ಹಾವೇರಿಯಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ, ವಿಜಯಸ್ತಂಭ ಮಾದರಿಗೆ ಗೌರವಸಲ್ಲಿಸಿದ ಮುಖಂಡರು
ಹಾವೇರಿ: ಭೀಮಾ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ೧೮೧೮ ಜನವರಿ ೦೧ರಂದು ೫೦೦ ಮಂದಿ ಮಹಾರ್ ಸೈನಿಕರು, ೨೮,೦೦೦ ಮಂದಿ ಪೇಶ್ವೆಗಳ ಶೋಷಣೆ, ಅಸ್ಪೃಶ್ಯತೆ ವಿರುದ್ಧ ಹೋರಾಡಿ, ಯುದ್ಧ ಗೆದ್ದು ಬಂದ ಈ ನೆನಪನ್ನು ನಾವೆಲ್ಲ ಸ್ಮರಿಸಿಕೊಳ್ಳುವ ದಿನ ಇದಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಮುಖಂಡ ಲಿಂಗರಾಜ ದಂಡೆಮ್ಮನವರ ಹೇಳಿದರು.
ಇಲ್ಲಿನ ಡಾ.ಅಂಬೇಡರ್ಕ ವೃತ್ತದಲ್ಲಿ ಜೈಭೀಮ ಜೈಟಿಪ್ಪು ಸುಲ್ತಾನ ಸ್ವಾಭಿಮಾನಿ ಸಮಿತಿವತಿಯಿಂದ ಹಮ್ಮಿಕೊಂಡಿದ್ದ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಾಬಾ ಸಾಹೇಬರು ಕೋರೆಗಾಂವ್ ವಿಜಯೋತ್ಸವ ಆಚರಿಸುವ ಮೂಲಕ ನಮ್ಮೆಲ್ಲರಿಗೂ ಈ ಬಗ್ಗೆ ಹೆಮ್ಮೆ, ಅಭಿಮಾನ ಮೂಡಿಸಿದ್ದಾರೆ ಎಂದರು.
ಡಿಎಸ್ಎಸ್ ಜಿಲ್ಲಾ ಸಂಚಾಲಕ ಸಂಜಯಗಾಂಧಿ ಸಂಜೀವಣ್ಣನವರ ಮಾತನಾಡಿ, ನೂರಾರು ವರ್ಷಗಳ ಹಿಂದೆ ಅಸ್ಪೃಶ್ಯರ ಹಕ್ಕು ಪಡೆಯಲು ಹೋರಾಡಿ ಹುತಾತ್ಮರಾದ ಮತ್ತು ಯುದ್ಧ ಗೆದ್ದ ನಮ್ಮ ಹಿರಿಯರಿಗೆ ಗೌರವ ಸಮರ್ಪಣೆ ಮಾಡಲು ಹೆಮ್ಮೆಯಿಂದ ಈ ಆಚರಣೆ ಮಾಡಲಾಗುತ್ತದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ನಿರ್ಮಿಸಲಾಗಿದ್ದ ಮಹಾರಾಷ್ಟ್ರ ಪೆರ್ನೆಗ್ರಾಮದಲ್ಲಿನ ವಿಜಯಸ್ತಂಭ ಮಾದರಿಗೆ ಮುಖಂಡರು ಗೌರವಸಲ್ಲಿಸಿದರು. ಸಂಭ್ರಮಾ ಚರಣೆಯಲ್ಲಿ ಸುರೇಶ ಚಲವಾದಿ, ಮೋತಿಲಾಲ ಪವಾರ,ರೆಹಮತ್ತುಲ್ಲಾ ಮುಲ್ಲಾ, ಸುನಿಲ್ ಜಮಾದಾರ, ನಾಸೀರ್ಖಾನ್ ಪಠಾಣ, ಖಾದರ ಧಾರವಾಡ, ಈರಪ್ಪ ಲಮಾಣಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.