ವೃದ್ಧನ ಕಾಲಿನ ಮೇಲೆ ಹರಿದ ಸಾರಿಗೆ ಬಸ್, ಚಾಲಕ ಪೊಲೀಸರ ವಶ
ಹಾವೇರಿ: ಮಗಳ ಊರಿಗೆ ಹೊರಟಿದ್ದ ವೃದ್ಧನ ಎರಡು ಕಾಲಿನ ಮೇಲೆ ಸಾರಿಗೆ ಬಸ್ ಹರಿದು ಎರಡುಕಾಲುಗಳು ತುಂಡಾದ ಘಟನೆ ಮಂಗಳವಾರ ಸಂಜೆ ೪-೩೦ ರ ಸುಮಾರಿಗೆ ಹಾವೇರಿ ಬಸ್ ನಿಲ್ದಾಣದಲ್ಲಿ ನಡೆದಿದೆ. ರಕ್ತಸಿಕ್ತವಾಗಿ ನರಳಾಡುತ್ತಿದ್ದ ವೃದ್ಧನನ್ನು ತಾಲೂಕಿನ ಕನಕಾಪುರ ಗ್ರಾಮದ ೬೦ ವಯೋಮಾನದ ಕರಿಯಪ್ಪ ಮುಚ್ಚಿಕ್ಕಪ್ಪನವರ ಎಂದು ಗುರುತಿಸಲಾಗಿದೆ. ಮಗಳ ಊರಿಗೆ ಹೊರಟ್ಟಿದ್ದ ಕರಿಯಪ್ಪ ಹಾವೇರಿಯ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದ ವೇಳೆ ಬಸ್ ನಿಲ್ದಾಣದ ಮುಂದೆ ಈ ದುರ್ಘಟನೆ ನಡೆದಿದೆ.
ಈ ದುರ್ಘಟನೆಯಲ್ಲಿ ಎರಡು ಕಾಲು ತುಂಡಾಗಿ ರಕ್ತಸಿಕ್ತವಾಗಿ ಬಿದ್ದು ನರಳುತ್ತಿದ್ದ ವೃದ್ಧನ ನೆರವಿಗೆ ತಕ್ಷಣಕ್ಕೆ ಯಾರು ಮುಂದೆ ಬರಲಿಲ್ಲ. ಕೆಲವರು ವೃದ್ಧ ನರುಳುತ್ತಿರುವುದನ್ನು ಮೊಬೈಲ್ಗಳಲ್ಲಿ ವಿಡಿಯೋ ಮಾಡಿಕೊಂಡರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ನರಳುತ್ತಿದ್ದ ವೃದ್ಧನನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು. ಗಾಯಾಳುವಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದ ಕಾರಣಕ್ಕೆ ಆತನನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.
ಚಾಲಕ ನಿರ್ಲಕ್ಷ ಖಂಡಿಸಿ ಕನಕಾಪುರ ಗ್ರಾಮಸ್ಥರು ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಬಸ್ ಚಾಲಕ ಮಲ್ಲಿಕಸಾಬ್ನನ್ನು ಹಾವೇರಿ ನಗರ ಪೊಲೀಸರು ವಶಕ್ಕೆ ಪಡೆದರು.

