ಕಿತ್ತೂರು ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಉತ್ತರ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆ
-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಹಾವೇರಿ : ಕಿತ್ತೂರು ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ಉತ್ತರ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಗುವುದು. ಈ ಭಾಗದ ಮೆಘಾ ಯೋಜನೆಗಳನ್ನು ಈ ಮಂಡಳಿಯ ಮೂಲಕವೇ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ನಗರದ ದಿ.ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಸಕಾರಾತ್ಮಕವಾಗಿ ಕಾರ್ಯಕೈಗೊಂಡಿದೆ. ಜನರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ. ಸರ್ಕಾರ ಶ್ರೀಮಂತವಾಗುವ ಬದಲು ಜನತೆ ಶ್ರೀಮಂತರಾದರೆ ಒಳ್ಳೆಯ ಆಡಳಿತ ನೀಡಲು ಸಾಧ್ಯವಾಗುತ್ತದೆ. ನಾವು ಜನರನ್ನು ವೋಟ್ ಬ್ಯಾಂಕಾಗಿ ತೆಗೆದುಕೊಂಡಿಲ್ಲ. ದುಡಿಯುವ ವರ್ಗಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಿದೆ. ಜನರ ಭವಿಷ್ಯದ ಭಾಗ್ಯದ ಬಾಗಿಲು ತೆರೆಯಬೇಕು, ನೀವು ಮುಖ್ಯವಾಹಿನಿಗೆ ಬರಬೇಕು ಎಂಬುದು ನಮ್ಮ ಆಶಯ. ಈ ಹಿನ್ನಲೆಯಲ್ಲಿ ಜನರ ಕಲ್ಯಾಣಕ್ಕಾಗಿ ನಾವು ಮಾಡಿದ ಕೆಲಸಗಳ ರಿಪೋರ್ಟ್ ಕಾರ್ಡ್ ನೋಡಿ ಸಕಾರಾತ್ಮಕವಾಗಿ ನಮಗೆ ಆಶೀರ್ವದಿಸಿ ಎಂದು ಜನತೆಗೆ ಮನವಿ ಮಾಡಿಕೊಂಡರು.
ರಾಜ್ಯ ಸರ್ಕಾರ ಫಲಾನುಭವಿಗಳ ಸಮ್ಮೇಳನ ಮಾಡುವ ಉದ್ದೇಶವೇ ಸರ್ಕಾರದ ಯೋಜನೆಗಳ ನಿಮಗೆ ಜಾಗೃತಿ ಮೂಡಿಸುವುದು. ಮುಂದಿನ ದಿನಗಳಲ್ಲಿ ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ಜನರಿಗೂ ತಲುಪಿಸಬೇಕು ನೇರವಾಗಿ ಯೋಜನೆಗಳು ಫಲಾನುಭವಿಗಳಿಗೆ ತಲುಪಬೇಕು ಎಂಬುದು ನಮ್ಮ ಆಶಯವಾಗಿದೆ. ಕಳೆದ ಮೂರು ವರ್ಷದಲ್ಲಿ ರಾಜ್ಯದ ಐದುವರೆ ಕೋಟಿ ಜನರಿಗೆ ಒಂದಿಲ್ಲೊಂದು ಯೋಜನೆ ತಲುಪಿಸಿದ್ದೇವೆ. ಜಿಲ್ಲೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ತಲುಪಿಸಿದ್ದೇವೆ ಎಂದು ಹೇಳಿದರು.
ಬಿತ್ತನೆ ಬೀಜಕ್ಕೆ ಮುಂಗಡ: ಬರುವ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜಕ್ಕೆ ರೈತರಿಗೆ ರೂ.೧೦ಸಾವಿರ ನೆರವು ನೀಡುವ ಯೋಜನೆಯನ್ನು ಜಾರಿಗೆ ತರಲಾಗಿದೆ. ರಾಜ್ಯದ ೬೭ ಲಕ್ಷ ರೈತರಿಗೆ ಈ ಲಾಭದೊರಕಿಸಿ ಕೊಡಲಾಗುವುದು. ರೈತರಿಗೆ ಮೊಟ್ಟ ಮೊದಲಬಾರಿಗೆ ಲೈಫ್ ಇನ್ಸೂರೆನ್ಸ್ ಜಾರಿಗೆ ತರಲಾಗಿದೆ. ರೂ.೧೮೦ ಕೋಟಿ ಇನ್ಸೂರೆನ್ಸ್ ರೈತರಪರವಾಗಿ ಸರ್ಕಾರವೇ ತುಂಬಲಿದೆ. ರೈತ ಮರಣ ಹೊಂದಿದರೆ ರೂ ಎರಡು ಲಕ್ಷ ಪರಿಹಾರ ನೀಡಲಾಗುವುದು. ರೈತ ಕೂಲಿಕಾರರಿಗೆ ಪ್ರತಿ ತಿಂಗಳು ರೂ.ಒಂದು ಸಾವಿರ ನೀಡುವ ಯೋಜನೆ ಜಾರಿಗೆ ತರಲಾಗುವುದು, ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ, ರೈತರು ಬಡವರ ಮಕ್ಕಳಿಗೆ ಉನ್ನತ ಶಿಕ್ಷಣ ದೊರಕಿಸಿಕೊಡಲು ಉಚಿತ ಕಾಲೇಜು ಶಿಕ್ಷಣ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಭೂ ರಹಿತರಿಗೆ ಭೂಮಿ ಖರೀದಿಗೆ ಒಂದು ಎಕರೆ ರೂ.೨೦ ಲಕ್ಷ ಸಹಾಯ ಧನ ನೀಡಿಕೆ, ವಿದ್ಯಾರ್ಥಿ ನಿಲಯಗಳಲ್ಲಿ ೩೦ ಸಾವಿರ ಪ್ರವೇಶ ಸಂಖ್ಯೆ ಹೆಚ್ಚಳಮಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸುವ ತೀರ್ಮಾನವನ್ನು ನಾವು ಕೈಗೊಂಡಿದ್ದೇವೆ ಎಂದರು.
ಬಡವರಿಗಾಗಿ ಹಾವಿನ ಹುತ್ತಕ್ಕೆ ಕೈ ಹಾಕುವೆ: ಪರಿಶಿಷ್ಟ ಜಾತಿ ಹಾಗೂ ವರ್ಗದ ಮೀಸಲಾತಿ ಹೆಚ್ಚಳ ಪ್ರಕ್ರಿಯೆ ಜೇನುಗೂಡಿಗೆ ಕೈಹಾಕಿದಂತೆ ಎಂದು ಎಚ್ಚರಿಸಿದಾಗ್ಯೂ ತಳ ಸಮುದಾಯಕ್ಕೆ ನ್ಯಾಯ ಕೊಡಲೇಬೆಕೆಂಬ ಬದ್ಧತೆಯಿಂದ ನಾನು ಜೇನುಗೂಡಿಗಲ್ಲ, ಹಾವಿನ ಹುತ್ತಕ್ಕಾದರೂ ಕೈ ಹಾಕುತ್ತೇನೆಂದು ದಿಟ್ಟತನದಿಂದ ಮೀಸಲಾತಿಯನು ಹೆಚ್ಚಳಮಾಡಿ ಸಾಮಾಜಿಕ ನ್ಯಾಯ ನೀಡಿದ್ದೇನೆ. ಪರಿಶಿಷ್ಟ ಜಾತಿಗೆ ಶೇ.೧೭ ಹಾಗೂ ಪರಿಶಿಷ್ಟ ವರ್ಗಕ್ಕೆ ಶೇ.೭ರಷ್ಟು ಮೀಸಲಾತಿ ಹೆಚ್ಚಳ ಮಾಡಿದ್ದೇವೆ ಎಂದರು.
ಲಂಬಾಣಿ ತಂಡಾ, ಹಟ್ಟಿ, ಗೊಲ್ಲರ ಹಟ್ಟಿ, ಕುರುಬರ ಹಟ್ಟಿ, ಹಾಡಿಗಳಲ್ಲಿ ವಾಸವಿರುವ ಜನರಿಗೆ ಹಕ್ಕುಪತ್ರ ನೀಡುವ ದಿಟ್ಟ ನಿಲುವನ್ನು ತಾಳಿ ಯಾದಗಿರಿಯಲ್ಲಿ ೫೦ ಸಾವಿರ ಫಲಾನುಭವಗಳಿಗೆ ಹಕ್ಕುಪತ್ರ ನೀಡಿದ್ದೇವೆ. ಮುಂದಿನ ವಾರದಲ್ಲಿ ರಾಜ್ಯದ ೧೨ ಜಿಲ್ಲೆಯ ೫೦ ಸಾವಿರ ಲಂಬಾಣಿಗರಿಗೆ ಹಕ್ಕುಪತ್ರ ನೀಡುವ ಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ನಡೆಸಲಿದ್ದೇವೆ ಎಂದರು.
ಬಡವರಿಗೆ, ಶೋಷಿತರಿಗೆ, ಮಹಿಳೆಯರಿಗೆ, ದೀನದಲಿತರಿಗೆ, ದುಡಿಯುವ ವರ್ಗಕ್ಕೆ ರೂಪಿಸಿದ ಯೋಜನೆಗಳು ನಮ್ಮ ಕಾಲದಲ್ಲಿ ಕೇವಲ ಸರ್ಕಾರದ ಕಡತದಲ್ಲಿ, ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕಾರ್ಯವನ್ನು ನಾವು ಮಾಡಿದ್ದೇವೆ ಎಂದರು.
ಕೃಷಿ ಸನ್ಮಾನ ಯೋಜನೆಯಡಿ ೬೭ ಲಕ್ಷ ರೈತರಿಗೆ ರೂ.೧೬ ಸಾವಿರ ಕೋಟಿ ನೀಡಿದ್ದೇವೆ, ಈ ವರ್ಷ ಐದು ಲಕ್ಷ ಮಹಿಳೆಯರಿಗೆ ಸ್ತ್ರೀ ಸಾಮರ್ಥ್ಯ ಯೋಜನೆಯಡಿ ನೆರವು ನೀಡಿದ್ದೇವೆ. ರೈತ ಶಕ್ತಿ ಯೋಜನೆಯಡಿ ಜಿಲ್ಲೆಯ ೧.೮೦ ಲಕ್ಷ ರೈತರಿಗೆ ರೂ.೧೩ ಕೋಟಿ ನೆರವು ಒದಗಿಸಿದ್ದೇವೆ. ರೈತ ವಿದ್ಯಾನಿಧಿ ಯೋಜನೆಯಡಿ ೩೪ ಸಾವಿರ ವಿದ್ಯಾರ್ಥಿಗಳಿಗೆ ರೂ.೧೨ ಕೋಟಿ ನೆರವು ಒದಗಿಸಿದ್ದೇವೆ, ಪ್ರಧಾನ ಮಂತ್ರಿ ಕೃಷಿ ಸಮ್ಮಾನ ಯೋಜನೆಯಡಿ ೨ ಲಕ್ಷ ರೈತರಿಗೆ ರೂ.೬೧೦ ಕೋಟಿ ನೆರವು ಒದಗಿಸಿದ್ದೇವೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆ, ಮನೆ ಮನೆಗೆ ಕುಡಿಯುವ ನೀರು, ಶೌಚಾಲಯ, ವಿದ್ಯುಚ್ಛಕ್ತಿ, ಗ್ಯಾಸ್ ಸಿಲೆಂಡರ್ ಸೇರಿದಂತೆ ಹಲವಾರು ಯೋಜನೆಗಳನ್ನು ತಲುಪಿಸಲಾಗಿದೆ ಎಂದರು.
ಕಾರ್ಮಿಕ ಖಾತೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಅರಬೈಲ್ ಶಿವರಾಮ ಹೆಬ್ಬಾರ್ ಅವರು ಮಾತನಾಡಿ, ದೇಶದಲ್ಲೇ ಮೊಟ್ಟ ಮೊದಲ ಭಾರಿಗೆ ಕಾರ್ಮಿಕ ಇಲಾಖೆಗೆ ಸರ್ಕಾರ ಹಲವಾರು ಯೋಜನೆ ಕೊಟ್ಟಿದೆ ಎಂದರು.
ಸಹಕಾರಿ ಸಚಿವರಾದ ಎಸ್. ಟಿ ಸೋಮಶೇಖರ ಅವರು ಮಾತನಾಡಿ, ೩೩ ಲಕ್ಷ ರೈತರಿಗೆ ಜೀರೋ ಪಸೆಂಟ್ ಸಾಲ ನೀಡಲಾಗುತ್ತಿದೆ. ಡಿಸಿಸಿ ಬ್ಯಾಂಕ್ ಮೂಲಕ ಈ ವ? ಬಜೆಟ್ ನಲ್ಲಿ ೫ ಲಕ್ಷ ರೂಗಳವರೆಗೆ ಸಾಲ ನೀಡಲಾಗುತ್ತಿದೆ. ೧೪ ಲಕ್ಷ ಸ್ತ್ರೀಶಕ್ತಿ ಸಂಘ ೯೨೦ ಕೋಟಿ ಸಾಲ ನೀಡಲಾಗಿದೆ. ಯಶಸ್ವಿನಿ ಯೋಜನೆಯಡಿ ೩೫ ಲಕ್ಷ ಸಹಕಾರಿಗಳು ನೋಂದಣಿ ಆಗಿವೆ. ಒಂದು ಪಂಚಾಯಿತಿಗೆ ಒಂದು ಕೃಷಿ ಪತ್ತಿನ ಸಹಕಾರ ಸಂಘ ಇರಬೇಕ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಕನಸಾಗಿದೆ. ೬ ಎಕರೆ ಜಮೀನಿನಲ್ಲಿ ಮಿಲ್ಕ್ ಯೂನಿಯನ್ ಲೋಕಾರ್ಪಣೆ ಆಗಿದೆ. ಪಿಪಿಪಿ ಮಾದರಿಯಲ್ಲಿ ನಿರ್ಮಿಸಲು ವಿಶೇ? ಸ್ಥಾನಮಾನ ನೀಡಿದ್ದಾರೆ. ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಮಾಡಲು ಸಿಎಂ ವಿಶೇ? ಒತ್ತು ನೀಡಿದ್ದು, ಮಾ.೧೯ ರಂದು ಸಹಕಾರ ಸಚಿವರು ಉದ್ಘಾಟನೆ ಮಾಡಲಿದ್ದಾರೆ.
ಕೃಷಿ ಸಚಿವರಾದ ಬಿ.ಸಿ.ಪಾಟೀಲ ಅವರು ಮಾತನಾಡಿ, ಮಾ.೪ ರಿಂದ ರಾಜ್ಯಾದ್ಯಂತ ಫಲಾನುಭವಿಗಳ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡಲಾಗುತ್ತದೆ. ೪೮ ಸಾವಿರ ಕೋಟಿ ರೂ. ಪಿಎಂ ಕಿಸಾನ್ ಯೋಜನೆಯಡಿ ಸಹಾಯಧನ ಬಿಡುಗಡೆ ಆಗುತ್ತದೆ. ಜಿಲ್ಲೆಯ ೧,೯೯,೮೪೪ ರೈತರಿಗೆ ಕೇಂದ್ರ ಸರ್ಕಾರದಿಂದ ೪೪೨.೧೬ ಕೋಟಿ ಹಾಗೂ ರಾಜ್ಯ ಸರಕಾರದಿಂದ ೧೬೮ ಕೋಟಿ ಒಟ್ಟಾರೆಯಾಗಿ ೬೧೦ ಕೋಟಿ ರೂಪಾಯಿ ಜಿಲ್ಲೆಯ ರೈತರಿಗೆ ಪಿಎಂ ಕಿಸಾನ್ ಹಣ ಬಂದಿದೆ. ರೈತರ ಹೆಣ್ಣು ಮಕ್ಕಳಿಗೆ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ಪ್ರತಿ ವ? ೨ ಸಾವಿರ ರೂ. ನೀಡಲಾಗುತ್ತಿದೆ. ರೈತ ಶಕ್ತಿ ಯೋಜನೆಯಡಿ ರೈತರು ಬಳಸುವ ಟ್ರ್ಯಾಕ್ಟರ್ ಡೀಸೆಲ್ ಸಬ್ಸಿಡಿ ೨೫೦ರು ಪ್ರತಿ ಎಕರೆಗೆ ನೀಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಜಿಲ್ಲೆಯ ರೈತರಿಗೆ ೪೩೪ ಕೋಟಿ ಬೆಳೆ ವಿಮೆ ಹಣ ಬಿಡುಗಡೆ ಮಾಡಲಾಗುತ್ತಿದೆ.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಶಾಸಕ ನೆಹರು ಓಲೇಕಾರ ಅವರು ಮಾತನಾಡಿ, ಸರ್ಕಾರದ ಒಂದಿಲ್ಲೊಂದು ಒಂದು ಯೋಜನೆಯಲ್ಲಿ ಫಲಾನುಭವಿಗಳು ಬಂದಿದ್ದೀರಿ. ಮಹಿಳಾ ಸಂಘಗಳು, ಮಹಿಳಾ ಒಕ್ಕೂಟಗಳಿಗೆ ೩೦ ಲಕ್ಷ ರೂಗಳ ವರೆಗೆ ಬಡ್ಡಿ ರಹಿತ ಸಾಲವನ್ನು ನೀಡಿದೆ. ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸರ್ಕಾರ ಪ್ರೋತ್ಸಾಹ ಧನ ನೀಡಿದೆ. ರೈತರ ಮಕ್ಕಳಿಗೆ ಸಿಎಂ ವಿದ್ಯಾ ನಿಧಿ ಯೋಜನೆಯಡಿ ಸ್ಕಾಲರ್ ಶಿಪ್ ನೀಡಿ ಶಿಕ್ಷಣ ಕ್ಷೇತ್ರವನ್ನು ಬಲ ಪಡಿಸುವ ಕೆಲಸ ಮಾಡುತ್ತಿದೆ. ಉದ್ದಿಮೆಗಳನ್ನು, ಕೈಗಾರಿಕೆಗಳನ್ನು ಆರಂಭಿಸಿ ಸ್ವಾವಲಂಬಿ ಜೀವನ ನಡೆಸಬೇಕು, ಉದ್ಯೋಗದಾತರು ಕೂಡ ನಿವಾಗಬೇಕು ಎಂದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಡಾ.ಬಸವರಾಜ ಕೆಲಗಾರ, ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎನ್.ಎಂ.ಇಟೇರ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ(ಗುತ್ತೂರ), ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ: ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೆಸಿಸಿ ಬ್ಯಾಂಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ವಿವಿಧ ನಿಗಮಗಳು ಸೇರಿದಂತೆ ವಿವಿಧ ೫೫ ಯೋಜನೆಗಳ ೩೦ ಸಾವಿರ ಫಲಾನುಭವಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಸೂಕ್ಷ್ಮ ನೀರಾವರಿ, ರೈತ ವಿದ್ಯಾನಿಧಿ, ಕೃಷಿ ಯಾಂತ್ರೀಕರಣ, ಪ್ರಧಾನಮಂತ್ರಿ ಸಿಂಚಾಯಿ ಯೋಜನೆ, ದೃಷ್ಟಿದೋಷ ಮಕ್ಕಳಿಗೆ ಕನ್ನಡ ವಿತರಣೆ, ನಗರ ಮತ್ತು ಗ್ರಾಮೀಣ ವಸತಿ ಯೋಜನೆ, ಉದ್ಯೋಗ ಸೃಜನತೆ ಯೋಜನೆ, ಕಾರ್ಮಿಕರಿಗೆ ವೈದ್ಯಕೀಯ ಹಾಗೂ ಮದುವೆ ಸಹಾಯಧನ, ಟ್ಯಾಕ್ಸಿ, ದ್ವಿಚಕ್ರ ವಾಹನ ವಿತರಣೆ ಸೇರಿದಂತೆ ವಿವಿಧ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಯಿತು.