‘ಕಾಡು – ಮೇಡು’ ವನ್ಯಜೀವಿಗಳ ಕುತೂಹಲ ಲೋಕ
ಪತ್ರಕರ್ತ, ಕವಿ, ಲೇಖಕ, ಛಾಯಾಗ್ರಾಹಕ ಹಾಗೂ ಪರಿಸರ ಪ್ರೇಮಿ ಮಾಲತೇಶ ಅಂಗೂರ ಅವರು ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತರು. ಅವರದೇ ಅಭಿಮಾನಿ ಓದುಗರೂ ಇದ್ದಾರೆ. ಹಿರಿಯರಾದ ಅವರ ಅನುಭವವೂ ಬಹಳ ದೊಡ್ಡದು.
ಲೇಖಕ ಮಾಲತೇಶ ಅಂಗೂರವರು ಪರ್ತಕರ್ತರಾಗಿ ಸುಮಾರು ಮೂರು ದಶಕಗಳಿಂದ ಹಾವೇರಿಯಲ್ಲಿ ಕಾರ್ಯನಿರತರಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಅವರ ‘ಹಾವೇರಿಯಾಂವ್’ ಅಂಕಣ ಬರಹಗಳ ಸಂಕಲನ ಒಂದು ಅದ್ಭುತವಾದ ಶ್ರೇಷ್ಠ ಕೃತಿಯಾಗಿದೆ. ಅವರು ನಿರ್ಬಿಡೆಯ ಬರಹದಿಂದ ಖ್ಯಾತರಾದವರು. ಛಾಯಾಚಿತ್ರ ತೆಗೆಯುವದನ್ನು ತಮ್ಮ ಹವ್ಯಾಸವನ್ನಾಗಿಸಿಕೊಂಡಿದ್ದಾರೆ.
‘ಕಾಡು-ಮೇಡು’ ಅವರ ಇತ್ತೀಚಿಗಿನ ಕೃತಿ. ಹೆಸರೇ ಹೇಳುವಂತೆ ಇದು ಕಾಡಿನಲ್ಲಿಯ ವನ್ಯಜೀವಿಗಳ ಕುರಿತಾದ ಲೇಖನಗಳು ಮತ್ತು ಛಾಯಾಚಿತ್ರಗಳನ್ನು ಒಳಗೊಂಡಿರುವ ಕೃತಿಯಾಗಿದೆ. ನಮ್ಮ ಹಾವೇರಿಯ ಸುತ್ತಮುತ್ತಲ ಕಾಡು, ಕೆರೆ, ಬೆಟ್ಟ ಗುಡ್ಡಗಳಲ್ಲಿಯ ಜೀವಿಗಳ ಕುರಿತಾಗಿ , ಅವುಗಳ ವೈಜ್ಞಾನಿಕ ಹೆಸರು, ಉಪಯೋಗಗಳು ಮತ್ತು ಅದಕ್ಕಿರುವ ಮಹತ್ವವನ್ನು ಲೇಖನಗಳಲ್ಲಿ ವ್ಯಕ್ತಪಡಿಸಿದ್ದಾರೆ. ಕೆಲವು ಮಹತ್ವಪೂರ್ಣ ಅಂಕಿ ಸಂಖ್ಯೆಗಳನ್ನೂ ಮತ್ತು ತಾವು ಚಿತ್ರ ತೆಗೆದಾಗಿನ ಸಂದರ್ಭವನ್ನು ವಿವರವಾಗಿ ಬರೆದಿದ್ದಾರೆ. ಅಭ್ಯಾಸ ನಿರತ ವಿದ್ಯಾರ್ಥಿಗಳಿಗೆ,ಶಿಕ್ಷಕರಿಗೆ ಮತ್ತು ಸಾಮಾನ್ಯರಿಗೂ ಈ ಕೃತಿ ಅಮೂಲ್ಯ ಸಂಪನ್ಮೂಲವಾಗಿದೆ.
ಲೇಖಕ ಮಾಲತೇಶ ಅಂಗೂರವರ ತಾಳ್ಮೆ, ಧೈರ್ಯ, ಬದ್ಧತೆ ಈ ವಿಭಿನ್ನ ಕೃತಿ ರೂಪತಾಳಲು ಕಾರಣವಾಗಿದೆ. ಇಲ್ಲಿಯ ಪ್ರತಿ ಲೇಖನಗಳಲ್ಲಿಯೂ ಮಾನವೀಯತೆ, ಅಂತಃಕರಣದ ಜಲ ಸೆಲೆಯಾಗಿ ಹರಿದಿದೆ. ಅಂಗೂರವರು ತಮ್ಮ ಬಿಡುವಿಲ್ಲದ ಸಮಯದಲ್ಲೂ ಕಾಡು-ಮೇಡು ಅಲೆದು ಛಾಯಾಚಿತ್ರಗಳನ್ನು ಸಂಯಮದಿಂದ ಸೆರೆಹಿಡಿಯುವ ಸಾಹಸವನ್ನು ಮಾಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಶಸ್ತಿಗಳನ್ನು ಪಡೆದು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಇವರಿಗೆ ಕರ್ನಾಟಕ ಸರಕಾರದ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಸನ್ಮಾನ, ಬೆಂಗಳೂರಿನ ಪ್ರೆಸ್ ಕ್ಲಬ್ ಕೌನ್ಸಿಲ್ ನ ಮಾಧ್ಯಮ ಸೇವಾರತ್ನ ಮುಂತಾದ ಪ್ರಶಸ್ತಿಗಳು ಸಂದಿವೆ. ಈ ಕೃತಿಯಲ್ಲಿ ಒಟ್ಟು ೩೧ ವನ್ಯಜೀವಿಗಳು, ಸಸ್ಯಗಳು ಮತ್ತು ಪ್ರಕೃತಿ ಸೌಂದರ್ಯದ ಕುರಿತಾದ ಲೇಖನಗಳು ಮತ್ತು ಛಾಯಾಚಿತ್ರಗಳಿವೆ.
‘ಪ್ರಾಣಿ-ಪಕ್ಷಿಗಳಿಗೂ ಬಾಯಾರಿಕೆ ಉಂಟು’ ಈ ಲೇಖನವು ನಮ್ಮ ಹಾವೇರಿಯ ಹೆಗ್ಗೇರಿ ಕೆರೆಯಲ್ಲಿ ನೀರಿಲ್ಲದೆ ಒಣಗಿ ಹೋಗಿದ್ದ ಸಂದರ್ಭದಲ್ಲಿ ತೆಗೆದ ಛಾಯಾಚಿತ್ರದ ಕುರಿತಾಗಿದೆ. ಅಲ್ಲಿಗೆ ಬಂದ ಹದ್ದು ಮತ್ತು ಜಿಂಕೆ ಮರಿಗಳು ನೀರಿಗಾಗಿ ಪರಿತಪಿಸುವ, ಮನಕಲಕುವ ಚಿತ್ರಣವನ್ನು ನಾವಿಲ್ಲಿ ಕಾಣಬಹುದು. ಆ ಕೆರೆಯ ಇತಿಹಾಸ ವಿಸ್ತಾರ ಮತ್ತು ನಿರ್ಲಕ್ಷ್ಯಕ್ಕೊಳಗಾಗಿರುವುದನ್ನು ಲೇಖನದಲ್ಲಿ ವ್ಯಕ್ತಪಡಿಸಿದ್ದಾರೆ.ಹಾಗೆ ಬರೆಯುತ್ತ ಜೀವಿಗಳು ನೀರಿಗಾಗಿ ಯಾರಿಗೆ ದೂರು ಕೊಡಬೇಕು? ಎಂಬ ಪ್ರಶ್ನೆಯನ್ನು ಕಾಳಜಿಪೂರ್ವಕವಾಗಿ ಹಾಕುತ್ತಾರೆ. ಕೆರೆಗೆ ನೀರನ್ನು ತುಂಬಿಸಿ ಎಂಬ ಸ್ಪಷ್ಟ ಸಂದೇಶವನ್ನು ನೀಡುತ್ತಾರೆ. ಹಾಗೆಯೇ ‘ಕೆಂದಳಿಲು ಹಾರಿತು’ ಎಂಬ ಲೇಖನದಲ್ಲಿ ಇವರ ಕ್ಯಾಮರಾದಲ್ಲಿ ಸೆರೆ ಸಿಕ್ಕ ಹಾರುವ ಅಳಿಲು ನಮ್ಮ ಹಾನಗಲ್ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಕಂಡು ಬಂದಿದ್ದು ವಿಶೇಷವೆನಿಸುತ್ತದೆ. ಅಂಗೂರವರು ಕಲೆಹಾಕಿರುವ ಮಾಹಿತಿಯೂ ಅಗಾಧವಾಗಿದೆ. ಸುಮ್ಮನೆ ನೋಡಿ ಹೊರಟು ಹೋಗುವವರ ಮಧ್ಯೆ ಇವರ ಆಸಕ್ತಿ ಹೆಮ್ಮೆ ಮೂಡಿಸುತ್ತದೆ.
‘ಮಾಗಡಿಯ ಬೆಳಕು’ ಲೇಖನವು ಮಾಲತೇಶ ಅವರ ಆಸಕ್ತಿಗೆ ಶಕ್ತಿ ಎಷ್ಟಿದೆ ಎಂಬುದನ್ನು ತೋರಿಸುತ್ತದೆ. ಅವರಿಗಿರುವ ಕಾಲು ನೋವನ್ನು ಲೆಕ್ಕಿಸದೇ, ರಾತ್ರಿಯಿಡಿ ನಿದ್ರೆಯಿಲ್ಲದಿದ್ದರೂ ಬೆಳಗಿನ ಜಾವ ೪-೧೫ ಕ್ಕೆ ಹಾವೇರಿ ಬಸ್ ಸ್ಟ್ಯಾಂಡಿಗೆ ಬಂದು ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಗೆ ವಿದೇಶಿ ಪಕ್ಷಿಗಳು ಬಂದಿರುವುದನ್ನು ತಿಳಿದು ಹೊರಟರು. ಗಡಗಡ ನಡುಗುವ ಚಳಿಯಲ್ಲಿಯೂ ನಸುಕಿನಲ್ಲಿ ೫-೫೦ ರ ಸುಮಾರಿಗೆ ಮಾಗಡಿಗೆ ಇಳಿದು ಪಕ್ಷಿಗಳ ಕಲರವ ಹಾರಾಟ ಕಂಡು ಅವರ ಉತ್ಸಾಹ ಇಮ್ಮಡಿಗೊಂಡಿತು. ಅವರ ಕಾಲುನೋವು ಮಾಯವಾಗಿತ್ತು. ಅವರು ಹೇಳಿದಂತೆ ಆ ಕ್ಷಣಗಳನ್ನು ಕ್ಯಾಮರಾದಲ್ಲಿ ದಾಖಲಿಸುತ್ತಾ ಹೋದೆ. ಪಕ್ಷಿಗಳನ್ನು ನೋಡಲು ಬಂದವನು , ಸೂರ್ಯನ ಸೌಂದರ್ಯಕ್ಕೆ ಮಾರುಹೋದೆ. ಅಬ್ಬಬ್ಬಾ ಸೂರ್ಯೋದಯದ ಆ ನಯನ ಮನೋಹರ ದೃಶ್ಯವನ್ನು ಏನೆಂದು ವರ್ಣಿಸಲಿ ಎಂದು ಅಂದ ಚಂದವನ್ನು ಸ್ವಾದಪೂರ್ಣವಾಗಿ ಉಣಬಡಿಸಿದ್ದಾರೆ. ನಮ್ಮ ಸುತ್ತಲೇ ಇರುವ ಸೌಂದರ್ಯವನ್ನು ಕಣ್ತುಂಬಿಕೊಳ್ಳದ ಸೋಮಾರಿಗಳಾಗಿದ್ದೇವೆ ಎನಿಸುತ್ತದೆ.ಆಸಕ್ತಿ ಇದ್ದಲ್ಲಿ ಹುಮ್ಮಸ್ಸು ತಾನಾಗಿಯೇ ಹುಟ್ಟುತ್ತದೆ ಎಂದು ನನಗನಿಸುತ್ತದೆ.
ಇನ್ನೊಂದು ಲೇಖನ ‘ಕಾಗೆಗೆ ಚಿಕಿತ್ಸೆ ಉಂಟು’. ಇದು ಮುರುಗೇಶ ಮಹಾನುಭಾವಿಮಠ ಅವರು ಗಾಯಗೊಂಡು ಹಾರಲಾಗದೆ ಮನೆಯೊಳಗೆ ಬಂದ ಕಾಗೆಗೆ ಚಿಕಿತ್ಸೆ ಮಾಡಿಸಿದ ಪ್ರಸಂಗದ ಕುರಿತಾಗಿದೆ. ಕಾಗೆ ಎಂದರೆ ಅನಿಷ್ಠ, ಅಪಶಕುನ ಹೋಮ ಮಾಡಬೇಕು, ಮನೆ ತೊಳೆಯಬೇಕು ಮುಂತಾಗಿ ಹೇಳಿ ಮೌಢ್ಯಬಿತ್ತುವ ಜನರೇ ಹೆಚ್ಚಿರುವಾಗ ಅದರ ಕುರಿತಾಗಿ ಸುಂದರ ಲೇಖನ ಮಾಡಿ ಪ್ರಕಟಿಸಿದ್ದು ಮಾಲತೇಶ ಅಂಗೂರ ಅವರ ಅಸಮಾನ್ಯತೆಯನ್ನು ತೋರಿಸುತ್ತದೆ.
ಈ ಕೃತಿಯ ಮುಖಪುಟದ ಚಿತ್ರವಿರುವ ‘ಹಾವೇರಿಯ ಪರಿಸರದಲ್ಲಿ ನೀರು ನಾಯಿ’ ಲೇಖನವು ಕುತೂಹಲಭರಿತವಾಗಿದೆ. ಸಮುದ್ರದ ಹಿನ್ನೀರು ಹಾಗೂ ನದಿಗಳಲ್ಲಿ ಕಂಡುಬರುವ ‘ನೀರುನಾಯಿ’ ಹಾವೇರಿ ತಾಲೂಕಿನ ಗುತ್ತಲ ಕೆರೆಯ ಪರಿಸರದಲ್ಲಿ ಕಂಡುಬಂದಿದ್ದರ ಕುರಿತಾಗಿ ಸೋಜಿಗ ವ್ಯಕ್ತಪಡಿಸಿದ್ದಾರೆ. ಹಾಗೆಯೇಅವುಗಳ ಬಗ್ಗೆ ವಿವರಣೆ ನೀಡುತ್ತಾ ಅಳಿವಿನಂಚಿನಲ್ಲಿರುವ ನೀರುನಾಯಿಗಳನ್ನು ಪ್ರೆಶ್ ವಾಟರ್ ಓಟರ್ ಸಂರಕ್ಷಿಸುವ ಹೊಣೆ ನಮ್ಮದಾಗಬೇಕಿದೆ ಎಂಬ ಅವರ ವನ್ಯಜೀವಿಗಳ ಬಗೆಗಿನ ಕಾಳಜಿ ಓದುಗರಲ್ಲಿಯೂ ಮೂಡುವುದರಲ್ಲಿ ಸಂದೇಹವಿಲ್ಲ.
ಕಾಡು-ಮೇಡು ಕೃತಿಯಲ್ಲಿ ಕೃಷ್ಣ ಮೃಗಗಳ ಪ್ರಣಯ ಪ್ರಸಂಗ, ಮೀನು ಉಗುಳಿದ ಕೆರಿ ಹಾವು, ಹರಿಣಿಯು ಹಾರಿತು ದೂರಾ, ಗೀಜಗನ ಗೂಡುಹೊಕ್ಕ ಹಾವು, ಸಿಹಿನೀರಿನ ಏಡಿಗಳ ಜಾಡು, ಕೋಳಿಯ ವಿಷಾದ ಯೋಗ, ಮೈಬಣ್ಣ ಬದಲಿಸುವ ಊಸರವಳ್ಳಿ, ಹಾದಿ ತಪ್ಪಿ ಹಾವೇರಿಗೆ ಬಂದ ಒಂಟಿಸಲಗ ಮತ್ತು ಸೃಷ್ಠಿಯ ವೈಚಿತ್ರಕ್ಕೆ ಸಾಕ್ಷಿ ದೊಡ್ಡ ಹುಣಸೆ ಮರಗಳು ಮುಂತಾದ ಲೇಖನಗಳು ಗಮನ ಸೆಳೆಯುತ್ತವೆ.
ಈ ಕೃತಿಗೆ ಮುನ್ನುಡಿ ಬರೆದಿರುವ ಖ್ಯಾತ ಸಾಹಿತಿ ಹನುಮಂತಗೌಡ ಗೊಲ್ಲರ ಅವರು ಕಾಡು-ಮೇಡಿನಲ್ಲಿ ಕಣ್ಣಿಗೆ ಕಾಣಿಸದ-ಕಾಣುವ ಪಕ್ಷಿ, ಪ್ರಾಣಿಗಳ ಹಲವು ವಿಸ್ಮಯಗಳಿವೆ. ಪ್ರತಿ ಲೇಖನವೂ ತನ್ನ ಶೀರ್ಷಿಕೆಯಿಂದಲೇ ಓದುಗರನ್ನು ಸೆಳೆಯುತ್ತದೆ. ನಮ್ಮ ಸುತ್ತ-ಮುತ್ತಲಿನ ವಿಸ್ಮಯ ಲೋಕವನ್ನು ತೆರೆದಿಡುತ್ತದೆ. ಕಾಡು-ಮೇಡಿನ ಆಳ ಅಗಲವನ್ನು ಅಂಗೈಯಲ್ಲಿ ಹಿಡಿದಿಟ್ಟು, ವಿಜ್ಞಾನದ ವಿಷಯವನ್ನು ಸಾಮಾನ್ಯ ಜ್ಞಾನದ ರೀತಿಯಲಿ ಓದುಗರ ಎದುರು ಇರಿಸಿದ್ದಾರೆ ಲೇಖಕರು. ಎಂದು ಈ ಕೃತಿ ಕುರಿತು ಬರೆದಿದ್ದಾರೆ.
ಹಾಗೆಯೇ ವನ್ಯಜೀವಿ ಛಾಯಾಗ್ರಾಹಕರಾದ ಪ್ರವೀಣ ಪೂಜಾರ ಅವರು ಬೆನ್ನುಡಿಯಲ್ಲಿ ವನ್ಯಜೀವಿಗಳ ಸಂರಕ್ಷಣೆ ಹಾಗೂ ಅವುಗಳ ಬಗ್ಗೆ ಅಧ್ಯಯನ ಮಾಡಿರುವ ಅಂಗೂರ ಅವರಿಗೆ ವನ್ಯಜೀವಿಗಳ ಬಗ್ಗೆ ಇರುವ ತಿಳಿವಳಿಕೆ ಅಪಾರವಾದುದು. ಹಿತಭಾಷಿ. ಮಿತ ಭಾಷಿ. ಅರ್ಥಪೂರ್ಣ ಮಾತು. ಮೌನ ಅವರ ಗುಣ. ಅವರ ಪರಿಸರ ಪ್ರೀತಿ-ಕಾಳಜಿ ಅನನ್ಯವಾದು ಎಂದು ನೈಜ ನುಡಿಗಳನ್ನಾಡಿದ್ದಾರೆ.
ಒಟ್ಟು ೧೩೫ ಪುಟಗಳನ್ನು ಹೊಂದಿರುವ ಕೃತಿಗೆ ಆಕರ್ಷಣೀಯವಾದ ಮುಖಪುಟವಿದೆ. ಯುವ ಕಲಾವಿದ ಅಮೃತ ಆರ್ ಗುಂಜಾಳ ಅವರು ಮುಖಪುಟ ವಿನ್ಯಾಸ ಮಾಡಿದ್ದಾರೆ. ಅಚ್ಚು ಕಟ್ಟಾದ ಮುದ್ರಣವಿದೆ. ಹಾವೇರಿಯ ಶ್ರಮಿಕ ಪ್ರಕಾಶನ ದವರು ಪ್ರಕಟಿಸಿದ್ದಾರೆ.
ಮನಸ್ಸಿಗೆ ಮುದನೀಡುವ ಜ್ಞಾನದ ಹೂರಣವಿರುವ ಪುಸ್ತಕ ಓದೋಣ ಲೇಖಕ ಮಾಲತೇಶ ಅಂಗೂರ ಅವರ ಶ್ರಮ ಸಾರ್ಥಕ ಪಡಿಸೋಣ. ಅವರ ಕ್ಯಾಮೆರಾ ಕಣ್ಣಿಂದ ಇನ್ನಷ್ಷು ವಿಸ್ಮಯಗಳು, ಪ್ರಕೃತಿ ಸೌಂದರ್ಯ ನಮ್ಮ ಕಣ್ಮನಗಳಿಗೆ ತಲುಪಲಿ ಎಂದು ಆಶಿಸುತ್ತೇನೆ.
‘ಕಾಡು-ಮೇಡು’ ಲೇಖನಗಳು
ಲೇಖಕರು: ಮಾಲತೇಶ ಅಂಗೂರ
ಪುಟ: ೧೩೫, ಬೆಲೆ: ೨೫೦/ ರೂ
ಪ್ರಕಾಶಕ: ಶ್ರಮಿಕ ಪ್ರಕಾಶನ , ಕೂಲಿಯವರ ಓಣಿ
ಹಾವೇರಿ.
ಮೋ: ೯೪೪೮೦೨೯೪೧೭
ಕೃತಿ ಪರಿಚಯ:
ಶ್ರೀ ನಾಗರಾಜ ಎಂ ಹುಡೇದ ಸಾಹಿತಿಗಳು
ಹಾವೇರಿ
ಮೊ: ೯೯೦೨೧೦೯೫೩೪
Thank u sir.