ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮಾದಿಗ ಸಮಾಜಕ್ಕೆ ನೀಡಲು ಆಗ್ರಹ
ಹಾವೇರಿ: ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಮಾದಿಗ ಸಮುದಾಯಕ್ಕೆ ಬಿಜೆಪಿ ಟಿಕೆಟ್ ನೀಡುವಂತೆ ಮಾದಿಗ ಸಮುದಾಯದ ಬಿಜೆಪಿ ಆಕಾಂಕ್ಷಿಗಳಾದ ಪರಮೇಶಪ್ಪ ಮೇಗಳಮನಿ, ರಾಮು ಮಾಳಗಿ, ಡಿ.ಎಸ್.ಮಾಳಗಿ, ಮಲ್ಲೇಶಪ್ಪ ಹರಿಜನ ಒತ್ತಾಯಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ೨೦೨೩ರ ಚುನಾವಣೆಯಲ್ಲಿ ಮಾದಿಗ ಸಮುದಾಯಕ್ಕೆ ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೊಡಬೇಕು. ಮಾದಿಗ ಸಮುದಾಯದ ನಾಲ್ವರು ಟಿಕೆಟ್ ಆಕಾಂಕ್ಷಿಗಳಲ್ಲಿ ಹಿರಿಯರು, ಕಿರಿಯರು ಎನ್ನದ ಯಾರಿಗೇ ಟಿಕೆಟ್ ಕೊಟ್ಟರೂ ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಮಾಡುವುದಾಗಿ ಹೇಳಿದ್ದಾರೆ.
ಅಲ್ಲದೇ ಸಮುದಾಯದ ನಾಲ್ವರು ಟಿಕೆಟ್ ಆಕಾಂಕ್ಷಿಗಳಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ಬಸವಾದಿ ಶರಣರ ಆಣೆಯಾಗಿ ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ. ಒಂದು ವೇಳೆ ಸಮುದಾಯಕ್ಕೆ ಟಿಕೆಟ್ ನೀಡದಿದ್ದರೆ ಅಖಂಡ ಧಾರವಾಡ ಜಿಲ್ಲೆಯಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.
ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಸಮಾಜದಲ್ಲಿ ಶತ ಶತಮಾನಗಳಿಂದ ಶೋಷಣೆಗೆ, ತುಳಿತಕ್ಕೆ ಒಳಗಾದ ಸಮಾಜವನ್ನು ಮೇಲೆಕ್ಕೆತ್ತುವ ಉದ್ದೇಶದಿಂದ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರವು ೨೦೦೮ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಈ ಕ್ಷೇತ್ರದಲ್ಲಿ ಇಲ್ಲಿಯವರೆಗೆ ನಡೆದ ಮೂರು ವಿಧಾನಸಭಾ ಚುನಾವಣೆಯಲ್ಲಿ ಮೂಲ ಅಸ್ಪ್ರಶ್ಯರಾಗಿರುವ ಮಾದಿಗ ಸಮಾಜಕ್ಕೆ ಭಾರತೀಯ ಜನತಾಪಾರ್ಟಿಯಿಂದ ಟಿಕೆಟ್ ದೊರೆತಿರುವುದಿಲ್ಲ.
ಹಾವೇರಿಜಿಲ್ಲೆಯ ಪ್ರತಿವಿಧಾನಸಭಾ ಕ್ಷೇತ್ರದಲ್ಲಿ ಮಾದಿಗ ಸಮಾಜದ ಮತದಾರರು ೨೦ರಿಂದ ೨೫ಸಾವಿರದವರೆಗೆ ಇದ್ದಾರೆ. ಮೀಸಲು ಕ್ಷೇತ್ರವಾಗಿರುವ ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಮಾದಿಗ ಸಮಾಜದ (ಎಡಗೈ) ೨೬,೧೪೭ ಮತದಾರರು ಇದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ನಾವು ಅಂದರೇ ಮಾದಿಗ ಸಮಾಜದ (ಎಡಗೈ) ೨೬,೧೪೭ ಮತದಾರರು ಇದ್ದೇವೆ. ಹಾವೇರಿಜಿಲ್ಲೆಯಲ್ಲಿ ಅಷ್ಟೇ ಅಲ್ಲದೇ ಶಿವಮೊಗ್ಗ, ಕಾರವಾರ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಮಾದಿಗರ ಎಡಗೈ ಜನಾಂಗದ ಮತದಾರರು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ೧೦೦೦೦ದಿಂದ ೩೦,೦೦೦ ದವರೆಗೆ ಇದ್ದು. ಬಹುದೊಡ್ಡ ಮಾದಿಗ ಸಮಾಜಕ್ಕೆ ರಾಜಕೀಯವಾಗಿ ಬಹುದೊಡ್ಡ ಅನ್ಯಾಯವಾಗಿದೆ.
ಭಾರತೀಯ ಜನತಾ ಪಾರ್ಟಿಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಗುರುತಿಸಿಕೊಂಡು ಪಕ್ಷಕ್ಕಾಗಿ ತನು-ಮನ-ಧನವನ್ನು ಧಾರೆ ಎರದು ಪಕ್ಷಕ್ಕೆ ಶಕ್ತಿ ತುಂಬಿದ್ದೇವೆ. ಪ್ರಸಕ್ತ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಸದರಿ ವಿಧಾನಸಭಾ ಚುನಾವಣೆಯಲ್ಲಿ ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ನ್ನು ಮಾದಿಗ ಸಮಾಜದಿಂದ ಟಿಕೆಟ್ ಆಕಾಂಕ್ಷಿಗಳಾಗಿರುವ ನಮ್ಮಲ್ಲಿ ಯಾರಿಗಾದರೂ ಒಬ್ಬರಿಗೆ ಬಿಜೆಪಿಯ ಅಭ್ಯರ್ಥಿಯನ್ನಾಗಿ ಆಯ್ಕೆಮಾಡಿ ಟಿಕೆಟ್ ನೀಡುವ ಮೂಲಕ ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕೆಂದು ಬಿಜೆಪಿ ವರಿಷ್ಠರನ್ನು ಈ ಮೂಲಕ ಆಗ್ರಹಿಸುತ್ತೇವೆ.ಈಗಾಗಲೆ ಮಾದಿಗ ಸಮುದಾಯದ ಜನರು ಜಾಗೃತರಾಗಿದ್ದರೆ, ಈ ಬಾರಿ ಸಮುದಾಯಕ್ಕೆ ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ನೀಡಲೇಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಡಚಪ್ಪ ಮಾಳಗಿ, ಫಕ್ಕಿರೇಶ ಕಾಳಿ, ದ್ಯಾಮಣ್ಣ ಸಿದ್ದಣ್ಣವರ, ಮಾರುತಿ ಸೊಟ್ಟಪ್ಪನವರ, ಮಾಲತೇಶ ಕಂಚಮ್ಮನವರ, ಸುರೇಶ ಹಳ್ಳಳ್ಳಿ, ಮಾಲತೇಶ ಬಣಕಾರ ಸೇರಿದಂತ ಹಲವರು ಉಪಸ್ಥಿತರಿದ್ದರು.