ಹಾವೇರಿ ನಗರದಲ್ಲಿ ಕೇಂದ್ರ ಮೀಸಲು ಪಡೆ-ಪೊಲೀಸ್ ಪಥಸಂಚಲನ-ಜಿಲ್ಲಾಧಿಕಾರಿಗಳು ಭಾಗಿ
ಹಾವೇರಿ : ಶಾಂತಿಯುತ ಹಾಗೂ ಪಾರದರ್ಶಕ ಚುನಾವಣೆಗೆ ಕೇಂದ್ರ ಮೀಸಲು ಪಡೆ ಕ್ಷೀಪ್ರ ಕಾರ್ಯಾಚರಣೆ ಪಡೆ ಹಾಗೂ ಪೊಲೀಸ್ರ ಪಾತ್ರ ಬಹಳ ಮುಖ್ಯವಾಗಿದೆ. ಹಣ ಹಂಚಿಕೆ ಇತರ ಕಾನೂನು ಬಾಹಿರ ಚುವಟಿಕೆಗಳ ಮೇಲೆ ನಿಗಾವಹಿಸಲು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರು ಸಲಹೆ ನೀಡಿದರು.
ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಶುಕ್ರವಾರ ನಗರದಲ್ಲಿ ಆಯೋಜಿಸಲಾದ ಕೇಂದ್ರ ಮೀಸಲು ಪಡೆ ಕ್ಷೀಪ್ರ ಕಾರ್ಯಾಚರಣೆ ಪಡೆ ಹಾಗೂ ಜಿಲ್ಲಾ ಪೊಲೀಸ್ ಹಾಗೂ ಸಿಬ್ಬಂದಿಗಳ ಪಥಸಂಚಲನಕ್ಕೆ ಚಾಲನೆ ನೀಡಿ ಪಥಸಂಚನದಲ್ಲಿ ಭಾಗಿಯಾದ ಅವರು, ಚುನಾವಣಾ ಅಕ್ರಮಗಳ ಬಗ್ಗೆ ನಿಗಾ ವಹಿಸಲು ಈಗಾಗಲೇ ವಿವಿಧ ತಂಡಗಳನ್ನು ರಚಿಸಲಾಗಿದೆ. ಇವರೊಂದಿಗೆ ನಿಮ್ಮ ಸಹಕಾರ ಅಗತ್ಯವಾಗಿದೆ. ಜಿಲ್ಲಾಡಳಿತ ಕರ್ತವ್ಯದಲ್ಲಿ ನಿಮಗೆ ಎಲ್ಲ ಸಹಕಾರ ನೀಡಲಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ ಅವರು ಮಾತನಾಡಿ, ಏಪ್ರಿಲ್ ೭ ರಿಂದ ೯ರವರೆಗೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಕೇಂದ್ರ ಸ್ಥಳಗಳಲ್ಲಿ ಕೇಂದ್ರ ಮೀಸಲು ಪಡೆ ಕ್ಚೀಪ್ರ ಕಾರ್ಯಾಚರಣೆ ಪಡೆ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಪಥಸಂಚಲನ ಆಯೋಜಿಸಲಾಗಿದ್ದು, ಇಂದು ಹಾವೇರಿ ಹಾಗೂ ಬ್ಯಾಡಗಿಯಲ್ಲಿ ನಡೆದಿದೆ. ಏಪ್ರಿಲ್ ೮ ರಂದು ರಾಣೇಬೆನ್ನೂರು, ಹಿರೇಕೆರೂರು ಹಾಗೂ ರಟ್ಟಿಹಳ್ಳಿಯಲ್ಲಿ ಮತ್ತು ಏಪ್ರಿಲ್ ೯ ರಂದು ಶಿಗ್ಗಾಂವ, ಬಂಕಾಪುರ ಹಾಗೂ ಹಾನಗಲ್ನಲ್ಲಿ ಪಥಸಂಚಲನ ನಡೆಯಲಿದೆ ಎಂದರು.
ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲೆಯ ಎಲ್ಲ ಚೆಕ್ ಪೋಸ್ಟಗಳಲ್ಲಿ ಕರ್ತವ್ಯಕ್ಕೆ ಹಾಗೂ ಚುನಾವಣಾ ಮತದಾನದ ಸಂದರ್ಭದಲ್ಲಿ ಸೂಕ್ಷ್ಮ ಮತಗಟ್ಟೆಗಳಿಗೆ ಹಾಗೂ ಕ್ಲಸ್ಟರ್ ಮತದಾನ ಕೇಂದ್ರಗಳಿಗೆ ಹಾಗೂ ಮತೀಯ ಸೂಕ್ಷ್ಮ ಪ್ರದೇಶಗಳಲ್ಲಿ ಪೆಟ್ರೋಲಿಂಗ್ ಕರ್ತವ್ಯಕ್ಕೆ ನಿಯೋಜಿಸಲಾಗುವುದು. ಚುನಾವಣೆಯಲ್ಲಿ ಯಾವುದೇ ರೀತಿಯ ಅಕ್ರಮಗಳಿಗೆ ಅವಕಾಶ ನೀಡದಂತೆ ಕ್ರಮವಹಿಸಲಾಗುವುದು. ಜಿಲ್ಲೆಗೆ ಇನ್ನೂ ೧೮ ಕೇಂದ್ರ ಮೀಸಲು ಪಡೆಯ ತುಕಡಿಗಳು ಚುನಾವಣೆ ಕರ್ತವ್ಯಕ್ಕೆ ಆಗಮಿಸಲಿವೆ ಎಂದರು.
ಚುನಾವಣಾ ಅಕ್ರಮ ತಡೆಗೆ ಎಫ್.ಎಸ್.ಟಿ., ಎಸ್.ಎಸ್.ಟಿ. ತಂಡಗಳೊಂದಿಗೆ ನಿಯೋಜಿಸಿ ವಿಶೇಷ ತಂಡಗಳನ್ನು ಚುನಾವಣೆ ಗಲಭೆಗಳ ನಿಯಂತ್ರಣಕ್ಕಾಗಿ, ರೌಡಿ ಜನರ ನಿಗ್ರಹಕ್ಕಾಗಿ ರಚಿಸಲಾಗುವುದು ಎಂದು ಹೇಳಿದರು.
ಪಥಸಂಚಲನ: ಕೇಂದ್ರ ಮೀಸಲು ಪಡೆಯ ಹಾಗೂ ಮಹಿಳಾ ಪೊಲೀಸ್ ಪಡೆ ಸೇರಿದಂತೆ ವಿವಿಧ ವಿಭಾಗದ ಪೊಲೀಸ್ ತುಕಡಿಗಳ ೪೦೦ಕ್ಕೂ ಹೆಚ್ಚು ಜನ ಮಾರ್ಚ್ ಫಾಸ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಕ್ರೀಡಾಂಗಣದಿಂದ ಹೊರಟ ಪಥ ಸಂಚಲನ ಮಹಾತ್ಮಗಾಂಧಿ ವೃತ್ತ, ಜೆಪಿ ವೃತ್ತ, ಎಂ.ಜಿ.ರಸ್ತೆ, ಪಿಬಿ ರಸ್ತೆ ಮಾರ್ಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾವೇಶಗೊಂಡಿತು. ಶಿಸ್ತುಬದ್ಧವಾದ ಪಥಸಂಚಲನ ಮತದಾರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿತು.
ಪಥ ಸಂಚಲನದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ, ಉಪ ವಿಭಾಗಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ, ಕೇಂದ್ರ ಮೀಸಲು ಪಡೆ, ಕ್ಷೀಪ್ರ ಕಾರ್ಯಾಚರಣೆ ಪಡೆಯ ಅಧಿಕಾರಿಗಳಾದ ವಿ.ಕೆ.ಶರ್ಮ, ಬಿ.ಸಿ.ರಾಯ್, ಅಭಿಜಿತ್, ಅಶಿತೋಷ ಸಾರಂಗಿ, ಅವಿನಾಶ, ಶ್ರವಣ ಭಾವಾ, ಮುಕೇಶ, ಮೃತ್ಯುಂಜಯ, ಡಿವೈಎಸ್ಪಿ ಶಿವಾನಂದ ಚಲವಾದಿ, ಹಾವೇರಿ ಶಹರ ಪೊಲೀಸ್ ಠಾಣೆ ಪೊಲೀಸ್ ಇನ್ಸಪೆಕ್ಟರ್ ಸುರೇಶ ಸಗರಿ, ಹಾವೇರಿ ಉಪವಿಭಾಗದ ಸಿಬ್ಬಂದಿ ಹಾಗೂ ಡಿ.ಎ.,ಆರ್ ಸಿಬ್ಬಂದಿಗಳು ಪಾಲ್ಗೊಂಡಿದ್ದರು.