
ಕಲ್ಯಾಣ ಕರ್ನಾಟಕದ ಅತ್ಯಾಧುನಿಕ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಹರಪನಹಳ್ಳಿ ಬಳಿ ನವೆಂಬರ್ 3ಕ್ಕೆ ಲೋಕಾರ್ಪಣೆ
ಹಾವೇರಿ: ಕಲ್ಯಾಣ ಕರ್ನಾಟಕದ ಅತ್ಯಾಧುನಿಕ, ಸುಸಜ್ಜಿತ ಹಾಗೂ ಅತಿದೊಡ್ಡದು ಎನಿಸಿದ, ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನವೆಂಬರ್ 3ರಂದು ಹರಪನಹಳ್ಳಿ ಸಮೀಪದ ಕೊಮಾರನಹಳ್ಳಿಯಲ್ಲಿ ಸಾರ್ವಜನಿಕ ಸೇವೆಗೆ ಸಮರ್ಪಣೆಯಾಗಲಿದೆ.
ಹಚ್ಚ ಹಸಿರಿನ ಪ್ರಶಾಂತ ಪರಿಸರದಲ್ಲಿ ಹರಪನಹಳ್ಳಿಯಿಂದ ಕೇವಲ ಒಂಬತ್ತು ಕಿಲೋಮೀಟರ್ ದೂರದಲ್ಲಿ, ಆರೂವರೆ ಎಕರೆ ವಿಶಾಲ ಪ್ರದೇಶದಲ್ಲಿ ವ್ಯಾಪಿಸಿರುವ ಜನನಿ ಆಸ್ಪತ್ರೆ, ಕಲ್ಯಾಣ ಕರ್ನಾಟಕದ ಸಾಮಾಜಿಕ ಸ್ವಾಸ್ಥ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಎನಿಸಲಿದೆ ಎಂದು ಮುಖ್ಯ ವೈದ್ಯಾಧಿಕಾರಿ ಹಾಗೂ ನಿರ್ದೇಶಕ ಡಾ.ರಾಜೇಶ್ ಪಾದೇಕಲ್ ಅವರು ಹಾವೇರಿ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೀವನಶೈಲಿ ರೋಗಗಳು ಇಂದು ದೇಶದ ಸಾಮಾಜಿಕ ಹಾಗೂ ಆರ್ಥಿಕ ಮುನ್ನಡೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಯುವಜನತೆಯಿಂದ ಹಿಡಿದು ಶ್ರಮಶಕ್ತಿಯ ಕ್ಷಮತೆಯನ್ನೇ ಜೀವನಶೈಲಿ ರೋಗಗಳು ಕ್ಷಯಿಸುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ, ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಅನಿವಾರ್ಯವಾಗಿದೆ. ಆಧುನಿಕ ವೈದ್ಯವಿಜ್ಞಾನ ರೋಗಚಿಕಿತ್ಸೆಗಿಂತ ರೋಗಗಳು ಬಾಧಿಸದಂತೆ ತಡೆಯುವ ಮುಂಜಾಗ್ರತಾ ಕ್ರಮಗಳಿಗೆ ಒತ್ತು ನೀಡಿದ್ದು, ಸಮಗ್ರ ಸುಕ್ಷೇಮಕ್ಕೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವರದಾನವಾಗಿದೆ ಎಂದರು.
ಪಂಚಭೂತಗಳಿಂದ ಮಾನವ ಶರೀರ ನಿರ್ಮಾಣವಾಗಿದ್ದು, ಮಣ್ಣು, ಅಗ್ನಿ, ವಾಯು, ಜಲ, ಆಕಾಶ ತತ್ವಗಳನ್ನೇ ಚಿಕಿತ್ಸಕ ಅಂಶವನ್ನಾಗಿ ಬಳಸುವುದು ಪ್ರಕೃತಿ ಚಿಕಿತ್ಸೆ. ಬಹಳಷ್ಟು ರೋಗಗಳಿಗೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಪೂರಕ ಚಿಕಿತ್ಸಾ ವಿಧಾನವಾಗಿ ಅಲೋಪತಿ ವೈದ್ಯವಿಜ್ಞಾನ ಕೂಡಾ ಶಿಫಾರಸ್ಸು ಮಾಡುತ್ತದೆ. ಅದರಲ್ಲೂ ಮುಖ್ಯವಾಗಿ ಸುಸ್ಥಿರ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯೋಗ ಮತ್ತು ಪ್ರಕೃತಿ ವಿಜ್ಞಾನ ವಿದೇಶಗಳಲ್ಲೂ ಜನಪ್ರಿಯವಾಗುತ್ತಿದೆ ಎಂದು ವಿವರಿಸಿದರು.
ಡಾ.ಮಹೇಶ್ ಹಾಗೂ ಡಾ.ಜಯಶ್ರೀ ಪಾಟೀಲ ಅವರ ನಾಯಕತ್ವ ಹಾಗೂ ದೂರದೃಷ್ಟಿಗೆ ಅನುಸಾರವಾಗಿ, ಮೂರು ವರ್ಷಗಳಿಂದ ಹರಪನಹಳ್ಳಿಯಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕುರಿತ ವೈದ್ಯಕೀಯ ಪದವಿ ಕೋರ್ಸ್ ನಡೆಸುತ್ತಾ ಬಂದಿರುವ ಜಯ ಎಜ್ಯುಕೇಶನಲ್ ಟ್ರಸ್ಟ್, ಕಲ್ಯಾಣ ಕರ್ನಾಟಕದ ಜನತೆಗೆ ಕೊಡುಗೆಯಾಗಿ ಈ ಅತ್ಯಾಧುನಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಯೋಗ ಮತ್ತು ಪ್ರಕೃತಿ ಚಿಕಿತ್ಸೆಗಾಗಿ ಬೆಂಗಳೂರು, ದಕ್ಷಿಣ ಕನ್ನಡದ ಧರ್ಮಸ್ಥಳದಂಥ ದೂರದ ಊರುಗಳಿಗೆ ಹೋಗುವುದು ತಪ್ಪಿ ಈ ಭಾಗದ ಜನತೆಗೆ ಮನೆಬಾಗಿಲಲ್ಲೇ ಈ ಸೇವೆ ಲಭ್ಯವಾಗಲಿದೆ ಎಂದು ಡಾ.ಪಾದೇಕಲ್ ವಿವರಿಸಿದರು.
ಹರಪನಹಳ್ಳಿಯ ಕೊಮಾರನಹಳ್ಳಿಯ ಸಮೀಪದ ಸುಂದರ ಪ್ರಕೃತಿಯ ಮಡಿಲಲ್ಲಿ ಅತ್ಯಾಧುನಿಕ ಸಔಲಭ್ಯಗಳೊಂದಿಗೆ ಗ್ರಾಮೀಣ ಪ್ರಶಾಂತ ಪರಿಸರದಲ್ಲಿ ನಿರ್ಮಿಸಲಾದ 100 ಹಾಸಿಗೆಗಳ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ, ಮೂರು ದಶಕಗಳ ಅನುಭವ ಹೊಂದಿರುವ ಮುಖ್ಯ ವೈದ್ಯಾಧಿಕಾರಿ ಮತ್ತು ನಿರ್ದೇಶಕ ಡಾ.ರಾಜೇಶ್ ಪಾದೇಕಲ್ ನೇತೃತ್ವದ ನುರಿತ ವೈದ್ಯಕೀಯ ಸಿಬ್ಬಂದಿಯ ಸೇವೆ ದೊರಕಲಿದೆ.
ಪ್ರಕೃತಿಯ ಜ್ಞಾನ ಮತ್ತು ಆಧುನಿಕ ಆರೈಕೆಯ ಸಮನ್ವಯದೊಂದಿಗೆ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಸ್ವಾಸ್ಥ್ಯವನ್ನು ಅನುಭವಿಸುವ ಅವಕಾಶ. ಸಮಾಜದ ಎಲ್ಲ ವರ್ಗದವರಿಗೂ ಕೈಗೆಟುಕಬೇಕು ಎಂಬ ದೃಷ್ಟಿಯಿಂದ ಊಟ, ವಸತಿ ಮತ್ತು ಮೂಲ ಚಿಕಿತ್ಸೆ ಸೇರಿ ದಿನಕ್ಕೆ 1200 ರೂಪಾಯಿಗಳಷ್ಟು ಕನಿಷ್ಠ ಶುಲ್ಕ ನಿಗದಿಪಡಿಸಿರುವುದು ಸಂಸ್ಥೆಯ ಸಾಮಾಜಿಕ ಬದ್ಧತೆಗೆ ಸಾಕ್ಷಿಯಾಗಿದೆ.
ಹಿಪ್ ಬಾತ್, ಸ್ಪೈನಲ್ ಬಾತ್, ಎನಿಮಾ, ಕೊಲೊನ್ ಹೈಡ್ರೊಥೆರಪಿ, ಅಂಡರ್ವಾಟರ್ ಮಸಾಜ್, ಸೋನಾ ಮತ್ತು ಸ್ಟೀಮ್ಬಾತ್, ಡುಶ್ ಪ್ಯಾಕ್, ಮ್ಯಾಗ್ನೆಟೊ ಥೆರಪಿ, ಫಿಜಿಯೋಥೆರಪಿ, ಅಕ್ಯುಪಂಕ್ಚರ್ & ಅಕ್ಯುಪ್ರೆಶರ್, ವ್ಯಾಯಾಮ ಚಿಕಿತ್ಸೆ, ಆಹಾರ ಚಿಕಿತ್ಸೆ, ಮಣ್ಣು ಚಿಕಿತ್ಸೆಯಂಥ ಸೌಲಭ್ಯಗಳು ಲಭ್ಯವಿದ್ದು, ವಿಶಾಲವಾದ, ಗಾಳಿ ಬೆಳಕು ಸಮೃದ್ಧವಾದ ಯೋಗ ಸಭಾಂಗಣ, ಸ್ವಚ್ಛ ಮತ್ತು ಸುರಕ್ಷಿತ ಕ್ರಿಯಾ ಕೊಠಡಿಗಳು ಇರುತ್ತವೆ.
ಸಮಗ್ರ ಹಾಗೂ ಔಷಧರಹಿತ ಚಿಕಿತ್ಸೆ, ಅನುಭವ ಸಂಪನ್ನ ವೈದ್ಯರು ಮತ್ತು ಚಿಕಿತ್ಸಕರ ಸೇವೆ, ವೈಯಕ್ತಿಕ ಚಿಕಿತ್ಸಾ ಯೋಜನೆಗಳು, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಚಿಕಿತ್ಸಾ ವ್ಯವಸ್ಥೆ, ಚೇತರಿಕೆ ಮತ್ತು ಪುನಶ್ಚೇತನಕ್ಕೆ ಪೂರಕ ಪ್ರಶಾಂತ ವಾತಾವರಣದಂಥ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಕೇಂದ್ರಕ್ಕೆ ಆಗಮಿಸುವ ಅತಿಥಿಗಳಿಗೆ ಪಿಕಪ್ ಮತ್ತು ಡ್ರಾಪ್ ವ್ಯವಸ್ಥೆಯೂ ಇರುತ್ತದೆ.
ಸಾಮಾನ್ಯ ವಾರ್ಡ್, ವಿಶೇಷ ಕೊಠಡಿ ಮತ್ತು ಸುಸಜ್ಜಿತ ಕಾಟೇಜ್ ಹೀಗೆ ವೈವಿಧ್ಯಮಯ ಶ್ರೇಣಿಯ ವ್ಯವಸ್ಥೆಯಲ್ಲಿ ಅತಿಥಿಗಳು ತಮ್ಮ ಆದ್ಯತೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ವಿಶ್ವ ಪರಂಪರೆಯ ತಾಣವಾದ ಹಂಪಿಯಿಂದ ಕೇವಲ ಎರಡು ಗಂಟೆಗಳ ಪ್ರಯಾಣದ ದೂರವಿರುವ ಪ್ರಕೃತಿ ಚಿಕಿತ್ಸಾ ಕೇಂದ್ರ ಮುಂದಿನ ದಿನಗಳಲ್ಲಿ ಈ ಭಾಗದ ಆರೋಗ್ಯ ಪ್ರವಾಸೋದ್ಯಮ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸಲಿದೆ. ವಿವರಗಳಿಗೆ: 93530-63097/ 8317363097 ಸಂಪರ್ಕಿಸಬಹುದು. ಸಂಸ್ಥೆಯ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ಉದಯಶಂಕರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.

