
ಪತ್ರಿಕಾರಂಗಕ್ಕೆ ಸರ್ಕಾರ
ಸಂವಿಧಾನಿಕ ಗುರುತು ನೀಡಬೇಕು: ಕುನ್ನೂರ
ಹಾವೇರಿ : ಪತ್ರಿಕಾ ರಂಗಕ್ಕೆ ಪ್ರಾತಿನಿಧ್ಯ ಸಿಗುವ ನಿಟ್ಟಿನಲ್ಲಿ ಸರ್ಕಾರಗಳು ವಿಶೇಷ ಕಾನೂನುಗಳನ್ನು ರಚಿಸಿ ಪತ್ರಿಕಾರಂಗಕ್ಕೆ ಶಕ್ತಿ ತುಂಬಬೇಕಾದ ಅಗತ್ಯವಿದೆ. ಹೆಸರಿಗೆ ಮಾತ್ರ ನಾಲ್ಕನೇ ಅಂಗ ಎನ್ನುವ ಪತ್ರಿಕಾರಂಗಕ್ಕೆ ಸಂವಿಧಾನಿಕ ಗುರುತು ನೀಡಬೇಕೆಂದು ಮಾಜಿ ಸಂಸದ ಹಾಗೂ ಮಾಜಿ ಶಾಸಕ ಮಂಜುನಾಥ ಕುನ್ನೂರ ಆಶಯ ವ್ಯಕ್ತಪಡಿಸಿದರು.
ಶಿಡ್ಲು- ಕೌರವ ಪತ್ರಿಕಾ ಬಳಗದ ವತಿಯಿಂದ ಶಿಗ್ಗಾಂವ ತಾಲೂಕಿನ ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಉದಯೋನ್ಮುಖ ವರದಿಗಾರರ ಜಿಲ್ಲಾಮಟ್ಟದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದಲ್ಲಿ ಬರೆಯದೇ ಇದ್ದರೂ ತನ್ನ ಕೆಲಸದ ಮೂಲಕವೇ ಪತ್ರಿಕಾರಂಗ ಗುರುತಿಸಿಕೊಂಡು ಸಮಾಜದ ನಾಲ್ಕನೇ ಆಧಾರ ಸ್ಥಂಭ ಎಂದು ಗುರುತಿಸಿಕೊಂಡಿದೆ. ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ. ಎಲ್ಲಾ ವ್ಯವಸ್ಥೆಗಳಲ್ಲಿ ಶಿಸ್ತನ್ನು ಮೂಡಿಸುವಲ್ಲಿ ಪತ್ರಿಕೆಗಳ ಅಥವಾ ಮಾಧ್ಯಮಗಳ ಪಾತ್ರ ಮುಖ್ಯವಾಗಿದೆ. ಇಂದು ಪತ್ರಿಕೆಗಳನ್ನು ಓದುವವರ ಸಂಖ್ಯೆ ಕ್ಷೀಣಿಸುತ್ತಿರುವುದು ವಿಷಾಧಕರ. ಆದರೆ ಓದು ನಮ್ಮ ಜ್ಞಾನವನ್ನು ಎಂದಿಗೂ ಹೆಚ್ಚಿಸುವ ಮಾರ್ಗ ಎಂಬುದನ್ನು ಇಂದಿನ ಯುವ ಸಮುದಾಯ ಮರೆತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹೊಸದಿಗಂತ ಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯ ಮುಖ್ಯಸ್ಥರವಾದ ವಿಠ್ಠಲದಾಸ ಕಾಮತ್ ಮಾತನಾಡಿ, ಪತ್ರಿಕೆಗಳು ಸಮಾಜದ ಕಣ್ಣು ಎಂಬುದನ್ನು ಎಲ್ಲರೂ ನೆನಪಿಡಬೇಕು. ಅಕ್ಷರ ಸಂಗಾತ ನಮ್ಮ ದಿನನಿತ್ಯದ ಬದುಕಿನ ಭಾಗ ಆಗಬೇಕಿದೆ. ಪ್ರತಿ ವೃತ್ತಿಗೆ ಜ್ಞಾನವೇ ಅಡಿಪಾಯ ಎಂಬುದನ್ನು ಎಲ್ಲರೂ ನೆನಪಿಡಬೇಕು, ಜ್ಞಾನವಿದ್ದರೇ ಎಂಥದೇ ವೃತ್ತಿಯನ್ನಾದರೂ ನಿರಾಯಾಸವಾಗಿ ನಿರ್ವಹಿಸಬಹುದು. ಈ ಜ್ಞಾನ ನಿಮಗೆ ದಿನನಿತ್ಯದ ಪತ್ರಿಕೆಗಳನ್ನು ಓದುವುದರಿಂದ ಮಾತ್ರ ಸಿಗಲು ಸಾಧ್ಯ. ಇನ್ನು ಪ್ರತಿ ಹಂತದಲ್ಲೂ ಶಿಕ್ಷಣ ಅಥವಾ ಮಾರ್ಕ್ಸ್ಕಾರ್ಡ್ ಅಂತಿಮವಲ್ಲ. ಏಕೆಂದರೆ ನೀವು ಕಲಿತ ಶಿಕ್ಷಣಕ್ಕೂ ನೀವು ಮಾಡುವ ಉದ್ಯೋಗಕ್ಕೂ ಸಾಕಷ್ಟು ವ್ಯತ್ಯಾಸ ಇರುವುದನ್ನು ಸಮಾಜದಲ್ಲಿನ ಸಾಧಕರಿಂದ ನೋಡಿ ತಿಳಿಯಬಹುದಾಗಿದೆ ಎಂದು ಹಲವು ಉದಾಹರಣೆಗಳನ್ನು ನೀಡಿದರು.
ಪತ್ರಿಕೋದ್ಯಮ ಅಥವಾ ಜರ್ನಲಿಸಂ ಎಂಬುದು ಉದ್ಯೋಗ ಅಥವಾ ವೃತ್ತಿ ಎಂದು ಮಾತ್ರ ಪರಿಗಣಿಸದೇ ಅದನ್ನು ವೃತವಾಗಿ ಪಾಲಿಸಿದಾಗ ಅದರಲ್ಲಿ ಯಶಸ್ಸು ಪಡೆಯಲು ಸಾಧ್ಯ. ಇದನ್ನು ವೃತ್ತಿಯಾಗಿ ಸ್ವೀಕರಿಸುವ ಜತೆಗೆ ಸಮಾಜ ಸುಧಾರಣೆಯ ಮಾರ್ಗವಾಗಿ ಅನುಸರಿಸಿದಾಗ ಯಶಸ್ಸಿನ ಮೆಟ್ಟಿಲು ಏರಬಹುದು. ಈ ಹಿಂದಿನಂತೆ ಪತ್ರಿಕೋದ್ಯಮ ಇಂದಿಲ್ಲ, ಉತ್ತಮ ಬರಹಗಾರನಿಗೆ ಇಲ್ಲಿ ಉತ್ತಮವಾದ ವೇತನನೂ ಇದೆ. ಅದೇ ರೀತಿ ನಾವಿನ್ಯತೆ, ಕ್ರಿಯಾಶೀಲತೆ ಅಳವಡಿಸಿಕೊಂಡವರು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲಿದೆ. ಆದರೆ ಇದನ್ನು ಪವಿತ್ರತೆಯೊಂದಿಗೆ ನಾವು ಮುಂದುವರೆಸಿದಾಗ ಮಾತ್ರ ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಸಲಹೆ ನೀಡಿದರು.
ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಸುರೇಶ ಜಂಗಮಶೆಟ್ಟಿ ಮಾತನಾಡಿ, ಇಂದು ಪತ್ರಿಕೋದ್ಯಮ ಬದಲಾವಣೆಗೆ, ಡಿಜಿಟಲ್ ಯುಗಕ್ಕೆ ಹೆಚ್ಚು ಹೆಚ್ಚಾಗಿ ತೆರೆದುಕೊಳ್ಳುತ್ತಿದೆ. ಆದರೆ ಬರವಣಿಗೆ, ವಿಶ್ಲೇಷಣೆ, ತಾಂತ್ರಿಕತೆ ಅಳವಡಿಕೆಯೊಂದಿಗೆ ಪತ್ರಿಕೋದ್ಯಮ ವಿದ್ಯಾರ್ಥಿಗಳು ಮುಂದುವರೆಯಬೇಕೆಂದು ಸಲಹೆ ಮಾಡಿದ ಅವರು, ಇಂದು ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚು ಸ್ಪರ್ಧೆ ಇದ್ದು ಇದನ್ನು ಸಮರ್ಥವಾಗಿ ಎದುರಿಸಬೇಕೆಂದಲ್ಲಿ ಕೌಶಲಗಳನ್ನು ಮೂಲದಲ್ಲಿಯೇ ಅಳವಡಿಸಿಕೊಳ್ಳಬೇಕೆಂದು ಸಲಹೆ ಮಾಡಿದರು.
ಪತ್ರಿಕೋದ್ಯಮ ವಿಷಯ ಕುರಿತು ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ಉಪನ್ಯಾಸ ನೀಡಿದರು. ಹಾವೇರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಜ ಕುರವತ್ತೇರ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಎಂ. ಸತ್ಯಪ್ಪನವರ ಉಪಸ್ಥಿತರಿದ್ದರು. ಶಿಡ್ಲು -ಕೌರವ ದಿನಪತ್ರಿಕೆ ಸಂಪಾದಕ ಶಿವಯೋಗಿ ಮಹಾನುಭಾವಿಮಠ ಪ್ರಾಸ್ಥಾವಿಕವಾಗಿ ಮಾತನಾಡಿದರು. ಮಾಲತೇಶ ಅಂಗೂರ ಸ್ವಾಗತಿಸಿದರು, ಮುರುಗೇಶ ಮಹಾನುಭಾವಿಮಠ ವಂದಿಸಿದರು.

