
ಏರುತಿರುವ ತಾಪಮಾನದಿಂದ ಹಾಗೂ ಹೆಗ್ಗೇರೆಕೆರೆಯ ನೀರನ್ನು ನಗರದ ಅಕ್ಕಮಹಾದೇವಿಹೊಂಡಕ್ಕೆ ಹರಿಸಲಾಗುತ್ತಿರುವುದರಿಂದ ಹೆಗ್ಗೇರೆಕೆರೆಯಲ್ಲಿ ನೀರಿನ ಪ್ರಮಾಣವು ಕಡಿಮೆಯಾಗುತ್ತಾ ಬಂದಿದ್ದು, “ಕೆರೆಯ ನೀರಿನಲ್ಲಿ ಮುಳುಗಿದ್ದ ಮರ-ಗಿಡದ ಒಣಗಿದ ಟೊಂಗೆಗಳು ಕಾಣಿಸುತ್ತ್ತಿವೆ. ಈಟೊಂಗೆಗಳಲ್ಲಿ ಆಗಾಗ ನೀರುಕಾಗೆಗಳು ಮೀನುಬೇಟೆಯಾಡಿ ವಿಶ್ರಮಿಸುತ್ತವೆ. ಮಾ.೨೧ರಂದು ಗುರುವಾರ ನಾನು ಹೆಗ್ಗೇರೆಕೆರೆಗೆ ಭೇಟಿ ನೀಡಿದ ವೇಳೆ ನೀರುಗಾಗೆಯೊಂದು (ದೊಡ್ಡ ಕಾರ್ಮೊರೆಂಟ್) ನೀರಾಟವಾಡುತ್ತಿದ್ದವೇಳೆ ಕೆಲವು ಛಾಯಾಚಿತ್ರಗಳನ್ನು ಸೆರೆಹಿಡಿದಿರುವೆ.
“ಕಾಗೆಗಳ ಹಾಗೆ ನೀರುಕಾಗೆಗಳು ಅಪ್ಪಟ ಕಪ್ಪು. ಚುರುಕಿನ ಚಲನ-ವಲನ. ಸದಾಜಾಗೃತಾವಸ್ಥೆ. ಎಲ್ಲೆಲ್ಲಿ ನೀರು ಕಡಿಮೆ ಇದೆಯೋ ಅಲೆಲ್ಲಾ ಗುಂಪಾಗಿ ಸೇರಿಕೊಂಡು ನೀರಿನಲ್ಲಿ ಮುಳುಗಿ ಮೀನುಗಳನ್ನು ಬೆನ್ನುಹತ್ತಿ ಹೋಗಿ ಹಿಡಿಯುವುದು ನೀರು ಕಾಗೆಯ ಸ್ವಭಾವ”. “ನೀರು ಕಾಗೆ ಸಣ್ಣಗಾತ್ರದ ಕುತ್ತಿಗೆಯಿಂದ ಸಾಮಾನ್ಯ ದೇಹಗಾತ್ರದಲ್ಲಿ ಕೊಕ್ಕರೆಯನ್ನು ಹೋಲುತ್ತದೆ.
“ಇವು ಸಾಮಾನ್ಯವಾಗಿ ಕೆರೆ, ನದಿ ಹಾಗೂ ಹಳ್ಳಗಳ ಬಳಿ ವಾಸಿಸುತ್ತವೆ. ನೀರಿನಲ್ಲಿ ಮುಳುಗಿಯೂ ಒದ್ದೆಯಾಗದ ಗರಿಗಳು ಇವಕ್ಕೆ ಪೃಕೃತಿ ದತ್ತ ಕೊಡುಗೆಗಳು”. ಭೇಟೆಯಾಡಿದ ನಂತರ ಇವು ಮರದಟೊಂಗೆಯಲ್ಲಿ, ಇಲ್ಲವೇ ಬಂಡೆ ಇಲ್ಲವೇ ನೆಲದ ಮೇಲೆ ಕುಳಿತು ಮಾರುದ್ದ ರೆಕ್ಕೆಯನ್ನು ಹರಡಿಕೊಂಡು ಗಂಟೆಗಟ್ಟಲೆ ಬಿಸಿಲು ಕಾಸುವುದು ಇವುಗಳ ಸ್ವಭಾವ. “ಇವು ನೀರಿನಲ್ಲಿ ಮುಳುಗಿಕೊಂಡು ಬಹಳಷ್ಟು ದೂರಕ್ಕೆ ಹೋಗಬಲ್ಲದು. ಬೇಟೆಯನ್ನು ಬೆಂಬತ್ತಿ ಹೋಗುವಾಗ ಸುಮಾರು ಎರಡು ನಿಮಿಷಗಳ ಕಾಲ ನೀರಿನಲ್ಲಿ ಮುಳುಗಿಯೇ ಇರುವ ಸಾಮರ್ಥ್ಯ ಇವುಗಳಿಗೆ ಇದೆ”.
ದೂರಕ್ಕೆ ಹಾರಿಹೋಗುವಾಗ ಅತ್ಯಂತ ಎತ್ತರದಲ್ಲಿ ಹಾರುತ್ತವೆ. ಹಾರುವಾಗ ಗುಂಪಿನಲ್ಲಿ ಒಂದು ಹಕ್ಕಿ ಮುಂದಕ್ಕೆ, ಉಳಿದವು ಅದರ ಹಿಂದೆ ಬಾಣದ ಮಾದರಿಯಲ್ಲಿ ಹಾರುತ್ತವೆ. ರಾತ್ರಿಯಾದಂತೆ ಎತ್ತರದ ಮರಗಳ ಮೇಲೆ ಆಶ್ರಯ ಪಡೆಯುತ್ತವೆ. ನಿಶ್ಯಬ್ದವಾಗಿರುವುದು ಇವುಗಳ ಸ್ವಭಾವ. ಬಲವಾದ ಕೊಕ್ಕು, ಸದೃಢ ಕಾಲುಗಳು ಚುರುಕು ಕಣ್ಣು, ಮತ್ತು ಶಬ್ದ ಗ್ರಹಿಸುವ ಶಕ್ತಿ ಇದಕ್ಕಿದೆ. “ಈ ಹಕ್ಕಿಯ ಮರಿಗಳು ಹಾರುವುದನ್ನು ಕಲಿಯುವುದಕ್ಕಿಂತ ಮುಂಚೆಯೇ, ಈಜಾಡುವುದನ್ನು ಕಲಿಯುತ್ತವೆ! ಪ್ರಾಣರಕ್ಷಣೆಗಾಗಿ ವೈರಿಯಿಂದ ತಪ್ಪಿಸಿಕೊಳ್ಳಲು ನೀರಿಗೆ ಧುಮುಕುತ್ತವೆ”.
ಚಿತ್ರ/ಮಾಹಿತಿ: ಮಾಲತೇಶ ಅಂಗೂರ, ವನ್ಯಚೀವಿ ಛಾಯಾಗ್ರಾಹಕ, ಹಾವೇರಿ.
—