
ಹಾವೇರಿಯ ಐತಿಹಾಸಿಕ ಪುರಸಿದ್ದೇಶ್ವರ ದೇವಸ್ಥಾನಕ್ಕೆ ಖದೀಮರ ಕನ್ನ, ಪೂಜಾ ಸಾಮಾಗ್ರಿ ಕಳ್ಳತನ, ನಿದ್ದೆಯಲ್ಲಿದ್ದರೇ ಭಾರತೀಯ ಪುರಾತತ್ವ ಇಲಾಖೆಯ ಸಿಬ್ಬಂದಿ!
ಹಾವೇರಿ; ನಗರದ ಪುರಾತನ ಹಾಗೂ ಹಾವೇರಿನಗರದ ಹೆಮ್ಮೆಯಾಗಿರುವ ಇಲ್ಲಿನ ಐತಿಹಾಸಿಕ ಪುರಸಿದ್ದೇಶ್ವರ ದೇವಸ್ಥಾನಕ್ಕೆ ಕನ್ನ ಹಾಕಿರುವ ಖದೀಮರು ದೇವರ ಪೂಜಾ ಸಾಮಗ್ರಿಗಳನ್ನು ಕಳುವು ಮಾಡಿಕೊಂಡು ಪರಾರಿಯಾಗಿದ್ದಾರೆ.
ಜೂ.೧೭ ರ ರಾತ್ರಿ ಸುಮಾರು ೦೮.೦೦ ಗಂಟೆಯಿಂದ ಜೂ.೨೧ ರ ಬೆಳಿಗ್ಗೆ ೦೬.೦೦ ಗಂಟೆಯ ನಡುವಿನ ಅವಧಿಯಲ್ಲಿ ಹಾವೇರಿ ಶಹರದ ರೈಲ್ವೇ ಸ್ಟೇಶನ್ ರೋಡ ಹತ್ತಿರ ಇರುವ ಭಾರತೀಯ ಪುರಾತತ್ವ ಇಲಾಖೆಗೆ ಸೇರಿರುವ ಶ್ರೀ ಪುರಸಿದ್ದೇಶ್ವರ ದೇವಸ್ಥಾನದಲ್ಲಿ ಯಾರೋ ಕಳ್ಳರು ಪ್ರಾಂಗಣದಲ್ಲಿನ ಗಂಟೆಯನ್ನು ನಂತರ ಗರ್ಭಗುಡಿಗೆ ಹಾಕಿದ ಚೀಲಕವನ್ನ ಯಾವುದೋ ಆಯುಧದಿಂದ ಮುರಿದು ಒಳಹೊಕ್ಕು ಅಂತರಾಳದಲ್ಲಿದ್ದ ಹಿತ್ತಾಳೆಯ ಕಳಸವನ್ನು ನಂತರ ಗರ್ಭಗುಡಿಯಲ್ಲಿದ್ದ ೦೨ ಹಿತ್ತಾಳೆಯ ಸಮೇಗಳನ್ನು ಹೀಗೆ ಅ:ಕಿ ೨೫,೦೦೦/- ರೂ ಗಳ ಕಿಮ್ಮತ್ತಿನ ಸುಮಾರು ೧೮ ಕೆಜಿ ತೂಕದ ಹಿತ್ತಾಳೆಯ ದೇವರ ಪೂಜಾ ಸಾಮಾಗ್ರಿಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
ಈ ಬಗ್ಗೆ ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುವ (ಮಲ್ಟಿ ಟಾಸ್ಕಿಂಗ್ ಸ್ಟಾಪ್) ವಿಶ್ವನಾಥ ರಾಮಚಂದ್ರರಾವ್ ದೇಸಾಯಿ ಹಾವೇರಿ ಶಹರ ಪೊಲೀಸ್ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಶಹರ ಪೊಲೀಸ್ಠಾಣೆಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ?: ಹಾವೇರಿನಗರ ಎಂದ ತಕ್ಷಣ ನೆನಪಿಗೆ ಬರುವ ಐತಿಹಾಸಿಕ ಪ್ರಾಚೀನ ಪುರಸಿದ್ದೇಶ್ವರ ದೇವಸ್ಥಾನ ನೆನಪಿಗೆ ಬರುತ್ತದೆ. ಈ ದೇವಸ್ಥಾನಕ್ಕೆ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡಿ ದೇವಸ್ಥಾನದ ಸೌಂದರ್ಯವನ್ನು ಕಣ್ಣತುಂಬಿಕೊಳ್ಳುತ್ತಾರೆ. ಇಲ್ಲಿನ
ಭಾರತೀಯ ಪುರಾತತ್ವ ಇಲಾಖೆಯ ಸಿಬ್ಬಂದಿ ದೇವಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗಳನ್ನು ಕಳ್ಳರಂತೆ ನೋಡುತ್ತಾರೆ. ದೇವಸ್ಥಾನದ ಪೋಟೋಗಳನ್ನು ತಗೆದುಕೊಳ್ಳಲು ಮುಂದಾದ ಸಂದರ್ಭದಲ್ಲಿ ಪ್ರವಾಸಿಗರ ಜೊತೆಗೆ ಪೋಟೋ ತಗೆಯದಂತೆ ತಕರಾರು ಮಾಡುತ್ತಾರೆ. ತಗೆದ ಫೋಟೋಗಳನ್ನು ಡಿಲಿಟ್ ಸಹ ಮಾಡಿಸುತ್ತಾರೆ. ಹಾವೇರಿಯ ಮಾಧ್ಯಮದವರ ಜೊತೆಗೂ ಭಾರತೀಯ ಪುರಾತತ್ವ ಇಲಾಖೆಯ ಸಿಬ್ಬಂದಿ ಪೋಟೋ, ತಗೆಯದಂತೆ, ಚಿತ್ರೀಕರಣ ಮಾಡದಂತೆ ತಕರಾರು ಮಾಡಿ ಜಗಳವಾಡಿದ ನಿದರ್ಶನಗಳಿವೆ. ಜನರು ಪೋಟೋ ತಗೆಯದಂತೆ ಜನರನ್ನು ಕಳ್ಳರಂತೆ ಕಾಯುವ ಸಿಬ್ಬಂದಿ ಕಳ್ಳರನ್ನು ಕಾಯದೇ ಇರುವುದು ವಿಪರ್ಯಾಸವೇ ಸರಿ.