾವೇರಿ ವಿಶ್ವವಿದ್ಯಾಲಯವು ೧೯ ಮಾರ್ಚ್ ೨೦೨೩ ರಲ್ಲಿ ಆರಂಭಗೊಂಡು ಮೂರನೇ ವರ್ಷವಾಗಿದೆ. ನಮ್ಮ ವಿ.ವಿ ವ್ಯಾಪ್ತಿಯಲ್ಲಿ ೪೨ ಪದವಿ ಕಾಲೇಜುಗಳು ಮತ್ತು ವಿ.ವಿ ಯ ವಿವಿಧ ಕೋರ್ಸುಗಳಲ್ಲಿ ೧೮ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಕಳೆದ ವರ್ಷ ರಾಜ್ಯ ಸರಕಾರ ನಮ್ಮ ಹಾವೇರಿ ವಿಶ್ವ ವಿದ್ಯಾಲಯ ಸೇರಿದಂತೆ ರಾಜ್ಯದಲ್ಲಿ ೨೦೨೩ ರಲ್ಲಿ ಹೊಸದಾಗಿ ಆರಂಭಗೊಂಡ ೭ ವಿಶ್ವ ವಿದ್ಯಾಲಯಗಳನ್ನು ವಿಲೀನದ ಹೆಸರಲ್ಲಿ ಮುಚ್ಚಲು ಹೊರಟಾಗ ಜಿಲ್ಲೆಯ ವಿದ್ಯಾರ್ಥಿ-ಯುವಜನರು, ಎಲ್ಲ ಜನಪರ ಹಾಗೂ ಶಿಕ್ಷಣಪ್ರೇಮಿ ಸಂಘಟನೆಗಳು, ಎಲ್ಲ ಧಾರ್ಮಿಕ ಮುಖಂಡರು ಐಕ್ಯತೆಯಿಂದ ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಹಲವು ಹಂತಗಳಲ್ಲಿ ತೀವ್ರ ತೆರನಾದ ಹೋರಾಟವನ್ನು ನಡೆಸಿದ್ದರಿಂದಾಗಿ ರಾಜ್ಯ ಸರಕಾರ ವಿಶ್ವವಿದ್ಯಾಲಯಗಳನ್ನು ವಿಲೀನದ ಹೆಸರಲ್ಲಿ ಮುಚ್ಚುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟಿತು. ಆ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಮುಚ್ಚದಂತೆ ಕ್ರಮ ಕೈಗೊಳ್ಳುವಂತೆ ಕೋರಿ ತಮಗೂ ಕೂಡ ಮನವಿ ಸಲ್ಲಿಸಲಾಗಿತ್ತು.
ಮನವಿ ಸ್ವೀಕರಿಸಿ ಹೋರಾಟ ಸಮಿತಿಯ ಮುಖಂಡರೊಂದಿಗೆ ತಾಳ್ಮೆಯಿಂದ ಚರ್ಚಿಸಿದ ರಾಜ್ಯಪಾಲರು ಮನವಿ ಪತ್ರದಲ್ಲಿರುವ ಎಲ್ಲ ಅಂಶಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು ಹಾಗೂ ಮುಂದಿನ ಸಲ ಘಟಿಕೋತ್ಸವವನ್ನು ಕ್ಯಾಂಪಸ್ ನಲ್ಲಿ ನಡೆಸುವಂತೆ ನಿರ್ದೇಶನ ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯ ಸಂಚಾಲಕರಾದ ಬಸವರಾಜ ಪೂಜಾರ, ಹೋರಾಟ ಸಮಿತಿಯ ಮುಖಂಡರು ಹಾಗೂ ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಸದಸ್ಯರಾದ ಪರಿಮಳ ಜೈನ, ಸಮಿತಿ ಸದಸ್ಯರು ಹಾಗೂ ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್, ಡಿಎಸ್ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಉಡಚಪ್ಪ ಮಾಳಗಿ, ಪದವಿಪೂರ್ವ ಶಿಕ್ಷಣ ಇಲಾಖೆಯ ವಿಶ್ರಾಂತ ಉಪ ನಿರ್ದೇಶಕರಾದ ಎಂ. ಆಂಜನೇಯ, ಕರ್ನಾಟಕ ರಾಜ್ಯ ರೈತ ಸಂಘಟನೆಯ ಶಹರ ಘಟಕದ ಅಧ್ಯಕ್ಷರಾದ ಸುರೇಶ ಛಲವಾದಿ, ಜಿಲ್ಲಾ ಕಲಾವಿದರ ಸಂಘದ ಜಿಲ್ಲಾಧ್ಯಕ್ಷರಾದ ಡಾ. ತಿಪ್ಪೇಸ್ವಾಮಿ ಹೊಸಮನಿ, ಡಿವೈಎಫ್ಐ ಜಿಲ್ಲಾ ಮುಖಂಡರಾದ ಖಲಂದರ್ ಅಲ್ಲಿಗೌಡ್ರ, ಬಿಎಸ್ಪಿ ಜಿಲ್ಲಾಧ್ಯಕ್ಷ ಮಕಬುಲ್ ಎಂ.ಕೆ, ಎಸ್ಎಫ್ಐ ಜಿಲ್ಲಾ ಮುಖಂಡ ಅರುಣ ನಾಗಾವತ್ ಹಾಗೂ ಸಂಗೀತಾ ಮೋಟಳ್ಳಿ ಉಪಸ್ಥಿತರಿದ್ದರು.

