ನಾಟಕಗಳಿಗೆ ಸರ್ಕಾರ ಪ್ರೋತ್ಸಾಹ ನೀಡಲಿ: ಅಭಿನವರುದ್ರ ಚನ್ನಮಲ್ಲಿಕಾರ್ಜುನಶ್ರೀ
ಹಾವೇರಿ: ಸಮಾಜದಲ್ಲಿನ ಅಂಕು-ಡೊಂಕು ತಿದ್ದುವ ಮೂಲಕ ನವ ಸಮಾಜ ನಿರ್ಮಾಣದಲ್ಲಿ ರಂಗಭೂಮಿ ಪಾತ್ರ ಅತ್ಯಂತ ಮಹತ್ತದ್ದಾಗಿದೆ. ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳ ಹಾವಳಿಯಲ್ಲಿ ವೃತ್ತಿರಂಗಭೂಮಿ ಕಲಾ ಪೋಷಕರ ಪ್ರೋತ್ಸಾಹದಿಂದ ಜೀವಂತವಾಗಿದೆ. ಸರ್ಕಾರ ನಾಟಕ ಕಂಪನಿಗಳಿಗೆ, ಕಲಾವಿದರಿಗೆ ಹೆಚ್ಚಿನ ಪೋತ್ಸಾಹ ನೀಡಬೇಕೆಂದು ಇಲ್ಲಿನ ಹರಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮಿಜಿ ಹೇಳಿದರು.
ಶುಕ್ರವಾರ ಇಲ್ಲಿನ ಶ್ರೀವೀರಭದ್ರೇಶ್ವರ ದೇವಸ್ಥಾನದ ಬಯಲಿನಲ್ಲಿ ಶ್ರೀ ಸಂತ ಶರೀಫ ಶಿವಯೋಗಿ ನಾಟ್ಯ ಸಂಘ ತೆಗ್ಗಿಹಳ್ಳಿ ಕಂಪನಿಯ ರಂಗಸಜ್ಜಿಕೆಯಲ್ಲಿ “ಬಳೆಗಾರ ಹನುಮವ್ವ” ನಾಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾಟಕಗಳು ಸಮಾಜದ ಪ್ರತಿಬಿಂಬವಿದ್ದಂತೆ, ಪುರಾತನ ಕಾಲದಲ್ಲಿ ಸಮಾಜದಲ್ಲಿ ಮನೆ ಮಾಡಿದ್ದ ಮೌಢ್ಯವನ್ನು ನಾಟಕಗಳ ಮೂಲಕ ಎತ್ತಿ ತೊರಿಸಲಾಗುತ್ತಿತ್ತು. ನಾಟಕಗಳು ಕೇವಲ ಮನರಂಜನೆಯಲ್ಲ. ಅವುಗಳು ಪ್ರಸ್ತುತ ಸಮಾಜದ ಅಭಿವ್ಯಕ್ತಿಯಾಗಿ ಕೆಲಸ ಮಾಡುತ್ತವೆ. ಇತ್ತಿಚೀನ ದಿನಗಳಲ್ಲಿ ನಾಟಕ ನೋಡುವ ಹವ್ಯಾಸ ಕಡಿಮೆಯಾಗುತ್ತಿದ್ದು, ಹಾವೇರಿಯ ಕಲಾಪೋಷಕರು ನಾಟಕ ನೋಡುವ ಮೂಲಕ ಕಲಾವಿದರಿಗೆ, ಕಂಪನಿಗೆ ಪ್ರೋತ್ಸಾಹ ನೀಡಬೇಕೆಂದು ಅವರು ಕರೆ ನೀಡಿದರು.
ಜೂ.ರಾಜಕುಮಾರ ಅಶೋಕ ಬಸ್ತಿ ಮುಖ್ಯಅತಿಥಿಯಾಗಿ ಮಾತನಾಡಿ “ಕಾವ್ಯೇಶು ನಾಟಕಂ ರಮ್ಯಂ” ಎನ್ನುವಂತೆ “ಕಾವ್ಯಕ್ಕಿಂತ ನಾಟಕವು ರಮ್ಯವಾದದು’. ಇತ್ತಿಚೀನ ದಿನಗಳಲ್ಲಿ ನಾಟಕ ನೋಡುವ ಹವ್ಯಾಸ ಕಡಿಮೆಯಾಗುತ್ತಿದ್ದು, ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಹಾವೇರಿಜಿಲ್ಲೆಯ ಜನತೆ ಕಲಾ ಪೋಷಕರಾಗಿದ್ದು, ಅವರ ಪ್ರೋತ್ಸಾಹದಿಂದ ನಾನು ದೇಶ-ವಿದೇಶಗಳಲ್ಲಿ ನಾಟಕ ಪ್ರದರ್ಶಿಸಲು ಸಾಧ್ಯವಾಗಿದೆ. ಜನತೆ ಹೆಚ್ಚೆಚ್ಚು ನಾಟಕ ನೋಡುವ ಮೂಲಕ ನಮ್ಮ ಜಿಲ್ಲೆಯ ನಾಟಕ ಕಂಪನಿಯ ಉಳುವಿಗೆ, ಕಲಾವಿದರಿಗೆ ಪ್ರೋತ್ಸಹ ನೀಡುವ ಮೂಲಕ ನಾಟಕ ಕಲೆ ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ ಎಂದರು.
ಮುಖ್ಯಅತಿಥಿಗಳಾಗಿ ಪ್ರಮುಖರಾದ ಸುಣಗಾರ, ಜಗದೀಶ ಕನವಳ್ಳಿ, ಉಮೇಶ ವಾಗ, ಹೊನ್ನಪ್ಪ ತಗಡಿನಮನಿ, ಅಶೋಕ ಮರಿಯಮ್ಮನವರ, ಎಸ್.ಜಿ. ಹೊನ್ನಪ್ಪನವರ, ಜಗದೀಶ ಸವಣೂರ ಮತ್ತಿತರರು ಭಾಗವಹಿಸಿದ್ದರು. ಕಂಪನಿಯ ಮಾಲಕ ಖತಾಲಸಾಬ ಬಣಗಾರ ಸ್ವಾಗತಿಸಿದರು. ಮಹಾಂತಗೌಡ ಪಾಟೀಲ ನಿರೂಪಿಸಿದರು.
ಮೊದಲ ಪ್ರದರ್ಶನ ಹೌಸಪುಲ್: ಹಾವೇರಿಯ ಶ್ರೀವೀರಭದ್ರೇಶ್ವರ ದೇವಸ್ಥಾನದ ಬಯಲಿನಲ್ಲಿ ಶ್ರೀ ಸಂತ ಶರೀಫ ಶಿವಯೋಗಿ ನಾಟ್ಯ ಸಂಘ ತೆಗ್ಗಿಹಳ್ಳಿ ಕಂಪನಿಯವರು ಹಾಕಿರುವ ಸುಸಜ್ಜಿತ ರಂಗಸಜ್ಜಿಕೆಯಲ್ಲಿ ಶುಕ್ರವಾರ ಕಂಪನಿಯ ಕಲಾವಿದರು ಅಭಿನಯಿಸಿದ “ಬಳೆಗಾರ ಹನುಮವ್ವ” ನಾಟಕ ನೋಡಲು ಪ್ರೇಕ್ಷಕರು ಮುಗಿಬಿದ್ದಿದ್ದರು. ನಾಟಕದ ಮೊದಲ ಪ್ರದರ್ಶನ ಹೌಸ್ಪುಲ್ ಆಗಿತ್ತು. ಕಂಪನಿಯ ಕಲಾವಿದರ ಅತ್ಯುತ್ತಮ ಅಭಿನಯ ಪ್ರೇಕ್ಷಕರ ಮನಸೂರೆ ಗೊಂಡಿತು.
sub-editor
kourava daily,
haveri