“ಸಿಎಂ ಬೊಮ್ಮಾಯಿ ನನ್ನ ಮಾಮ” ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುವೆ: ಸುದೀಪ್ ಘೋಷಣೆ
ಬೆಂಗಳೂರು: ಕಿಚ್ಚ ಸುದೀಪ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಬೆಂಬಲ ನೀಡಲು ಇಷ್ಟಪಡುತ್ತೇನೆ ಎಂದು ಬುಧವಾರ ಬಹಿರಂಗವಾಗಿ ಘೋಷಿಸಿದ್ದಾರೆ. ಜತೆಗೆ, ಬಸವರಾಜ ಬೊಮ್ಮಾಯಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ, ಯಾವುದೇ ಪಕ್ಷದ ಟಿಕೆಟ್ ಕೇಳಿಯೂ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವುದು ಸಾಕಷ್ಟು ಇದೆ. ಆದರೆ, ನನಗೆ ಬೆಂಬಲ ನೀಡಿದವರ, ನನ್ನ ಏಳಿಗೆಗೆ ಕಾರಣರಾವದರ ಪರವಾಗಿ ಪ್ರಚಾರ ಮಾಡುತ್ತೇನೆ. ಚಿತ್ರರಂಗಕ್ಕೆ ಬಂದಾಗ ಕೆಲವೇ ಕೆಲವರು ನನ್ನಪರ ನಿಂತಿದ್ದರು. ಅಂಥವರಲ್ಲಿ ನನ್ನ ಮಾಮ ಸಿಎಂ ಬೊಮ್ಮಾಯಿ ಕೂಡ ಒಬ್ಬರು. ಅವರನ್ನು ನಾನು ಮಾಮ ಎಂದೇ ಕರೆಯುತ್ತೇನೆ. ನಾನು ಅವರ ಪರವಾಗಿ ನಿಲ್ಲಲಿದ್ದೇನೆ ಎಂದು ಘೋಷಿಸಿದ್ದಾರೆ.
ಈ ಮಧ್ಯೆ, ನನ್ನ ಮೇಲಿನ ಪ್ರೀತಿ ವಿಶ್ವಾಸದಿಂದ ಸುದೀಪ್ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ. ನಾನು ಹೇಳಿದ ಕಡೆ ನಟ ಸುದೀಪ್? ಪ್ರಚಾರ ಮಾಡುತ್ತಾರೆ ಎಂದೂ ಹೇಳಿದ್ದಾರೆ. ಹಾಗಿದ್ದರೆ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮಾತ್ರ ಸುದೀಪ್ ಪ್ರಚಾರ ಮಾಡಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ.
ಸುದೀಪ್ ಅವರು ಚುನಾವಣೆ ಸಂದರ್ಭದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವುದು ಇದೇ ಮೊದಲಲ್ಲ. ೨೦೧೮ರ ಚುನಾವಣೆಯಲ್ಲಿಯೂ ಅವರು ಕೆಲವು ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ. ಆ ಕುರಿತ ಮಾಹಿತಿ ಇಲ್ಲಿದೆ.
ಶ್ರೀರಾಮುಲು ಪರ ಪ್ರಚಾರ ಮಾಡಿದ್ದ ಕಿಚ್ಚ ಸುದೀಪ್: ೨೦೧೮ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸುದೀಪ್ ಅವರು ಶ್ರೀರಾಮುಲು ಅವರನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದರು. ಜತೆಗೆ, ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಚುನಾವಣಾ ಪ್ರಚಾರ ನಡೆಸಲು ತೆರಳಿದ್ದರು. ಆದರೆ, ಕೊನೇ ಕ್ಷಣದಲ್ಲಿ ಚುನಾವಣಾ ಆಯೋಗ ತಡೆ ನೀಡಿದ್ದರಿಂದ ಪ್ರಚಾರ ಕಾರ್ಯದಲ್ಲಿ ಭಾಗವಹಿಸದೇ ಹಿಂತಿರುಗಬೇಕಾಗಿ ಬಂದಿತ್ತು. ಶ್ರೀರಾಮುಲು ಪರ ನಟ ಸುದೀಪ್ ಚುನಾವಣಾ ಪ್ರಚಾರ ನಡೆಸಲು ಆಯೋಗ ಬೆಳಿಗ್ಗೆ ೯ರಿಂದ ೧೨ ಗಂಟೆವರೆಗೂ ಸಮಯ ನೀಡಿತ್ತು. ಆದರೆ, ಸುದೀಪ್ ಅವರು ಮಧ್ಯಾಹ್ನ ೧ ಗಂಟೆಗೆ ಬಂದ ಕಾರಣ ಬೇರೆ ಪಕ್ಷಗಳ ಪ್ರಚಾರಕ್ಕೆ ಸಮಯ ನಿಗದಿಯಾಗಿರುವ ಕಾರಣ ಅವರಿಗೆ ಅವಕಾಶ ದೊರೆತಿರಲಿಲ್ಲ.
ಸುದೀಪ್ ರಾಜಕೀಯ ಪ್ರವೇಶ: ಅಭಿಮಾನಿಗಳಿಂದ ವಿರೋಧ.!
ನಟ ಸುದೀಪ್ ಅವರು ಬಿಜೆಪಿ ಪರವಾಗಿ ಪ್ರಚಾರ ನಡೆಸುವುದಾಗಿ ಘೋಷಣೆಮಾಡಿರವ ಬೆನ್ನಲ್ಲಿಯೇ ಅವರ ಅಭಿಮಾನಿಗಳಿಂದ ವ್ಯಾಪಕ ವಿರೋಧವ್ಯಕ್ತವಾಗಿದೆ. ನೀವು ರಾಜಕೀಯಕ್ಕೆ ಬರದೇ ಇರುವುದು ನಮಗೆ ಸಂತೋಶವಾಗುತ್ತದೆ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.