ಆಕ್ಕಿಆಲೂರ: ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ- ರೂ.೩೩ ಸಾವಿರ ದಂಡ
ಹಾವೇರಿ : ಆಕ್ಕಿಆಲೂರ ಬಸ್ ನಿಲ್ದಾಣದಲ್ಲಿ ಆಟೋ ರಿಕ್ಷಾ ಪಾಳೆಯ ವಿಚಾರವಾಗಿ ದೈಹಿಕ ಹಲ್ಲೆ ನಡೆಸಿ ಕೊಲೆಮಾಡಿದ ಆರೋಪಿಗಳಾದ ಅಶೋಕ ಹನುಮಂತಪ್ಪ ಶೇಷಗಿರಿ ಹಾಗೂ ಅಭಿಲಾಷ ಅಶೋಕ ಶೇಷಗಿರಿ ಎಂಬುವವರಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಹಾವೇರಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಲ್.ಲಕ್ಷ್ಮೀನಾರಾಯಣ ಅವರು ಬುಧವಾರ ತೀರ್ಪು ನೀಡಿದ್ದಾರೆ.
ಮೃತ ವೆಂಕಟೇಶ ನಿಂಗಪ್ಪ ಆಡೂರ ಎಂಬಾತ ದಿನಾಂಕ ೧೦-೦೮-೨೦೨೨ ರಂದು ಸಾಯಂಕಾಲ ಸಮಯದಲ್ಲಿ ಆಕ್ಕಿಆಲೂರ ಬಸ್ ನಿಲ್ದಾಣದಲ್ಲಿ ಆಟೋ ರಿಕ್ಷಾ ಪಾಳೆಯದಲ್ಲಿ ನಿಲ್ಲಿಸಿದಾಗ, ಆರೋಪಿತರು ಮೃತ ವೆಂಕಟೇಶ ನಿಂಗಪ್ಪ ಆಡೂರ ಎಂಬಾತನನ್ನು ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದಲ್ಲದೇ ದೈಹಿಕವಾಗಿ ಹಲ್ಲೆನಡೆಸಿ ಕೊಲೆಮಾಡಿದ್ದಾಗಿ ದೂರು ದಾಖಲಾಗಿತ್ತು.
ಈ ಪ್ರಕರಣದ ಕುರಿತು ತನಿಖಾಧಿಕಾರಿಗಳಾದ ಶಿಗ್ಗಾಂವ ಡಿಎಸ್ಪಿ ಒ.ಬಿ.ಕಲ್ಲೇಶಪ್ಪ ಹಾಗೂ ಮಂಜುನಾಥ ಎಚ್.ಜಿ. ಅವರು ತನಿಖೆಕೈಗೊಂಡು, ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆರೋಪಿತರ ಮೇಲೆ ಕಲಂ:ಬಾ.ದಂ.ಸಂ.ಕಲಂ:೩೨೩, ೩೦೨, ೫೦೪, ಸ.ವಾ ೩೪ ಐಪಿಸಿ ಮತ್ತು ಕಲಂ: ೩(೧)(ಆರ್),೩(೨)(೫),೩(೨)(೫ಎ) ರಡಿಯಲ್ಲಿ ಆಪಾದನೆಗಳು ಜುರುವಾತಾದ ಹಿನ್ನಲೆಯಲ್ಲಿ ಆರೋಪಿತರಿಗೆ ಜೀವಾವಧಿ ಶಿಕ್ಷೆ ಹಾಗೂ ರೂ.೩೩ ಸಾವಿರ ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಅಭಿಯೋಜನೆ ಪರವಾಗಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಸರೋಜಾ ಕೂಡಲಗಿಮಠ ಅವರು ವಾದ ಮಂಡಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.