
ಕೇಂದ್ರದ ಅನುದಾನ ಹಂಚಿಕೆ ನೀತಿಯಿಂದ ದಕ್ಷಿಣದ ರಾಜ್ಯಗಳಿಗೆ ಭಾರಿ ಅನ್ಯಾಯ : ಶಾಸಕ ಶ್ರೀನಿವಾಸ ಮಾನೆ
ಹಾವೇರಿ : ರಾಜ್ಯ ಅಭಿವೃದ್ಧಿ ಹೊಂದಬೇಕಾದರೆ ಕೇಂದ್ರ ಸರ್ಕಾರದ ಅನುದಾನ ಹಂಚಿಕೆಯ ನೀತಿ ಬದಲಾಗಬೇಕು. ಜಿಎಸ್ಟಿ ರೂಪದಲ್ಲಿ ಸಂಗ್ರಹಿಸಿದ ತೆರಿಗೆ ಹಣದಲ್ಲಿ ಅರ್ಧವನ್ನಾದರೂ ಮರಳಿ ರಾಜ್ಯಕ್ಕೆ ನೀಡುವಂತಾಗಬೇಕು. ಇಲ್ಲವೇ ನಮ್ಮ ರಾಜ್ಯದ ಆದಾಯವನ್ನು ನಮಗೆ ಬಿಟ್ಟುಕೊಡಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಒತ್ತಾಯಿಸಿದರು. ಜಿಲ್ಲೆಯ ಹಾನಗಲ್ಲನ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಜನಸಂಖ್ಯೆ ಆಧಾರದಲ್ಲಿ ಅನುದಾನ ಹಂಚಿಕೆ ಮಾಡುತ್ತಿದೆ. ಜನಸಂಖ್ಯೆ ನಿಯಂತ್ರಣಕ್ಕೆ ವಿಶೇಷ ಗಮನ ನೀಡಿರುವ ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರದ ಅನುದಾನ ಹಂಚಿಕೆ ನೀತಿಯಿಂದ ಭಾರಿ ಅನ್ಯಾಯವಾಗುತ್ತಿದೆ. ದಕ್ಷಿಣದ ರಾಜ್ಯಗಳು ಒಂದು ರೂ. ಕಟ್ಟಿ ಮರಳಿ ಕೇವಲ ೧೩ ಪೈಸೆಯನ್ನಷ್ಟೇ ಪಡೆಯುತ್ತಿದ್ದರೆ, ಉತ್ತರದ ರಾಜ್ಯಗಳು ಕಟ್ಟುವ ತೆರಿಗೆಗಿಂತಲೂ ಹೆಚ್ಚು ಹಣವನ್ನು ಪಡೆಯುತ್ತಿವೆ ಎಂದು ವಿವರಿಸಿದರು.
ದೇಶದಲ್ಲಿ ಜಿಎಸ್ಟಿ ಜಾರಿಗೆ ಬಂದ ಬಳಿಕ ಕೇಂದ್ರ ಸರ್ಕಾರದ ಆದಾಯ ಗಣನೀಯವಾಗಿ ಹೆಚ್ಚಿದೆ. ಬೇರೆ ಬೇರೆ ವಿಭಾಗದಲ್ಲಿ ಬರದೇ ಇರುವ ಆದಾಯವೂ ಕೇಂದ್ರದ ಬೊಕ್ಕಸಕ್ಕೆ ಸಂಗ್ರಹವಾಗುತ್ತಿದೆ. ಹೀಗಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅಭಿವೃದ್ಧಿ, ಮೂಲಸೌಲಭ್ಯ ಹೆಚ್ಚಿಸುವ ದೃಷ್ಟಿಯಲ್ಲಿ ರಾಜ್ಯಗಳತ್ತ ಕಣ್ತೆರೆದು ನೋಡಬೇಕಿದೆ. ಈ ಬಗ್ಗೆ ಚಿಂತನೆ ಮಾಡುವ ಬದಲಿಗೆ ಕೇಂದ್ರ ಸರ್ಕಾರ ಯಾವುದೋ ದಿಕ್ಕಿನತ್ತ ಹೊರಟಿದೆ. ಇಲ್ಲಸಲ್ಲದ ಸಂಗತಿಗಳನ್ನು ಎಳೆದು ತಂದು ಮತದಾರರ ಚಿತ್ತ ಬದಲಿಸಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಆರ್ಥಿಕತೆ ದಿವಾಳಿಯತ್ತ ಮುಖ ಮಾಡಿ ಅದರ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮ ಭಾರತದ ಮಹತ್ವಾಕಾಂಕ್ಷೆಯ ಯೋಜನೆ ಉದ್ಯೋಗ ಖಾತ್ರಿ ಯೋಜನೆಗೂ ಕೇಂದ್ರ ಸರ್ಕಾರ ಕತ್ತರಿ ಹಾಕಿದೆ. ಯೋಜನೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎನ್ನುತ್ತಿರುವ ಬಿಜೆಪಿ ನಾಯಕರು ಕಾಮಗಾರಿಗಳ ಕ್ರಿಯಾಯೋಜನೆಗಳಿಗೆ ಅನುಮೋದನೆ ದೊರಕಿಸಿಕೊಡಲಿ ಗೊತ್ತಾಗುತ್ತದೆ ಎಂದು ಹೇಳಿದ ಶ್ರೀನಿವಾಸ ಮಾನೆ, ಕಳೆದ ವರ್ಷ ಗ್ರಾಪಂ, ತಾಪಂ, ಜಿಪಂ, ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರದ ೧೫ ನೇ ಹಣಕಾಸು ಯೋಜನೆಯ ಅನುದಾನ ಬಿಡುಗಡೆಯಾಗದ ಕಾರಣ ಆರ್ಥಿಕ ಸಂಕಷ್ಟ ಎದುರಾಗಿದೆ.
ಸ್ವಚ್ಛತೆ, ಕುಡಿಯುವ ನೀರು ಪೂರೈಕೆ, ಬೀದಿದೀಪ ನಿರ್ವಹಣೆಗೂ ಪರದಾಡುವಂತಾಗಿದೆ. ೨೦೧೭ ರಿಂದ ವಸತಿ ಯೋಜನೆಯಡಿ ಕೇಂದ್ರ ಸರ್ಕಾರದ ಪಾಲು ಫಲಾನುಭವಿಗಳಿಗೆ ದೊರೆತಿಲ್ಲ. ಈ ಬಗ್ಗೆ ಪತ್ರ ಬರೆದರೂ ಸ್ಪಂದನೆ ಸಿಕ್ಕಿಲ್ಲ. ಹಾನಗಲ್ ಪುರಸಭೆ ವ್ಯಾಪ್ತಿಯೊಂದರಲ್ಲಿಯೇ ೫೦೪ ಫಲಾನುಭವಿಗಳು ಹಲವು ವರ್ಷಗಳಿಂದ ಕೇಂದ್ರದ ಅನುದಾನಕ್ಕೆ ಕಾಯುತ್ತಿದ್ದಾರೆ ಎಂದು ವಿವರಿಸಿದ ಶಾಸಕ ಮಾನೆ ರಾಜ್ಯದಲ್ಲಿನ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಿಗೆ ಕೇಂದ್ರ ಸರ್ಕಾರ ನೀಡಬೇಕಿದ್ದ ೨೩ ಸಾವಿರ ಕೋಟಿ ರೂ. ಹಣವನ್ನು ರಾಜ್ಯ ಸರ್ಕಾರವೇ ಭರಿಸಿದೆ. ಕೇಂದ್ರದ ಬಜೆಟ್ನಲ್ಲಿ ರಾಜ್ಯಕ್ಕೇನು? ಎನ್ನುವ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲ. ಕಳೆದ ಬಾರಿ ರಾಜ್ಯಕ್ಕೆ ಸಿಗಬೇಕಿದ್ದ ಬರ ಪರಿಹಾರ ಹಣವನ್ನು ಕೋರ್ಟ್ ಮೊರೆ ಹೋಗಿ ಪಡೆಯುವಂತಾಯಿತು. ನ್ಯಾಯಯುತ ಅನುದಾನಕ್ಕೂಸಹ ಕೋರ್ಟ್ ಮೊರೆ ಹೋಗುವಂಥ ಅನಿವಾರ್ಯತೆ ನೆಲೆಯೂರಿದೆ ಎಂದು ಬೇಸರ ವ್ಯಕ್ತಪಡಿಸಿದರು.

