“ಗ್ಯಾಸ ಪೈಪಲೈನ ಅವೈಜ್ಞಾನಿಕ ಕಾಮಗಾರಿ-ಹಾವೇರಿನಗರದ ರಸ್ತೆಗೆ ಸಂಚಕಾರ”
ಕ್ರಮಕ್ಕೆ ಜಯ ಕರ್ನಾಟಕ ಒತ್ತಾಯ
ಹಾವೇರಿ: ಜಿಲ್ಲಾ ಕೇಂದ್ರ ಸ್ಥಳವಾದ ಹಾವೇರಿ ನಗರದಲ್ಲಿ ಮನೆ ಮನೆಗೆ ಗ್ಯಾಸ್ ವಿತರಿಸುವ ಪೈಪ್ಲೈನ್ ಕಾಮಗಾರಿಯನ್ನು ಚನೈ ಮೂಲದ ಎ.ಬಿ.ಪಿ ಪ್ರಥಮ ಸಿಟಿ ಗ್ಯಾಸ್ ಕಂಪನಿಯವರು ಕೈಗೆತ್ತಿಕೊಂಡಿದ್ದು, ಕಂಪನಿಯವರು “ಗ್ಯಾಸ ಪೈಪಲೈನ ಅಳವಡಿಕೆಗೆ ನಗರದಲ್ಲಿನ ಹಳೆ ಪಿ.ಬಿ.ರಸ್ತೆಯನ್ನು ಅವೈಜ್ಞಾನಿಕವಾಗಿ ಅಗೆದು, ಸುಸ್ಥಿತಿಯಲ್ಲಿದ್ದ ಹೆದ್ದಾರಿಗೆ ಸಂಚಕಾರ ತಂದಿದ್ದು, ತಕ್ಷಣ ಕಂಪನಿಯ ಮೇಲೆ ಕ್ರಮಕೈಗೊಂಡು, ಅವರಿಂದಲೇ ರಸ್ತೆ ದುರಸ್ತಿಗೊಳಿಸುವಂತೆ ಜಯಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದಿಂದ ಗುರುವಾರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರಿಗೆ ಮನವಿ ಅರ್ಪಿಸಿ ಆಗ್ರಹಿಸಲಾಗಿದೆ.
ಮನವಿ ಅರ್ಪಿಸಿದ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸುಭಾಸ್ ಬೆಂಗಳೂರ ಜಿಲ್ಲಾಧಿಕಾರಿಗಳಿಗೆ ವಿವರಿಸಿ, ಹಾವೇರಿ ನಗರದ ಪಿ.ಬಿ ರಸ್ತೆ, ಮುನ್ಸಿಪಲ್ ಹೈಸ್ಕೂಲ್ ರಸ್ತೆ, ದೇವಗೆರಿರಸ್ತೆ, ವಿದ್ಯಾನಗರ ಸೇರಿದಂತೆ ಹಾವೇರಿ ತಾಲೂಕಿನ ವಿವಿಧ ಕಡೆಗಳಲ್ಲಿ ಗ್ಯಾಸ್ಪೈಪ್ ಲೈನ ಅಳವಡಿಕೆ ಕಾಮಗಾರಿಯನ್ನು ಚನೈ ಮೂಲದ ಎ.ಬಿ.ಪಿ ಪ್ರಥಮ ಸಿಟಿ ಗ್ಯಾಸ್ ಕಂಪನಿಯವರು ಕೈಗೆತ್ತಿಕೊಂಡಿದ್ದು, ಕಳೆದ ೨ ವರ್ಷಗಳಿಂದ ಕಾಮಗಾರಿಯನ್ನು ಕೈಗೊಂಡಿದ್ದಾರೆ.
ಇವರು ಕೈಗೊಂಡಿರುವ ಕಾಮಗಾರಿಯಿಂದ ಸುಸ್ತಿತಿಯಲ್ಲಿದ್ದ ರಸ್ತೆಗಳು ಹಾಳಾಗಿವೆ. ಅನೇಕ ಸಾವು-ನೋವುಗಳಾಗಿವೆ.
ಪೈಪ್ ಲೈನ್ ಅಳವಡಿಸುವ ಸಿಬ್ಬಂದಿ ಅವೈಜ್ಞಾನಿಕವಾಗಿ ರಸ್ತೆಯನ್ನು ಅಗೆದು ಕಾಮಗಾರಿ ಮಾಡುತ್ತಿರುವ ಕಾರಣ ವಾಹನ ಸವಾರರು ಸಂಕಷ್ಟಕ್ಕೆ ನಿಲುಕಿದ್ದಾರೆ. ಪೈಪ್ ಹಾಕಿದ ಸ್ಥಳದಲ್ಲಿ ಮಣ್ಣು, ಜಲ್ಲಿ ಕಲ್ಲು ಹಾಕಿ ಹೋಗುತ್ತಿದ್ದಾರೆ. ಸರಿಯಾದ ಎಚ್ಚರಿಕೆ ಫಲಕಗಳನ್ನು ಹಾಕುತ್ತಿಲ್ಲ, ತಿಂಗಳು ಕಳೆದರೂ ರಸ್ತೆ ಸರಿಪಡಿಸುತ್ತಿಲ್ಲ. ಇದರಿಂದ ಮಳೆಬಂದ ವೇಳೆ ರಸ್ತೆಯ ಮೇಲೆ ನೀರು ಹರಿಯುವುದರಿಂದ ಇವರು ಕೈಗೊಂಡಿರುವ ಕಾಮಗಾರಿಯ ಗುಂಡಿಯಲ್ಲಿ ವಾಹನಗಳು, ಸವಾರರು ಸಿಲುಕಿ ಗುಂಡಿಯಿಂದ ಹೊರಬರಲು ಹರ ಸಾಹಸ ಪಡಬೇಕಾಗಿದೆ.
ಸಾರ್ವಜನಿಕರಿಗೆ ಬಿಸಿಲು ಬಂದರೆ ದೂಳು, ಮಳೆ ಬಂದರೆ ಕೆಸರು, ಸಣ್ಣ ಮಳೆ ಬಂದರೂ ಸಹ ಕೆಸರು ರಸ್ತೆಯ ಮೇಲೆ ಕಾಣಿಸುತ್ತದೆ. ಇದರಿಂದ ಹಲವು ಅಪಘಾತಗಳು ಸಂಭವಿಸಿವೆ. ಬೈಕ್ ಸವಾರರು, ಲಾರಿ, ಕಾರುಗಳು ಹೆದ್ದಾರಿಯಲ್ಲಿನ ಗುಂಡಿಗೆ ಬಿದ್ದು, ವಾಹನಗಳು ಜಕಂಗೊಂಡಿವೆ. ಜನರು ಸಹ ಜಾರಿ ಬಿದ್ದು ಮೈಕೈ ಗಾಯ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಸಾರ್ವಜನಿಕರು ಪಿ.ಡ.ಬ್ಲೂ.ಡಿ, ನಗರಸಭೆ ಅಧಿಕಾರಿಗಳಿಗೆ ಹೇಳಿ ದೂರು ನೀಡಿದರೇ ಅಧಿಕಾರಿಗಳು ಇಲ್ಲಿಯವರೆಗೆ ಸೌಜನ್ಯಕ್ಕಾದರೂ ಕಂಪನಿಯವರ ಮೇಲೆ ಯಾವುದೇ ಕ್ರಮ ತಗೆದುಕೊಂಡಿರುವುದಿಲ್ಲ ಎಂದು ತಿಳಿಸಿದರು.
ಈ ವಿಷಯದ ಕುರಿತು ಪತ್ರಿಕೆಗಳಲ್ಲಿ ಹಾಗೂ ಸುದ್ದಿವಾಹಿನಿಯಲ್ಲಿ ವರದಿ ಪ್ರಸಾರವಾಗಿದ್ದರೂ ಸಹ ಕಂಪನಿಯವರು ಕಾಮಗಾರಿಯನ್ನು ಮುಂದುವರೆಸಿರುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವಾಗಿ ಸರಿಯಾದ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುತ್ತಿಲ್ಲ. ಕೇಳಿದರೆ ಪಿ.ಡಬ್ಲ್ಯೂಡಿ, ಮತ್ತು ನಗರಸಭೆಯವರನ್ನು ಕೇಳಿ ಎಂದು ಹೇಳುತ್ತಾರೆ. ಅವರನ್ನು ಕೇಳಿದರೆ ನಾವು ಪರವಾನಿಗೆ ಮಾತ್ರ ಕೊಟ್ಟಿರುತ್ತೇವೆ, ಇನ್ನುಳಿದ ವಿಷಯ ನಮಗೆ ಸಂಬಂಧ ಇರುವುದಿಲ್ಲವೆಂದು ಹಾರಿಕೆ ಉತ್ತರವನ್ನು ನೀಡುತ್ತಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗಳು ಸದರ ಕಾಮಗಾರಿಯನ್ನು ವೀಕ್ಷಣೆ ಮಾಡಿ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು. ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಲು ಸೂಚಿಸಬೇಕು. ಈ ಬಗ್ಗೆ ತ್ವರೀತವಾಗಿ ಕ್ರಮ ಕೈಗೊಂಡು ಅವೈಜ್ಞಾನಿಕ ರೀತಿಯಲ್ಲಿ ಗ್ಯಾಸ್ಪೈಪ್ಲೈನ ಅಳವಡಿಕೆ ಕಾಮಗಾರಿ ಮಾಡಿರುವ ಕಂಪನಿಯ ಮೇಲೆ, ಈಬಗ್ಗೆ ಸಾರ್ವಜನಿಕರಿಗೆ ತೊಂದರೆಗಳಾದರೂ ಸಹ ಯಾವುದೇ ಮುನ್ನಚ್ಚರಿಕೆ ಕೈಗೊಳ್ಳದ ಪಿ.ಡ.ಬ್ಲೂ.ಡಿ, ನಗರಸಭೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮತಗೆದುಕೊಳ್ಳುವಂತೆ ಆಗ್ರಹಿಸಿದರು.
ಮನವಿ ಅರ್ಪಿಸುವ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ ಆನವಟ್ಟಿ, ಪ್ರಮುಖರಾದ ಶಿವಣ್ಣ ಹೂಗಾರ, ಸತೀಶ ಮಡಿವಾಳರ, ಮಾಲತೇಶ ಬಜ್ಜಿ ಮತ್ತಿತರರು ಇದ್ದರು.