ಸತತ ಪ್ರಯತ್ನ ಹಾಗೂ ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ: ಜಿಲ್ಲಾಧಿಕಾರಿ ಡಾ . ವಿಜಯಮಹಾಂತೇಶ ದಾನಮ್ಮನವರ
ಹಾವೇರಿ : ಸತತ ಪ್ರಯತ್ನ ಹಾಗೂ ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ. ನಿಮ್ಮ ಗುರಿ ಸ್ಪಷ್ಟವಾಗಿರಲಿ, ಆ ಗುರಿ ತಲುಪುವವರೆಗೆ ನಿಲ್ಲಬೇಡಿ ಎಂದು ಜಿಲ್ಲಾಧಿಕಾರಿ ಡಾ . ವಿಜಯಮಹಾಂತೇಶ ದಾನಮ್ಮನವರ ಅವರು ಹೇಳಿದರು.
ನಗರದ ಜಿ.ಎಚ್.ಕಾಲೇಜಿನಲ್ಲಿ ಶನಿವಾರ ಹಾವೇರಿ ಜಿಲ್ಲಾಡಳಿತ ಹಾವೇರಿ ಹಾಗೂ ಬೆಂಗಳೂರು ವಾಸವಿ ಅಕಾಡೆಮಿ ಸಯೋಗದಲ್ಲಿ ಆಯೋಜಿಸಲಾದ ಯು.ಪಿ.ಎಸ್.ಸಿ ಸಾಧಕರಿಗೆ ಸನ್ಮಾನ ಹಾಗೂ ಯು.ಪಿ.ಎಸ್.ಸಿ/ ಕೆ.ಪಿ.ಎಸ್.ಸಿ ಪರೀಕ್ಷೆಯ ಉಚಿತ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಹಾವೇರಿ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಯುಪಿಎಸ್ಸಿ ಕುರಿತು ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ಹಾಗೂ ಪ್ರೇರಣೆ ನೀಡುವುದು ಅಗತ್ಯವಾಗಿದೆ. ಮನುಷ್ಯನಾಗಿ ಹುಟ್ಟಿದ ಮೇಲೆ ಏನಾದರೂ ಸಾಧನೆ ಮಾಡಬೇಕು. ಮಾನವ ಜೀವನ ದೊಡ್ಡದು ಇದನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಪುರಂದರದಾಸರು ಹೇಳಿದ್ದಾರೆ. ಜೀವನದಲ್ಲಿ ಪ್ರಬಲ ಗುರಿ ಇರಬೇಕು ಹಾಗೂ ಇರುವ ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು.
ನಮ್ಮ ಯೋಚನೆಗಳು ಹೇಗಿರುತ್ತೇವೆ ಅದೇ ರೀತಿ ನಾವು ಇರುತ್ತೇವೆ. ವಿಮಾನ ಕಂಡು ಹಿಡಿದ ರೈಟ ಬ್ರದರ್ಸ್ ಹಾಗೂ ಬಲ್ಪ್ ಕಂಡು ಹಿಡಿದ ಥಾಮಸ್ ಆಲ್ವಾ ಎಡಿಸನ್ ಗುರಿ ಸಾದಿಸುವವರೆಗೆ ಛಲ ಬಿಡಲಿಲ್ಲ. ಅದೇ ರೀತಿ ಗುರಿ ಕಡೆ ಮಾತ್ರ ನಮ್ಮ ದೃಷ್ಟಿ ಇರಬೇಕು. ಶಿಸ್ತು, ಸಮಯ ಪ್ರಜ್ಞೆ, ಹಠ ಹಾಗೂ ಛಲ ಇರಬೇಕು ಎಂದು ಸಲಹೆ ನೀಡಿದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಲ್ ಅವರು ಮಾತನಾಡಿ, ಜಿಲ್ಲೆಯಿಂದ ಇಬ್ಬರು ಉತ್ತೀರ್ಣರಾಗಿರುವುದು ಹೆಮ್ಮೆಯ ವಿಷಯ. ಜಿಲ್ಲೆಯಲ್ಲಿ ಹೆಚ್ಚು ವಿದ್ಯಾರ್ಥಿಗಳು ಯುಪಿಎಸ್ಸಿಗೆ ತಯಾರಾಗಬೇಕು. ನಾನು ಐದು ಸಾರಿ ಬರೆದು ನಾಲ್ಕು ಬಾರಿ ಆಗಲಿಲ್ಲ. ಐದನೇ ಬಾರಿ ಆಗಿದೆ. ಎಷ್ಟೇ ಒತ್ತಡ ಅಡೆತಡೆ ಬಂದರೂ ಕುಗ್ಗಬೇಡಿ. ನಿಮ್ಮ ಕಣ್ಣ ಮುಂದೆ ಗುರಿ ಮಾತ್ರ ಇರಬೇಕು. ಇಂತಹ ಸಂದರ್ಭದಲ್ಲಿ ಪಾಲಕರ ಪ್ರೋತ್ಸಾಹ ಸಹ ಬಹಳ ಮುಖ್ಯವಾಗಿದೆ. ಹಾಗಾಗಿ ಅಬುಸಲೀಂ ಹಾಗೂ ಸಚಿನ್ ಪಾಲಕರಿಗೆ ಅಭಿನಂದನೆಗಳು ಎಂದು ಹೇಳಿದರು.
ಯುಪಿಎಸ್ಸಿನಲ್ಲಿ ರೇಲ್ವೆ, ಅರಣ್ಯ, , ಕಸ್ಟಮ್ಸ್, ಐಟಿ ಸೇರಿದಂತೆ ಇತರೆ ೨೧ ಸೇವೆಗಳಿವೆ. ಮಾನಸಿಕ ಗಟ್ಟಿತನ ಇಲ್ಲಿ ಬಹಳ ಮುಖ್ಯವಾಗಿರುತ್ತದೆ. ದಿನಪತ್ರಿಕೆ ಓದಲೇಬೇಕು. ಮಾಕ್ ಟೆಸ್ಟ್ ಹಾಜರಾಗಬೇಕು, ಸಾಮಾನ್ಯ ಜ್ಞಾನದ ಪುಸ್ತಕಗಳನ್ನು ಓದಬೇಕು. ಎಲ್ಲ ಪುಸ್ತಕಗಳನ್ನು ಒಟ್ಟಿಗೆ ಓದುವ ಬದಲು ಒಂದರ ನಂತರ ಮತ್ತೊಂದು ಓದಬೇಕು. ನಿಮ್ಮ ಜಾಣ್ಮೆ ಹಾಗೂ ಬುದ್ಧಿವಂತಿಕೆಯಿAದ ಯುಪಿಎಸ್ ಸಿ ಮಾತ್ರವಲ್ಲ ಯಾವುದೇ ಪರೀಕ್ಷೆ ಆದರೂ ಬರೆಯಿರಿ ಎಂದು ಸಲಹೆ ನೀಡಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ ಮಾತನಾಡಿ, ಸಾಧನೆ ಮಾಡುವ ಮನಸ್ಸು ಇದ್ದರೆ ಯಾವುದೂ ಅಸಾಧ್ಯವಲ್ಲ. ನೀವು ಸಾಧನೆ ಮಾಡಿದಾಗ ಜಗತ್ತು ನಿಮ್ಮನ್ನು ಗುರಿತಿಸುತ್ತದೆ. ನಾವೂ ಸಹ ಗ್ರಾಮೀಣ ಪ್ರದೇಶದಿಂದ ಬಂದಿದ್ದೇವೆ. ತಂದೆ-ತಾಯಿ ಕೂಲಿಕಾರರು, ಕೃಷಿಕರು ಎಂದು ಹಿಂಜರಿಯಬೇಡಿ. ಪಿಯುಸಿ ಪಾಸಾದರೆ ಕಾನ್ಸ್ಟೇಬಲ್, ಪದವಿ ಉತ್ತೀರ್ಣರಾದವರು ಪಿ ಎಸ್ ಐ, ಐಪಿಎಸ್ ಆಗಬಹುದು ಹಾಗೂ ಕೆಪಿಎಸ್ಸಿ ಪಾಸಾದರೆ ಡಿವೈಎಸ್ಪಿ ಆಗಬಹುದು ಎಂದು ಹೇಳಿದರು.
ಯುಪಿಎಸ್ ಸಿ ಸಾಧಕ ಸಚಿನ್ ಗುತ್ತೂರ ಮಾತನಾಡಿ, ನಾನು ನಾಲ್ಕನೇ ಪ್ರಯತ್ನದಲ್ಲಿ ಪಾಸಾಗಿರುವೆ. ಫಲಿತಾಂಶ ಬಂದ ಮೇಲೆ ಎಲ್ಲೆಡೆ ಸನ್ಮಾನ ಮಾಡುತ್ತಿದ್ದಾರೆ.
ನಾನು ಕೋಡಿಯಾಲ ಗ್ರಾಮದವನು ಓದಿದ್ದು ಹರಿಹರ ಹಾಗೂ ಮೈಸೂರು ಮೆಡಿಕಲ್ ಕಾಲೇಜ್ನಲ್ಲಿ. ಯುಪಿಎಸ್ಸಿ ಎದುರಿಸಲು ಐದು ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಏನುಮಾಡಬೇಕು ಯಾಕೆ ಮಾಡಬೇಕು ಹಾಗೂ ನಿರ್ಧಿಷ್ಟ ಗುರಿಯ ಅರಿವು ಇರಬೇಕು, ಸ್ಪಷ್ಟತೆ ಇರಬೇಕು ಆಗ ಮಾತ್ರ ಸಫಲತೆ ಸಿಗುತ್ತದೆ , ಒಳ್ಳೆಯ ಸ್ನೇಹಿತರು, ಒಳ್ಳೆಯ ಮಾರ್ಗದರ್ಶಕರು ಇರಲಿ, ಸ್ಮಾರ್ಟ್ ಟೈಮ್ ಟೇಬಲ್ ಅಳವಡಿಸಿಕೊಳ್ಳಿ. ಏನೇ ಕೆಲಸ ಮಾಡಿದರೂ ಪರೀಕ್ಷೆಗೆ ಅನುಕೂಲ ಆಗುವಂತೆ ಇರಬೇಕು. ಧೈರ್ಯದಿಂದ ಮುನ್ನುಗ್ಗಿ, ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಸಲಹೆ ನೀಡಿದರು.
ಸನ್ಮಾನ: ಯು.ಪಿ.ಎಸ್.ಸಿ ಸಾಧಕರಾದ ಸಚಿನ್ ಬಿ ಜಿ ಹಾಗೂ ಅಬುಸಾಲಿಯಾಖಾನ್ ಕುಲಕರ್ಣಿ ಹಾಗೂ ಪಾಲಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ : ಎಲ್ ನಾಗರಾಜ, ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ, ವಾಸವಿ ಅಕಾಡೆಮಿ ಉಪನ್ಯಾಸಕ ಇಳ್ಳೂರು ಮೋಹನರಾಜ,
ಎಂ.ಇ.ಎಸ್ ಕಾಲೇಜ್ ನಿವೃತ್ತ ಪ್ರಾಂಶುಪಾಲ ಡಾ. ಟಿ ಜಿ ಜನಾರ್ಧನ, ಕೋಟಕ್ ಮಹೀಂದ್ರಾ ಬ್ಯಾಂಕ್ನಿವೃತ್ತ ಕಾರ್ಯಕಾರಿ ಉಪಾಧ್ಯಕ್ಷ ಮಹೇಶ್ ಬಿ, ಜಿ.ಎಚ್.ಕಾಲೇಜ್ ಪ್ರಾಂಶುಪಾಲ ಪ್ರೊ : ಎಂ ಎಂ ಹೊಳ್ಳಿಯವರ ಇತರರು ಉಪಸ್ಥಿತರಿದ್ದರು. ಎಂ ಆರ್ ಎಂ ಟ್ರಸ್ಟ್ ಅಧ್ಯಕ್ಷ ಡಾ. ರಾಮ ಮೋಹನ ರಾವ್ ಕಾರ್ಯಕ್ರಮ ನಿರೂಪಿಸಿದರು.