
ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು: ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ
ಹಾವೇರಿ: ಮಹಿಳೆ ತಾಯಿಯಾಗಿ, ಸಹೋದರಿಯಾಗಿ, ಗೆಳತಿಯಾಗಿ, ಮಡದಿಯಾಗಿ ಮನೆ ಬೆಳಗುವ ಜ್ಯೋತಿಯಾಗಿ, ಕಷ್ಟ ಕಾರ್ಪಣ್ಯ ಎದುರಿಸುವ ಯೋಗಿನಿಯಾಗಿ, ಸೂರ್ತಿಯ ಸೆಲೆಯಾಗಿ ಮನೆಯ ಹೊರಗೂ, ಒಳಗೂ ಗಂಡಿನ ಹೆಗಲಿಗೆ ಹೆಗಲಾಗಿ ಪ್ರತಿ ಹೆಜ್ಜೆಯಲ್ಲೂ ಇರುತ್ತಾಳೆ. ಕುಟುಂಬ, ಸಮಾಜ, ದೇಶಕ್ಕೆ ಮಹಿಳೆಯ ಕೊಡುಗೆ ಅಪಾರವಾದುದು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಕೊಂಡಾಡಿದರು. ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘ ಜಿಲ್ಲಾ ಘಟಕದಿಂದ ಮಂಗಳವಾರ ನಗರದ ಜಿಲ್ಲಾ ಗುರುಭವನದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಕಾರ್ಯಾಗಾರ ಹಾಗೂ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆ ಗೃಹಿಣಿಯಾಗಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಾಳೆಂದರೆ ಅದು ಆಕೆಯ ಯೋಗ್ಯತೆ, ದುರ್ಬಲತೆಯಲ್ಲ. ಗೌರವ, ಪ್ರೀತಿ, ಮಮತೆಯ ಸಹಾನುಭೂತಿಯಿಂದ ಕೆಲಸ ಮಾಡುತ್ತಾರೆ. ಎಲ್ಲವನ್ನೂ ನಿಭಾಯಿಸುವ ಸೃಷ್ಟಿಯ ಕೊಡುಗೆ, ಅಪ್ರತಿಮ ಶಕ್ತಿಯೇ ಹೆಣ್ಣು. ಮಹಿಳೆಯ ಸ್ಥಾನಮಾನ, ಹಕ್ಕು, ಸಮಸ್ಯೆಗಳ ಬಗ್ಗೆ ಚಿಂತನೆ ಮಾಡುವ ಸಂದರ್ಭವೇ ಈ ಕಾರ್ಯಕ್ರಮವಾಗಿದೆ. ಸ್ತ್ರೀ ಶಕ್ತಿಯನ್ನು ಆರಾಧಿಸುವ ದೇಶ ನಮ್ಮದಾಗಿದೆ ಎಂದರು.
ಜಿಲ್ಲೆಗೆ ಅಪಾರ ಕೊಡುಗೆ: ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಡಿಸಿ, ಎಸ್ಪಿ, ಸಿಇಒ ಸೇರಿದಂತೆ ಮಹಿಳೆಯರು ಪುರುಷರಷ್ಟೇ ಸ್ಥಾನಮಾನ ಪಡೆದಿದ್ದಾರೆ. ಹಾವೇರಿಯಲ್ಲೂ ಜಿಪಂ ಸಿಇಒ, ಎಸ್ಪಿ, ಎಸಿ, ತಹಸೀಲ್ದಾರ, ಆರ್ಟಿಒ ಹೀಗೆ ಅನೇಕ ಉನ್ನತ ಮಹಿಳಾ ಅಕಾರಿಗಳ ಕೊಡುಗೆ ಅಪಾರವಾಗಿದೆ. ಅತ್ಯುತ್ತಮ ಸೇವೆ ಸಲ್ಲಿಸಿದ ಅಕಾರಿ ವರ್ಗದವರನ್ನು ಮಹಿಳೆಯರ ದಿನಾಚರಣೆ ನಿಮಿತ್ತ ಸನ್ಮಾನಿಸುತ್ತಿರುವುದು ಔಚಿತ್ಯ ಪೂರ್ಣವಾದುದು ಎಂದರು.
ಮಹಿಳೆಯರು ಭ್ರೂಣಹತ್ಯೆ, ಲಿಂಗ ತಾರತಮ್ಯ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ ಹೀಗೆ ಅನೇಕ ದೌರ್ಜನ್ಯ ಎದುರಿಸುತ್ತಿರುವುದು ವಿಷಾದನೀಯ. ಮನೆಯ ನಂದಾದೀಪ ಆಗಿರುವ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ದೇಶಕ್ಕೆ ಮಹಿಳೆಯರ ಪಾತ್ರ ದೊಡ್ಡದಿದ್ದು, ಮೌಲ್ಯಾಧಾರಿತ ಕುಟುಂಬಗಳು, ಸುಸಜ್ಜಿತ ಸಮಾಜದ ಅಡಿಯಲ್ಲಿ ಮುನ್ನಡೆಯಬೇಕು. ಜಿಲ್ಲಾಡಳಿತ ತಮ್ಮ ಜತೆಗೆ ಸದಾಕಾಲ ಇರುತ್ತದೆ ಎಂದು ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ರಾ.ಸ.ಮ.ನೌ.ಸಂಘದ ರಾಜ್ಯಾಧ್ಯಕ್ಷೆಶೈಲಜಾ ವಿ.ಗೌಡರ ಮಾತನಾಡಿ ಹೆಣ್ಣು ಅಬಲೆಯಲ್ಲ, ಇಡೀ ಜಗತ್ತನ್ನು ಆಳುವ ಸಬಲೆಯಾಗಿದ್ದಾಳೆ. ಪ್ರಕೃತಿಯ ಸೃಷ್ಟಿಯಾಗಿರುವ ಹೆಣ್ಣಿಲ್ಲದ ಜಗತ್ತು, ಕುಟುಂಬವನ್ನು ಊಹಿಸಲು ಸಾಧ್ಯವಿಲ್ಲ. ಶೈಕ್ಷಣಿಕ, ಬಾಹ್ಯಾಕಾಶ, ಗಡಿ ಕಾಯುವ ಎಲ್ಲ ಕ್ಷೇತ್ರದಲ್ಲಿ ಉನ್ನತ ಹುದ್ದೆ ಅಲಂಕರಿಸಿ ಪುರುಷರಷ್ಟೇ ಸಮಾನವಾಗಿ ಹೆಜ್ಜೆ ಹಾಕುತ್ತಿದ್ದಾಳೆ. ನಮ್ಮ ಕರ್ತವ್ಯ ಮರೆಯದೆ ಸಮಾಜಕ್ಕೆ ಮಾದರಿಯಾಗಿ ಬೆಳೆಯಬೇಕು. ತಾಯಂದಿರು ಮಕ್ಕಳಿಗೆ ಸಂಸ್ಕಾರ ಕಲಿಸಿ ಕೊಡಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮಾತನಾಡಿ ಮಹಿಳೆ ಎನ್ನುವ ಕಾರಣಕ್ಕೆ ಜವಾಬ್ದಾರಿ ಕೊಡಲು ಹಿಂಜರಿಸುತ್ತಾರೆ. ಪುರುಷ, ಮಹಿಳೆ ಪ್ರಕೃತಿದತ್ತವಾದ ಬಂದ ಬಳುವಳಿಯಾಗಿದ್ದು, ಮನೆಯಿಂದಲೇ ಸಮಾನತೆ ಶುರುವಾಗಬೇಕು. ನಮ್ಮ ಮಕ್ಕಳಿಗೂ ಸಮಾನತೆ ಕೊಡಬೇಕು. ಯಾವ ಕೆಲಸಕ್ಕೂ ಹಿಂಜರಿಕೆ ಬೇಡ. ಆತ್ಮಸಾಕ್ಷಿ, ಪ್ರಾಮಾಣಿಕತೆಯಿಂದ ಕೆಲಸ ಮಾಡೋಣ. ನೌಕರರಿಗೆ ಕೆಲಸ ಮಾಡುವ ಅಹಂ ಬೇಡ. ಮನೆಯಲ್ಲಿ ಗೃಹಿಣಿಯಾಗಿ, ಕಚೇರಿಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಸಾಧ್ಯ ಎಂದರು.
ಉಪನ್ಯಾಸ, ಸಾಧಕರಿಗೆ ಸನ್ಮಾನ: ಜಾನಪದ ವಿದ್ವಾಂಸ ಡಾ.ಶಂಭು ಬಳಿಗಾರ ಉದ್ಯೋಗಸ್ಥ ಮಹಿಳೆ ಎದುರಿಸುತ್ತಿರುವ ತಲ್ಲಣಗಳು ವಿಷಯದ ಕುರಿತು, ವರದಶ್ರೀ ಫೌಂಡೇಶನ್ ಸಂಸ್ಥಾಪಕ ಮಲ್ಲಿಕಾರ್ಜುನ ರೆಡ್ಡೇರ ಉದ್ಯೋಗಸ್ಥ ಮಹಿಳೆಯರಿಗೆ ಆರೋಗ್ಯ ಸೂತ್ರಗಳು ಕುರಿತು ಉಪನ್ಯಾಸ ನೀಡಿದರು. ವಿವಿಧ ಇಲಾಖೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಮಹಿಳಾ ಅಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷೆ ಅಕ್ಕಮಹಾದೇವಿ ಕಾಕೋಳ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಎಂ ಹಿರೇಮಠ, ಡಿಡಿಪಿಐ ಮೋಹನ್ ದಂಡಿನ, ಬಿಇಒ ಎಂ.ಹೆಚ್ ಪಾಟೀಲ, ವೀಣಾ ಹೊಸಮನಿ, ರೇಷ್ಮಾ ಬಳ್ಳಾರಿ, ಭಾಗ್ಯ ಎಂ.ಕೆ., ರೇವತಿ ಹೊಸಮಠ, ಜಯಶ್ರೀ ಪಾಟೀಲ, ತನುಜಾ, ಲತಾ ಬಿ.ಎಚ್, ಆಶು ನದಾಫ, ಎ.ಟಿ ನೀರಲಗಿ, ಶಾಹಿನಾ ಬೇಗಂ, ವಿಜಯಮ್ಮ ಪಾಟೀಲ, ದಾಕ್ಷಾಯಣಿ ವಾಲ್ಮೀಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

