“ಎಲ್.ಜಿ.ಹಾವನೂರ್ ಕರ್ನಾಟಕದ ಅಂಬೇಡ್ಕರ್”: ಸಾಹಿತಿ ಸತೀಶ ಕುಲಕರ್ಣಿ
ಹಾವೇರಿ: ನಾಡು ಕಂಡ ಶ್ರೇಷ್ಠ ಕಾನೂನು ತಜ್ಞರು, ದಕ್ಷಿಣ ಆಫ್ರಿಕಾದ ಸಂವಿಧಾನ ರಚನಾ ಸಲಹಾ ಸಮಿತಿ ಸದಸ್ಯರಾಗಿ, ಹಿಂದುಳಿದ ವರ್ಗದ ಆಯೋಗದ ಪ್ರಥಮ ಅಧ್ಯಕ್ಷರಾಗಿ ಬಹುಸಂಖ್ಯಾತ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯದ ಮೂಲಕ ಸಮ ಸಮಾಜವನ್ನು ನಿರ್ಮಿಸಬೇಕೆಂಬ ಕನಸು ಕಂಡು ಅದನ್ನು ನನಸಾಗಿಸಲು ಶ್ರಮಿಸಿದ ಮಹಾನ್ ಚೇತನ ಎಲ್.ಜಿ.ಹಾವನೂರ ಅವರು, ಕನ್ನಡ ನಾಡಿನ ಹಿಂದುಳಿದ ವರ್ಗಗಳ ಪಾಲಿನ ಅಂಬೇಡ್ಕರ್ ಎಂದು ಹಿರಿಯ ಬಂಡಾಯ ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.
ಮಾ.೨೫ರಂದು ಎಲ್.ಜಿ.ಹಾವನೂರರ ಜನ್ಮ,ದಿನದ ಹಿನ್ನಲೆಯಲ್ಲಿ ಹಾವೇರಿಯ ಶ್ರಮಿಕ ಪ್ರಕಾಶನ ಪ್ರಕಟಿಸಿರುವ “ಸಾಮಾಜಿಕ ನ್ಯಾಯದ ಸಾಕ್ಷಿ ಪ್ರಜ್ಞೆ ಎಲ್.ಜಿ.ಹಾವನೂರ” ಪುಸ್ತಕ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್.ಜಿ.ಹಾವನೂರ್ ಅವರನ್ನು ಇಂದು ನಾಡು ಮರೆಯುತ್ತಿದೆ. ಬದುಕಿನುದ್ದಕ್ಕೂ ಎದುರಾದ ಅವಮಾನಗಳನ್ನು ಬೆಳವಣಿಗೆಯ ಮೆಟ್ಟಿಲುಗಳನ್ನಾಗಿ ಕಟ್ಟಿಕೊಳ್ಳುತ್ತ ಎತ್ತರೆತ್ತರಕ್ಕೆ ಬೆಳೆದ ಈ ಮಹಾನ್ ಚೇತನದ ಬದುಕು ಸಾಧನೆಗಳನ್ನು ಸ್ಮರಿಸುವದರೊಂದಿಗೆ, ಅವರು ಕಂಡ ಸಮ ಸಮಾಜದ ಕನಸನ್ನು ನನಸಾಗಿಸಬೇಕಾದ ಹಾದಿಯನ್ನು ನಾವು ಮತ್ತೆ ಮತ್ತೆ ಸ್ಪಷ್ಟಪಡಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
“ಸಾಮಾಜಿಕ ನ್ಯಾಯದ ಸಾಕ್ಷಿ ಪ್ರಜ್ಞೆ ಎಲ್.ಜಿ.ಹಾವನೂರ” ಪುಸ್ತಕ ಬಿಡುಗಡೆ ಮಾಡಿದ ಹಿರಿಯ ಸಾಹಿತಿ ಲತಾ ಹಳಕೊಪ್ಪ ಅವರು ಮಾತನಾಡಿ ಹಾವನೂರು ಅವರು ಹಿಂದುಳಿದ ವರ್ಗದ ಜನರನ್ನು ಶೋಷಣೆಯಿಂದ ಮುಕ್ತಗೊಳಿಸಿ ಸಾಮಾಜಿಕ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಇಂತಹ ನಾಯಕನ ಸ್ಮರಣೆಯನ್ನು ಜೀವಂತವಾಗಿಡಲು ಸರ್ಕಾರ ಇವರ ಜನ್ಮದಿನಾಚರಣೆಯ ಆಚರಿಸಬೇಕು. ಅವರು ನಾಡಿಗೆ ನೀಡಿದ ಕೊಡುಗೆಗಳ ಬಗ್ಗೆ ಇಂದಿನ-ಮುಂದಿನ ಜನಾಂಗಕ್ಕೆ ತಿಳಿಸುವ ನಿಟ್ಟಿನಲ್ಲಿ ಸರ್ಕಾರ ಪಠ್ಯಪುಸ್ತಕದಲ್ಲಿ ಎಲ್.ಜಿ.ಹಾವನೂರ ಅವರ ಜೀವನ-ಸಾಧನೆ ಪಠ್ಯದಲ್ಲಿ ಅಳವಡಿಸಬೇಕು. ಎಲ್.ಜಿ.ಹಾವನೂರ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಬೇಕು, ಹಾವೇರಿ ವಿಶ್ವ ವಿದ್ಯಾಲಯಕ್ಕೆ ಹಾವನೂರ ಅವರ ಹೆಸರನ್ನು ನಾಮಾಕರಣ ಮಾಡಬೇಕಿದೆ ಎಂದರು.
ಸಾಹಿತಿ ಡಾ.ರಮೇಶ ತೆವರಿ ಕೃತಿಯ ಕುರಿತು ಮಾತನಾಡಿ ಎಲ್.ಜಿ.ಹಾವನೂರ ಅವರು, ಬಾಲ್ಯದಿಂದಲೂ ಬಡತನ, ಹಸಿವು, ಅವಮಾನಗಳನ್ನು ಅರಗಿಸಿಕೊಂಡವರು, ಉಂಡ ನೋವುಗಳೇ ಸಾಮಾಜಿಕ ಸ್ವಾಸ್ಥ್ಯಕ್ಕೆ ಅಗತ್ಯವಿರುವ ಮದ್ದನ್ನು ರೂಪಿಸುವ ನಿಟ್ಟಿನಲ್ಲಿ ಅವರನ್ನು ಅಣಿಗೊಳಿಸಿದವು. ಸಾಹಿತಿ ಬಿ.ಶ್ರೀನಿವಾಸ ಅವರು ಎಲ್.ಜಿ.ಹಾವನೂರ ಬದುಕಿನ ಸಮಗ್ರ ನೋಟವನ್ನು “ಸಾಮಾಜಿಕ ನ್ಯಾಯದ ಸಾಕ್ಷಿ ಪ್ರಜ್ಞೆ ಎಲ್.ಜಿ.ಹಾವನೂರ” ಪುಸ್ತಕದಲ್ಲಿ ದಾಖಲಿಸುವ ಮೂಲಕ ಹಿಂದುಳಿದವರ ಏಳ್ಗೆಗಾಗಿ ಹಾವನೂರು ಅವರು ತಮ್ಮ ವಿದ್ವತ್ತನ್ನೆಲ್ಲ ಧಾರೆ ಎರೆದು ಹೋರಾಟಮಾಡಿರುವುದನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ರಮೇಶ ಆನವಟ್ಟಿ, ನ್ಯಾಯವಾದಿ ಬಸವರಾಜ ಹಾದಿಮನಿ, ವಾಲ್ಮೀಕಿ ಸಮಾಜದ ತಾಲೂಕಾ ಅಧ್ಯಕ್ಷ ಅಶೋಕ ಹರನಗಿರಿ, ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ರವಿ ಹಾದಿಮನಿ ಮಾತನಾಡಿ ಹಿಂದುಳಿದ ವರ್ಗಗಳ ಸಮುದಾಯಗಳೂ ಎಲ್.ಜಿ.ಹಾವನೂರು ಎಂಬ ಮಹಾನ್ ನೇತಾರನನ್ನು ಮರೆತಿವೆ. ಹುಟ್ಟು ಹಬ್ಬದ ನೆಪದಲ್ಲಾದರೂ ಕೂಡ ಆ ಚೇತನ ಸ್ಮರಿಸಿ, ಅವರ ಮಾರ್ಗವನ್ನು ಗಟ್ಟಿಗೊಳಿಸುವ ಸಾಮಾಜಿಕ ನ್ಯಾಯಕ್ಕೆ ಅರ್ಥ ಬರುವಂತೆ ಮಾಡಿದ ಮಹನೀಯರನ್ನು ಗೌರವಿಸುವ ಕಾರ್ಯಗಳು ಆಗಬೇಕಾಗಿದೆ. ಹಾವೇರಿಯಲ್ಲಿ ಜಿಲ್ಲಾಡಳಿತ ಹಾವನೂರ ಅವರ ಜೀವನ ಸಾಧನೆ ತಿಳಿಸುವ ಥೀಮ್ ಪಾರ್ಕ ಸ್ಥಾಪಿಸಬೇಕೆಂದರು.
ಕಾರ್ಯಕ್ರಮದಲ್ಲಿ ಹಾವನೂರು ಅವರ ಬಂಧುಗಳಾದ ಶ್ರೀಧರ ದೊಡ್ಡಮನಿ ಹಾಗೂ ಪ್ರಶಾಂತ ನಾಲವಾರ, ಜಮೀರ ಜಿಗರಿ, ಪೀರಸಾಬ ಚೋಪದಾರ, ನಾಗರಾಜ ಬಡಮ್ಮನವರ, ಸಂಜಯಗಾಂಧಿ ಸಂಜೀವಣ್ಣನವರ, ಪ್ರಾ.ಎಂ.ಆಂಜನೇಯ, ಹುಚ್ಚೇಶ ವಾಲಿಕಾರ, ಮನೋಹರ ಹಾದಿಮನಿ, ಆನಂದ ಬೆಂಡಿಗೇರಿ, ಬಸವರಾಜ ಮಾಳಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಅಮೃತ ಗುಂಜಾಳ ಸ್ವಾಗತಿಸಿದರು. ಲೇಖಕ-ಪ್ರಕಾಶಕ ಮಾಲತೇಶ ಅಂಗೂರ ಪ್ರಾಸ್ಥಾವಿಕ ಮಾತುಗಳನ್ನಾಡಿದರು. ರಮೇಶ ಜಾಲಿಹಾಳ ವಂದಿಸಿದರು.