“ಜನರ ಮೇಲಿನ ಭಾರ ಇಳಿಸುವವರೆಗೂ ಹೋರಾಟ ನಿಲ್ಲುವುದಿಲ್ಲ” ಬಸವರಾಜ ಬೊಮ್ಮಾಯಿ
ಹಾವೇರಿ: ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಿದ ” ಅಹೋರಾತ್ರಿ ಧರಣಿ” ಯನ್ನು ಗುರುವಾರ ಇಲ್ಲಿನ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಲಗೆ ಬಾರಿಸುವ ಮೂಲಕ ಉದ್ಘಾಟಿಸಿದರು.
ಈವೇಳೆ ಮಾತನಾಡಿದ ಅವರು ರಾಜ್ಯ ಸರಕಾರ ದಿವಾಳಿ ಆಗಿದೆ, ಆದರೂ ರಾಜ್ಯದ ಜನರ ಲೂಟಿ ಹೊಡೆಯುವುದು ನಿಂತಿಲ್ಲ. ಜನರ ಮೇಲೆ ತಮ್ಮ ಭ್ರಷ್ಟಾಚಾರದ ಹೊರೆಯನ್ನು ಹಾಕುತ್ತಿದ್ದಾರೆ, ಕರ್ನಾಟಕದ ಜನತೆಗೆ ಈ ಭ್ರಷ್ಟ ಸುಳ್ಳಿನ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನಜಾಗೃತಿ ಮಾಡುವುದಕ್ಕೆ ಭಾರತೀಯ ಜನತಾ ಪಾರ್ಟಿ ಅಹೋರಾತ್ರಿ ಧರಣಿ ಮಾಡುತ್ತಿದೆ, ಜನಾಕ್ರೋಶ ಯಾತ್ರೆ ಮಾಡುತ್ತಿದೆ ಎಂದರು.
ದಿನನಿತ್ಯದ ವಸ್ತುಗಳ ಬೆಲೆ ಏರಿಸಿ ಜನರಿಗೆ ಕಾಂಗ್ರೆಸ್ ಸರ್ಕಾರ ಮೋಸ ಮಾಡುತ್ತಿದೆ. ಇಂದು ಕರ್ನಾಟಕದ ಪ್ರತಿಯೊಬ್ಬನ ಮೇಲೆ ಒಂದು ಲಕ್ಷ ಸಾಲ ಇದೆ, ಭ್ರಷ್ಟಾಚಾರದ ಭಾರ, ಬೆಲೆ ಏರಿಕೆಯ ಭಾರ, ಸಾಲದ ಭಾರವು ಕೂಡ ಇಂದು ಕರ್ನಾಟಕದ ಪ್ರತಿಯೊಬ್ಬನ ಮೇಲಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ, ಕಾನೂನಿನ ಭಯವಿಲ್ಲ, ಟ್ರಾನ್ಸ್ಫರ್ ದಂಧೆ ನಡೆಯುತ್ತಿದೆ, ಇದು ಕಾಂಗ್ರೆಸ್ ಸರಕಾರದ ದುರಾಡಳಿತ ಎಂದರು.
ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಉಸಿರಾಡುವ ಗಾಳಿಗೂ ಟ್ಯಾಕ್ಸ್ ಹಾಕುವುದೊಂದೇ ಬಾಕಿ ಉಳಿದಿದೆ, ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಾಗಿದೆ. ಬೆಲೆ ಏರಿಸಿದ ರಾಜ್ಯ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸರಕಾರದ ವಿರುದ್ಧ ಕರ್ನಾಟಕ ಭಾರತೀಯ ಜನತಾ ಪಕ್ಷದ ಹೋರಾಟ ಹಾವೇರಿಯಲ್ಲಿ ಪ್ರಾರಂಭವಾಗಿದೆ, ರಾಜ್ಯ ಕಾಂಗ್ರೆಸ್ ಸರಕಾರ ಬೆಲೆ ಇಳಿಸುವವವರೆಗೂ ಹೋರಾಟ ನಿಲ್ಲುವುದಿಲ್ಲ, ಜನರ ಮೇಲಿನ ಭಾರವನ್ನು ಇಳಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ಧರಣಿಗೂ ಮುನ್ನ ಸಂಸದ ಬೊಮ್ಮಾಯಿ ಅವರು ಹುತಾತ್ಮ ಶ್ರೀ ಮೈಲಾರ ಮಹಾದೇವಪ್ಪ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಧರಣಿಯಲ್ಲಿ ಬಿ.ಜೆ.ಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಮಾಜಿ ಸಚಿವ ಬಿ.ಸಿ. ಪಾಟೀಲ್, ಮಾಜಿ ಶಾಸಕರಾದ ಶಿವರಾಜ ಸಜ್ಜನ, ವೀರುಪಾಕ್ಷಪ್ಪ ಬಳ್ಳಾರಿ, ಯುವ ಮುಖಂಡ ಭರತ ಬೊಮ್ಮಾಯಿ ಮತ್ತಿತರರು ಮಾತನಾಡಿ ಜನವಿರೋಧಿ ಕಾಂಗ್ರೆಸ್ ಜನ ಹಿತ ಮರೆತು ಬೆಲೆಗಳನ್ನು ಏರಿಸುವ ಮೂಲಕ ದುರಾಡಳಿತ ನಡೆಸಿದೆ. ದರಿದ್ರ- ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಹೋರಾಟ ನಿರಂತರವಾಗಿ ಇರಲಿದೆ ಎಂದು ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಧರಣಿಯಲ್ಲಿ ಪರಮೇಶ್ವರಪ್ಪ ಮೇಗಳಮನಿ, ಗವಿಸಿದ್ದಪ್ಪ ದ್ಯಾಮಣ್ಣವರ್, ವಿಜಯಕುಮಾರ್ ಚಿನ್ನಿಕಟ್ಟಿ, ಭೋಜರಾಜ ಕರೂದಿ, ನಾಗೇಂದ್ರ ಕಟ್ಕೋಳ, ಡಾ.ಸಂತೋಷ ಆಲದಕಟ್ಟಿ ಸೇರಿದಂತೆ ಹಾವೇರಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಮೋರ್ಚಾದ ಪದಾಧಿಕಾರಿಗಳು ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.ಜನರ ಭಾವನೆಯಂತೆ ಬಿಜೆಪಿ ಹೋರಾಟ: ಬಸವರಾಜ ಬೊಮ್ಮಾಯಿ
ಹಾವೇರಿ:ಹಾಲು, ಅಲ್ಲೋಹಾಲು, ಎದ್ಯುತ್ ದರ ಹೆಚ್ಚಳ ಸೇರಿದಂತೆ ಎಲ್ಲದರ ಬೆಲೆ ಹೆಚ್ಚಳ ಮಾಡಿರುವ ಕಾಂಗ್ರೆಸ್ ಸರ್ಕಾರ ಯಾವಾಗ ತೊಲಗಿತ್ತೊ ಅಂತ ಜನರ ಭಾವನೆ ಇದೆ. ಅವರ ಭಾವನೆಯಂತೆ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಗುರುವಾರ ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾದ್ಯಂತ ಜನ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೊರಾಟ ಆರಂಭಿಸಿದೆ. ಪ್ರತಿ ಜಿಲ್ಲೆಯಲ್ಲಿ ಜನಾಕೋಶ ಯಾತ್ರೆ ಆರಂಭಿಸಿದೆ. ಹಾವೇರಿ ಜಿಲ್ಲೆಯಲ್ಲಿ ಅಹೋರಾತ್ರಿ ಹೋರಾಟ ಆರಂಭ ಮಾಡಿದ್ದೇವೆ. ಕರ್ನಾಟಕ ಸರ್ಕಾರ ಎಲ್ಲ ವಸ್ತುಗಳ ಬೆಲೆ ಏರಿಸಿದೆ. ಹಾಲು, ಆಲೊಹಾಲು, ಎಲೆಕ್ಷಿಸಿಟಿ ಸೇರಿದಂತೆ ಎಲ್ಲದರ ಬೆಲೆ ಹೆಚ್ಚಳ ಮಾಡಿದೆ. ಸರ್ಕಾರ ದಿವಾಳಿಯಾಗಿದೆ. ಬರುವಂತಹ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬ ಮಾಹಿತಿ ಇದೆ ಎಂದು ಹೇಳಿದರು. ಭಷಾಚಾರ ತುಂಬಿ ತುಳುಕುತ್ತಿದೆ. ಕಾಂಗ್ರೆಸ್ನ ಶಾಸಕರೇ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಅಂತ ಹೇಳಿದ್ದಾರೆ.
ಪಿಡಬ್ಲ್ಯುಡಿ, ಎಲೆಕ್ನಿಕ್ ಕಾಂಟಾಕ್ಟರ್, ಅಬಕಾರಿ ಗುತ್ತಿಗೆದಾರರು ಎಲ್ಲರೂ ಭ್ರಷ್ಟಾಚಾರ ಹೆಚ್ಚಾಗಿದೆ ಅಂತ ಆರೋಪಿಸಿದ್ದಾರೆ. ಇಷ್ಟೆಲ್ಲಾ ಆದರೂ ಮುಖ್ಯಮಂತ್ರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಬಡವನ ಬದುಕು ಭಾರವಾಗಿದೆ. ಗ್ಯಾರೆಂಟಿಯನ್ನೂ ಸರಿಯಾಗಿ ನೀಡದೇ ದೊಡ್ಡ ಪ್ರಮಾಣದ ತೆರಿಗೆಯ ಭಾರವನ್ನು ಜನರ ಮೇಲೆ ಹಾಕಿದ್ದಾರೆ. ಹಾಲಿನ ಸಬ್ಸಿಡಿ ರೈತರಿಗೆ ಕೊಡುವ ಬದಲು ಹಾಲಿನ ದರ ಹೆಚ್ಚಳ ಮಾಡಿದ್ದಾರೆ. ಅದರ ವಿರುದ್ಧ ಜನರ ಧ್ವನಿಯಾಗಿ ಹೋರಾಟ ನಡೆಸಿದ್ದೇವೆ ಎಂದು ಹೇಳಿದರು.
ಎಲೆಕ್ಷಿಕ್ ಮೀಟರ್ ಅಳವಡಿಕೆಯಲ್ಲಿ ಬಹಳ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಅಂತ ಗುತ್ತಿಗೆದಾರರು ದಾಖಲೆ ಸಮೇತ ಹೇಳಿದ್ದಾರೆ. ಬೇರೆ ರಾಜ್ಯಗಳಲ್ಲಿ ಕೇವಲ ೭೦೦ ರೂ. ಇರುವ ಮೀಟರ್ಗಳಿಗೆ ಐದರಿಂದ ಆರು ಸಾವಿರ ರೂ. ವಸೂಲಿ ಮಾಡುತ್ತಿದ್ದಾರೆ. ಯಾವಾಗ ಈ ಸರ್ಕಾರ ತೊಲಗಿತ್ತೊ ಅಂತ ಜನರ ಭಾವನೆ ಇದೆ. ಅವರ ಭಾವನೆಯಂತೆ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಾತಿ ಗಣತಿ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಾತಿ ಗಣತಿ ವಿಚಾರದಲ್ಲಿ ರಾಜ್ಯ ಸರ್ಕಾರ ಏನು ಮಾಡತ್ತದೆ ಮಾಡಲಿ, ಜಾತಿ ಗಣತಿ ವರದಿಯನ್ನು ಕೊಟ್ಟು ಒಂದು ವರ್ಷವಾಯಿತು. ಸಿಎಂ ಸಿದ್ದರಾಮಯ್ಯ ಅವರು ಅದನ್ನು ಯಾಕೆ ಮುಚ್ಚಿಟ್ಟುಕೊಂಡಿದ್ದಾರೊ ಗೊತ್ತಿಲ್ಲ. ಅವರು ಬಿಡುಗಡೆ ಮಾಡಲು ಏನು ಸಮಸ್ಯೆಯಾಗಿದೆ. ಅವರು ಬಿಡುಗಡೆ ಮಾಡಲಿ ಆ ನಂತರ ಮಾತನಾಡುತ್ತೇನೆ ಎಂದು ಹೇಳಿದರು.