ಹಾವೇರಿ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರೇಣುಕಾ-ಪೂಜಾ ನಡುವೆ ಪೈಪೋಟಿ, ಉಪಾಧ್ಯಕ್ಷ ಸ್ಥಾನಕ್ಕೆ ಸಾತೇನಹಳ್ಳಿ ಬಿಟ್ಟರೇ ಮತ್ತಿನ್ಯಾರು?
ಹಾವೇರಿ: ಕಳೆದ ೧೮ ತಿಂಗಳಿಂದ ನೆನೆ ಗುದಿಗೆ ಬಿದ್ದಿದ್ದ ಹಾವೇರಿ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಸಂಜೆ ಸರ್ಕಾರ ಮೀಸಲಾತಿ ಪ್ರಕಟಿಸಿದೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಮೀಸಲು ನಿಗದಿ ಪಡಿಸಲಾಗಿದೆ. ಮೀಸಲಾತಿ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ-ಉಪಾಧಕ್ಷ ಸ್ಥಾನದ ಆಕಾಂಕ್ಷೆಗಳು ಅಧಿಕಾರ ಹಿಡಿಯಲು ಲಾಭಿ ಆರಂಭಿಸಿದ್ದಾರೆ.
ನಗರಸಭೆಯಲ್ಲಿ ೩೧ ಸದಸ್ಯರ ಸ್ಥಾನಗಳ ಪೈಕಿ ಕಾಂಗ್ರೆಸ್ ೧೫ ಸ್ಥಾನಗಳನ್ನು ಹೊಂದಿದೆ, ೭ ಜನ ಪಕ್ಷೇತರ ಸದಸ್ಯರಲ್ಲಿ ಇಬ್ಬರು ಸದಸ್ಯರುಗಳಾದ ಮಲ್ಲಿಕಾರ್ಜುನ ಸಾತೇನಹಳ್ಳಿ, ಉಮೇಶ ಕುರುಬರ ಅವರು ಕಾಂಗ್ರೆಸ್ಗೆ ಬೆಂಬಲ ವ್ಯಕ್ತಪಡಿಸಿರುವ ಕಾರಣದಿಂದ ಸಧ್ಯಕ್ಕೆ ಕಾಂಗ್ರೆಸ್ ೧೭ಸದಸ್ಯರ ಬಲ ಹೊಂದಿದೆ.
ಇನ್ನೂ ಸ್ಥಳೀಯ ಶಾಸಕ ರುದ್ರಪ್ಪ ಲಮಾಣಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್ ಅವರು ಹಾವೇರಿಯಲ್ಲಿ ಮತದಾನ ಹೊಂದಿರು ಕಾರಣಕ್ಕಾಗಿ ಅವರಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕುಇದೆ. ಹೀಗಾಗಿ ನಗರಸಭೆ ಯಲ್ಲಿ ಕಾಂಗ್ರೆಸ್ ಪಕ್ಷ ೧೯ ಸ್ಥಾನಗಳನ್ನು ಹೊಂದಿ ಸದ್ಯಕ್ಕೆ ಬಹುಮತ ಹೊಂದಿದೆ.
ಇನ್ನೂ ಬಿಜೆಪಿ ೯ ಸದಸ್ಯರುಗಳನ್ನು ಹೊಂದಿದೆ. ಬಿಜೆಪಿಗೆ ೭ ಜನ ಪಕ್ಷೇತರ ಸದಸ್ಯರುಗಳಲ್ಲಿ ಐವರು ಸದಸ್ಯರು ಬೆಂಬಲವನ್ನು ವ್ಯಕ್ತಪಡಿಸಿದ ಕಾರಣಕ್ಕಾಗಿ ಬಿಜೆಪಿ ೧೪ ಸದಸ್ಯರ ಬಲಹೊಂದಿದೆ. ಬಿಜೆಪಿಯ ಸಂಸದ ಬಸವರಾಜ್ ಬೊಮ್ಮಾಯಿ ಅವರಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಇರುವುದರಿಂದ ಅಲ್ಲಿಗೆ ಬಿಜೆಪಿ ೧೫ ಸ್ಥಾನಗಳ ಬಲ ಹೊಂದಿದೆ.
ಈ ಮಧ್ಯೆ ಹಾವೇರಿ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ಆಗಿರುವದರಿಂದ ಕಾಂಗ್ರೆಸ್ನಲ್ಲಿ ಸಾಮಾನ್ಯ ಮಹಿಳಾ ವರ್ಗದ ರೇಣುಕಾ ರವಿ ಪುತ್ರನ್ನ ಹಾಗೂ ಪೂಜಾ ಬಸಯ್ಯ ಹಿರೇಮಠ ಅವರ ಹೆಸರುಗಳು ಸದ್ಯದಮಟ್ಟಿಗೆ ಪ್ರಭಲವಾಗಿ ಕೇಳಿಬರುತ್ತಿವೆ. ಈ ಇಬ್ಬರು ಸಾಮಾನ್ಯ ವರ್ಗದ ಮಹಿಳೆಯರಾಗಿದ್ದು, ಇವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಇನ್ನು ಬಿಜೆಪಿಯಲ್ಲಿಯೂ ಸಹ ಸಾಮಾನ್ಯ ವರ್ಗದ ಮಹಿಳಾ ಕ್ಷೇತ್ರದಿಂದ ಆಯ್ಕೆಯಾಗಿರುವ ಮಹಿಳಾ ಸದಸ್ಯರುಗಳಿದ್ದಾರೆ. ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿರುವ ಸದಸ್ಯರು ಬಿಜೆಪಿಯಲ್ಲಿದ್ದಾರೆ. ಇವರು ನಡೆ ಏನು? ಎನ್ನುವುದು ಕೂತುಹಲ ಕೆರಳಿಸಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಸದ್ಯದ ವಿದ್ಯಮಾನದ ಪ್ರಕಾರ ಆರ್ಥಿಕವಾಗಿ ಹಿಂದುಳಿದ ವರ್ಗ ಕ್ಷೇತ್ರದಿಂದ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಸಾತೇನಹಳ್ಳಿ ಅವರ ಹೆಸರು ಪ್ರಭಲವಾಗಿ ಕೇಳಿಬರುತ್ತಿದೆ. ಕಾರಣ ಈ ಹಿಂದೆ ಸಂಜೀವ ನೀರಲಗಿ ಅಧ್ಯಕ್ಷರಾಗುವ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನಗರಸಭೆಯ ಅಧಿಕಾರ ಹಿಡಿಯಲು ಭಾರೀ ಪೈಪೋಟಿ ನಡೆದಿತ್ತು. ಆ ವೇಳೆ ಮಲ್ಲಿಕಾರ್ಜುನ ಸಾತೇನಹಳ್ಳಿ ಮೂಲ ಬಿಜೆಪಿ ಆದರೂ ಅವರು ಪಕ್ಷೇತರರಾಗಿ ಗೆದ್ದು ಕಾಂಗ್ರೆಸ್ಗೆ ಬೆಂಬಲ ಸೂಚಿಸಿದ್ದರಿಂದ ಕಾಂಗ್ರೆಸ್ಗೆ ನಗರಸಭೆಯ ಆಡಳಿತ ದಕ್ಕಿತ್ತು. ಹೀಗಾಗಿ ಕಾಂಗ್ರೆಸ್ ವರಿಷ್ಠರು ಸಾತೇನಹಳ್ಳಿಯವರಿಗೆ ಬೆಂಬಲ ನೀಡಿದರೆ ಅಚ್ಚರಿಪಡಬೇಕಿಲ್ಲ.
ಆದರೆ ಆಗಿನ ಸಂದರ್ಭವೇ ಬೇರೆಯಾಗಿತ್ತು. ಅಂದಿನ ಶಾಸಕ ನೆಹರು ಓಲೇಕಾರ ಬಿಜೆಪಿಯಲ್ಲಿ ಪ್ರಭಲ ನಾಯಕರಾಗಿದ್ದರು. ಆದರೆ ಇಂದು ಅವರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿರುವ ಕಾರಣ ಅನೇಕ ಬದಲಾವಣೆಗಳಾಗಿವೆ. ಮೇಲ್ನೋಟಕ್ಕೆ ಕಾಂಗ್ರೆಸ್ ನಗರಸಭೆಯಲ್ಲಿ ಬಹುಮತ ಹೊಂದಿದೆ. ಆದರೆ ಕುದರೆ ವ್ಯಾಪಾರ, ಕತ್ತೆ ವ್ಯಾಪಾರಗಳು ನಡೆದರೆ? ಎನ್ನುವ ಪ್ರಶ್ನೆಯ ನಡುವೆ, ಹಾವೇರಿ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರೇಣುಕಾ ಪುತ್ರನ್ ಹಾಗೂ ಪೂಜಾ ಹಿರೇಮಠರ ನಡುವೆ ಪೈಪೋಟಿ ನಡೆದಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಸಾತೇನಹಳ್ಳಿ ಬಿಟ್ಟರೇ ಅಂತ ಪ್ರಭಲ ಹೆಸರು ಕೇಳಿಬರುತ್ತಿಲ್ಲ. ಮುಂದಿನದಿನಳಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಅಧಿಸೂಚನೆ ಪ್ರಕಟಿಸಿದ ನಂತರ ಬೇರೆ ಆಕಾಂಕ್ಷಿಗಳು ಮುಂದೆ ಬಂದರೂ ಬರಬಹುದು.