ಹಾವೇರಿ: ಬಾಂಬ್/ಸ್ಪೋಟಕ ಪತ್ತೆ ಹಚ್ಚುವ ಕನಕ ಇನ್ನು ನೆನಪು ಮಾತ್ರ
ಹಾವೇರಿ: ಹಾವೇರಿ ಜಿಲ್ಲಾ ಪೊಲೀಸ್ ಘಟಕದಲ್ಲಿ ೨೦೧೯ರಿಂದ ಬಾಂಬ್/ಸ್ಪೋಟಕ ಪತ್ತೆ ಹಚ್ಚುವ ತಜ್ಞ ಎಂದೇ ಖ್ಯಾತಿ ಹೊಂದಿದ್ದ ಕನಕ ಶ್ವಾನ ಇನ್ನು ನೆನಪು ಮಾತ್ರ. ಪ್ರಸ್ತುತ ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ನಡೆಯುತ್ತಿರುವ ಹಂಪಿ ಉತ್ಸವದ ಕರ್ತವ್ಯಕ್ಕೆ ಎ.ಎಸ್.ಸಿ ತಂಡದೊಂದಿಗೆ ತೆರಳಿದ್ದ ವೇಳೆ ನಡೆದ ಅಪಘಾತದಲ್ಲಿ ತೀವೃವಾಗಿ ಗಾಯಗೊಂಡು ಬೆಳಿಗ್ಗೆ ೧೦.೩೫ರ ಸುಮಾರಿಗೆ ಗಂಟೆಗೆ ಮೃತಪಟ್ಟಿರುತ್ತದೆ.
ಹಂಪಿಯಲ್ಲಿ ನಡೆಯುತ್ತಿರುವ ಹಂಪಿ ಉತ್ಸವದ ಕರ್ತವ್ಯಕ್ಕೆ ಹಾಜರಾಗಿದ್ದ ಕನಕ ಶ್ವಾನವನ್ನು ಮಾ.೨ರಂದು ರಂದು ಬೆಳಿಗ್ಗೆ ೦೮.೧೫ ರ ಸುಮಾರಿಗೆ ಬೆಳಗಿನ ಮಲವಿಸರ್ಜನೆ ಮತ್ತು ವಾಕಿಂಗ್ಗೆ ರಾಮಕೃಷ್ಣ ಸ್ಕೂಲ್ ಹತ್ತಿರದ ಕಮಲಾಪುರ-ಪಿ.ಕೆ ಹಳ್ಳಿ ರಸ್ತೆಯಲ್ಲಿ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಕಮಲಾಪುರ ಕಡೆಯಿಂದ ಬರುತ್ತಿದ್ದ ಸಿಂಧನೂರು ಡೀಪೋದ ಕೆ.ಎಸ್.ಆರ್.ಟಿ.ಸಿ ಬಸ್, ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಶ್ವಾನಕ್ಕೆ ಡಿಕ್ಕಿ ಹೊಡೆದಿದ್ದು, ಬಸ್ನ ಎಡ ಭಾಗದ ಚಕ್ರವು ಶ್ವಾನದ ಮೇಲೆ ಹರಿದು ಹೋಗಿ ಗಾಯಗಳಾಗಿದ್ದು, ತಕ್ಷಣವೇ ಪೊಲೀಸ್ ಇಲಾಖೆಯ ವಾಹನದಲ್ಲಿ ಕನಕ ಶ್ವಾನವನ್ನು ಹೊಸಪೇಟೆಯ ಪಶು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೊಗಿದ್ದು, ವೈಧ್ಯರು ಚಿಕಿತ್ಸೆ ನೀಡಿದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಶ್ವಾನವು ಮೃತಪಟ್ಟಿದೆ.
ಕನಕ ಶ್ವಾನವು ಲ್ಯಾಬ್ರಡರ್ ರಿಟ್ರಿವರ್ ಎಂಬ ತಳಿಯಾದ್ದಾಗಿತ್ತು , ಹಾವೇರಿ ಜಿಲ್ಲಾ ಪೊಲೀಸ್ ಘಟಕದಲ್ಲಿ ೨೪.೧೨.೨೦೧೯ ರಿಂದ ಶ್ವಾನವು ಬಾಂಬ್/ಸ್ಪೋಟಕ ಪತ್ತೇ ದಳದಲ್ಲಿ ಪರಿಣಿತಿ ಹೊಂದಿದ ಶ್ವಾನವಾಗಿ ಕರ್ತವ್ಯ ನಿರ್ವಹಿಸುತ್ತಿತ್ತು. ಸದರಿ ಶ್ವಾನವು ೨೮.೦೧.೨೦೧೯ ರಂದು ಜನಿಸಿದ್ದು, ಶ್ವಾನವು ಸಿ.ಎ.ಆರ್ ದಕ್ಷಿಣ, ಆಡುಗೋಡೆ ಬೆಂಗಳೂರಿನಲ್ಲಿ ಸನ್ ೨೦೧೯ ರಲ್ಲಿ ೦೭ ತಿಂಗಳುಗಳ ಕಾಲ ತರಬೇತಿಯನ್ನು ಪಡೆದು ನಂತರ ಹಾವೇರಿ ಜಿಲ್ಲೆಯಲ್ಲಿ ಕರ್ತವ್ಯವನ್ನು ಪ್ರಾರಂಭ ಮಾಡಿತ್ತು.
ಕನಕ ಶ್ವಾನವು ಮೈಸೂರು ದಸರಾ, ಹಂಪಿ ಉತ್ಸವ, ಬೆಳಗಾವಿ ಅಧಿವೇಶನ, ವೈಮಾನಿಕ ಪ್ರದರ್ಶನ ಬೆಂಗಳೂರು ಮತ್ತು ೨೦೨೩ ರ ರಾಜ್ಯ ವಿಧಾನಸಭಾ ಚುನಾವಣೆ ಹಾಗೂ ೨೦೨೪ನೇ ಸಾಲಿನ ಲೋಕಸಭಾ ಚುನಾವಣೆ ಕರ್ತವ್ಯ ನಿರ್ವಹಿಸಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜ್ಯ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಬಂದೋಬಸ್ತ ಕರ್ತವ್ಯ ಹಾಗೂ ಅನೇಕ ಗಣ್ಯ ವ್ಯಕ್ತಿಗಳ ಬಂದೋಬಸ್ತ ಕರ್ತವ್ಯ ಹೀಗೆ ಒಟ್ಟು ೮೦ ಕ್ಕಿಂತ ಹೆಚ್ಚು ಕಾರ್ಯಕ್ರಮಗಳ ಬಂದೋಬಸ್ತ ಕರ್ತವ್ಯ ನಿರ್ವಹಿಸಿತ್ತು. ಕನಕ ಶ್ವಾನವು ಹಾವೇರಿ ಜಿಲ್ಲಾ ಪೊಲೀಸ್ ಘಟಕದಲ್ಲಿ ಪ್ರಮುಖ ಬಂದೋಬಸ್ತಗಳ ನಿರ್ವಹಣೆಯನ್ನು ತುಂಬಾ ಯಶಸ್ವಿಯಾಗಿ ನಿರ್ವಹಿಸಿತ್ತು. ಅಗಲಿದ ಕನಕ ಶ್ವಾನಕ್ಕೆ ಹಾವೇರಿ ಜಿಲ್ಲಾ ಪೊಲೀಸ್ ಘಟಕವು ಸಂತಾಪ ವ್ಯಕ್ತಪಡಿಸಿದೆ. ಕನಕ ಶ್ವಾನಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಕ್ರಿಯೆ ನೆರವೇರಿಸಲಾಯಿತು. ಶ್ವಾನವನ್ನು ನೋಡಿಕೊಳ್ಳುತ್ತಿದ್ದ ಸಿಬ್ಬಂದಿ ಕನಕಶ್ವಾನಕ್ಕೆ ಕಣ್ಣೀರ ವಿಧಾಯ ಹೇಳಿದರು.