ಹಾವೇರಿ: ಮೇ.೨೫ ರಂದು “ಮಕ್ಕಳಲ್ಲಿ ಬರುವ ಸಾಂಕ್ರಾಮಿಕ ರೋಗಗಳ ಕುರಿತು ವೈದ್ಯಕೀಯ ಸಮ್ಮೇಳನ” ಹಾಗೂ ಪುಸ್ತಕ ಬಿಡುಗಡೆ
ಹಾವೇರಿ: ಹಾವೇರಿಯ ವೈದ್ಯಕೀಯ ಇತಿಹಾಸದಲ್ಲಿಯೇ ಮೊದಲನೆ ಬಾರಿಗೆ ರಾಜ್ಯ ಮಟ್ಟದ ವಿಶೇಷ ವೈದ್ಯಕೀಯ ಸಮಾವೇಶವನ್ನು ಭಾರತೀಯ ಮಕ್ಕಳ ವೈದ್ಯರ ಸಂಘ ಐಎಪಿ ಕರ್ನಾಟಕ ಶಾಖೆಯ ಸಾಂಕ್ರಾಮಿಕ ರೋಗಗಳ ಘಟಕವು, ಹಾವೇರಿ ಜಿಲ್ಲಾ ಘಟಕದ ಮತ್ತು ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಹಯೋಗದೊಂದಿಗೆ ಮೇ. ೨೫ ರಂದು ಹಾವೇರಿಯ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ವೈದ್ಯರ ಸಂಘದ ಸಾಂಕ್ರಾಮಿಕ ರೋಗಗಳ ವಿಭಾಗದ ಅಧ್ಯಕ್ಷ ಡಾ. ರಾಜಕುಮಾರ ಮರೋಳ ತಿಳಿಸಿದ್ದಾರೆ.
ಗುರುವಾರ ಇಲ್ಲಿನ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಕ್ಕಳಲ್ಲಿ ಬರುವ ಸಾಂಕ್ರಾಮಿಕ ರೋಗಗಳ ಕುರಿತು ವೈದ್ಯಕೀಯ ಸಮಾವೇಶದಲ್ಲಿ ಮಕ್ಕಳಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ಕಾರಣಗಳು ಹಾಗೂ ಪರಿಹಾರೋಪಾಯಗಳ ಬಗ್ಗೆ ನುರಿತ ಖ್ಯಾತ ತಜ್ಞರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ. ಈ ಸಮಾವೇಶ ಉನ್ನತ ವೈದ್ಯಕೀಯ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಹಾಗೂ ಮಕ್ಕಳ ತಜ್ಞರಿಗೆ ತುಂಬಾ ಮಹತ್ವದ್ದಾಗಿದೆ.
ಮಕ್ಕಳಲ್ಲಿ ಹರಡುವ ಸಾಂಕ್ರಾಮಿಕ ರೋಗಗಳನ್ನು ನಿವಾರಿಸುವ ದೀಸೆಯಲ್ಲಿ ಅತ್ಯಾಧುನಿಕ ಸಂಶೋಧನೆಗಳು ಹಾಗೂ ಉಪಚಾರದ ಬಗ್ಗೆ ತಿಳುವಳಿಕೆ ಕೊಡುವುದರ ಮೂಲಕ ರೋಗಿಗಳಿಗೆ ಹೊಸ ಬದುಕಿನ ಭರವಸೆಯನ್ನು ಮೂಡಿಸುವುದು. ಮಕ್ಕಳ ಆರೋಗ್ಯ ಸುಧಾರಿಸುವಲ್ಲಿ ಬಳಸುವ ಆಧುನಿಕ ತಂತ್ರಜ್ಞಾನದ ತಿಳುವಳಿಕೆ ನೀಡಿ ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ಮಹತ್ವದ ಹೆಜ್ಜೆ ಇಡುವುದು ಈ ಸಮಾವೇಶದ ಮುಖ್ಯ ಉದ್ದೇಶವಾಗಿದೆ ಎಂದು ಡಾ. ರಾಜಕುಮಾರ ಮರೋಳ ಸಮಾವೇಶದಲ್ಲಿ ಮಕ್ಕಳ ಸಾಂಕ್ರಾಮಿಕ ರೋಗಗಳ ಬಗ್ಗೆ ಪರಿಣತಿ ಹೊಂದಿರುವ ಭಾರತ ದೇಶದ ಬೇರೆ ಬೇರೆ ಮೂಲಗಳಿಂದ ಬಂದು ಮಕ್ಕಳ ತಜ್ಞವೈದ್ಯರು ಉಪನ್ಯಾಸ ನೀಡುತ್ತಾರೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತೀಯ ಮಕ್ಕಳ ವೈದ್ಯರ ಸಂಘದ ರಾಷ್ಟ್ರೀಯ ಅಧ್ಯಕ್ಷ ನಾಗಪುರದ ಡಾ. ವಸಂತ ಕಲಾತಕರ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಶಾಖೆಯ ಮಕ್ಕಳ ವೈದ್ಯರ ಸಂಘದ ಸಾಂಕ್ರಾಮಿಕ ರೋಗಗಳ ವಿಭಾಗದ ಅಧ್ಯಕ್ಷ ಡಾ. ರಾಜಕುಮಾರ ಮರೋಳ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಭಾರತೀಯ ಮಕ್ಕಳ ವೈದ್ಯರ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ಪೂರತನ ಡಾ. ಯೋಗೇಶ ಪಾರೀಬ, ಖಜಾಂಚಿ ಕಲ್ಕತ್ತದ ಡಾ. ಆತನು ಭದ್ರಾ, ಹಿಂದಿನ ಅಧ್ಯಕ್ಷ ಡಾ. ಬಸವರಾಜ ಜಿ.ವಿ, ಡಾ. ಸಂತೋಷ ಸೊಅನ್ನ, ಮತ್ತು ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಅಧ್ಯಕ್ಷ ಡಾ. ಭಾಸ್ಕರ ಶಣಾಯ, ಹಿಂದಿನ ಅಧ್ಯಕ್ಷ ಡಾ. ನಾರಾಯಣಪ್ಪ, ಕರ್ನಾಟಕ ರಾಜ್ಯ ಐಎಪಿ ಅಧ್ಯಕ್ಷ ಡಾ. ಶಂಕರ ಪಾಟೀಲ ಮತ್ತು ಕಾರ್ಯದರ್ಶಿ ಸಿದ್ದು ಚರ್ಕಿ ಹಾವೇರಿ ವೈದ್ಯಕೀಯ ವಿಜ್ಞಾ ನ ಸಂಸ್ಥೆಯ ನಿರ್ದೇಶಕ ಡಾ. ಪ್ರದೀಪ ಕುಮಾರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಹಾವನೂರ, ಡಾ. ಶ್ರೀನಾಥ ಮುಗಳಿ, ಡಾ. ಎಲ್.ಎಚ್. ಬಿಧರಿ, ಡಾ. ಗುರುಪ್ರಸಾದ, ಡಾ.ಕಾಳಪ್ಪನವರ, ಡಾ. ಬಾಣಾಪೂರಮಠ ಅವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಡಾ. ರಾಜಕುಮಾರ ಮರೋಳ ಅವರು ಬರೆದಿರುವ ತಂದೆ ತಾಯಂದಿರಿಗೆ ಮಕ್ಕಳನ್ನು ಬೆಳೆಸಲು “CRADLE TOKINDERGARTEN-A SIMPLE GUIDE TO PARENTS” ಪುಸ್ತಕವನ್ನು ಭಾರತೀಯ ಮಕ್ಕಳ ವೈದ್ಯರ ಸಂಘದ ಅಧ್ಯಕ್ಷ ಡಾ. ವಸಂತ ಕಲಾಸ್ಕರ ಬಿಡುಗಡೆಗೊಳಿಸುತ್ತಾರೆ. ಇದೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯದಾದ್ಯಂತ ಮಕ್ಕಳ ವೈದ್ಯರಿಗೆ ಸಾಂಕ್ರಾಮಿಕ ರೋಗಗಳ ಕುರಿತು ತಿಳುವಳಿಕೆ ಹೇಳಲು SMART-A MODALE ಅನ್ನು ನಿಕಟಪೂರ್ವ ಅಧ್ಯಕ್ಷ ಡಾ. ಬಸವರಾಜ ಜಿ.ವಿ. ಅವರು ಬಿಡುಗಡೆಗೊಳಿಸುತ್ತಾರೆ.ಬೇರೆ ಬೇರೆ ಭಾಗಗಳಿಂದ ೩೦೦ ಮಕ್ಕಳ ವೈದ್ಯರು,ಬೇರೆ ಬೇರೆ ವೈದ್ಯಕೀಯಮಹಾವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ೬೦ ಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾವು ಮಾಡಿದ ಸಂಶೋಧನೆಗಳ ಬಗ್ಗೆ ವಿಷಯವನ್ನು ಪ್ರಸ್ತಾಪಿಸಲಿದ್ದಾರೆ. ಎರಡು ದತ್ತಿ ಉಪನ್ಯಾಸಗಳು ಜರುಗಲಿವೆ ಎಂದು ಡಾ.ಮರೋಳ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಎಸ್.ಎಲ್.ಬಾಲೇಹೊಸೂರ,ಡಾ.ಅಂಜನಕುಮಾರ, ಡಾ.ಲಕ್ಷ್ಮೀಪತಿ, ಡಾ.ನವೀನ್ ಸಂಗೂರಮಠ,ಡಾ.ಬಸವರಾಜ ಕೊಳ್ಳಿ ಮೊದಲಾದವರು ಇದ್ದರು.