ಲಾರಿ ಅಪಘಾತದಲ್ಲಿ ಮರಣ ಮೃದಂಗ, ತರಕಾರಿ ಮಾರಲು ಹೋರಟವರು ಹಾದಿ ಹೆಣವಾದರು
ಹಾವೇರಿ; ಅವರೆಲ್ಲರೂ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ಬಡ ವ್ಯಾಪಾರಸ್ಥರು. ಹಣ್ಣು, ತರಕಾರಿ, ಲಿಂಬು, ಶುಂಟಿ ಹೀಗೆ ದೈನಂದಿನ ಜೀವನಕ್ಕೆ ಅಗತ್ಯ ಇರುವ ತರಕಾರಿಯನ್ನು ಒಂದುಕಡೆಯಿಂದ ಖರೀದಿಸಿ ಲಾರಿಯನ್ನು ಬಾಡಿಗೆಮಾಡಿಕೊಂಡು ಲಾರಿಯಲ್ಲಿ ತರಕಾರಿಯನ್ನು ತುಂಬಿಕೊಂಡು ಸಂತೆ ನಡೆಯುವ ಪಟ್ಟಣ ಪ್ರದೇಶಗಳಿಗೆ ತೆರಳಿ ವ್ಯಾಪಾರ ಮಾಡಿ ದಿನಕ್ಕೆ ನೂರು ಇನ್ನೂರು ದುಡಿದರೂ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು. ಆದರೆವಿಧಿಯಾಟಕ್ಕೆ ರಸ್ತೆ ಅಪಘಾತದಲ್ಲಿ ಈಗ ೧೦ ಜನರ ಉಸಿರೇ ನಿಂತು ಹೋಗಿದೆ. ವ್ಯಾಪಾರಕ್ಕೆಂದು ಹೊರಟವರು ರಸ್ತೆ ಮಧ್ಯದಲ್ಲಿಯೇ ಹಾದಿಹೆಣವಾಗಿಹೋಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಗ್ರಾಮದ ಬಳಿ ಇರುವ ಅರೆಬೈಲ್ ಘಾಟನಲ್ಲಿ ಬೆಳಂಬೆಳಿಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ೯ ಜನ ಸಾವನ್ನಪ್ಪಿದ್ರೆ, ಇನ್ನೋರ್ವ ಚಿಕಿತ್ಸೆ ಫಲಿಸದೆ ಕಿಮ್ಸ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಹತ್ತು ಜನರು ಗಂಭೀರ ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚಾಲಕನ ನಿಯಂತ್ರಣ ತಪ್ಪಿ ತರಕಾರಿ ತುಂಬಿದ್ದ ಲಾರಿ ಪಲ್ಟಿಯಾಗಿ ಈ ಅವಘಡ ನಡೆದಿದೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಾವೇರಿ ಜಿಲ್ಲೆಯ ಸವಣೂರಿನಿಂದ ಕುಮಟಾ ಸಂತೆಗೆ ತೆರಳುತ್ತಿದ್ದ ತರಕಾರಿ ತುಂಬಿದ ಲಾರಿಯೇ ಅಪಘಾತಕ್ಕೆ ಒಳಗಾಗಿರುವ ವಾಹನವಾಗಿದೆ. ವೇಗವಾಗಿ ತೆರಳುತ್ತಿದ್ದ ವೇಳೆ ಪಲ್ಟಿಯಾದ ಹಿನ್ನಲೆಯಲ್ಲಿ, ೧೦ ಜನರು ಪ್ರಾಣ ಕಳೆದು ಕೊಂಡಿದ್ದಾರೆ. ಫಯಾಜ್ ಇಮಾಮ್ ಸಾಬ್ ಜಮಖಂಡಿ, ವಾಸೀಮ್ ವಿರುಲ್ಲಾ ಮುಡಗೇರಿ, ಇಜಾಜ್ ಮುಸ್ತಕಾ ಮುಲ್ಲಾ, ಸಾದೀಕ್ ಭಾಷ್ ಫಾರಷ್, ಗುಲಾಮ್ ಹುಷೇನ್, ಇಮ್ತಿಯಾಜ್ ಮಮಜಾಪರ್ ಮುಳಕೇರಿ, ಅಲ್ಪಾಜ್ ಜಾಫರ್ ಮಂಡಕ್ಕಿ ಸೇರಿದಂತೆ ಜೀಲಾನಿ ಅಬ್ದುಲ್ ಜಖಾತಿ ಯ ಪ್ರಾಣ ಪಕ್ಷಿ ಸ್ಥಳದಲ್ಲಿ ಹಾರಿ ಹೋಗಿದೆ. ಇನ್ನೂ ಜಲಾಲ ಬಾಷಾ ಎನ್ನುವ ಯುವಕ ಚಿಕಿತ್ಸೆ ಫಲಿಸದೆ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಇನ್ನೂ ಸಾವನ್ನಪ್ಪಿದವರದ್ದು ಒಬ್ಬಬ್ಬರದ್ದೂ ಒಂದೊಂದು ಕಥೆ ಇದೆ. ಸಾವನ್ನಪ್ಪಿದವರಲ್ಲಿ ಬಹುತೇಕರು ತಮ್ಮ ಕುಟುಂಬಕ್ಕೆ ಒಬ್ಬರೇ ಆಧಾರ ಸ್ಥಂಭವಾಗಿದ್ದರೇ. ಜಲಾಲ್ ಎನ್ನುವ ಮೃತನ ಪತ್ನಿ ಆರು ತಿಂಗಳ ಗರ್ಭಿಣಿಯಾಗಿದ್ದಾಳೆ. ಕೇವಲ ಎರಡು ತಿಂಗಳ ಹಿಂದೆ, ಎಂಟು ತಿಂಗಳ ಹಿಂದೆ ಮದುವೆಯಾದ ಇಬ್ಬರ ಯುವಕರು ಸಾವನ್ನಪ್ಪಿದ್ದಾರೆ. ಇತ್ತೀಚಿಗೆ ಮದುವೆಯಾದ ಅಸ್ಲಂ, ಅಲ್ಪಾಜ್ ಸಾವನ್ನ ನೆನೆದು ಸಂಬಂಧಿಕರು ಕಣ್ಣೀರು ಹಾಕಿದ್ದಾರೆ. ಮೃತ ಕುಟುಂಬ ಕಥೆ ಕೇಳಿದರೆ ಮನ ಮಿಡಿಯುತ್ತದೆ.
ಮೃತಪಟ್ಟವರು ಹೆಸರು
ಅಪಘಾತನಡೆದ ಸ್ಥಳದಲ್ಲಿ ಫಯಾಜ ಇಮ್ಮಾಮಸಾಬ ಜಮಖಂಡಿ (೫೧), ವಸೀಂ ಮುಲ್ಲಾ ಮುಳಕೇರಿ(೨೦), ಎಜಾಜ ಅಹ್ಮದ ಮುಸ್ತಾಕ ಮುಲ್ಲಾ(೨೦), ಸಾಧಿಕ ಭಾಷಾ ಫರಾಸ (೩೦)ಗುಲಾಮ ಹುಸೇನ ಗುಡೂಸಾಬ ಜವಳಿ (೨೫), ಇಮ್ಮಿಯಾಜ ಮಹಮ್ಮದ ಜಾಫರ ಮುಳಕೇರಿ(೩೦), ಅಲ್ಪಾಜ ಜಾಫರ ಮಂಡಕ್ಕಿ(೪೨) ಜಿಲಾನಿ ಅಬ್ದುಲ ಗಫಾರ ಜಕಾತಿ (೨೦), ಅಸ್ಲಾಂ ಬಾಬು ಬೆಣ್ಣೆ (೨೪) ಇವರು ಮರಣಹೊಂದಿದ್ದು, ಜಲಾಲ ಬಾಷಾ ಮಂಡಕ್ಕಿ (೨೯) ಹುಬಳ್ಳಿಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬಾಕ್ಸ್
ಗಾಯಾಳುಗಳುಗಳ ಹೆಸರು
ಮಲ್ಲಕರೆಹಾನ ಮಹಮ್ಮದ ರಫೀಕ ಅಕ್ಕಿ (೨೧), ಅಪ್ತಾಬ ಬಷೀರ ಅಹ್ಮದ ಮಂಚಗಿ (೨೩), ಗೌಸಮೈದಿನ ಅಬ್ದುಲಗನಿ ಬೊಮ್ಮನಳ್ಳಿ (೩೦), ಇರ್ಪಾನ ಮಕಬೂಲ ಗುಡಿಗೇರಿ (೧೭), ನೂರಅಹ್ಮದ ಮಹಮ್ಮದ ಜಾಫರ ಜಮಖಂಡಿ (೩೦) ಅಪ್ಪರ ಖಾಂಜಾಡ (೩೪), ಖಾದ್ರಿ ಗುಡುಸಾಬ ಜವಳಿ (೨೬), ಸಾಬೀರ ಅಹ್ಮದ ಬಾಬಾ ಹುಸೇನ ಗವಾರಿ (೩೮), ಮರ್ದಾನಸಾಬ ಕಮಾಲಬಾಷಾ ಕಾರಡಗಿ(೨೨), ರಫಾಯಿ ಬಾಕರ ಬೌರಾ (೨೧), ಮಹಮ್ಮದ ಗೌಸ ಗಫಾರಸಾಬ ಅಕ್ತಾರ (೨೨), ಅಶ್ರಫ ನಬೀಸಾಬ ಲಾಟಿ (೧೮), ಸ್ವಾಜಾ ಮಹಮ್ಮದಗೌಸ ಕಿಸ್ಮತ್ತಗಾರ(೨೨), ಮಹಮ್ಮದ ಸಾಧಿಕ ಸ್ವಾಜಾಮೀರ ಭತ್ತೇರಿ (೨೫), ಗ್ವಾಜಾಮೈನು ಬಷೀರಅಹ್ಮದ ಖಾಲೇಕಾನವರ (೨೪), ನಿಜಾಮ (೩೦), ಮದಲಾನಸಾಬ (೨೪), ಜಾಫರ ಮುಕ್ತಿಯಾರ ಪ್ರಾಸ (೨೨) ಇವರು ಗಾಯಾಳುಗಳಾಗಿದ್ದಾರೆ.
ಲಾರಿ ಚಾಲಕನೂ ಸವಣೂರಿನವನೆ
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಗ್ರಾಮದ ಬಳಿ ಅರೆಬೈಲ್ ಘಾಟನಲ್ಲಿ ಬುಧವಾರ ಬೆಳಂಬೆಳಿಗ್ಗೆ ನಡೆದ ಅಪಘಾತದಲ್ಲಿ ಪಲ್ಟಿಯಾಗಿ ಹತ್ತು ಜನರ ಪ್ರಾಣ ಪಕ್ಷಿಯನ್ನು ಕಸಿದುಕೊಂಡ ನತದೃಷ್ಟಲಾರಿಯನ್ನು ಚಲಾಯಿಸುತ್ತಿದ್ದ ಲಾರಿ ಚಾಲಕ ಸವಣೂರಿನ ಎಸ್.ಎಂ ಕೃಷ್ಣ ನಗರ ನಿವಾಸಿನಿಜಾಮ @ ಅಬ್ದುಲ್ ರಶೀದ ಕರೀಂಖಾನ ಸೌದಾಗರ (೨೫)ಎಂದು ತಿಳಿದು ಬಂದಿದೆ. ಇತ ಲಾರಿಯಲ್ಲಿ (ನಂಬರ ಎಮ್.ಹೆಚ್.೧೩/ಎ.ಎಕ್ಷ-೪೮೭೯) ಸವಣೂರನಿಂದ ಹಣ್ಣು ಮತ್ತು ತರಕಾರಿಯನ್ನು ತುಂಬಿಕೊಂಡು ಸುಮಾರು ೩೦ಕ್ಕೂ ಅಧಿಕ ಜನರನ್ನು ಹತ್ತಿಸಿಕೊಂಡು ಕುಮಟಾಕ್ಕೆ ಹೋಗುವ ಸಂದರ್ಭದಲ್ಲಿ ದಿನಾಂಕ : ೨೨-೦೧-೨೦೨೫ ರಂದು ಬೆಳಗ್ಗಿನ ಜಾವ ಗಂಟೆಗೆ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಗ್ರಾಮದ ಹತ್ತಿರ ಲಾರಿ ಚಾಲಜನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದ್ದು, ೧೦ಜನರು ಸಾವನ್ನಪ್ಪಿದ್ದು, ೧೯ಜನರು ತೀವೃವಾಗಿ ಗಾಯಗೊಂಡು ಯಲ್ಲಾಪುರ ಹಾಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.
ಸಾಮೂಹಿಕ ಪ್ರಾರ್ಥನೆಯೊಂದಿಗೆ ಅಂತ್ಯಕ್ರಿಯೆ
ಹಾವೇರಿ: ಯಲ್ಲಾಪುರ ಬಳಿ ಅಪಘಾತದಲ್ಲಿ ಮೃತ ಪಟ್ಟ ಸವಣೂರಿನ ೧೦ ಜನರಬಶವಗಳನ್ನು ಬುಧವಾರ ಸಂಜೆ ೭ ರ ಸುಮಾರಿಗೆ ಅಂಬುಲನ್ಸ್ ನಲ್ಲಿ ತರಲಾಯಿತು. ಸವಣೂರಿನ ಈದ್ಗಾ ಮೈದಾನದಲ್ಲಿ ಮೃತರ ಬಂಧು ಬಾಂಧವರು, ಸ್ನೇಹಿತರು, ಸವಣೂರಿನ ಮುಸ್ಲಿಂ ಗಣ್ಯರಿಂದ ಸಾಮೂಹಿಕ ಪ್ರಾರ್ಥನೆ
ನಮಾಜ್ ನೆರವೇರಿತು.ಮುಸ್ಲಿಂ ಸಂಪ್ರದಾಯದಂತೆ ಜನಾಜ್ ಕಿ ನಮಾಜ್ ಪದ್ದತಿ ಪ್ರಕಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ ಬಳಿಕ ಮೃತದೇಹಗಳನ್ನು ಅಂತ್ಯ ಸಂಸ್ಕಾರಕ್ಕೆ ಕೊಂಡೊಯ್ದ ಕುಟುಂಬಸ್ಥರು ಸವಣೂರಿನ ನಾಲ್ಕು ಖಬರಸ್ಥಾಗಳಲ್ಲಿ ನೆರವೇರಿಸಿದರು. ಶಿಗ್ಗಾವಿ ಶಾಸಕ ಯಾಸೀರ್ ಖಾನ್ ಪಠಾಣ್ ಸೇರಿದಂತೆ ಹಲವು ಗಣ್ಯರು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.