ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥ್ ಎಸ್ಗೆ ಎಂಎಲ್ಸಿ ಸ್ಥಾನ ನೀಡಲು ಒತ್ತಾಯ
ಹಾವೇರಿ: ಕೆಪಿಸಿಸಿ ಎಸ್.ಸಿ ರಾಜ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸತ್ತಿರುವ, ಮಾದಿಗ ಸಮಾಜವನ್ನು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸುಮಾರು ೧೫ ವರ್ಷಗಳಿಂದ ಸಂಘಟಿಸುತ್ತಿರುವ ರಾಜ್ಯ ಮಾದಿಗ ಸಮಾಜ ಸಂಘಟನೆಯ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾಗಿರುವ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಮಂಜುನಾಥ್ ಎಸ್ ಅವರನ್ನು ಕಾಂಗ್ರೆಸ್ ಪಕ್ಷ ಅವರ ಸೇವೆಯನ್ನು ಗುರುತಿಸಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕೆಂದು ಕರ್ನಾಟಕ ರಾಜ್ಯ ಮಾದಿಗ ಸಮಾಜದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಉಡಚಪ್ಪ ಮಾಳಗಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ಗೆ ಮನವಿಯ ಮೂಲಕ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕೆ ಹೇಳಿಕೆ ನೀಡಿದ ಅವರು ಭದ್ರಾವತಿ ತಾಲ್ಲೂಕಿನ ಜನ್ನಾಪುರ ನಿವಾಸಿಯಾಗಿರುವ ಯುವ ಮುಂಖಂಡರಾದ ಮಂಜುನಾಥ್ ಎಸ್ ಅವರು ಮಾದಿಗ ಸಮಾಜವನ್ನು ರಾಜ್ಯ ಜಿಲ್ಲೆ, ತಾಲ್ಲೂಕ ಹಾಗೂ ಗ್ರಾಮೀಣ-ನಗರ ಮಟ್ಟದಲ್ಲಿ ಸಂಘಟನೆಯನ್ನು ಕೈಗೊಂಡಿದ್ದು, ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗಗಳ,ಅಲ್ಪಸಂಖ್ಯಾತ ಸಮುದಾಯಗಳ ಮತ್ತು ರೈತಪರ ಮತ್ತು ಕನ್ನಡ ಸಂಘಟನೆಗಳ ಪರವಾಗಿ ಯಾವುದೇ ಹೋರಾಟಗಳು ನಡೆದರೂ ಸಹ ಅವರ ಪರವಾಗಿ ಬೆಂಬಲವನ್ನು ನೀಡಿರುತ್ತಾರೆ.
ಇತ್ತೀಚೆಗೆ ನಡೆದ ಸಂಡೂರು, ಚನ್ನಪಟ್ಟಣ ಮತ್ತು ಶಿಗ್ಗಾವಿ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಗಳಲ್ಲಿ ಆಯಾ ಕ್ಷೇತ್ರಗಳಲ್ಲಿ ಮಂಜುನಾಥ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದಾರೆ. ತಮ್ಮ ಸ್ವಂತ ಆರ್ಥಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಕಾರ್ಯಕರ್ತರ ಪಡೆಯೊಂದಿಗೆ ಪ್ರಚಾರ ಮಾಡಿದ ಫಲವಾಗಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕೊಡುಗೆ ನೀಡಿದ್ದಾರೆ.
ಇವರ ನಿಸ್ವಾರ್ಥ ಸೇವೆಯಿಂದ ಮಾದಿಗ ಸಮಾಜದ ಅಭಿವೃದ್ದಿಗಾಗಿ ಶ್ರಮಿಸುವ ಜೊತೆಗೆ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟಲು ಸಾಧ್ಯವಾಗುತ್ತಿದೆ. ಚೈತನ್ಯದ ಚಿಲುಮೆಯಂತಿರುವ ಮಂಜುನಾಥ್ ಎಸ್ ಅವರಿಗೆ ಕಾಂಗ್ರೆಸ್ ಪಕ್ಷವು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡುವಂತೆ ಕಾಂಗ್ರೆಸ್ ಪಕ್ಷದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ರಾಷ್ಟ್ರೀಯ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ ಹಾಗೂ ಪಕ್ಷದ ಮುಖಂಡರಿಗೆ ಮಾದಿಗ ಸಮಾಜದ ಒಕ್ಕೂಟವು ಒಕ್ಕೊರಲಿನಿಂದ ಆಗ್ರಹಿಸುತ್ತಿದೆ ಎಂದು ಪ್ರಚಾರ ಸಮಿತಿ ರಾಜ್ಯ ಅಧ್ಯಕ್ಷ ಉಡಚಪ್ಪ ಮಾಳಗಿ ಮನವಿ ಮಾಡಿದ್ದಾರೆ.