ಕುಟುಂಬ ರಾಜಕಾರಣ ವಿರೋಧಿಸಿ ಹಾವೇರಿ ಎಂಪಿ ಕ್ಷೇತ್ರಕ್ಕೆ ಸ್ಪರ್ಧೆ: ರಶೀದಾ ಬೇಗಂ
ಹಾವೇರಿ: ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಕುಟುಂಬ ರಾಜಕಾರಣ ವಿರೋಧಿಸಿ, ಜನಪರವಾದ, ಜನಹಿತ ಆಡಳಿತ ನೀಡುವ ಉದ್ದೇಶದಿಂದ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಇಂಡಿಯನ್ ಮೂವ್ಮೆಂಟ್ ಪಾರ್ಟಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದಾಗಿ ರಶೀದಾ ಬೇಗಂ ಹೇಳಿದರು. ಬುಧವಾರ ನಗರದಲ್ಲಿ ಕರೆಯಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಧಿಕಾರಶಾಹಿ ಪ್ರತಿಯೊಂದು ಜಿಲ್ಲೆಯಲ್ಲಿ ಮರಿಕುಟುಂಬ ರಾಜಕಾರಣಿಗಳನ್ನು ಹುಟ್ಟು ಹಾಕಿ ಈ ದರಿದ್ರ ಕುಟುಂಬ ರಾಜಕಾರಣ ಜಿಲ್ಲಾ ಪಂಚಾಯಿತಿಯಿಂದ ಗ್ರಾಮಪಂಚಾಯಿತಿಗೂ ವೈರಸ್ ನಂತೆ ಹರಡಿದೆ. ಸಿಕ್ಕಸಿಕ್ಕಲ್ಲಿ ಸರ್ಕಾರದ ಯೋಜನೆಗಳನ್ನು ಹಣವನ್ನು ನುಂಗುವುದೇ ಕಾಯಕ ಮಾಡಿಕೊಂಡಿರುವ ಈ ಕುಟುಂಬ ರಾಜಕಾರಣಿಗಳನ್ನು ಕರ್ನಾಟಕದಿಂದ ತೊಲಗಿಸದಿದ್ದರೆ ಭವಿಷ್ಯದಲ್ಲಿ ಪ್ರಜಾಪ್ರಭುತ್ವಕ್ಕೆ ಮಾನ್ಯತೆಯೇ ಇರುವದಿಲ್ಲ ಎಂದರು.
ಜೆಸಿಬಿ ಹೆಸರಾಗಿರುವ ದರಿದ್ರ ಪಕ್ಷಗಳಿಗೆ ಜನ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಕಾಲ ಕೂಡಿ ಬಂದಿದೆ. ಜನಸಾಮಾನ್ಯರ ದುಃಖಗಳಿಗೆ ಎಳ್ಳಷ್ಟೂ ಸ್ಪಂದಿಸದ ಕೇಂದ್ರ ಸರ್ಕಾರ ಮೋದಿಯವರ ನಕಲಿ ಭಾಷಣಗಳನ್ನು ಬಿತ್ತುತ್ತಾ ದೇಶಭಕ್ತಿಯ ಹೆಸರಿನಲ್ಲಿ ದೇಶವನ್ನು ಹುರಿದು ಮುಕ್ಕುತ್ತಾ ಆಪ್ತಮಿತ್ರ ಬಂಡವಾಳಶಾಹಿಗಳ ಗುಲಾಮಗಿರಿಯಲ್ಲಿದೆ.
ರಾಜ್ಯಗಳಲ್ಲಿರುವ ನಸುಕುನ್ನಿ ನಾಯಕರು ಯಾವುದೇ ಪಕ್ಷವಿರಲಿ ಮೋದಿಯ ನೌಟಂಕಿಗಳಿಗೆ ಭೋಪರಾಕ್ ಹಾಕುತ್ತ, ಸುಳ್ಳು ಸುಳ್ಳು ಟೀಕೆ ಮಾಡಿಕೊಂಡು ಜನರ ಅಮೂಲ್ಯ ತೆರಿಗೆ ಹಣವನ್ನು ಲೆಕ್ಕವಿರದ ಗಾರೆ ಕೆಲಸಗಳಿಗೆ ನೀರಿನಂತೆ ಹುಯ್ಯುತ್ತಾ ಶಿಕ್ಷಣ ಆರೋಗ್ಯ ವ್ಯವಸ್ಥೆಯನ್ನೇ ಮರೆತಿದ್ದಾರೆ. ಶಿಕ್ಷಣ ವ್ಯಾಪಾರವಾಗಿದೆ ಆರೋಗ್ಯ ವ್ಯವಸ್ಥೆ ಹೆಸರಿನಲ್ಲಿ ಬಡವರ ಸುಲಿಗೆ ಸಾಗಿದೆ. ಎಲ್ಲೆಡೆ ಭ್ರಷ್ಟಾಚಾರ ಎಲ್ಲದರಲ್ಲೂ ಪರ್ಸಂಟೇಜ್, ಹಣ ಕೊಡದೆ ಕೆಲಸಗಳಾಗುವುದೇ ಇಲ್ಲ. ಬಡವರು ಮಧ್ಯಮವರ್ಗದವರು ಬದುಕುವುದೇ ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ಜನರ ತೆರಿಗೆ ಹಣವನ್ನು ಜನರಿಗೆ ಉಚಿತ ವಿದ್ಯುತ್ ,ನೀರು, ಶಿಕ್ಷಣ, ಆರೋಗ್ಯ ಮಾದರಿ ರಾಜಕಾರಣ ಕರ್ನಾಟಕದಲ್ಲಿ ಬರಬೇಕೆಂದರೆ ಘಟಸರ್ಪವಾಗಿ ಬೆಳೆದಿರುವ ಕುಟುಂಬ ರಾಜಕಾರಣಿಗಳನ್ನು ಮೊದಲು ಸಂಪೂರ್ಣವಾಗಿ ಸೋಲಿಸಿ ಪಾಠ ಕಲಿಸಬೇಕಿದೆ.
ಕುಟುಂಬ ರಾಜಕಾರಣದ ವಿರುದ್ಧವಾಗಿ ಹೋರಾಡಲು ಇಂಡಿಯನ್ ಮೂವ್ಮೆಂಟ್ ಪಾರ್ಟಿ ಕಂಕಣಬದ್ದವಾಗಿದ್ದು, ಹಾವೇರಿಲೋಕಸಭಾ ಕ್ಷೇತ್ರದ ಯ ಪ್ರಜ್ಞಾವಂತ ಮತದಾರರು ಪಕ್ಷದ ಅಭ್ಯರ್ಥಿಯಾದ ತನ್ನನ್ನು ಗೆಲ್ಲಿಸುವಂತೆ ರಶೀದಾ ಬೇಗಂ ಮನವಿಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಡಾ. ಅಬ್ದುಲ್ ಸುಭಾನ್, ಸಂಸ್ಥಾಪಕ ಸಂಚಾಲಕ ಶಿವರುದ್ರಯ್ಯ ಸ್ವಾಮಿ, ಭಾರತೀಯ ಜನತಾದಳ ಸಂಸ್ಥಾಪಕ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ ವಿ.ಶಿವರಾಂ, ರಾಷ್ಟ್ರೀಯ ಕಾರ್ಯಾಧ್ಯಕ್ಷ ಜಿ.ವಿ.ರಾಮಚಂದ್ರಯ್ಯ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸೀಮಾ ಮಾಳಗಿ, ಆಸ್ಪಾಕ್ ಆಲಿ ಇದ್ದರು.