ಹಾವೇರಿ ತೋಟಗಾರಿಕೆ ಇಲಾಖೆಯಲ್ಲಿ ೯ ಕೋಟಿ ರೂ ಅವ್ಯವಹಾರ ಆರೋಪ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ
ಹಾವೇರಿ: ಹಾವೇರಿ ತಾಲೂಕಿನ ತೋಟಗಾರಿಕೆ ಇಲಾಖೆಯಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಹಾಗೂ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ೨೦೨೩-೨೪ ಹಾಗೂ ೨೦೨೪-೨೫ ನೇಸಾಲಿನಲ್ಲಿ ಅವ್ಯಹಾರ ನಡೆದಿದ್ದು, ಈ ಬಗ್ಗೆ ತನಿಖೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಕಿಸಾನ ಕಲ್ಯಾಣ ಸಂಘವು ಜಿಲ್ಲಾ ಪಂಚಾಯತ್ ಸಿಇಓ ರುಚಿ ಬಿಂದಲ್ ಅವರಿಗೆ ಗುರುವಾರ ಮನವಿ ಅರ್ಪಿಸಿ ಒತ್ತಾಯಿಸಿದೆ.
ಹಾವೇರಿ ತಾಲೂಕಿನ ತೋಟಗಾರಿಕೆ ಇಲಾಖೆಯಲ್ಲಿ ಸಾಕುಷ್ಟು ಅವ್ಯಹಾರಗಳು ನಡೆದಿವೆ. ೨೦೨೩-೨೪ ನೇ ಸಾಲಿನ ಅವಧಿಯಲ್ಲಿ ೩೮೨ ರೈತರ / ಫಲಾನುಭವಿಗಳನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ಆಯ್ಕೆ ಮಾಡಿ ಒಟ್ಟು ಅಂದಾಜು ೧೦೦೦ ಎಕರೆಗೆ ಸೂಕ್ಷ್ಮ ನೀರಾವರಿ ಉಪಕರಣಗಳನ್ನು ರೈತರಿಗೆ ಪೂರೈಸಿರುತ್ತಾರೆ. ೨೦೨೪-೨೫ ನೇ ಸಾಲಿನ ಅವಧಿಯಲ್ಲಿ ೧೧೨೮ ರೈತರ / ಫಲಾನುಭವಿಗಳನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ಆಯ್ಕೆ ಮಾಡಿ ಒಟ್ಟು ಅಂದಾಜು ೨೦೦೦ ಎಕರೆಗೆ ಸೂಕ್ಷ್ಮ ನೀರಾವರಿ ಉಪಕರಣಗಳನ್ನು ರೈತರಿಗೆ ಪೂರೈಸಿರುತ್ತಾರೆ.
ಸೂಕ್ಷ್ಮ ನೀರಾವರಿ ಉಪಕರಣಗಳ ಪೂರೈಕೆಗೆ ಸಂಬಂಧಿಸಿದಂತೆ ಇಲಾಖೆಯ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಪಕ್ಕದ ಜಮೀನಿನಲ್ಲಿ ಬೋರವೆಲ್ಲ ಇರುವ ರೈತನಿಂದ ನೀರು ಪೂರೈಸುತ್ತೇನೆಂದು ಒಪ್ಪಂದ ಕರಾರು ಪತ್ರ ಮಾಡಿಕೊಂಡು ಬೋರವೆಲ್ಲ ಇಲ್ಲದೇ ಇರುವ ರೈತನ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ಅಕ್ರಮ ವಾಗಿ ಫಲಾನುಭವಿಯನ್ನಾಗಿ ಆಯ್ಕೆಮಾಡಿ ಸೂಕ್ಷ್ಮ ನೀರಾವರಿ ಉಪಕರಣಗಳನ್ನು ಪೂರೈಸಿರುತ್ತಾರೆ.
ಫಲಾನುಭವಿ ಆಯ್ಕೆ ಮಾಡುವ ಮೊದಲು ಸಹಾಯಕ ತೋಟಗಾರಿಕೆ ಅಧಿಕಾರಿಗಳು ಜಿ.ಪಿ.ಎಸ್ ಪೋಟೋ ತೆಗೆದುಕೊಳ್ಳಬೇಕಾಗುತ್ತದೆ. ಹಾಗೂ ಸೂಕ್ಷ್ಮ ನೀರಾವರಿ ಉಪಕರಣಗಳನ್ನು ಅಳವಡಿಸಿದ ನಂತರ ಮತ್ತೊಮ್ಮೆ ಜಿಪಿಎಸ್ ಪೋಟೋ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಅಧಿಕಾರಿಗಳು ಈ ಪ್ರಕ್ರಿಯೆಯನ್ನು ಮಾಡದೇ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿ ಮಾಡಿ ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.
ಫಲಾನುಭವಿಗಳ/ರೈತರ ಜಮೀನಿನಲ್ಲಿ ಹಾವೇರಿ ತಾಲೂಕಿನ ತೋಟಗಾರಿಕೆ ಅಧಿಕಾರಿಗಳು ರೈತರ ಜಮೀನಿನಲ್ಲಿ ಜಿ.ಪಿಎಸ್ ಮಾಡುವ ಸಂದರ್ಭದಲ್ಲಿ ೨-೩ ಗುಂಟೆಯಲ್ಲಿ ಟಮೆಟೋ ಸಸಿ, ಚಿಲ್ಲಿ ಸಸಿಗಳನ್ನು ಹಾಗೂ ಇತರೆ ಸಸಿಗಳನ್ನು ನೆಟ್ಟು ರೈತನನ್ನು ನಿಲ್ಲಿಸಿಕೊಂಡು ಜಿಪಿಎಸ್ ಪೋಟೋ ಮಾಡಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.
೨೦೨೩-೨೪ & ೨೦೨೪-೨೫ ನೇ ಸಾಲಿನಲ್ಲಿ ಆಯ್ಕೆ ಮಾಡಿದ ರೈತರಿಂದ- ಫಲಾನುಭವಿಗಳಿಂದ ಯೋಜನಾ ವೆಚ್ಚದ ೧೦% ರಷ್ಟನ್ನು ರೈತರಿಂದ ವಂತಿಗೆಯನ್ನು ಬರಿಸಿಕೊಳ್ಳದೇ ಸೂಕ್ಷ್ಮ ನೀರಾವರಿ ಉಪಕರಣಗಳನ್ನು ಪೂರೈಸುವ ಕಂಪನಿಗಳೇ ೧೦% ರ ರೈತರ ವಂತಿಗೆ ಬರಿಸಿರುತ್ತಾರೆ. ಆಯ್ಕೆ ಮಾಡಿದ ಫಲಾನುಭವಿಗಳಿಗೆ ಸೂಕ್ಷ್ಮ ನೀರಾವರಿ ಉಪಕರಣಗಳನ್ನು ಪೂರ್ತಿ ಪ್ರಮಾಣದಲ್ಲಿ ಪೂರೈಸದೇ ೫೦% ರಷ್ಟನ್ನು ಪೂರೈಸಲಾಗಿದೆ. ಎಕರೆಗೆ ೬ ಬಂಡಲ್ ೧೬-೪-೪೦ ಎಮಿಟ್ಟಿಂಗ್ ಪೈಪ ಕ್ಲಾಸ್-೧೧ ಪೈಪಗಳನ್ನು ಅರ್ಧದಷ್ಟು ನೀಡಿರುತ್ತಾರೆ. ೭೫ ಎಂ.ಎಂ. ಪಿಯುಸಿ ಪೈಪ ಕ್ಲಾಸ್-೨ ೪ಕೆ.ಜಿ ೧೦ ಪೈಪಗಳನ್ನು ಮಾತ್ರ ಪೂರೈಸಿರುತ್ತಾರೆ. ಇನ್ನಿತರೆ ಯಾವುದೇ ಉಪಕರಣಗಳನ್ನು ರೈತರಿಗೆ ನೀಡಿರುವುದಿಲ್ಲ.
ಸೂಕ್ಷ್ಮ ನೀರಾವರಿ ಉಪಕರಣಗಳನ್ನು ನಿರ್ವಹಿಸುವ ಬಗ್ಗೆ ರೈತರ ಫಲಾನುಭವಿಗಳಿಗೆ ನಿರ್ವಹಿಸುವ ಬಗ್ಗೆ ತಾಂತ್ರಿಕ ತರಬೇತಿಯನ್ನು ಸೂಕ್ಷ್ಮ ನೀರಾವರಿ ಉಪಕರಣಗಳನ್ನು ಪೂರೈಸುವ ಕಂಪನಿಯವರು ತರಬೇತಿ ನೀಡಬೇಕಾಗಿರುತ್ತದೆ. ಆದರೆ ಯಾವುದೇ ರೀತಿಯ ತಾಂತ್ರಿಕ ತರಬೇತಿಯನ್ನು ರೈತರಿಗೆ ನೀಡಿರುವುದಿಲ್ಲ. ಹಾಗೂ ಉಪಕರಣಗಳ ೩ ವರ್ಷಗಳ ವಾರಂಟಿ ಪ್ರಮಾಣ ಪತ್ರವನ್ನು ಯಾವುದೇ ರೈತರಿಗೆ ಕಂಪನಿಯವರು ನೀಡಿರುವುದಿಲ್ಲ.
ಹಾವೇರಿ ತಾಲೂಕಿನ ತೋಟಗಾರಿಕೆ ಇಲಾಖೆಯಲ್ಲಿ ೨೦೨೩-೨೪, ೨೦೨೪-೨೫ ಆಯ್ಕೆ ಮಾಡಿದ ಫಲಾನುಭವಿಗಳ/ ರೈತರ ಅಂದಾಜು ೩೦೦೦ ಎಕರೆಗೆ ಸೂಕ್ಷ್ಮ ನೀರಾವರಿಯ ಉಪಕರಣಗಳನ್ನು ಪೂರೈಸಲಾಗಿದೆ ಎಂದು ದಾಖಲೆ ಇರುತ್ತದೆ. ಆದರೆ ಎಕರೆಗೆ ಸರ್ಕಾರದ ನಿಯಮಾನುಸಾರ ರು. ೫೮೦೦೦/- ರಷ್ಟು ಉಪಕರಣಗಳನ್ನು ಪೂರೈಸಬೇಕಾಗಿರುತ್ತದೆ. (ಜಿಎಸ್ಟಿ ಸೇರಿ.) ಆದರೆ ಫಲಾನುಭವಿಗಳಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಉಪಕರಣಗಳನ್ನು ಪೂರೈಸುವ ಕಂಪನಿ ಅಧಿಕಾರಿಗಳು ಸೇರಿ ಅಕ್ರಮವಾಗಿ ರೈತರಿಗೆ ಉಪಕರಣಗಳನ್ನು ನೀಡದೇ ೧ಎಕರೆಗೆ ೨೫೦೦೦/- ಮಟಿರಿಯಲ್ ಉಳಿತಾಯ ಮಾಡಿಕೊಂಡಿರುತ್ತಾರೆ. ಈಆಕ್ರಮದಲ್ಲಿ ಸಾರ್ವಜನಿಕರ ತೆರಿಗೆ ಹಣ ಅಂದಾಜು ೭.೫೦ ಕೋಟಿಗೂ ಅಧಿಕ ಹಣವನ್ನು ಅಧಿಕಾರಿಗಳಾದ ಸಹಾಯಕ ತೋಟಗಾರಿಕೆ ನಿರ್ದೇಶಕ ಪರಶುರಾಮ ಹಲಕುರ್ಕಿ, ತೋಟಗಾರಿಕೆ ಉಪನಿರ್ದೇಶಕ ಸಿದ್ದರಾಮಯ್ಯ ಭರಗಿಮಠ ಹಾಗೂ ಅಧಿಕಾರಿಗಳಾದ ಬಸವರಾಜ ಬರೇಗಾರ, ರಾಘವೇಂದ್ರ ಹುಚ್ಚಣ್ಣನವರ, ವಿ.ಎಚ್. ತಂಗೋಡರ ಮತ್ತು ಕಂಪನಿಯ ಅಧಿಕಾರಿಗಳು ದುರುಪಯೋಗ ಮಾಡಿಕೊಂಡಿರುತ್ತಾರೆ ಎಂದು ದೂರಲಾಗಿದೆ.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಆಡಿಯಲ್ಲಿ ಹಾಗೂ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸುಮಾರು ೯ ಕೋಟಿ ರೂಗಳನ್ನು ಇಲಾಖೆ ಅಧಿಕಾರಿಗಳು ಹಾಗೂ ಸೂಕ್ಷ್ಮ ನೀರಾವರಿ ಉಪಕರಣಗಳನ್ನು ಪೂರೈಸುವ ಕಂಪನಿಯ ಅಧಿಕಾರಿಗಳು ಸೇರಿ ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಈ ಬಗ್ಗೆ ಜಿ.ಪಂ.ಇಸಿಓ ಅವರು ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆಗೆ ಸಮಿತಿ ರಚಿಸಿ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಕರ್ನಾಟಕ ಕಿಸಾನ್ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಶಿವಕುಮಾರ ತಳವಾರ, ರೈತ ಮುಖಂಡ ಫಕ್ಕೀರೇಶ ಕಾಳೆ ಮನವಿ ಅರ್ಪಿಸಿದ್ದಾರೆ.