ಹಾವೇರಿಜಿಲ್ಲೆಯಾದ್ಯಂತ ತುಂತುರು ಮಳೆ, ಮೋಡಬಿತ್ತನೆ ಮುಂದುವರಿಕೆ
ಹಾವೇರಿ: ಬುಹು ನೀರಿಕ್ಷಿತ ಪ್ರಾಯೋಗಿಕ ಮೋಡ ಬಿತ್ತನೆಗೆ ಸೋಮವಾರ ಸಂಜೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲರು ಚಾಲನೆ ನೀಡಿದರು. ಹಾವೇರಿ ಹಾಗೂ ರಾಣೇಬೆನ್ನೂರು ತಾಲೂಕುಗಳಲ್ಲಿ ಸೋಮವಾರ ಸಂಜೆ ಮೋಡ ಬಿತ್ತನೆ ಆರಂಭಿಸಿದ ವಿಮಾನವು ಮೋಡಗಳಮೇಲೆ ರಾಸಾಯನಿಕ ದ್ರಾವಣ ಸುರಿಸಿದ ಪರಿಣಾಮ ಜಿಲ್ಲೆಯ ಕೆಲವು ಕಡೆಗಳಲ್ಲಿ ಅರ್ಧಗಂಟೆಗೂ ಹೆಚ್ಚುಕಾಲ ತುಂತುರು ಮಳೆಯಾಗಿದೆ. ಮೋಡ ಬಿತ್ತನೆ ಮೊದಲದಿನ ಫಲಪ್ರದವಾಗಿದೆ ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿ ಇನ್ನು ಎರಡು ದಿನ ಮೋಡಬಿತ್ತನೆಯ ಕಾರ್ಯ ನಡೆಯಲಿದೆ.
ಸೋಮವಾರ ಬೆಳಿಗ್ಗೆಯಿಂದ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮೋಡ ಕವಿದ ವಾತಾವರಣ ಇತ್ತು. ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಕಾಶ್ ಕೋಳಿವಾಡ ಒಡೆತನದ ಪಿಕೆಕೆ ಸಂಸ್ಥೆಯಿಂದ ಹಾವೇರಿ ಜಿಲ್ಲೆಯ ರೈತರಿಗಾಗಿ ಉಚಿತವಾಗಿ ಮೋಡ ಬಿತ್ತನೆ ಮಾಡಲಾಗುತ್ತಿದೆ. ಜಿಲ್ಲೆಯ ರೈತರ ಅನುಕೂಲಕ್ಕಾಗಿ ಮೋಡ ಬಿತ್ತನೆ ಮಾಡುತ್ತಿದ್ದು, ಸೋಮವಾರ ಪ್ರಾಯೋಗಿಕವಾಗಿ ಹುಬ್ಬಳ್ಳಿ ಏರ್ಪೋರ್ಟ್ನಿಂದ ಮೋಡ ಬಿತ್ತನೆ ಮಾಡಲಾಯಿತು.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆಗೆ ಸಚಿವ ಹೆಚ್ ಕೆ. ಪಾಟೀಲ್, ಉಪಸಭಾಪತಿ ರುದ್ರಪ್ಪ ಲಮಾಣಿ ಚಾಲನೆ ನೀಡಿದರು. ಈಸಂದರ್ಭದಲ್ಲಿ ಹಿರೇಕೆರೂರು ಶಾಸಕ ಯು.ಬಿ.ಬಣಕಾರ, ಮಾಜಿ ಸಂಸದ ಐ.ಜಿ.ಸನದಿ, ಜಿಲ್ಲಾ ಪಂಚಾಯತಿ ಸಿಇಓ ಅಕ್ಷಯ ಶ್ರೀಧರ ಮತ್ತಿತರರು ಹಾಜರಿದ್ದರು. ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ ಬೆನ್ನಲ್ಲಿಯೇ ಮೋಡ ಬಿತ್ತನೆಗೆ ಚಾಲನೆಮಾಡುವುದಾಗಿ ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದ್ದರು.ಮೋಡ ಬಿತ್ತನೆಗೆ ಸರ್ಕಾರದಿಂದ ಅನುಮತಿ ಪಡೆಲಾಗಿದ್ದು, ಹವಾಮಾನ ಇಲಾಖೆಯ ಸಲಹೆಯ ಮೇರೆಗೆ ಮೋಡಬಿತ್ತನೆ ಕಾರ್ಯ ನಡೆದಿದೆ.
ಮೋಡ ಬಿತ್ತನೆಯ ವಿಮಾನ ಮೊದಲದಿನ ಮೋಡಗಳ ಲಭ್ಯತೆಯ ಅನುಗುಣವಾಗಿ ಅಲ್ಲಲ್ಲಿ ಮೋಡಬಿತ್ತನೆ ಮಾಡಿದೆ. ಜಿಲ್ಲೆಯ ಕೆಲವುಕಡೆಗಳಲ್ಲಿ ಸೋಮವಾರರಾತ್ರಿ ಮಳೆ ಆಗುತ್ತಿರುವ ಬಗ್ಗೆ ಮಾಹಿತಿಲಭ್ಯವಾಗಿದೆ. ಇನ್ನು ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಹೆಚ್ಚಿನ ಮೋಡಗಳು ಸಿಗಲಿವೆ ಎನ್ನುವ ಮಾಹಿತಿಯಿದೆ. ಈಗಾಗಲೇ ಮೋಡಬಿತ್ತನೆ ಮಾಡಲು ಜಿಲ್ಲಾಧಿಕಾರಿಗಳು ಹಾಗೂ ಕೇಂದ್ರ ಸರ್ಕಾರದಿಂದ ಪರವಾನಗಿ ಪಡೆದುಕೊಳ್ಳಲಾಗಿದೆ. ಮೋಡಬಿತ್ತನೆಯ ವಿಮಾನವು ಎರಡುದಿನಗಳ ಕಾಲ ಸ್ಥಳೀಯವಾಗಿ ಲಭ್ಯವಿದ್ದು, ಮೋಡಗಳ ಲಭ್ಯತೆಯ ಅನುಸಾರ ಮೋಡಬಿತ್ತನೆಮಾಡಲಿದೆ.ಬರ ಪಿಡಿತ ತಾಲೂಕುಗಳನ್ನು ಸರಕಾರ ಘೋಷಣೆ ಮಾಡುತ್ತಿರುವ ಬೆನ್ನಲ್ಲೆಯೇ ಹಾವೇರಿ ಜಿಲ್ಲೆಗೆ ಸಿಮಿತವಾಗಿ ಮೊಡ ಬಿತ್ತನೆ ಕಾರ್ಯಆರಂಭವಾಗಿದ್ದು, ರೈತರು ಹಾಗೂ ಜನರು ಮೋಡಬಿತ್ತನೆಯ ಬಗ್ಗೆ ಬಹು ನಿರೀಕ್ಷೆ ಹೊಂದಿದ್ದಾರೆ.
ಹವಾಮಾನ ಇಲಾಖೆಯಿಂದ ಮಾಹಿತಿ: ಇನ್ನು ಜಿಲ್ಲೆಯಲ್ಲಿ ಮಳೆಯ ಮೋಡಗಳು ಹೆಚ್ಚಾಗಿರುವ ಅವಧಿಯ ಬಗ್ಗೆ ಮಾಹಿತಿ ಕಲೆ ಹಾಕಿರುವ ಶಾಸಕ ಪ್ರಕಾಶ್ ಕೋಳಿವಾಡ ಅವರು, ರಾಜ್ಯ ಹವಾಮಾನ ಇಲಾಖೆಯ ಸಂಪೂರ್ಣ ಮಾಹಿತಿಯನ್ನು ಆಧರಿಸಿ ಮೋಡ ಬಿತ್ತನೆ ಕಾರ್ಯವನ್ನು ಕೈಗೊಂಡಿದ್ದಾರೆ. ಮುಂದಿನ ಎರಡು ದಿನಗಳ ಕಾಲ ಹಾವೇರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆ ಸುರಿಸುವ ಮೋಡಗಳು ಕಂಡು ಬರಲಿವೆ. ಈ ವೇಳೆ ಮೋಡಗಳು ಹೆಚ್ಚಾಗಿರುವ ಪ್ರದೇಶದಲ್ಲಿ ಬಿತ್ತನೆ ಮಾಡುವ ಮೂಲಕ ಮಳೆ ಸುರಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಮೋಡ ಬಿತ್ತನೆ ಯಶಸ್ವಿ
ಬರದಛಾಯೆಯ ಹಿನ್ನಲೆಯಲ್ಲಿ ಹಾವೇರಿಜಿಲ್ಲೆಯ ರೈತರ ಅನುಕೂಲಕ್ಕಾಗಿ ತಮ್ಮ ಒಡೆತನದ ಪಿಕೆಕೆ ಸಂಸ್ಥೆಯಿಂದ ಮೋಡ ಬಿತ್ತನೆಗೆ ಚಾಲನೆ ನೀಡಲಾಗಿದ್ದು. ಮೊದಲದಿನ ಮೋಡ ಬಿತ್ತನೆ ಯಶಸ್ಸಿಯಾಗಿದೆ. ಮೋಡ ಬಿತ್ತನೆಯಿಂದ ಮೊದಲ ದಿನ ಜಿಲ್ಲೆಯಲ್ಲಿ ಮಳೆಯಾದ ಬಗ್ಗೆ ಸೆಟ್ಲೈಟ್ನಿಂದ ಮಾಹಿತಿ ಲಭ್ಯವಾಗಿದೆ. ಮೋಡಬಿತ್ತನೆ ಯಶಸ್ವಿಯಾಗಿದ್ದು, ಮೋಡಬಿತ್ತನೆಯ ಕಾರ್ಯವನ್ನು ಮುಂದುವರೆಸುವುದಾಗಿ ಶಾಸಕ ಪ್ರಕಾಶ್ ಕೋಳಿವಾಡ ತಿಳಿಸಿದ್ದಾರೆ.