ಉಪ ಸಭಾಪತಿ ರುದ್ರಪ್ಪ ಲಮಾಣಿಗೆ ಸದನದಲ್ಲಿ ಅವಮಾನ, ದಲಿತ ಪರಿವರ್ತನಾ ವೇದಿಕೆ ಖಂಡನೆ

ಉಪ ಸಭಾಪತಿ ರುದ್ರಪ್ಪ ಲಮಾಣಿಗೆ ಸದನದಲ್ಲಿ ಅವಮಾನ, ದಲಿತ ಪರಿವರ್ತನಾ ವೇದಿಕೆ ಖಂಡನೆ
ಹಾವೇರಿ: ಉಪ ಸಭಾಪತಿಗಳಾದ ರುದ್ರಪ್ಪ ಮಾನಪ್ಪ ಲಮಾಣಿ ಅವರ ಮೇಲೆ ದೈಹಿಕ ಹಲ್ಲೆ, ಅಗೌರವ, ಅವಮಾನಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹ ದುರ್ನಡತೆ ಕ್ಷಮೆಗೆ ಅನರ್ಹ. ಉಪ ಸಭಾಪತಿಗಳ ಮೇಲೆ ನಡೆದಿರುವ ಅವಮಾನವನ್ನು ತೀವೃವಾಗಿ ಖಂಡಿಸುವುದಾಗಿ, ವಿಧಾನಸಭೆಯ ಅಧಿವೇಶನಗಳಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ಪ್ರತಿಪಕ್ಷದ ಶಾಸಕರುಗಳಿಗೆ ವಿಧಾನಸಭೆಯ ಅಧಿವೇಶನದ ಘನತೆ ಗೌರವವನ್ನು ಕಾಪಾಡಿಕೊಂಡು ಹೋಗುವಂತೆ ರಾಜ್ಯಪಾಲರು ನಿರ್ದೇಶನ ನೀಡಬೇಕೆಂದು ದಲಿತ ಪರಿವರ್ತನಾ ವೇದಿಕೆಯ ಆಗ್ರಹಿಸಿದೆ.
ಈ ಬಗ್ಗೆ ಗುರುವಾರ ರಾಜ್ಯಪಾಲರಾದ ತಾವರಚಂದ್ ಗೆಹಲ್ಲೋಟ್ ಅವರಿಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮೂಲಕ ಮನವಿ ಅರ್ಪಿಸಿರುವ ದಲಿತ ಪರಿವರ್ತನಾ ವೇದಿಕೆಯ ಪದಾಧಿಕಾರಿಗಳು ಸರ್ಕಾರದ ನಡೆಯನ್ನು ವಿರೋಧಿಸುವುದು ವಿಪಕ್ಷಗಳ ಹಕ್ಕು. ಆದರೆ ವಿಪಕ್ಷಗಳ ನಾಯಕರು ಜೂಲೈ.೧೯ರಂದು ಸದನದಲ್ಲಿ ಪ್ರತಿಭಟನೆ ನಡೆಸುವ ವೇಳೆ ಮಸೂದೆ ಪ್ರತಿಗಳನ್ನು ಹರಿದು ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರ ಮೇಲೆ ಮುಖಕ್ಕೆ ಎಸೆದಿದ್ದಾರೆ.
ಪ್ರತಿಭಟನೆ, ಹೋರಾಟ ನಡೆಸುವುದು ವಿಪಕ್ಷಗಳ ಸ್ವಾತಂತ್ರ್ಯ. ಆದರೆ, ಪ್ರತಿಭಟನೆಯ ಹೆಸರಲ್ಲಿ ಮಸೂದೆಯ ಪ್ರತಿಯನ್ನು ಹರಿದು ಉಪ ಸಭಾಪತಿಗಳ ಮುಖಕ್ಕೆ ಎಸೆಯುವುದು, ದೈಹಿಕ ಹಲ್ಲೆಗೆ ಮುಂದಾಗುವುದು, ಸಭಾಪತಿ ಸ್ಥಾನಕ್ಕೆ ಅವಮಾನ, ಅಗೌರವ ತೋರುವುದು ಸರಿಯಲ್ಲ. ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರು ಶತಮಾನಗಳಿಂದ ತುಳಿತಕ್ಕೊಳಪಟ್ಟ ಸಮಾಜದಿಂದ ಬಂದವರು. ಅಂತಹ ಸಮಾಜದ ನಾಯಕರನ್ನು ವಿಪಕ್ಷದವರು ಹೀಗೆ ನಡೆಸಿಕೊಳ್ಳುವದು ಸರಿಯಲ. ಸಮಾಜದ ಯಾವ ವ್ಯಕ್ತಿಯನ್ನೂ ಹೀಗೆ ನಡೆಸಿಕೊಳ್ಳಬಾರದು.
ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಒದಗಿಸುವ ಸಲವಾಗಿ ಜನತೆ ಜನಪ್ರತಿನಿಧಿಗಳನ್ನು ವಿಧಾನಸಭೆಗೆ ಕಳುಹಿಸಿದ್ದಾರೆ. ಸದನದ ಸಮಯ ಎಂದರೆ, ಅದು ಜನರ ಸಮಯ, ಈ ಸಮಯವನ್ನು ಉತ್ತಮ ಚರ್ಚೆಗೆ ಬಳಸಿಕೊಳ್ಳಬೇಕು. ಹೀಗೆ ರಾಜಕೀಯ ಮಾಡುವುದು ಸರಿಯಲ್ಲ. ಸದನದಲ್ಲಿ ಜನ ಪ್ರತಿನಿಧಿಗಳು ನಡೆದುಕೊಂಡಿರುವ ರೀತಿಗೆ ರಾಜ್ಯದ ಮತದಾರರು ಅಂತಕ ಪಡುವಂತಾಗಿದೆ. ಜನಪ್ರತಿನಿಧಿಗಳನ್ನು ಆರಿಸಿ ಕಳಿಸಿದ ಮತದಾರರಿಗೂ ನೋವುಂಟಗಿದೆ. ಭಾರತ ಸಂವಿಧಾನದ ಆಶಯ ಪೀಠಿಕೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಕರ್ನಾಟಕ ಮತದಾರರ ಪರವಾಗಿ ರಾಜ್ಯಪಾಲರು ಶಾಸಕರುಗಳಿಗೆ ವಿಧಾನಸಭೆಯ ಅಧಿವೇಶನದ ಘನತೆ- ಗೌರವವನ್ನು ಕಾಪಾಡಿಕೊಂಡು ಹೋಗುವಂತೆ ನಿರ್ದೇಶನ ನೀಡಬೇಕೆಂದು ದಲಿತ ಪರಿವರ್ತನಾ ವೇದಿಕೆಯ ಆಗ್ರಹಿಸಿದೆ.
ಈ ಕುರಿತಂತೆ ಮನವಿಯನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಶಿರಸ್ತೇದಾರರ ಮೂಲಕ ರಾಜ್ಯ ಪಾಲರಿಗೆ ದಲಿತ ಪರಿವರ್ತನಾ ವೇದಿಕೆಯ ರಾಜ್ಯ ಪ್ರಧಾನಕಾರ್ಯದರ್ಶಿ ಎನ್.ಎನ್. ಗಾಳೆಮ್ಮನವರ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಪ್ರಕಾಶ ಬಾರ್ಕಿ, ಪ್ರಮುಖರಾದ ಬಸವರಾಜ ದೇವಗಿರಿ, ಮಲ್ಲೇಶಪ್ಪ ಕಡಕೋಳ, ಗುಡ್ಡಪ್ಪ ಬಣಕಾರ ಮತ್ತಿತರರು ಮನವಿ ಅರ್ಪಿಸಿದರು.