ಚುನಾವಣಾ ವೀಕ್ಷಕರು, ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಮತಎಣಿಕೆ ಕಾರ್ಯ ಸುಗಮ
—
*ಶಿಗ್ಗಾಂವ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು*
ಹಾವೇರಿ: ಶಿಗ್ಗಾಂವ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಠಾಣ ಯಾಸೀರ್ಅಹ್ಮದ್ಖಾನ್ ಅವರು ಗೆಲುವು ಸಾಧಿಸಿದ್ದಾರೆ.
ದೇವಗಿರಿ ಸರ್ಕಾರಿ ಇಂಜಿನೀಯರಿಂಗ್ ಕಾಲೇಜಿನಲ್ಲಿ ನವೆಂಬರ್ 23ರಂದು ನಡೆದ ಮತ ಎಣಿಕೆ ಮುಕ್ತಾಯದ ನಂತರ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕರಾದ ಕಮಲರಾಮ್ ಮೀನಾ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರ ಸಮ್ಮುಖದಲ್ಲಿ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಫಲಿತಾಂಶ ಪ್ರಕಟಿಸಿದರು. ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪಠಾಣ ಯಾಸೀರ್ಅಹ್ಮದ್ಖಾನ್ ಅವರಿಗೆ ಇದೆ ವೇಳೆ ಪ್ರಮಾಣ ಪತ್ರ ನೀಡಿದರು.
*13,448 ಮತಗಳ ಅಂತರದಿಂದ ಗೆಲುವು*: ಇವಿಎಂ ಮತಗಳು ಹಾಗೂ ಅಂಚೆ ಮತಪತ್ರ ಎಣಿಕೆ ಕಾರ್ಯ ಮುಕ್ತಾಯದ ನಂತರ ಅಭ್ಯರ್ಥಿ ಪಠಾಣ ಯಾಸೀರ್ ಅಹ್ಮದ್ಖಾನ್ ಅವರು 1,00,756 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು. ಸಮೀಪದ ಪ್ರತಿಸ್ಪರ್ಧಿ ಭರತ ಬೊಮ್ಮಾಯಿ ಅವರು 87,308 ಮತಗಳನ್ನು ದಾಖಲಿಸಿದರು. ಒಟ್ಟು 525 ಅಂಚೆ ಮತಗಳ ಪೈಕಿ 348 ಬಿಜೆಪಿಗೆ ಮತ್ತು 169 ಕಾಂಗ್ರೆಸ್ ಪಕ್ಷಕ್ಕೆ ಹಂಚಿಕೆಯಾದವು.
*ಅಭ್ಯರ್ಥಿವಾರು ಮತಗಳಿಸಿದ ವಿವರ*: ಚುನಾವಣಾ ಕಣದಲ್ಲಿದ್ದ ಖಾಜಾ ಮೋಹಿದ್ದೀನ್ ಗುಡಗೇರಿ ಅವರು 664 ಮತಗಳನ್ನು, ರವಿ ಕೃಷ್ಣಾ ರೆಡ್ಡಿ ಅವರು 6 ಅಂಚೆ ಮತಗಳು ಸೇರಿ ಒಟ್ಟು 1876 ಮತಗಳನ್ನು, ಡಾ.ಜಿ.ಎಚ್.ಇಮ್ರಾಪುರ ಅವರು 89, ಸಿದ್ದಪ್ಪ ಹೊಸಳ್ಳಿ ಅವರು 1 ಅಂಚೆ ಮತ ಸೇರಿ 80, ಎಸ್ ಎಸ್ ಪಾಟೀಲ 184 ಹಾಗೂ ಸತ್ಯಪ್ಪ ನೀಲಪ್ಪ ದೇಸಾಯಿ ಅವರು 1 ಅಂಚೆ ಮತ ಸೇರಿ 463 ಮತಗಳನ್ನು ಪಡೆದುಕೊಂಡರು.
*25 ಮತಗಳು ತಿರಸ್ಕೃತ*: 525 ಅಂಚೆ ಮತಗಳು ಹಾಗೂ 1,90,895 ಇವಿಎಂ ಮತಗಳು ಸೇರಿ ಕ್ರಮಬದ್ಧವಾದ ಒಟ್ಟು 1,91,420 ಮತಗಳ ಪೈಕಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ 1,00,756 ಮತಗಳು ಮತ್ತು ಬಿಜೆಪಿ ಅಭ್ಯರ್ಥಿಗೆ 87,308 ಮತಗಳು ಹಂಚಿಕೆಯಾಗಿವೆ. ಒಟ್ಟು 552 ಅಂಚೆ ಮತಗಳ ಪೈಕಿ 525 ಮತಗಳು ಕ್ರಮಬದ್ದವಾಗಿದ್ದು, 25 ಮತಗಳು ತಿರಸ್ಕೃತವಾಗಿವೆ.
*834 ಜನರಿಂದ ನೋಟಾಗೆ ಮತ:* ಈ ಉಪ ಚುನಾವಣೆಯಲ್ಲಿ ಒಟ್ಟು 2,37,671 ಮತದಾರ ಪೈಕಿ ನವೆಂಬರ್ 13ರಂದು ನಡೆದ ಮತದಾನದ ವೇಳೆ 1,91,727 ಮತದಾರರು ಇವಿಎಂ ಮೂಲಕ ತಮ್ಮ ಮತ ಹಕ್ಕನ್ನು ದಾಖಲಿಸಿದ್ದು, ಈ ಪೈಕಿ ಎರಡು ಅಂಚೆ ಸೇರಿ ಒಟ್ಟು 834 ಜನರು ನೋಟಾಗೆ ಮತ ಚಲಾಯಿಸಿದ್ದಾರೆ.
*14 ಟೇಬಲ್, 18 ಸುತ್ತು*: ಬೆಳಿಗ್ಗೆ ಭದ್ರಾತಾ ಕೊಠಡಿ ತೆರೆದ ನಂತರ ಮತ ಎಣಿಕೆ ಕಾರ್ಯ ಆರಂಭವಾಗಿ 1 ರಿಂದ 18 ಸುತ್ತುಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಿತು. ಇವಿಎಂ ಮತಗಳ ಎಣಿಕೆ ಕಾರ್ಯಕ್ಕೆ 14 ಹಾಗೂ ಅಂಚೆ ಮತಪತ್ರ ಮತ್ತು ಸೇವಾ ಮತದಾರರ ಅಂಚೆ ಮತಪತ್ರ ಎಣಿಕೆಗಾಗಿ ತಲಾ 1 ಟೇಬಲ್ ಹಾಕಲಾಗಿತ್ತು. ಪ್ರತಿ ಟೇಬಲ್ಗೆ ತಲಾ ಒಬ್ಬರು ಎಣಿಕೆ ಮೇಲ್ವಿಚಾರಕರು, ಎಣಿಕೆ ಸಹಾಯಕರು ಹಾಗೂ ಎಣಿಕೆ ಮೈಕ್ರೋ ವೀಕ್ಷಕರನ್ನು ನಿಯೋಜಿಸಲಾಗಿತ್ತು.
*ಅಧಿಕಾರಿಗಳು ಸಿಬ್ಬಂದಿಗೆ ಮಾರ್ಗದರ್ಶನ*: ಮತ ಎಣಿಕೆ ಕಾರ್ಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಅಕ್ಷಯ್ ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಂಶುಕುಮಾರ, ಅಪರ ಜಿಲ್ಲಾಧಿಕಾರಿಗಳಾದ ಡಾ.ನಾಗರಾಜ್ ಎಲ್ ಅವರು ಎಣಿಕಾ ಕೇಂದ್ರದಲ್ಲಿದ್ದು ಮತ ಎಣಿಕಾ ಕಾರ್ಯಕ್ಕೆ ನಿಯೋಜನೆಯಾದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಾರ್ಗದರ್ಶನ ಮಾಡಿದರು.
*ಪೊಲೀಸ್ ಬಂದೋಬಸ್ತ್:* ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ 4 ಡಿ.ಎಸ್.ಪಿ, 9 ಸಿ.ಪಿ.ಐ, 25-ಪಿ.ಎಸ್.ಐ, 29-ಎ.ಎಸ್.ಐ, 250-ಹೆಚ್.ಸಿ/ಪಿ.ಸಿಗಳು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದರು. ಎಣಿಕೆ ಕೇಂದ್ರದ ಭದ್ರತೆಗಾಗಿ ಕೆ.ಎಸ್.ಆರ್.ಪಿ.ಯ ಎರಡು ತುಕಡಿಗಳನ್ನು ಮತ್ತು ನಾಲ್ಕು ಡಿ.ಆರ್. ತುಕಡಿಗಳನ್ನು ಸಹ ನಿಯೋಜಿಸಲಾಗಿತ್ತು.
*ನಿಷೇಧಾಜ್ಞೆ ಜಾರಿ*: ದೇವಗಿರಿ ಸರ್ಕಾರಿ ಇಂಜಿನೀಯರಿಂಗ್ ಕಾಲೇಜಿನ ಆವರಣದ 200ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಮತ ಎಣಿಕೆ ವಿವರದ ಮಾಹಿತಿಗಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಧ್ಯಮ ಕೇಂದ್ರ ತೆರೆಯಲಾಗಿತ್ತು. ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಯಾದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬೆಳಗಿನ ಉಪಹಾರ ಹಾಗೂ ಚಹಾ ಮತ್ತು ಮಧ್ಯಾಹ್ನ ವೇಳೆ ಊಟದ ವ್ಯವಸ್ಥೆ ಮಾಡಲಾಗಿತ್ತು.
*ಜಿಲ್ಲಾಧಿಕಾರಿಗಳಿಂದ ಅಭಿನಂದನೆ:* ಚುನಾವಣಾ ವೀಕ್ಷಕರಾದ ಕಮಲರಾಮ್ ಮೀನಾ ಅವರ ಸಮ್ಮುಖದಲ್ಲಿ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾರ್ಯವನ್ನು ಯಶಸ್ವಿಗೊಳಿಸಲಾಗಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಂದ ಸ್ವೀಪ್ ಚಟುವಟಿಕೆ ಉತ್ತಮವಾಗಿ ನಡೆಯಿತು. ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೂಕ್ತ ಭದ್ರತಾ ವ್ಯವಸ್ಥೆಯಾಯಿತು. ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಆರ್ಓ ಹಾಗೂ ಬೇರೆ ಬೇರೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯು ಅಚ್ಚುಕಟ್ಟಾಗಿ ಚುನಾವಣೆಯ ಕಾರ್ಯನಿರ್ವಹಿಸಿದರು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.