“ಶಿಗ್ಗಾಂವ ಏತನೀರಾವರಿ ಯೋಜನೆಯ ಜಾಕ್ವೆಲ್-ಪಂಪ್ಹೌಸ್ ಸ್ಥಗಿತ”
ಗುತ್ತಿಗೆ ಸಿಬ್ಬಂದಿಗೆ ೬ ತಿಂಗಳಿಂದ ವೇತನವು ಇಲ್ಲ, ಕೆರೆಗಳಿಗೆ ನೀರು ಇಲ್ಲ!
ಹಾವೇರಿ: ಹಾವೇರಿ ಜಿಲ್ಲೆಯ ಮಹತ್ವಾಕಾಂಕ್ಷಿಯ ಏತನೀರಾವರಿ ಯೋಜನೆಗಳಲ್ಲಿ ಮಹತ್ವದ ಹಾಗೂ ಸಂಸದ ಬಸವರಾಝ ಬೊಮ್ಮಾಯಿ ಅವರ ಕನಸಿನ ಯೋಜನೆಯಾಗಿದ್ದ ಶಿಗ್ಗಾಂವ ಏತ ನೀರಾವರಿ ಯೋಜನೆ ಆರಂಭಗೊಂಡ ಮೂರೇ ವರ್ಷಗಳಲ್ಲಿ ಮುರಾಬಟ್ಟೆಯಾಗಿದೆ. ಪ್ರಸಕ್ತ ವರ್ಷದ ಮಳೆಗಾಲದ ಆರಂಭವಾದರೂ ಜಾಕ್ವೆಲ್-ಪಂಪ್ಹೌಸ್ ಸ್ಥಗಿತಗೊಂಡಿದ್ದು, ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿದಿಲ್ಲ. ಕಳೆದ ಆರು ತಿಂಗಳಿಂದ ಶಿಗ್ಗಾಂವ ಏತನೀರಾವರಿ ಯೋಜನೆಯ ಜಾಕ್ವೆಲ್ ಹಾಗೂ ಪಂಪ್ಹೌಸ್ ಸ್ಥಗಿತಗೊಂಡಿದ್ದು, ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ವೇತನವು ಸಹ ಸ್ಥಗಿತಗೊಂಡು, ಕಾರ್ಮಿಕರು ವೇತನಕ್ಕೆ ಪರದಾಡುತ್ತಿದ್ದಾರೆ.
೨೦೨೧ರಲ್ಲಿ ಶಿಗ್ಗಾಂವ-ಸವಣೂರು ತಾಲೂಕು ವ್ಯಾಪ್ತಿಗೆ ಬರುವ ೩೯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಹಲಸೂರು ಗ್ರಾಮದ ಬಳಿ ವರದಾ ನದಿ ದಂಡೆಯ ಮೇಲೆ ಶಿಗ್ಗಾಂವ ಏತನೀರಾವರಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಏತನೀರಾವರಿ ಯೋಜನೆಯ ಜಾಕ್ವೆಲ್ ಮತ್ತು ಪಂಪ್ಹೌಸ್ನಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು ೩೦ ಸಿಬ್ಬಂದಿಗಳು ಕಶರ್ಯನಿರ್ವಹಿಸುತ್ತಿದ್ದು, ಇವರಿಗೆ ಕಳೆದ ೬ ತಿಂಗಳುಗಳಿಂದ ವೇತನ ಪಾವತಿಯಾಗಿರುವುದಿಲ್ಲ.
ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯ ಸೇವೆ ನೀಡುತ್ತಿರುವ ಗುತ್ತಿಗೆದಾರರರು ಕಳೆದ ಮೂರ ವರ್ಷಗಳಿಂದ ಪ್ರತಿವರ್ಷ ಕೋಟ್ಯಾಂತರ ಹಣವನ್ನು ಹೊರಗತ್ತಿಗೆ ಸಿಬ್ಬಂದಿ ಸರಬರಾಜಿಗಾಗಿ ಏತನೀರಾವರಿ ಇಲಾಖೆಯಿಂದ ಹಣ ಪಡೆದುಕೊಂಡಿದ್ದು,. ಆದರೆ ಸಿಬ್ಬಂದಿಗೆ ಮಾತ್ರ ವೇತನ ನೀಡುವಲ್ಲಿ ಅನಗತ್ಯ ವಿಳಂಬ ಮಾಡುತ್ತಿದ್ದಾರೆ ಎನ್ನುವು ಆರೋಪ ಇವರ ಮೇಲಿದೆ.
ವೇತನ ಪಾವತಿಯಾಗದ ಬಗ್ಗೆ ಏತ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ಅವರು ಉಡಾಫೆ ಉತ್ತರ ನೀಡುತ್ತಾ ಕಾಲಹರಣ ಮಾಡುತ್ತಾ ಬಂದಿರುತ್ತಾರೆ. ಗುತ್ತಿಗೆ ಪಡೆದಿರುವ ಶಿವಮೊಗ್ಗ ಜಿಲ್ಲೆ ಗುತ್ತಿಗೆದಾರರಾದ ಆರ್.ಆರ್. ಸರ್ವೀಸ, ಭದ್ರಾವತಿ ಇವರನ್ನು ಕೇಳಿದಾಗ ಈ ಕುರಿತು ಕಿಂಚಿತ್ತು ಜವಾಬ್ದಾರಿ ತೆಗೆದುಕೊಳ್ಳದೇ ಸರ್ಕಾರದಿಂದ ಹಣ ಬಂದಿಲ್ಲ ಎಂದು ಜಾರಿಕೊಳ್ಳುತ್ತಿದ್ದಾರಂತೆ. ವೇತನ ಇಲ್ಲದೇ ಈ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಗೋಳು ಕೇಳುವವರಾರು ಇಲ್ಲದಂತಾಗಿದೆ.
ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆ ಇದೇಯೇ?: ಬಹುತೇಕ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ನೇಮಿಸಿಕೊಂಡು ವಿವಿಧ ಕಚೇರಿಗಳ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ಪೂರೈಸುವ ಟೆಂಟರ್ ಹಿಡಿಯುವ ಹಾಗೂ ಒಳ ಒಪ್ಪಂದದಲ್ಲಿ ಹೊಡೆಯುವ ಗುತ್ತಿಗೆದಾರರಿಗೆ ಕಾರ್ಮಿಕ ಇಲಾಖೆಯ ಯಾವದೇ ಮಾನದಂಡಗಳು ಅನ್ವಯಿಸದಂತೆ ಕಾಣುತ್ತಿಲ್ಲ. ಇಎಸ್ಐ, ಪಿಎಫ್ ಹಾಗೂ ಸಕಾಲಕ್ಕೆ ಸಂಬಳವನ್ನು ಯಾವೊಂದು ಏಜೆನ್ಸಿಗಳು ನೀಡುತ್ತಿಲ್ಲ. ಇದಕ್ಕೆ ಏತ ನೀರಾವರಿ ಯೋಜನೆಯ ಸಿಬ್ಬಂದಿ ಸರಬರಾಜು ಗುತ್ತಿಗೆ ಪಡೆದಿರುವ ಆರ್.ಆರ್. ಸರ್ವೀಸ, ಭದ್ರಾವತಿ ಇವರು ಹೊರತಾಗಿಲ್ಲ. ಈ ವಿಷಯ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗ ಗೊತ್ತಿದೆ. ಆದರೆ ಇಲಾಖೆಯ ಅಧಿಕಾರಿಗಳು ಏನಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಕಾರ್ಮಿಕರದ್ದಾಗಿದೆ.
ಶಿಗ್ಗಾಂವ ಏತ ನೀರಾವರಿ ಯೋಜನೆಯ ಜಾಕ್ವೆಲ್ ಹಾಗೂ ಪಂಪ್ಹೌಸ್ನಲ್ಲಿ ಕೆಲಸಮಾಡುತ್ತಿರುವ ಸಿಬ್ಬಂದಿಯೇ ಬೇರೆ, ಅಸಲಿಗೆ ಗುತ್ತಿಗೆದಾರರ ಬಳಿ ಹೆಸರುಗಳು ಇರುವ ಸಿಬ್ಬಂದಿಯೇ ಬೇರೆ ಬೇರೆ ಆಗಿದ್ದಾರೆ. ಈ ಕುರಿತು ಗುತ್ತಿಗೆ ಸಿಬ್ಬಂದಿಗಳು ಸವಣೂರು ತಾಲೂಕಿನ ಕಾರ್ಮಿಕ ಇಲಾಖೆಯಲ್ಲಿ ಮಾಹಿತಿ ಕೇಳಿದರೇ ಅವರು ಸಹ ಕಾರ್ಮಿಕರ ಹಿತ ಕಾಯದೇ ಗುತ್ತಿಗೆದಾರರ ಹಿತ ಬಯಸುವ ರೀತಿ ನಡೆದುಕೊಳ್ಳುತ್ತಿರುವುದು ಅನೇಕ ಸಂಶಯಗಳಿಗೆ ಕಾರಣವಾಗಿದೆ. ಸಕಾಲಕ್ಕೆ ವೇತನವಾಗದೇ ಪರದಾಡುತ್ತಿರುವ ಸಿಬ್ಬಂದಿಯ ಗೋಳನ್ನು ಕೇಳುವವರು ಯಾರು?