
ಸಿಎಂ ಇದ್ದ ವೇದಿಕೆಯ ಮುಂಭಾಗದಲ್ಲಿದ್ದ ಪೆಂಡಾಲ್ ಬಿರುಗಾಳಿಗೆ ಗಡಗಡ
ಹಾವೇರಿ: ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ಖಾನ್ ಪಠಾಣ ಪರ ಪ್ರಚಾರಕ್ಕೆ ಧುಮುಕಿರುವ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಕ್ಷೇತ್ರದ ಹುಲಗೂರಿಲ್ಲಿ ಆಯೋಜಿಸಿದ್ದ ಪ್ರಚಾರಸಭೆಯ ಭಾಗವಹಿಸಿದ್ದ ವೇಳೆ ಅವರಿದ್ದ ವೇದಿಕೆಯ ಮುಂಭಾಗದಲ್ಲಿ ಪೆಂಡಾಲ ಶಾಮಿಯಾನವು ಜೋರಾದ ಬಿರುಗಾಳಿಗೆ ಅಲುಗಾಡಿ ಹಾರಿ ಹೋಗಿದ್ದು, ಈ ಅನಿರೀಕ್ಷಿತವಾಗಿ ನಡೆದ ಈ ಅವಘಡ ಕೆಲಹೊತ್ತು ಆತಂಕ ಸೃಷ್ಟಿಸಿತ್ತು.
ಕಾರ್ಯಕ್ರಮ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಜೋರಾದ ಗಾಳಿ ಬೀಸಿದ ಪರಿಣಾಮ ಶಾಮಿಯಾನ ಗಾಳಿಗೆ ಅತ್ತಿತ್ತ ಅಲುಗಾಡಿದೆ. ಕೂಡಲೇ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಇತರರು ಹಾರುವ ಸ್ಥಿತಿಯಲ್ಲಿದ್ದ ಶಾಮಿಯಾನವನ್ನು ಭದ್ರಪಡಿಸಲು ಮುಂದಾದರು. ಆದರೂ, ಜೋರಾದ ಗಾಳಿಗೆ ಶಾಮಿಯಾನದ ಮೇಲ್ಛಾವಣಿ ಹಾರಿ ಹೋಯಿತು. ಇನ್ನು ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸ್ಥಳೀಯ ನಾಯಕರು ಆಸೀನರಾಗಿದ್ದರು. ಈ ಘಟನೆಯಿಂದ ಅಲ್ಲಿದ್ದವರೆಲ್ಲ ಗಲಿಬಿಲಿಗೊಂಡರು. ಆದರೆ, ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ.

