ಹಾವೇರಿ: ಸದಾ ಮೌನಿಯಾಗಿದ್ದು , ಮೇಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹೇಳಿದ ಮಾತುಗಳನ್ನು ಚಾಚು ತಪ್ಪದೇ ಪಾಲಿಸುತ್ತಾ ತನ್ನ ಪಾಡಿಗೆ ಪೌರ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ ರಂಗಪ್ಪ ಹೆರಕಲ್ಲ(೫೪) ಹಾವೇರಿನಗರಸಭೆಯಲ್ಲಿ ಹಾಗೂ ಸಾರ್ವಜನಿಕವಾಗಿ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದ. ಸೋಮವಾರ ಆತನ ಸಾವಿನ ಸುದ್ದಿ ಹರುಡುತ್ತಿದ್ದಂತೆಯೇ ಹಾವೇರಿ ಜನತೆ ಹಾಗೂ ನಗರಸಭೆಯ ಅಧಿಕಾರಿಗಳು, ಪೌರಕಾರ್ಮಿಕರು, ಆಡಳಿತ ಮಂಡಳಿಯವರು ರಂಗಪ್ಪನ ಕರ್ತವ್ಯ ದಕ್ಷತೆ ಸ್ಮರಿಸಿ ಮಮ್ಮಲ ಮರಗಿದರು.
ಹಾವೇರಿ ನಗರದಲ್ಲಿ ಬರ್ತಡೆ ಬ್ಯಾನರ್ ತೆರವು ವಿಚಾರಕ್ಕೆ ಜೂ.೫ಕ್ಕೆ ಆರಂಭವಾದ ಸಂಘರ್ಷದಲ್ಲಿ ಅಮಾಯಕ ಪೌರಕಾರ್ಮಿಕ ತನ್ನ ಮೇಲಾಧಿಕಾರಿಗಳ ಆದೇಶ ಪಾಲಿಸಿ ಬ್ಯಾನರ್ ತೆರವುಗೊಳಿಸಿದ್ದೇ ಆತನ ಜೀವಕ್ಕೆ ಕಂಟಕವಾಗಿ ಪರಿಣಿಸಿತು. ಬ್ಯಾನರ್ ತೆರವುಗೊಳಿಸಿದ್ದ ರಂಗಪ್ಪನ ಮೇಲೆ ಅಮಾನುಷವಾಗಿ ಜಗಳ ಕಾಯ್ದು ಬಟ್ಟೆಗಳನ್ನೆಲ್ಲ ಹರಿದುಕೊಂಡು ಅವಾಚ್ಚ ಶಬ್ದಗಳಿಂದ ನಿಂದಿಸಿದ ಘಟನೆಯಿಂದ ಮಾನಸಿಕವಾಗಿ ಜರ್ಜಿತನಾಗಿದ್ದ ರಂಗಪ್ಪ ಕರ್ತವ್ಯದ ಮೇಲಿದ್ದಾಗಲೇ ವಿಷ ಸೇವಿಸಿದ್ದ, ಇತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇತ ಜೂ.೨೩ರಂದು ಸಾವನ್ನಪ್ಪಿದ್ದ.
ರೈಲ್ವೆ ನಿಲ್ದಾಣರಸ್ತೆಗೆ ಹೊಂದಿಕೊಂಡಿರುವ ರಂಗಪ್ಪನ ನಿವಾಸಕ್ಕೆ ಮಂಗಳವಾರ ಮಾಧ್ಯಾಹ್ನ ಆತನ ಶವ ತರಲಾಯಿತು. ಕುಟುಂಬದ ಆಕ್ರಂದನದ ನಡುವೆ ಮನೆಯಲ್ಲಿ ವಿಧಿ-ವಿಧಾನಗಳನ್ನು ನೆರವೇರಿಸಿ ಆತನ ಅಂತ್ಯಕ್ರಿಯೆ ಯಾತ್ರೆ ಹೊರಟು ನಗರಸಭೆಯ ಕಾರ್ಯಾಲಯದ ಬಳಿ ಆಗಮಿಸಿ ವೇಳೆ, ನಗರಸಭೆಯ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಗರಸಭಾ ಸದಸ್ಯ ಸಂಜೀವಕುಮಾರ ನೀರಲಗಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿರಕೋಳ, ಎಇಇ ಸುಭಾಸ್ ಕಂಬಳಿ ಹಾಗೂ ನಗರಸಭೆಯ ಇತರೇ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು, ಸಾರ್ವಜನಿಕರು, ದಲಿತ ಸಂಘಟನೆಗಳ ಪ್ರಮುಖರು ರಂಗಪ್ಪನ ಹೆರಕಲ್ಲ ಅವರ ಶವಕ್ಕೆ ಹೂಮಾಲೆ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು.
ಈ ವೇಳೆ ಕೆಲವರು ಶವವಾಹನ ತಡೆದು ರಂಗಪ್ಪ ಹೆರಕಲ್ಲ ಸಾವಿಗೆ ನ್ಯಾಯಸಿಗಬೇಕು, ಪೌರಕಾರ್ಮಿಕರು ಜೀವ ಭಯದಲ್ಲಿದ್ದಾರೆ. ಅವರಿಗೆ ಸೂಕ್ತ ರಕ್ಷಣೆ ಕೊಡಬೇಕು, ರಂಗಪ್ಪನ ಕುಟುಂಬದವರಿಗೆ ಅನುಕಂಪದ ನೌಕರಿ ಕೊಡಬೇಕು, ಸ್ಥಳದಲ್ಲಿಯೇ ಪರಿಹಾರ ಘೋಷಣೆ ಮಾಡಬೇಕು, ಆರೋಪಿಗಳನ್ನು ಗಡಿಪಾರುಮಾಡಬೇಕು, ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರಬೇಕು, ಅಲ್ಲಿಯವರೆಗೆ ಶವದ ವಾಹನ ಕದಲಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಪ್ರಮುಖರಾದ ಪರಮೇಶ್ವರಪ್ಪ ಮೇಗಳಮನಿ, ಬಸವರಾಜ ಹೆಡಿಗೊಂಡ, ಉಡಚಪ್ಪ ಮಾಳಗಿ, ಅಶೋಕ ಮರೆಣ್ಣನವರ, ಡಿ.ಎಸ್.ಮಾಳಗಿ, ನಾಗರಾಜ ಮಾಳಗಿ, ರಮೇಶ ಆನವಟ್ಟಿ, ಹೊನ್ನಪ್ಪ ಮತ್ತಿತರರು ಮಾತನಾಡಿ ಆರೋಪಿಗಳನ್ನು ತಕ್ಷಣ ಗಡಿಪಾರು ಮಾಡಬೇಕು, ಯಾವುದೇ ಕಾರಣಕ್ಕೂ ಅವರಿಗೆ ಜಾಮೀನು ನೀಡಬಾರದು, ತಪ್ಪಿತಸ್ತ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಪೌರಕಾರ್ಮಿಕರಿಗೆ ಸೂಕ್ತ ರಕ್ಷಣೆ ನೀಡಬೇಕು, ರಂಗಪ್ಪನ ಕುಟುಂಬಕ್ಕೆ ಪರಿಹಾರ ನೀಡಬೇಕು, ಜನ ಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಸ್ಪಂದಿಸಬೇಕೆಂದು ಆಗ್ರಹಪಡಿಸಿದರು.
ಅಂತಿಮವಾಗಿ ನಗರಸಭೆಯ ಅಧ್ಯಕ್ಷೆ ಶಶಿಕಲಾ ಮಾಳಗಿ, ಮಲ್ಲಿಕಾರ್ಜುನ ಸಾತೇನಹಳ್ಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಈಗಾಗಲೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಂಗಪ್ಪನ ಕುಟುಂಬಕ್ಕೆ ಪರಿಹಾರ ಹಾಗೂ ನೌಕರಿ ದೊರಕಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಸಹ ಈಬಗ್ಗೆ ಸ್ಪಂದಿಸಿದ್ದಾರೆ. ಪೌರಕಾರ್ಮಿಕರೊಂದಿಗೆ ನಾವಿದ್ದೇವೆ. ಈ ಸಂದರ್ಭದಲ್ಲಿ ಪ್ರತಿಭಟನೆ ಸರಿಯಲ್ಲ ಎಂದು ಆಕ್ರೋಶಗೊಂಡ ಜನರನ್ನು ಸಮಾದಾನ ಪಡಿಸಿದರು.
ನಂತರ ಪ್ರಮುಖರು ಹಾಗೂ ನೆರೆದ ನೂರಾರು ಜನರು ರಂಗಪ್ಪ ಹೆರಕಲ್ಲ ಅವರ ಆತ್ಮಕ್ಕೆ ಮೌನಾಚರಣೆಯ ಮೂಲಕ ಶಾಂತಿಕೋರಿದರು. ಶವವನ್ನು ಮೆರವಣಿಗೆಯ ಮೂಲಕ ಮುಕ್ತಿಧಾಮಕ್ಕೆ ತಗೆದುಕೊಂಡು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
೭ಜನರಮೇಲೆ ಮತ್ತಷ್ಟು ಪ್ರಕರಣ ದಾಖಲು
ಬ್ಯಾನರ್ ತೆರವುಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಈಗಾಗಲೇ ೧೦ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಅರ ಮೇಲೆ ಅನೇಕ ಪ್ರಕರಣಗಳು ದಾಖಲಾಗಿವೆ. ಜೂ.೨೩ರಂದುಪೌರಕಾರ್ಮಿಕ ರಂಗಪ್ಪ ಹೆರೆಕಲ್ಲ ಅವರ ಮರಣದ ಹಿನ್ನಲೆಯಲ್ಲಿ ಅಕ್ಷತಾ.ಕೆ.ಸಿ, ಶಾಂತಪ್ಪ ಅರುಣ ಕೊರವರ, ಸುಬ್ಬು, ಅರ್ಜುನ ಅರುಣ ಕೊರವರ, ಜಗದೀಶ ಮಾನೇಗಾರ ಸಾ||ಕರ್ಜಗಿ, ಶಿವರಾಜ ಕರೇಗೌಡ್ರ, ನಿಹಾಲ್ ಮಣ್ಣೂರ (ಎಲ್ಲರೂ ನಾಗೇಂದ್ರನಮಟ್ಟಿ, ಕೊರವರ ಓಣಿ, ಕರ್ಜಗಿ ಮತ್ತು ಕನಕಾಪುರ ನಿವಾಸಿಗಳು) ಈ ೭ಜನರ ಮೇಲೆ ಮತ್ತಷ್ಟು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿರಕೋಳ ತಿಳಿಸಿದ್ದಾರೆ.
ನಗರಸಭೆಯಲ್ಲಿ ನಡೆದ ದಲಿತ ಮುಖಂಡರಸಭೆಯಲ್ಲಿ ಮಾತನಾಡಿದ ಅವರು ಜೂ. ೦೫ ರಂದು ಮುಂಜಾನೆ ೧೦-೦೦ ಗಂಟೆ ಸುಮಾರಿಗೆ ಪೌರಾಯುಕ್ತರ ಆದೇಶದ ಮೇರೆಗೆ ಕೊರವರ ಓಣಿಯ ಗುರುಭವನದ ಹತ್ತಿರ ಪೌರಕಾರ್ಮಿಕ ರಂಗಪ್ಪ ಹೆರಕಲ್ಲ, ಆರೋಪಿ ಶಾಂತಪ್ಪ ಕೊರವರನ ಹುಟ್ಟು ಹಬ್ಬದ ಪ್ರಯುಕ್ತ ಅಳವಡಿಸಿದ್ದ ಬ್ಯಾನರ್ ತೆರವುಗೊಳಿಸಲು ಹೋದಾಗ ಪೋನಿನಲ್ಲಿ ಆರೋಪಿ ಅಕ್ಷತಾ.ಕೆ.ಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಉಳಿದ ಆರೋಪಿತರೊಂದಿಗೆ ಹಾವೇರಿ ನಗರಸಭೆ ಬಂದು ಅವಾಚ್ಯ ಶಬ್ದಗಳಿಂದ ಅಧಿಕಾರಿ ಮತ್ತು ಸಿಬ್ಬಂದಿಯವರ ಮುಂದೆ ಬೈದಾಡಿ ಸರ್ಕಾರಿ ಕೆಲಸಕ್ಕೆ ಅಡ್ಡಿಯನ್ನುಂಟು ಮಾಡಿದ್ದರು.
ಇದರಲ್ಲಿ ಮೂವರು ಮೇಲ್ಮಾತಿಯವರಿದ್ದು, ಪೌರಕಾರ್ಮಿಕ ರಂಗಪ್ಪನಿಗೆ ಜಾತಿನಿಂದನೆ ಮಾಡಿ ಜೀವ ಬೆದರಿಕೆಹಾಕಿದ್ದಾರೆಂದು, ಇದರಿಂದ ರಂಗಪ್ಪ ಮನನೊಂದು ಜೂ.೧೯ ರಂದು ಮಧ್ಯಾಹ್ನ ೦೧-೦೦ ಗಂmಯ ವೇಳೆ ಕರಡಿಗುಡ್ಡಕ್ಕೆ ಹೋಗುವ ರಸ್ತೆಯಲ್ಲಿರುವ ಬಸವಣ್ಣ ದೇವರ ದೇವಸ್ಥಾನದ ಹತ್ತಿರ ಯಾವುದೋ ವಿಷಕಾರಕ ಎಣ್ಣೆಯನ್ನು ಸೇವಿಸಿ ಕುಳಿತಿರುವುದನ್ನು ಗಮನಿಸಿ ಉಪಚಾರಕ್ಕೆ ಕರೆದುಕೊಂಡು ಹೋಗಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲ ಮಾಡಿ, ನಂತರ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ದಾಖಲ್ ಮಾಡಲಾಗಿತ್ತು.
ಉಪಚಾರ ಫಲಿಸದೆ ರಂಗಪ್ಪ ಜೂ.೨೩ ರಂದು ೧೨-೩೦ ಗಂಟೆಗೆ ಮೃತಪಟ್ಟಿದ್ದು, ಈ ಬಗ್ಗೆ ಮೃತ ರಂಗಪ್ಪನ ಪುತ್ರ ತಮ್ಮ ತಂದೆಯ ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿ, ಜಾತಿ ನಿಂದನೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಸಾರ್ವಜನಿಕ ಕಚೇರಿಯ ಮುಂದೆ ಪ್ರೇರಣೆ ಮಾಡಿ ಸಾವಿಗೆ ಕಾರಣರಾದವರ ಮೇಲೆ ಕ್ರಮ ಜರುಗಿಸಲು ದೂರು ನೀಡಿರುವ ಹಿನ್ನಲೆಯಲ್ಲಿ . ೭ಜನ ಆರೋಪಿಗಳ ಮೇಲೆ ಸರ್ಕಾರಿ ಕೆಲಸಕ್ಕೆ ಅಡ್ಡಿ, ಜಾತಿನಿಂದನೆ ಸೇರಿದಂತೆ ಹಲವು ಪ್ರಕರಣ ದಾಖಲಿಸಲಾಗಿದೆ ಎಂದು ಶಿರಕೋಳ ವಿವರಿಸಿದರು.