ನಾಯಿದಾಳಿಯಿಂದ ಗರ್ಭಿಣಿ ಕೃಷ್ಣಮೃಗ ರಕ್ಷಿಸಿದ ಶಾಸಕ ಕೋಳಿವಾಡ
ಹಾವೇರಿ: ಸದಾ ರಾಜಕಾರಣವನ್ನೇ ಉಂಡುಟ್ಟು, ಉಸಿರಾಡುವ ಚುನಾಯಿತ ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗಿರುವ ಈದಿನಗಳಲ್ಲಿ ಕೆಲವು ಚುನಾಯಿತರು ಇದಕ್ಕೆ ಹೊರತಾಗಿದ್ದು, ತಾವು ಹೋಗುವ ಸಂದರ್ಭದಲ್ಲಿ ಅಪಘಾತಗಳು ನಡೆದ ವೇಳೆ ಮಾನವೀಯ ಕಾಳಜಿ ತೋರುವ ಮೂಲಕ ಗಾಯಾಳುಗಳ ರಕ್ಷಣೆಗೆ ಧಾವಿಸಿ ತಮ್ಮ ವಾಹನದಲ್ಲಿ ಗಾಯಾಳುಗಳನ್ನು ಚಿಕಿತ್ಸೆಗೆ ರವಾನಿಸುತ್ತಾರೆ. ಇದಕ್ಕೆ ಪೂರಕ ಎನ್ನುವಂತೆ ಹಾವೇರಿಜಿಲ್ಲೆಯ ರಾಣೇಬೆನ್ನೂರು ಕ್ಷೇತ್ರದ ಶಾಸಕ, ಪ್ರಾಣಿ ಪ್ರಿಯರಾಗಿರುವ ಪ್ರಕಾಶ ಕೋಳಿವಾಡ ಅವರು ಅಪರೂಪದ ಹೆಣ್ಣು ಗರ್ಭಿಣಿ ಕೃಷ್ಣಮೃಗದ ಮೇಲೆ ನಾಯಿದಾಳಿ ಮಾಡುತ್ತಿರುವುದನ್ನು ಗಮನಿಸಿ ಗರ್ಭಿಣಿ ಕೃಷ್ಣಮೃಗವನ್ನು ರಕ್ಷಿಸುವ ಮೂಲಕ ಮಾದರಿ ಜನಪ್ರತಿನಿಧಿಯಾಗಿದ್ದಾರೆ.
ಶುಕ್ರವಾರ ಕಾರ್ಯನಿಮಿತ್ತ ಶಾಸಕ ಕೋಳಿವಾಡ ಅವರು ಮೆಡ್ಲೇರಿರಸ್ತೆಯಲ್ಲಿ ತೆರಳುತ್ತಿದ್ದಾಗ ಕೃಷ್ಣಮೃಗ ಅಭಯಾರಣ್ಯದಲ್ಲಿ ನಾಯಿಯೊಂದು ಗರ್ಭಿಣಿ ಕೃಷ್ಣಮೃಗ ಮೇಲೆ ದಾಳಿಮಾಡುತ್ತಿರುವುದನ್ನು ಗಮನಕ್ಕೆ ಬಂದಿದೆ.
ಶಾಸಕರು ಗರ್ಭಿಣಿ ಅವಸ್ಥೆಯಲ್ಲಿರುವ ನಾಯಿಗಳಿಂದ ದಾಳಿ ಆಗಿದ್ದ ಜಿಂಕೆಯನ್ನು ಕಂಡು ಇದನ್ನು ಹೀಗೆ ಬಿಟ್ಟರೆ ಮತ್ತಷ್ಟು ದಾಳಿ ಹಾಗೂ ಅಪಾಯ ಆಗುವ ಸಾಧ್ಯತೆ ನಿರೀಕ್ಷಿಸಿ, ಅರಣ್ಯ ಇಲಾಖೆಯವರ ಗಮನಕ್ಕೆ ತಂದು ಚಿಕಿತ್ಸೆ ನೀಡಲು ತಿಳಿಸಿದ್ದಾರೆ. ಅರಣ್ಯ ಅಧಿಕಾರಿಗಳು ಪರಿವೀಕ್ಷಣ ಮಂದಿರ ಐಬಿಯಲ್ಲಿ ಶನಿವಾರ ಕೃಷ್ಣಮೃಗ ತಂದು ರಕ್ಷಿಸಿ ಅದಕ್ಕೆ ಚಿಕಿತ್ಸೆ ಕೊಡುವ ಕಾರ್ಯ ಪ್ರಾರಂಭಿಸಿದ್ದಾರೆ.