ಬರಿದಾಗಿರುವು ತುಂಗಭದ್ರಾನದಿಯ ಪಾತ್ರ.
ನೀರು… ನೀರು…. ನೀರು………. ಹಾವೇರಿಯಜನರ ಕಣ್ಣಲ್ಲಿ ಕಣ್ಣೀರು!
ಹಾವೇರಿ: ಅರೆಮಲೆನಾಡ ಖ್ಯಾತಿಯ ಹಾವೇರಿ ನಗರದ ಜನತೆ ಅಕ್ಷರಶಃ ನೀರಿನ ಸಮಸ್ಯೆಯಿಂದ ನಲುಗಿಹೋಗಿದ್ದಾರೆ. ನಗರದಲ್ಲಿನ ೩೧ವಾಡಗಳಲ್ಲಿ ನೀರು… ನೀರು ನೀರು ಎಲ್ಲೆಲ್ಲಿಯೂ ನೀರಿನದೇ ಕೂಗು. ದಿನೇ ದಿನ. ಜನ ಪರಿ ತಪ್ಪಿಸುತ್ತಿರುವುದು ಮುಂದುವರಿದಿದೆ. ಓಣಿ ಓಣಿಗಳಲ್ಲಿ ಕೊಡಗಳನ್ನು ಹಿಡಿದು ಜನರು ನೀರು ತರಲು ಓಡಾಡುತ್ತಿದ್ದಾರೆ. ನಗರದಲ್ಲಿ ಕೊರೆಸಿದ್ದ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಫೆ.೩ನೇವಾರದಲ್ಲಿಯೇ ಭೀಕರ ಜಲಕ್ಷಾಮ ಎದುರಾಗಿದ್ದು ಏಪ್ರೀಲ್-ಮೇ ತಿಂಗಳಲ್ಲಿ ಪರಿಸ್ಥಿತಿ ಹೇಗೆ? ಮುಂದೆ ಏನು? ಎನ್ನುವ ಅಂತಕ ಜನರನ್ನ ಕಾಡಲಾರಂಭಿಸಿದೆ.
ನೀರು ಪೂರೈಕೆಯಲ್ಲಿ ಅಡಳಿತ ವಿಫಲ: ಜಿಲ್ಲಾ ಕೇಂದ್ರವಾಗಿ ಕೆಲವು ಕ್ಷೇತ್ರಗಳಲ್ಲಿ ಬೆಳವಣಿಗೆಯ ಹಾದಿಯಲ್ಲಿರುವ ಹಾವೇರಿನಗರದಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ನಗರದ ಯಾವುದೇ ವಾರ್ಡ್ಗಳಿಗೆ ಹೋದರೂ ಅದರಲ್ಲೂ ಬಡವರು-ಕಡು ಬಡವರು ಮತ್ತು ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ನಾಗೇಂದ್ರನಮಟ್ಟಿ, ನೆಹರು ನಗರ, ಶಾಂತಿನಗರ, ಹೊಸನಗರ, ಕೂಲಿಯವರ ಓಣಿ, ಶಿವಬಸವನಗರ, ಶಿವಯೋಗೇಶ್ವರನಗರ ಸೇರಿದಂತೆ ನಗರದ ಕೆಲವು ಓಣಿಗಳಲ್ಲಿ ಕೊರೆಸಲಾಗಿದ್ದ ಕೊಳವೆಬಾವಿಗಳು ಬತ್ತಿರುವ ಕಾರಣಕ್ಕೆ, ಇರುವ ಕೊಳೆವಬಾವಿಗಳು ಬಿಟ್ಟು, ಬಿಟ್ಟು ನೀರು ಒಗೆಯುವ ಕಾರಣಕ್ಕೆ ನೀರಿಗಾಗಿ ಇಲ್ಲಿನ ಜನ ಕೊಡಗಳನ್ನು ತಳ್ಳುಗಾಡಿಗಳಲ್ಲಿಟ್ಟುಕೊಂಡು ನೀರು ಅರಸಿಕೊಂಡು ಬೀದಿ ಬೀದಿ ಸುತ್ತುವುದು ಸಾಮಾನ್ಯವಾಗಿದೆ.
ನಗರಕ್ಕೆ ಕುಡಿಯುವ ನೀರು ಸರಬರಾಜಿಗಾಗಿ ಕರ್ಜಗಿಯ ಬಳಿ ವರದಾ ಮತ್ತು ಕಂಚಾರಗಟ್ಟಿಯ ಬಳಿಯ ತುಂಗಭದ್ರಾ ನದಿಯಿಂದ ನೀರು ಸರಬರಾಜಿಗೆ ಎರಡು ಯೋಜನೆಗಳಿದ್ದು, ಈ ಎರಡು ಯೋಜನೆಗಳು ನದಿಯಲ್ಲಿ ನೀರಿಲ್ಲದ ಕಾರಣಕ್ಕೆ ಸ್ಥಗಿತಗೊಂಡು ತಿಂಗಳುಗಳೆ ಉರುಳಿವೆ. ಈ ಎರಡು ಯೋಜನೆಗಾಗಿ ನಗರಸಭೆಯಿಂದ ಕೋಟಿ, ಕೋಟಿ ಹಣ ಖರ್ಚುಮಾಡಲಾಗಿದೆ. ಈಗಲೂ ನಿರಂತರವಾಗಿ ಹಣ ಖರ್ಚುಮಾಡಲಾಗುತ್ತಿದೆ. ಆದರೆ, ಈ ಬೇಸಿಗೆಯಲ್ಲಿ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ನೀರು ಸಂಗ್ರಹಿಸಿ ಸರಬರಾಜು ಮಾಡುವಲ್ಲಿ ನಗರಸಭೆಯ ಅಧಿಕಾರಿಗಳು ವಿಫಲವಾಗಿದ್ದಾರೆ.
ಕುಸಿದ ಅಂತರ್ಜಲ: ಎರಡುನದಿಗಳಲ್ಲಿ ಮಳೆಗಾಲದ ಸಂರ್ದರ್ಭದಲ್ಲಿ ನೀರು ಹರಿಯುತ್ತಿದ್ದ ವೇಳೆ ನಗರದ ನೀರಿನ ಜೀವನಾಡಿಯಾಗಿದ್ದ ಹೆಗ್ಗೇರೆಕೆರೆಗೆ ನೀರು ಹರಿಸಿ ಸಂಗ್ರಹಸಿದ್ದರೇ ಇಂದು ಈ ಸ್ಥಿತಿ ಬರತ್ತಿರಲಿಲ್ಲ. ಆದರೆ ಆಡಳಿತ ಮಂಡಳಿಯ ನಿರಾಸಕ್ತಿ, ಚುನಾಯಿತ ಪ್ರತಿನಿಧಿಗಳ ನಿಷ್ಕಾಳಜಿಯಿಂದಾಗಿ ಕೆರೆ ಅಭಿವೃದ್ಧಿಯಾಗದೇ ನೀರು ಸಂಗ್ರಹಿಸದ ಕಾರಣಕ್ಕೆ ಕೆರೆಯಲ್ಲಿ ನೀರಿಲ್ಲ. ಇದರಿಂದ ನಗರದಲ್ಲಿ ಅಂತರ್ಜಲ ಕುಸಿತ ಉಂಟಾಗಿ ನಗರ ವ್ಯಾಪ್ತಿಯಲ್ಲಿದ್ದ ನಗರಸಭೆಯಿಂದ ನಿರ್ವಹಿಸಲಾಗುತ್ತಿರುವ ೪೨೧ ಬೋರ್ವೆಲ್ಗಳ ಪೈಕಿ ಈಗಾಗಲೇ ಅಂದಾಜು ೨೫ಕ್ಕೂ ಹೆಚ್ಚ ಬೋರ್ವೆಲ್ಗಳು ನಿಂತು ಹೋಗಿದ್ದು, ಬೋರ್ ವೆಲ್ಗಳಿಂದ ಪ್ರತಿನಿತ್ಯ ಉತ್ಪತ್ತಿಯಾಗುತ್ತಿದ್ದ ನೀರಿನ ಪ್ರಮಾಣದಲ್ಲಿ ಬೇಸಿಗೆಯ ಈ ದಿನಗಳಲ್ಲಿ ದಿಢೀರ ಕುಸಿತವಾಗದೆ.
ನಗರದ ಬಹುತೇಕ ವಾರ್ಡ್ಗಳಿಗೆ ನೀರುಣಿಸುತ್ತಿದ್ದ ಕೊಳವೆ ಮಾರ್ಗಗಳು ದಿಢೀರ್ ನಿಂತ ಹಿನ್ನೆಲೆಯಲ್ಲಿ ಹಲವು ವಾರ್ಡಗಳಲ್ಲಿ ಸಹಜವಾಗಿಯೇ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗತೊಡಗಿದೆ. ಇನ್ನು ಮೈಲಾರದಲ್ಲಿ ಫೆ.೨೪ರಂದು ನಡೆಯುವ ಮೈಲಾರಲಿಂಗೇಶ್ವರ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನಲೆಯಲ್ಲಿ ತುಂಗಭದ್ರಾನದಿಗೆ ಶಿವಮೊಗ್ಗದ ಬಳಿ ಭದ್ರಾ ಜಲಾಶಯದಿಂದ ನೀರು ಬಿಡಲಾಗಿದೆ. ಈ ನೀರು ಕಂಚಾರಗಟ್ಟಿಯ ಬಳಿ ಹರಿದ ಬರಲು ಇನ್ನು ನಾಲ್ಕಾರು ದಿನಗಳು ಬೇಕಾಗಬಹುದು. ಜಲಾಶಯದಿಂದ ಹರಿದು ಬರುವ ನೀರನ್ನು ಹಿಡಿದಿಟ್ಟುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣಕ್ಕೆ ನೀರು ತಾತ್ಕಾಲಿಕ ಮರಳಿನ ಜೀಲಗಳ ತಡೆಗೋಡೆಯನ್ನು ಸೀಳಿಕೊಂಡು ಮುಂದೆ ಹೋಗುತ್ತದೆ. ಜಾಕ್ವೆಲ್ಗೆ ನೀರು ಸಿಗದೇ ನೀರು ಸರಬರಾಜು ಸ್ಥಗಿತವಾಗತ್ತದೆ೩ ಹಾವೇರಿ ಜನರಿಗೆ ಅತ್ತ ನದಿಯ ನೀರು ಇಲ್ಲ, ಇತ್ತ ಕೊಳವೆಬಾವಿ ನೀರು ಇಲ್ಲ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗತ್ತದೆ.
ಟ್ಯಾಂಕರ್ ನೀರಿಗೆ ಅಧಿಕ ಬೇಡಿಕೆ: ನಗರದಲ್ಲಿ ಕುಡಿಯುವ ನೀರನ ಸಮಸ್ಯೆ ತೀವ್ರಗೊಳ್ಳುತ್ತಿರುವಂತೆಯೇ ಟ್ಯಾಂಕರ್ ನೀರಿಗೆ ಬೇಡಿಕೆ ಹೆಚ್ಚಾಗಿದೆ. ಬಡವರು ನೀರಿಗಾಗಿ ಬೀದಿ ಬೀದಿ ಅಲೆಯುತ್ತಿದ್ದಾರೆ. ಆರ್ಥಿಕವಾಗಿ ಸ್ಥಿತಿವಂತರು, ಸಾಮಾನ್ಯ ಜನರು ಟ್ಯಾಂಕರ್ಗಳ ಮೂಲಕ ನೀರು ತರಿಸಿಕೊಂಡು ತಮ್ಮ ನೀರಿನ ಬವಣೆ ನೀಗಿಸಿಕೊಳ್ಳುತ್ತಿದ್ದಾರೆ. ನಗರದಲ್ಲಿ ಟ್ಯಾಂಕರ್ ನೀರಿಗೆ ಬಾರಿ ಬೇಡಿಕೆ ಬಂದಿದೆ. ನಗರದ ವಿವಿಧ ಕಡೆಗಳಲ್ಲಿ ೨ಎರಡು ಸಾವಿರ ಲೀಟರ್ ಟ್ಯಾಂಕಿಗೆ ೪೦೦ ರಿಂದ ೪೫೦ರೂಗಳವರೆಗೆ ದರ ನಿಗದಿ ಪಡಿಸಲಾಗಿದೆ. ತೀವ್ರ ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕೆಂದು ಬಿಎಸ್ಪಿ ಜಿಲ್ಲಾ ಅಧ್ಯಕ್ಷ ಅಶೋಕ ಮರಣ್ಣನವರ ಆಗ್ರಹವಾಗಿದೆ.
ನಗರದ ೩೧ ವಾರ್ಡ್ ಗಳಲ್ಲೂ ಈ ಸುಡು ಬಿಸಿಲ ಬೇಸಿಗೆಯಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಜನಪ್ರತಿನಿಧಿಗಳು ಜನರ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಲೋಕಸಭಾ ಚುನಾವಣೆಯ ಬಗ್ಗೆ ಚಿಂತಿಸುತ್ತಿದ್ದಾರೆ. ಒಂದು ಕೊಡ ನೀರನ್ನು ೨ ರಿಂದ ೩ ರೂ. ಕೊಟ್ಟು ಖರೀದಿ ಮಾಡಬೇಕಾಗಿದೆ. ಬಡವರು ವಾಸಿಸುವ ಪ್ರದೇಶಗಳಿಗೆ ನಗರಸಭೆಯ ಅಧಿಕಾರಿಗಳು ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದರೆ ಜನರೊಂದಿಗೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.