ಹಿರೇಕೆರೂರು- ರಟ್ಟೀಹಳ್ಳಿ ತಹಶೀಲ್ದಾರ ಕಚೇರಿಗೆ ಡಿಸಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಭೇಟಿ- ಅಶಿಸ್ತಿನ ಸಿಬ್ಬಂದಿಗೆ ಶಿಸ್ತುಕ್ರಮದ ಎಚ್ಚರಿಕೆ
ಹಾವೇರಿ: ಜಿಲ್ಲೆಯ ಹಿರೇಕೆರೂರು ಮತ್ತು ರಟ್ಟೀಹಳ್ಳಿ ತಾಲೂಕಿನ ತಹಶೀಲ್ದಾರ ಕಾರ್ಯಾಲಯಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಭೇಟಿ ನೀಡಿ ಕಛೇರಿಯ ಕಾರ್ಯನಿರ್ವಹಣೆ ಪರಿಶೀಲಿಸಿದರು.
ಅಲ್ಲಿನ ನೊಂದಣಿ ಮತ್ತು ಮುದ್ರಾಂಕ ಇಲಾಖೆ, ಭೂಮಾಪನ ಇಲಾಖೆ, ನಗರ ಮಾಪನ ಇಲಾಖೆ, ಭೂಮಿ ಶಾಖೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಅಲ್ಲಿನ ಕ್ಯಾಶ್ ರಿಜಿಸ್ಟರ್, ಹಾಜರಾತಿ, ಮೊಮೆಂಟ್ ರಿಜಿಸ್ಟರ್, ಚಲನವನ ರಿಜಿಸ್ಟರ ಹಾಗೂ ಸಾರ್ವಜನಿಕರಿಂದ ಸಲ್ಲಿಕೆಯಾಗಿರುವ ಒಟ್ಟು ಅರ್ಜಿಗಳು, ವಿಲೇವಾರಿ ಆಗದೆ ಇರುವ ಅರ್ಜಿಗಳು ಮತ್ತು ವಿಲೇವಾರಿಯಾದ ಅರ್ಜಿಗಳ ಮಾಹಿತಿಯನ್ನು ಸಿಬ್ಬಂದಿಗಳಿಂದ ಪಡೆದು ಪರಿಶೀಲಿಸಿದರು.
ಸಾರ್ವಜನಿಕ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು. ಕಚೇರಿಗೆ ಬರುವಂತ ಸಾರ್ವಜನಿಕರೊಂದಿಗೆ ಒಳ್ಳೆಯ ನಡತೆಯನ್ನು ಹೊಂದಬೇಕು . ಕಚೇರಿಯಲ್ಲಿ ಸಿಬ್ಬಂದಿಗಳು ವಿನಾಕಾರಣ ಕಾಲಹರಣ ಮಾಡುವಂತಿಲ್ಲ, ಗೊತ್ತುಪಡಿಸಿದ ಅವಧಿಯೊಳಗೆ ಸಾರ್ವಜನಿಕ ಕುಂದು ಕೊರತೆಗಳು ವಿಲೇವಾರಿಯಾಗಬೇಕು ಸಾರ್ವಜನಿಕರನ್ನು ಪದೆ ಪದೆ ಕಚೇರಿಗೆ ಅಲೆಯುವಂತೆ ಮಾಡುವಂತಿಲ್ಲ ಎಂದು ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಚನೆ ನೀಡಿದರು. ಕಾರ್ಯಾಲಯದ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಪರಿಶೀಲಿಸಿದರು.
ಸಿಬ್ಬಂದಿಗಳ ಹಾಜರಾತಿ, ಕ್ಯಾಶ್ ರೆಜಿಸ್ಟರ್ ಮತ್ತು ಚಲವಲನ ರಿಜಿಸ್ಟರಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಇತ್ತೀಚ್ಚಿಗೆ ಜಿಲ್ಲೆಗೆ ಉಪ ಲೋಕಾಯುಕ್ತರು ಭೇಟಿ ನೀಡಿ, ವಿವಿಧ ಕಚೇರಿಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಇವುಗಳ ನಿರ್ವಹಣೆ ಸರಿಯಾಗಿಲ್ಲದಿರುವುದನ್ನು ಕಂಡು ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮಕ್ಕೆ ಮುಂದಾಗಿದ್ದರು ಇದು ಹೀಗೆ ಮುಂದು ವರೆದರೆ ಅನಂತಹ ಸಿಬ್ಬಂದಿ ಹಾಗೂ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.
ಸಾರ್ವಜನಿಕರೊಂದಿಗೆ ಭೇಟಿ ಅಹವಾಲು ಸ್ವೀಕಾರ: ಇದೆ ಸಂದರ್ಭದಲ್ಲಿ ಕಚೇರಿಗೆ ಭೇಟಿ ನೀಡಿದ ಸಾರ್ವಜನಿಕರೊಂದಿಗೆ ಜಿಲ್ಲಾಧಿಕಾರಿಗಳು ಸಮಾಲೋಚನೆ ಮಾಡಿ ಅವರ ಕುಂದು ಕೊರತೆಯನ್ನು ಆಲಿಸಿದರು ಮತ್ತು ಈಗಾಗಲೇ ತಹಸೀಲ್ದಾರ್ ಹಾಗೂ ಸಿಬ್ಬಂದಿಗಳಿಗೆ ಯಾವುದೇ ಕಾರಣಕ್ಕೂ ಸಾರ್ವಜನಿಕ ಸೇವೆಗಳು ತಡ ಆಗದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದ್ದೇನೆ ನಿಮ್ಮ ಯಾವುದೇ ಸಮಸ್ಯೆಗಳು ತುರ್ತಾಗಿ ಬಗೆಹರಿಯದಿದ್ದರೆ ಕಚೇರಿಗೆ ಬಂದು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ತಿಳಿ ಹೇಳಿದರು.