ಹಾವೇರಿ: ಮಳೆಯಿಂದ ಹಾನಿಯಾದ ಮನೆಗಳ ನಿರ್ಮಾಣಕ್ಕೆ ಹೊಸ ಮಾರ್ಗಸೂಚಿ
-ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ
ಹಾವೇರಿ: ಅತಿವೃಷ್ಟಿಯಿಂದ ಸಂಪೂರ್ಣ ಹಾನಿಯಾದ ಮನೆಗಳ ನಿರ್ಮಾಣ ಕುರಿತು ಹೊಸ ಮಾರ್ಗಸೂಚಿಗಳ ಬಗ್ಗೆ ಇಂದು ಸಂಜೆ ಮಾನ್ಯ ಮುಖ್ಯಮಂತ್ರಿಗಳು ಸಭೆ ನಡೆಸಲಿದ್ದಾರೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ತಿಳಿಸಿದರು.
ಹಾನಗಲ್ ಪ್ರವಾಸಿ ಮಂದಿರದಲ್ಲಿ ಬುಧವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷ ಅನಾವೃಷ್ಟಿಯಾಗಿತ್ತು, ಈ ವರ್ಷ ಅತಿವೃಷ್ಟಿಯಿಂದ ರಾಜ್ಯದಲ್ಲಿ ಹಾನಿಯಾಗಿದೆ. ಜಿಲ್ಲೆಯಲ್ಲಿ ಜೀವಹಾನಿ, ಮನೆಹಾನಿ ಹಾಗೂ ಬೆಳೆಹಾನಿ ಸಂಭವಿಸಿದೆ. ಜೀವಹಾನಿಗಳಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಶಿಥಾಲವಸ್ಥೆಯ ಮಣ್ಣಿನ ಮನೆಗಳಲ್ಲಿ ವಾಸಿಸುವವರಿಗೆ ಶಾಲೆ-ಅಂಗನವಾಡಿಗಳಲ್ಲಿ ವಾಸ್ತವ್ಯಕ್ಕೆ ಅವಕಾಶ ನೀಡಲಾಗಿದೆ. ಮಳೆಯ ಸಂದರ್ಭದಲ್ಲಿ ಶಿಥಿಲಾವಸ್ಥೆ ಮಣ್ಣಿನ ಮನೆಗಳಲ್ಲಿ ಸಾರ್ವಜನಿಕರು ವಾಸಿಸಬಾರದು ಎಂದು ಮನವಿ ಮಾಡಿಕೊಂಡರು.
ಜಿಲ್ಲೆಯ ಹಾನಗಲ್ ಹಾಗೂ ಶಿಗ್ಗಾಂವ ತಾಲೂಕಿನಲ್ಲಿ ಅಧಿಕ ಮಳೆಯಿಂದ ಹಾನಿಯಾಗಿದ್ದು, ಇಂದು ಕುಣಿಮೆಳ್ಳಿಹಳ್ಳಿ, ನಾಗನೂರ, ಸಂಗೂರ, ಕೂಡಲ, ಬಾಳಂಬೀಡ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆಹಾನಿ ಹಾಗೂ ಮನೆಹಾನಿಗಳ ಪರಿಶೀಲನೆ ಮಾಡಲಾಗಿದೆ. ಶೇ.೫೩ ರಷ್ಟು ಬೆಳೆಹಾನಿ ಸರ್ವೇ ಮಾಡಲಾಗಿದೆ. ಮಳೆ ನಿಂತ ನಂತರ ಸಂಪೂರ್ಣ ಸರ್ವೇಮಾಡಲಾಗುವುದು ಎಂದು ತಿಳಿಸಿದರು.
ನಾಗನೂರ-ಕೂಡಲ ಸೇತುವೆ ಭೂಸ್ವಾಧೀನ ಪ್ರಕರಣ ಬಾಕಿ ಇರುವುದರಿಂದ ಕಾಮಗಾರಿ ವಿಳಂಬಾಗಿದೆ. ಆದಷ್ಟು ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು. ಶೇ.೬೫ ರಿಂದ ೭೦ ರಷ್ಟು ಕೆರೆಗಳನ್ನು ತುಂಬಿಸಲಾಗಿದೆ. ಬರುವ ದಿನಗಳಲ್ಲಿ ಎಲ್ಲ ಕೆರೆಗಳನ್ನು ತುಂಬಿಸಲಾಗುವುದು. ತಡಸ, ಆನೂರ ಹಾಗೂ ಹಂಸಭಾವಿ ನೀರಾವರಿ ಯೋಜನೆಗಳು ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ. ಇದರಿಂದ ೪೪೦ ಗ್ರಾಮಗಳಿಗೆ ನೀರಿನ ಸೌಲಭ್ಯ ದೊರೆಯಲಿದೆ ಎಂದರು.
ಹಾವೇರಿ ತಹಶೀಲ್ದಾರ ಕಚೇರಿ ಮೇಲ್ಛಾವಣಿ ಸೋರುತ್ತಿರುವ ಕಾರಣ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು. ಜಿಲ್ಲಾ ಆಸ್ಪತ್ರೆಗೆ ಶೀಘ್ರದಲ್ಲೇ ಹೊಸ ಎಂ.ಐ.ಆರ್.ಸ್ಕ್ಯಾನಿಂಗ್ ಯಂತ್ರ ಬರಲಿದೆ ಎಂದು ತಿಳಿಸಿದರು.
ಮನೆಹಾನಿ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಮಳೆಯಿಂದ ಐದು ಮನೆಗಳು ಸಂಪೂರ್ಣ, ೧೧ ಮನೆಗಳಿಗೆ ತೀವ್ರಹಾನಿ, ೧೪೪೪ ಮನೆಗಳಿಗೆ ಭಾಗಶಃ ಹಾನಿ ಸೇರಿ ೧೪೬೦ ಮನೆಗಳಿಗೆ ಹಾನಿಯಾಗಿದೆ. ೧೫ ದನದ ಕೊಟ್ಟಿಗೆಗಳಿಗೆ ಹಾನಿಯಾಗಿದೆ ಹಾಗೂ ೧೩ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಆರು ಮಾನವ ಜೀವಹಾನಿ ಹಾಗೂ ಮೂರು ಜಾನುವಾರು ಹಾನಿ ಸಂಭವಿಸಿದೆ. ಜೀವಹಾನಿಗಳಿಗೆ ತಲಾ ಐದು ಲಕ್ಷದಂತೆ ರೂ.೩೦ ಲಕ್ಷ ಪರಿಹಾರ ವಿತರಣೆ ಮಾಡಲಾಗಿದೆ ಎಂದರು.
ನದಿ ಪ್ರವಾಹದಿಂದ ಮುಳುಗಡೆಯಾದ ಸೇತುವೆಗಳ ಮೇಲೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಬ್ಯಾರಿಕೇಡಗಳನ್ನು ಹಾಕಿ ಸಾರ್ವಜನಿಕರು ಓಡಾಡದಂತೆ ಕ್ರಮವಹಿಸಲಾಗಿದೆ. ನದಿ ಪಾತ್ರದ ಗ್ರಾಮಗಳ ಸಾರ್ವಜನಿಕರಿ ನದಿ ಪಾತ್ರಕ್ಕೆ ಹೋಗದಂತೆ ಡಂಗುರದ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.
ಬೆಳೆಹಾನಿ: ಜಿಲ್ಲೆಯಲ್ಲಿ ಅಂದಾಜು ರೂ.೨೮೦.೮೪ ಮೊತ್ತದ ೩೮೨೮ ರೈತರ ೩೩೦೪ ಹೆಕ್ಟೇರ್ ಕೃಷಿ ಬೆಳೆ ಹಾಗೂ ರೂ. ೪೫೧.೧೬ ಲಕ್ಷ ಮೊತ್ತದ ೧೧೮೯ ರೈತರ ೪೭೪.೯೦ ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿಯಾಗಿದೆ. ಎನ್.ಡಿ.ಆರ್.ಎಫ್ ಮಾರ್ಗಸೂಚಿ ಅನ್ವಯ ಕೃಷಿ ಬೆಳೆಗೆ ರೂ.೨೮೦.೪೮ ಲಕ್ಷ ಹಾಗೂ ತೋಟಗಾರಿಕೆ ಬೆಳೆಗೆ ೭೨.೭೮ ಲಕ್ಷ ಸಹಾಯಧನ ಅಂದಾಜಿಸಲಾಗಿದೆ ಎಂದು ತಿಳಿಸಿದರು.
ಮೂಲಭೂತ ಸೌಕರ್ಯ ಹಾನಿ: ಜಿಲ್ಲೆಯಲ್ಲಿ ೦.೭ ಕಿ.ಮೀ. ರಾಜ್ಯ ಹೆದ್ದಾರಿ, ೮.೭೦ ಕಿ.ಮೀ.ಮುಖ್ಯ ಜಿಲ್ಲಾ ಸ್ತೆ, ೫೧.೪೬ ಕಿ.ಮೀ.ಗ್ರಾಮೀಣ ರಸ್ತೆ, ೮ ಸಣ್ಣ ಸೇತುವೆಗಳು, ಒಂದು ಕೆರೆ, ೩೩೯ ವಿದ್ಯುತ್ ಕಂಬಗಳು, ೧೮ ಟ್ರಾನ್ಸ್ಪರ್ಮರ್ಗಳು, ೧.೪೨ ಕಿ.ಮೀ ವಿದ್ಯುತ್ ತಂತಿ ಹಾಗೂ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳು ಸೇರಿದಂತೆ ಅಂದಾಜು ರೂ.೧೭೯೭.೪೭ ಲಕ್ಷ ಮೊತ್ತದ ಹಾನಿಯಾದ ಬಗ್ಗೆ ವರದಿಯಾಗಿದೆ ಎಂದು ತಿಳಿಸಿದರು.
ಪ್ರಕೃತಿ ವಿಕೋಪ ನಿರ್ವಹಣೆಗೆ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ೧೬.೪೩ ಕೋಟಿ ಹಾಗೂ ತಹಶೀಲ್ದಾರ ಖಾತೆಗಳಲ್ಲಿ ರೂ. ೫.೬೫ ಕೋಟಿ ಸೇರಿ ೨೨.೦೮ ಕೋಟಿ ಅನುದಾನ ಲಭ್ಯವಿದೆ ಎಂದು ತಿಳಿಸಿದರು.
ಮಳೆ ವಿವರ: ಜಿಲ್ಲೆಯಲ್ಲಿ ಜನವರಿ ೧ ರಿಂದ ಜುಲೈ ೩೦ರವರೆಗೆ ವಾಡಿಕೆ ಮಳೆ ೩೯೯.೬ ಮಿ.ಮಿ. ಎದುರು ೪೨೮.೪ ಮಿ.ಮೀ. ಮಳೆಯಾಗಿದೆ. ಜುಲೈ ೧ ರಿಂದ ೩೦ರವರೆಗೆ ೧೫೯.೧ ಮಿ.ಮೀ.ಎದುರು ೨೧೨.೩ ಮಿ.ಮೀ. ಮಳೆಯಾಗಿದೆ. ಕಳೆದ ಏಳು ದಿನಗಳಿಂದ ೩೪.೪ ಮಿ.ಮೀ. ವಾಡಿಕೆ ಮಳೆ ಎದುರು ೫೯.೨ ಮಿ.ಮೀ ಮಳೆಯಾಗಿದೆ. ಕಳೆದ ೨೪ ಗಂಟೆಗಳಲ್ಲಿ ೫.೧ ಮಿ.ಮೀ ವಾಡಿಕೆ ಮಳೆಗೆ ಎದುರು ೧೫.೮ ಮಿ.ಮೀ. ಅಧಿಕ ಮಳೆಯಾಗಿದೆ ಎಂದರು.
ಮಾಧ್ಯಮಗೋಷ್ಠಿಯಲ್ಲಿ ಶಾಸಕ ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಮುಖಂಡರಾದ ಆನಂದಸ್ವಾಮಿ ಗಡ್ಡದೇವರಮಠ ಹಾಗೂ ಯಾಸಿಖಾನ್ ಪಠಾಣ ಉಪಸ್ಥಿತರಿದ್ದರು.
ಸಚಿವ ಶಿವಾನಂದ ಪಾಟೀಲ ಅವರಿಂದ ಮನೆಹಾನಿ-ಬೆಳೆಹಾನಿ ಪರಿಶೀಲನೆ
ಹಾವೇರಿ : ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಬುಧವಾರ ಜಿಲ್ಲೆಯ ಸವಣೂರು ಹಾಗೂ ಹಾನಗಲ್ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆಹಾನಿ ಹಾಗೂ ಮನೆಹಾನಿ ಪರಿಶೀಲನೆ ನಡೆಸಿದರು.
ಕುಣಿಮೆಳ್ಳಿಹಳ್ಳಿ ವರದಾ ನದಿ ಹಳೆ ಸೇತುವೆ ಪಕ್ಕದ ಜಮೀನುಗಳಿಗೆ ನದಿ ನೀರು ನುಗ್ಗಿದ ಹಿನ್ನೆಲೆಯಲ್ಲಿ ಹಾನಿಯಾದ ಬೆಳೆ ಪರಿಶೀಲನೆ ನಡೆಸಿದರು. ರೈತರು ಬೆಳೆಹಾನಿ ಪರಿಹಾರ ನೀಡುವಂತೆ ಸಚಿವರಿಗೆ ಮನವಿಮಾಡಿಕೊಂಡಾಗ, ಎನ್.ಡಿ.ಆರ್.ಎಫ್ ಮಾರ್ಗಸೂಚಿ ಅನ್ವಯ ಬೆಳೆಹಾನಿ ಪಾವತಿಸಲಾಗುವುದು ಭರವಸೆ ನೀಡಿದರು.
ಗ್ರಾಮಸ್ಥರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಕುಣಿಮೆಳ್ಳಿಹಳ್ಳಿ ವರದಾ ನದಿ ಹಳೆ ಸೇತುವೆ ಮೇಲೆ ಸಂಚಾರ ಮಾಡುತ್ತಿದ್ದು, ಈ ಸೇತುವೆಯ ತಡೆಗೋಡೆಗಳಲ್ಲಿ ಗಿಡ-ಗಂಟಿಗಳು ಬೆಳೆದಿದ್ದು, ಇದರಿಂದ ಸೇತುವೆಗೆ ಧಕ್ಕೆಯಾಗುವ ಸಂಭವವಿದ್ದು, ಗಿಡ-ಗಂಟಿಗಳನ್ನು ತೆರವುಗೊಳಿಸಲು ಸೇತುವೆ ಮೇಲೆ ಅಲ್ಲಲ್ಲಿ ನೀರು ನಿಲ್ಲುತ್ತಿದ್ದನ್ನು ಅದನ್ನು ದುರಸ್ತಿಗೊಳಿಸಿ ನೀರು ಸರಾಗವಾಗಿ ಹರದಿಹೋಗುವಂತೆ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಸಚಿವರಿಗೆ ಮನವಿ ಮಾಡಿಕೊಂಡರು.
ನಂತರ ಸಚಿವರು ನಾಗನೂರ-ಕೂಡಲ ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿದರು, ನಂತರ ಸಂಗೂರ, ಕೂಡಲ, ಬಾಳಂಬೀಡ ಗ್ರಾಮಗಳಲ್ಲಿ ಬೆಳೆಹಾನಿ ಹಾಗೂ ಮನೆಹಾನಿ ಪರಿಶೀಲನೆ ನಡೆಸಿದರು.
ಬಾಗಿನ ಅರ್ಪಣೆ: ಅಕ್ಕಿಆಲೂರು ಕೆರೆ ಕೋಡಿ ಬಿದ್ದ ಹಿನ್ನಲೆಯಲ್ಲಿ ಸಚಿವರು, ಶಾಸಕರು ಕೆರೆಗೆ ಬಾಗಿನ ಅರ್ಪಿಸಿದರು. ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಸವಣೂರ ಉಪವಿಭಾಗಾಧಿಕಾರಿ ಮಹ್ಮದ ಖಿಜರ್, ಹಾನಗಲ್ ತಹಶೀಲ್ದಾರ ರೇಣುಕಾ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.