ಕಾಮಗಾರಿ ಅನುಮೋದನೆಗೆ ಲಂಚ ಸ್ವೀಕಾರ, ಹಾವೇರಿ ಕಾರ್ಯನಿರ್ವಾಹಕ ಅಭಿಯಂತರ-ಕೇಸ್ವರ್ಕರ್ ಬಂಧನ
ಹಾವೇರಿ: ಕಾಮಗಾರಿ ಅನುಮೋದನೆಗಾಗಿ ಗುತ್ತಿಗೆದಾರನಿಂದ ಲಂಚ ಸ್ವೀಕರಿಸುವ ವೇಳೆ ಕಾರ್ಯನಿರ್ವಾಹಕ ಅಭಿಯಂತರ ಹಾಗೂ ಕೇಸ್ವರ್ಕರ್ ಲೋಕಾಯುಕ್ತರ ಬಲೆಗೆ ಬಿದ್ದಿರುವ ಘಟನೆ ಶುಕ್ರವಾರ ಪಂಚಾಯತ್ ರಾಜ್ ಇಂಜಿನಿಯರಿಂಗ ವಿಭಾಗದದ ಹಾವೇರಿ ಕಛೇರಿಯಲ್ಲಿ ನಡೆದಿದ್ದು, ಈ ವೇಳೆ ಕಾರ್ಯನಿರ್ವಾಹಕ ಅಭಿಯಂತರ-ಕೇಸ್ವರ್ಕರ್ನನ್ನು ಹಾವೇರಿಯ ಲೋಕಾಯುಕ್ತ ಪೊಲೀಸ್ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ರಾಣೆಬೆನ್ನೂರ ತಾಲೂಕು ಇಟಗಿ ಗ್ರಾಮ ಪಂಚಾಯಿತಿಯ ೧೫ ನೇ ಹಣಕಾಸು ಯೋಜನೆಯಡಿಯಲ್ಲಿ ಮಂಜೂರಾದ ೪,೦೦,೦೦೦/- ಗಳ ಮೊತ್ತದ ಇಟಗಿ ಗ್ರಾಮದಲ್ಲಿ ಗಟಾರ ನಿರ್ಮಾಣ ಕಾಮಗಾರಿಗಳನ್ನು ಮಾಡಲು ಕಾರ್ಯ ನಿರ್ವಾಹಕ ಅಭಿಯಂತರರು, ಪಂಚಾಯತ್ ರಾಜ್ ಇಂಜಿಯರಿಂಗ್ ವಿಭಾಗ ಹಾವೇರಿ ಅವರ ಅನುಮೋಧನೆ ಅವಶ್ಯಕತೆ ಇದ್ದು, ಸದರಿ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಪಂಚಾಯತ್ ರಾಜ್ ಇಂಜಿನಿಯರಿಂಗ ವಿಭಾಗದ ಹಾವೇರಿ ಕಛೇರಿಯ ಕಾರ್ಯನಿರ್ವಾಹಕ ಅಭಿಯಂತರ ಡಿ.ಎಲ್. ಕಲೋಳಿಕ ಹಾಗೂ ತಾಲೂಕಾ ಯೋಜನಾಧಿಕಾರಿ ಮಲ್ಲಿಕಾರ್ಜುನ್ ಬಿಕ್ಕಣ್ಣನವರ ಸದರಿ ಪ್ರಕರಣದ ಪಿರ್ಯಾದಿದಾರನಿಂದ ಹಣ ಸ್ವೀಕರಿಸುವಾಗ ಲೋಕಾಯುಕ್ತರುದಾಳಿಮಾಡಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ರಾಣೆಬೆನ್ನೂರ ತಾಲೂಕಿನ ಇಟಗಿಗ್ರಾಮದ ೪ನೇ ದರ್ಜೆ ಗುತ್ತಿಗೆದಾರ ಹಾಲೇಶ ಬಸಪ್ಪ ಕುರುವತೇರ ಕಾಮಗಾರಿ ಕಡತಗಳಿಗೆ ಅನುಮೋದನೆ ನೀಡಲು ಕಾಮಗಾರಿಯ ಒಟ್ಟು ಮೊತ್ತದ ೨% ರಷ್ಟು ರೂಗಳಿಗೆ ಬೇಡಿಕೆ ಇಟ್ಟು (೮,೦೦೦/-), ನಂತರ ೧% ರೂ ೪,೦೦೦/- ಗಳಿಗೆ ಒಪ್ಪಿಕೊಂಡು ಲಂಚದ ಹಣವನ್ನು ಪಡೆದುಕೊಳ್ಳುವಾಗ ಲೋಕಾಯುಕ್ತರು ಯಶಸ್ವಿಯಾಗಿ ಟ್ರ್ಯಾಪ್ ಮಾಡಿದ್ದಾರೆ. ಕಾರ್ಯನಿರ್ವಾಹಕ ಅಭಿಯಂತರ ಡಿ.ಎಲ್. ಕಲೋಳಿಕ ಹಾಗೂ ತಾಲೂಕಾ ಯೋಜನಾಧಿಕಾರಿ ಮಲ್ಲಿಕಾರ್ಜುನ್ ಬಿಕ್ಕಣ್ಣನವರ ಅವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಹಾವೇರಿ ಕಛೇರಿಯಲ್ಲಿ ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಸದರಿ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೈಗೊಂಡು ಕರ್ನಾಟಕ ಲೋಕಾಯುಕ್ತ ಡಿವೈಎಸ್ಪಿ, ಬಿ.ಪಿ. ಚಂದ್ರಶೇಖರ, ನೇತೃತ್ವದಲ್ಲಿ ತನಿಖಾಧಿಕಾರಿಗಳಾದ ಪೊಲೀಸ್ ನಿರೀಕ್ಷಕರಾದ ಮುಸ್ತಾಕ್ ಅಹ್ಮದ್ ಶೇಖ,ಆಂಜನೇಯ ಎನ್ ಎಚ್, ಮಂಜುನಾಥ ಪಂಡಿತ್ ಪಿ ಎನ್, ಹಾಗೂ ಸಿಬ್ಬಂದಿ ಎಮ್.ಕೆ. ನದಾಫ, ಟಿ.ಇ. ತಿರುಮಲೆ, ಬಿ.ಎಮ್. ಕರ್ಜಗಿ, ಎಮ್.ಕೆ, ಲಕ್ಷ್ಮೀಶ, ಆನಂದ ತಳಕಲ್ಲ, ಎಸ್.ಎನ್.ಕಡಕೋಳ, ಎಮ್.ಎಸ್. ಕೊಂಬಳಿ ರಮೇಶ ಗೆಜ್ಜೆಹಳ್ಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.