
೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಾಕೀತು
ಹಾವೇರಿ: ನಗರದ ನಾಗೇಂದ್ರ ಮಟ್ಟಿಯ ಶಾಂತಿನಗರದಲ್ಲಿ ನಿರ್ಮಾಣ ಮಾಡುತ್ತಿರುವ ಜಿ+೧ ಮಾದರಿಯ ಆಶ್ರಯ ಮನೆಗಳ ಕಾಮಗಾರಿ ಸ್ಥಳಕ್ಕೆ ಭಾನುವಾರ ವಿಧಾನಸಭೆಯ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಶ್ರಯ ಮನೆಗಳ ಕಾಮಗಾರಿಯೂ ನಿಧಾನಗತಿಯಿಂದ ಕೈಗೊಂಡಿರಿವ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸಿದ ಉಪ ಸಭಾಧ್ಯಕ್ಷರು ಎರಡು ತಿಂಗಳು ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸುವಂತೆ ಸೂಚಿಸಿದರು.
ಅಲೆಮಾರಿ ಮತ್ತು ಅರೆ ಅಲೆಮಾರಿ ಪಲಾನುಭವಿಗಳ ಮನವಿ : ಉಪಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ ಅವರು ಆಶ್ರಯ ಮನೆಗಳ ಪರಿಶೀಲನೆಯ ವಿಷಯ ಗೊತ್ತಾಗುತ್ತೆದಂತೆ ಸ್ಥಳಕ್ಕೆ ಆಗಮಿಸಿದ ಅಲೆಮಾರಿ ಸಮಾಜದ ಫಲಾನುಭವಿಗಳು, ನಮಗೆ ಮಳೆಗಾಲದಲ್ಲಿ ಮನೆ ಇಲ್ಲದೆ ಇರುವುದರಿಂದ ತುಂಬಾ ತೊಂದರೆಯಾಗುತ್ತಿದ್ದು ಮಕ್ಕಳೊಂದಿಗೆ ಜೀವನ ಸಾಗಿಸುವುದು ಕಷ್ಟವಾಗುತ್ತಿದೆ. ನಾವು ಅಲೆಮಾರಿ ಸಮಾಜದವರಾಗಿದ್ದು ಪ್ರತಿದಿನ ದುಡಿದರಷ್ಟೇ ಹೊಟ್ಟೆ ತುಂಬುತ್ತದೆ, ಆದ ಕಾರಣ ನಮಗೆ ನಮ್ಮ ಕುಟುಂಬದ ಮತ್ತು ಮಕ್ಕಳ ರಕ್ಷಣೆಗಾಗಿ ಆದಷ್ಟು ಬೇಗನೆ ಮನೆಗಳನ್ನು ನೀಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.
ರುದ್ರಪ್ಪ ಲಮಾಣಿ ಮಾತನಾಡಿ ಅಲೆಮಾರಿ ಸಮಾಜ ಮತ್ತು ಎಲ್ಲಾ ಬಡ ಫಲಾನುಭವಿಗಳಿಗೆ ಅಗತ್ಯ ಮೂಲ ಸೌಕರ್ಯಗಳೊಂದಿಗೆ ಆದಷ್ಟು ಬೇಗನೆ ಮನೆಗಳನ್ನು ಹಸ್ತಾಂತರಿಸುವ ಕೆಲಸ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜೀವಕುಮಾರ್ ನೇರಲಗಿ, ಆಶ್ರಯ ಸಮಿತಿ ಸದಸ್ಯ ಕುಮಾರ್ ಇನಾಮ್ದಾರ್, ಮಲ್ಲೇಶಪ್ಪ ಪಟ್ಟಣಶೆಟ್ಟಿ, ದಾಸಪ್ಪ ಕರ್ಜಗಿ, ನಾಗರಾಜ್ ಬಡಮ್ಮನವರ್ ಸೇರಿದಂತೆ ಹಲವಾರು ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

